Advertisement

MUDA; ಸಿದ್ದರಾಮಯ್ಯ ವಿಚಾರಣೆಗೆ ರಾಜ್ಯಪಾಲರ ಅಸ್ತು:ಯಾವ ಸೆಕ್ಷನ್‌? ಏನು ಶಿಕ್ಷೆ?

12:34 AM Aug 18, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆ ನಡೆಸುವುದಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ ಲೋ ತ್‌ ಕೊನೆಗೂ ಅನುಮತಿ ನೀಡಿ ದ್ದಾರೆ. ಇದು ಈಗ ರಾಷ್ಟ್ರಮಟ್ಟದಲ್ಲಿ ರಾಜಕೀಯ ಜ್ವಾಲಾಮುಖಿಯಾಗಿ ಸ್ಫೋಟಿಸಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್‌ ಪಕ್ಷವು ರಾಜ್ಯ ಸರಕಾರ ಹಾಗೂ ಪಕ್ಷ ಸಿದ್ದರಾಮಯ್ಯನವರ ಜತೆ ಗಟ್ಟಿಯಾಗಿ ನಿಲ್ಲುವ ನಿರ್ಧಾರವನ್ನು ಸದ್ಯಕ್ಕೆ ತೋರಿದ್ದು, ರಾಜ್ಯಪಾಲರ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ಎಸ್‌.ಪಿ. ಪ್ರದೀಪ್‌ ಕುಮಾರ್‌, ಟಿ.ಜೆ. ಅಬ್ರಹಾಂ ಹಾಗೂ ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗೆ ಸಂಬಂಧಿಸಿ ಸುದೀರ್ಘ‌ ಕಾನೂನು ಸಲಹೆ ಹಾಗೂ ಚರ್ಚೆಗಳನ್ನು ಪರಿಗಣಿಸಿದ ಬಳಿಕ ರಾಜ್ಯಪಾಲರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸಿದ್ದರಾಮಯ್ಯ ವಿರುದ್ಧ ನಿಷ್ಪಕ್ಷ ತನಿಖೆಗೆ ಪ್ರಸ್ತಾವಿಸಿದ್ದಾರೆ. ಮಧ್ಯಪ್ರದೇಶ ಮತ್ತಿತರ ಈ ಹಿಂದಿನ ಪ್ರಕರಣಗಳನ್ನು ತಮ್ಮ ಆದೇಶದಲ್ಲಿ ಅವರು ಉಲ್ಲೇಖಿಸಿದ್ದು, ಅಭಿಯೋ ಜನೆಯ ಅನುಮತಿ ಪ್ರತಿಯನ್ನು ಮುಖ್ಯ ಕಾರ್ಯದರ್ಶಿ ಹಾಗೂ ದೂರುದಾರರಿಗೆ ಕಳುಹಿಸಿ ಕೊಡಲಾಗಿದೆ.

ರಾಜ್ಯಪಾಲರಿಂದ ಅಭಿಯೋಜನೆಗೆ ಅನುಮತಿ ಸಾಧ್ಯತೆ ಬಗ್ಗೆ ಕಳೆದ ರಾತ್ರಿಯೇ ಸಿಎಂಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಸಲಹೆಗಾರ ಪೊನ್ನಣ್ಣ ಸಹಿತ ಆಪ್ತರ ಜತೆಗೆ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತಯಾರಿ ನಡೆಸಿದ್ದರು.

ಶನಿವಾರ ಬೆಳಗ್ಗೆ 9 ಗಂಟೆಗೆ ತಮ್ಮ ನಿವಾಸದಲ್ಲಿ ಹಾಜರಾಗುವಂತೆ ಎಲ್ಲ ಸಚಿವರಿಗೂ ಸಂದೇಶ ನೀಡಿದ್ದರು. ಬೆಳಗ್ಗೆ ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಆದೇಶ ಲಭಿಸುತ್ತಿದ್ದಂತೆ ಕಾನೂನು ತಜ್ಞರ ಜತೆಗೆ ಹಾಗೂ ವರಿಷ್ಠರ ಜತೆಗೆ ದೂರವಾಣಿಯಲ್ಲಿ ಚರ್ಚೆ ನಡೆಸಿ, ಈ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧದ ಅಸ್ತ್ರವಾಗಿ ಪ್ರಯೋಗಿಸಲು ನಿರ್ಧರಿಸಲಾಯಿತು. ಈ ಮಧ್ಯೆ ವಿಪಕ್ಷ ಬಿಜೆಪಿ ಸಿದ್ದರಾಮಯ್ಯನವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದೆ.

