Advertisement

ಕ್ಷಮೆ ಕೇಳಿದ್ರೆ ಶಿಕ್ಷೆ ವಾಪಸ್‌ : ಅಮಾನತುಗೊಂಡ ಸಂಸದರಿಗೆ ಸ್ಪೀಕರ್‌ ನಾಯ್ಡು ಮಾಹಿತಿ

10:44 AM Jul 28, 2022 | Team Udayavani |

ಹೊಸದಿಲ್ಲಿ: ಸಂಸತ್‌ ಅಧಿವೇಶನ ಮುಂದುವರಿ ದಿರುವಂತೆಯೇ ರಾಜ್ಯಸಭೆಯಿಂದ ಆಮ್‌ ಆದ್ಮಿ ಪಕ್ಷದ ಸಂಸದ ಸಂಜಯ ಸಿಂಗ್‌ ಅವರನ್ನು ವಾರ ಪೂರ್ತಿ ಕಲಾಪದಿಂದ ಅಮಾನತುಗೊಳಿಸಲಾಗಿದೆ.

Advertisement

ಹೀಗಾಗಿ ರಾಜ್ಯಸಭೆಯ 20 ಮತ್ತು ಲೋಕಸಭೆಯ ನಾಲ್ವರು ಸದಸ್ಯರನ್ನು ಅಮಾನತುಗೊಳಿಸಿದ್ದರ ವಿರುದ್ಧ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಪ್ರತಿಭಟನೆ ಬಿರುಸುಗೊಳಿಸಿವೆ.

ಸಂಸದರು ತಮ್ಮ ವರ್ತನೆಗೆ ಸಭಾಪತಿಗಳ ಬಳಿ ಕ್ಷಮೆ ಯಾಚಿಸಿದರೆ ಅವರ ಅಮಾನತು ರದ್ದುಗೊಳಿಸುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಹೇಳುತ್ತಾ ಬಂದಿದ್ದೇವೆ. ಇದರ ಹೊರತಾಗಿಯೂ ಕೂಡ ಸಂಸದರು ಸದನದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಚಿವ ಜೋಶಿ ದೂರಿದರು. ವಿಪಕ್ಷಗಳು ಬಯಸಿದಲ್ಲಿ ಬುಧವಾರವೇ ಸದನದಲ್ಲಿ ಚರ್ಚೆಗೆ ಸರಕಾರ ಸಿದ್ಧವಿದೆ ಎಂದರು.

ನಿಯಮ ಬಾಹಿರ: ಇಪ್ಪತ್ತು ಮಂದಿ ರಾಜ್ಯಸಭೆ ಸಂಸದರ ಅಮಾನತು ಕಾನೂನು ಬಾಹಿರ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. “ಜನರ ಧ್ವನಿಯನ್ನು ಅಡಗಿಸಿ, ಏಕಪಕ್ಷೀಯವಾಗಿ ನರೇಂದ್ರ ಮೋದಿ ಸರಕಾರ ಪ್ರಜಾಸತ್ತಾತ್ಮಕವಲ್ಲದ ದಾರಿಯ ಮೂಲಕ ಆಡಳಿತ ನಡೆಸಲು ಅವಕಾಶ ನೀಡಲೇಬಾರದು’ ಎಂದು ಹೇಳಿದ್ದಾರೆ.

ಜತೆಗೆ ಈ ನಿಟ್ಟಿನಲ್ಲಿ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನೂ ಬರೆದಿರುವುದಾಗಿ ಹೇಳಿದ್ದಾರೆ. ವಿಪಕ್ಷಗಳು ಜನರ ಮತ್ತು ಪ್ರಜಾಪ್ರಭುತ್ವದ ಧ್ವನಿ ಎಂದು ಹೇಳಿದ್