ರಾಜೀನಾಮೆ ಇಲ್ಲ
ಸಚಿವರ ಜತೆಗಿನ ಸಭೆಯಲ್ಲಿ ಕಾನೂನು ಹೋರಾಟ ನಡೆಸುವುದಕ್ಕೆ ಸಲಹೆ ವ್ಯಕ್ತವಾಗಿದೆ. ಜತೆಗೆ ಚುನಾಯಿತ ಸರಕಾರವನ್ನು ಪತನಗೊಳಿಸಲು ಕೇಂದ್ರ ಸರಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಂಪುಟ ಸಹೋದ್ಯೋಗಿಗಳು ದೃಢ ನಿಲುವು ತಾಳಿದ್ದು, ಕಪಿಲ್‌ ಸಿಬಲ್‌, ಅಭಿಷೇಕ್‌ ಮನು ಸಿಂಘವಿ ಸಹಿತ ಘಟಾನುಘಟಿ ಕಾನೂನು ತಜ್ಞರನ್ನು ಸಂಪರ್ಕ ಮಾಡಿದ್ದಾರೆ. ಮಾತ್ರವಲ್ಲ ಸೋಮವಾರ ರಾಜ್ಯಪಾಲರ ನಿರ್ಣಯವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

Advertisement

ಹೈಕಮಾಂಡ್‌ ಜತೆಗೆ ಸಮಾಲೋಚನೆ
ಈ ಎಲ್ಲ ವಿದ್ಯಮಾನಗಳ ಮಧ್ಯೆಯೇ ಸಿದ್ದರಾಮಯ್ಯನವರ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್‌ ಸಿಂಗ್‌ ಸುಜೇìವಾಲಾ ದೂರವಾಣಿ ಜತೆಗೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ನಿಮ್ಮ ಜತೆಗೆ ಇದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದು ಬೇಡ ಎಂದು ಭರವಸೆ ನೀಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆಯಾಗಿದ್ದಾರೆ ಎಂದು ಸುಜೇìವಾಲಾ  ಸೋ ಷಿ ಯಲ್‌ ಮೀಡಿಯಾ ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ.

10 ಮಂದಿ ಸಚಿವರೊಂದಿಗೆ ಡಿಸಿಎಂ ಪತ್ರಿಕಾಗೋಷ್ಠಿ
ಈ ಎಲ್ಲ ಬೆಳವಣಿಗೆಗಳ ಅನಂತರ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಭೇಟಿ ಮಾಡಲು ಸಮಯಾವಕಾಶ ಕೋರಲಾಗಿತ್ತು. ಆದರೆ ರಾಜಭವನ ಇದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ 10 ಜನ ಸಚಿವರ ಜತೆಗೆ ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟದ ನಿರ್ಣಯ
ರಾಜ್ಯಪಾಲರ ನಿರ್ಣಯವನ್ನು ಸಚಿವ ಸಂಪುಟ ಸಂಪೂರ್ಣವಾಗಿ ವಿರೋಧಿಸುತ್ತದೆ. ಇದಕ್ಕೆ ಕಾನೂನು ಹಾಗೂ ಸಂವಿಧಾನದ ಬಲವಿಲ್ಲ.
ರಾಜ್ಯಪಾಲರು ರಾಷ್ಟ್ರಪತಿ ಹಾಗೂ ಸಂವಿಧಾನದ ಪ್ರತಿನಿಧಿ. ಆದರೆ ಇವರು ಕೇಂದ್ರ ಹಾಗೂ ಬಿಜೆಪಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡಾವಳಿ ಯನ್ನು ಸಚಿವ ಸಂಪುಟ ತೀವ್ರವಾಗಿ ಖಂಡಿಸುತ್ತದೆ.
ಕೇಂದ್ರ ಸರಕಾರವು ಚುನಾಯಿತ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದು ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದ್ದು, ಇದನ್ನು ಸಚಿವ ಸಂಪುಟ ವಿರೋಧಿಸುತ್ತದೆ.

ತನಿಖಾ ವಿಚಾರದಲ್ಲಿ ಈ ಹಿಂದೆ ಕೇಂದ್ರವೇ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳಿಗೆ ಇದು ವಿರುದ್ಧವಾಗಿದೆ. ರಾಜ್ಯಪಾಲರು ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ.

ರಾಜ್ಯಪಾಲರ ನಿರ್ಣಯದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.
ನಮ್ಮದು ಬಡವರ ಪರ ಸರಕಾರ. ಗ್ಯಾರಂಟಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಆದರೆ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ನಮ್ಮ ಗ್ಯಾರಂಟಿ ಯೋಜನೆಯನ್ನು ವಿರೋಧಿಸಿದ್ದರು. ಹೀಗಾಗಿ ಇದು ಗ್ಯಾರಂಟಿ ಯೋಜನೆಯ ವಿರುದ್ಧದ ನಿಲುವು.

ಖಂಡನಾ ನಿರ್ಣಯ
ಸಂಜೆ 5 ಗಂಟೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ. ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿಎಂ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಈ ನಿರ್ಣಯ ತೆಗೆದುಕೊಂಡಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕಾನೂನುಬಾಹಿರ, ಸಂವಿಧಾನ ವಿರೋಧಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಯೋಜನೆಗೆ ಅನುಮತಿ ಯಾವ ಸೆಕ್ಷನ್‌? ಏನು ಶಿಕ್ಷೆ?
ಬಿಎನ್‌ಎಸ್‌ ಸೆಕ್ಷನ್‌ 316(5) – ಸರಕಾರಿ ಸೇವಕನಿಂದ ಆಸ್ತಿ ದುರುಪ ಯೋಗ : ಗರಿಷ್ಠ ಜೀವಾವಧಿ ಅಥವಾ 10 ವರ್ಷ ಜೈಲು
318(3)- ವಂಚನೆ: ಗರಿಷ್ಠ 7 ವರ್ಷ
1988 (ಪಿಸಿ ಆ್ಯಕ್ಟ್) ಸೆಕ್ಷನ್‌ 12- ಅಪ ರಾಧಕ್ಕೆ ಪ್ರಚೋದನೆ : 3-7 ವರ್ಷ ಜೈಲು
ಸೆಕ್ಷನ್‌ 11- ಸ್ವಕಾರ್ಯಕ್ಕೆ ಲಾಭ ಪಡೆಯುವುದು: ಕನಿಷ್ಠ 6 ತಿಂಗಳು, ಗರಿಷ್ಠ 5 ವರ್ಷ
ಸೆಕ್ಷನ್‌ 9-ವಾಣಿಜ್ಯ ಸಂಸ್ಥೆಗಳಿಗೆ ಪರೋಕ್ಷ ಅನುಕೂಲ: 3ರಿಂದ 7 ವರ್ಷ ಜೈಲು
ಸೆಕ್ಷನ್‌ 7-ಅನುಚಿತ ಲಾಭ
3ರಿಂದ 7 ವರ್ಷ ಜೈಲು

ಏನಿದು ಪ್ರಕರಣ?
ಕೆಸರೆ ಗ್ರಾಮದ ಜಮೀನನ್ನು ಸಿಎಂ ಭಾವಮೈದುನ ಖರೀದಿಸಿ, ಸಿದ್ದರಾಮಯ್ಯ ಅವರ ಪತ್ನಿಗೆ ಕೊಟ್ಟಿದ್ದರು.
ಬಡಾವಣೆ ನಿರ್ಮಾಣಕ್ಕೆಂದು ಮುಡಾ ಇದನ್ನು ಸ್ವಾಧೀನಪಡಿಸಿಕೊಂಡಿತ್ತು.
ಇದರ ಬದಲು ಬೇರೊಂದು ಬಡಾವಣೆಯಲ್ಲಿ ಸಿಎಂ ಪತ್ನಿಗೆ ಭೂಪರಿಹಾರ ಸಿಕ್ಕಿತ್ತು.
ಅದನ್ನು ಒಪ್ಪದೆ ವಿಜಯನಗರ ಬಡಾವಣೆಯಲ್ಲೇ ಒತ್ತಡ ಹೇರಿ ನಿವೇಶನ ಪಡೆದಿದ್ದರು ಎಂಬ ಆರೋಪ.

ಆರೋಪ ಏನು?
ಕೋಟ್ಯಂತರ ರೂ. ಬೆಲೆಬಾಳುವ 14 ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡದ್ದು.
ಕೆಸರೆ ಗ್ರಾಮದ ಜಮೀನಿಗೆ ವಿಜಯನಗರ ಬಡಾವಣೆಯಲ್ಲಿ ಭೂಪರಿಹಾರ ಪಡೆದದ್ದು.
ಬೇನಾಮಿ ಹೆಸರಿಗೆ ಭೂ ಡಿನೋಟಿಫಿಕೇಶನ್‌ ಆದದ್ದು.
ಮೂವರ ಹೆಸರಿನಲ್ಲಿದ್ದ ಜಮೀನನ್ನು ಅವರ ಅನುಮತಿಯಿಲ್ಲದೆ ಒತ್ತಡ ಹೇರಿ ಪಡೆದದ್ದು.

ಸಿಎಂ ಆಯ್ಕೆ?
ನೈತಿಕ ಹೊಣೆ ಹೊತ್ತು ರಾಜೀ ನಾಮೆ ನೀಡುವ ಸಾಧ್ಯತೆ ಕ್ಷೀಣ
ಕಾನೂನು ಹಾಗೂ ರಾಜ ಕೀಯ ಹೋರಾಟಕ್ಕೆ ಅಣಿ
ಸೋಮವಾರ ಹೈಕೋರ್ಟ್‌ ನಲ್ಲಿ ರಿಟ್‌ ಅರ್ಜಿ ಸಲ್ಲಿಸುವ ಸಾಧ್ಯತೆ
ದೊಡ್ಡ ಮಟ್ಟದಲ್ಲಿ ಜಿಲ್ಲಾ ಕೇಂದ್ರ ಗಳಲ್ಲಿ ಜನಾಂದೋ ಲನಕ್ಕೆ ಕರೆ
ಸದ್ಯಕ್ಕೆ ಸಿಎಂ ಬೆನ್ನಿಗೆ ವರಿ ಷ್ಠರು, ಕೋರ್ಟ್‌ನಲ್ಲಿ ಹಿನ್ನಡೆಯಾದರೆ ಮುಂದಿನ ನಿರ್ಧಾರ

ಸರಕಾರದ ವಾದ?
ಮುಡಾ ಪ್ರಕರಣ ಅಕ್ರಮವೇ ಅಲ್ಲ, ಜಮೀನಿಗೆ ಬದಲು ನಿವೇಶನ ಕೊಡಲಾಗಿದೆ.
ಅನುಮತಿ ಕೊಡುವ ಮೊದಲು ತನಿಖಾ ಸಂಸ್ಥೆಯ ಪ್ರಾಥಮಿಕ ವರದಿ ಇರಬೇಕಿತ್ತು.
ರಾಜ್ಯಪಾಲರು ಅಭಿ ಯೋಜನೆಗೆ ಅನುಮತಿ ಕೊಟ್ಟಿರುವ ಪ್ರಕ್ರಿಯೆಯೇ ಕಾನೂನುಬಾಹಿರ.
ಈ ಇಡೀ ಪ್ರಕರಣ ರಾಜಕೀಯ ಪ್ರೇರಿತ.

ರಾಜ್ಯಪಾಲರ ಆದೇಶದಲ್ಲೇನಿದೆ?
ಮುಡಾ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಕ್ರಮ ಪುಷ್ಟೀಕರಿಸುವ ದಾಖಲೆ ಲಭ್ಯ.
ಗಂಭೀರ ಸ್ವರೂಪದ ಆರೋಪವಿದ್ದವರೇ ತನಿಖಾ ಸ್ವರೂಪ ನಿರ್ಧರಿಸುವಂತಿಲ್ಲ.
ಹೀಗಾಗಿ ಮಂತ್ರಿ ಪರಿಷತ್‌ನ ತೀರ್ಮಾನ ಅತಾರ್ಕಿಕ.
ಸಂಪುಟದ ಸಲಹೆ ಸ್ವೀಕರಿಸುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು ಎಂದು ಸುಪ್ರೀಂ ಕೋರ್ಟ್‌ನ 2004ರ ತೀರ್ಪಿನಲ್ಲಿ ಉಲ್ಲೇಖ.

Advertisement

Udayavani is now on Telegram. Click here to join our channel and stay updated with the latest news.

Next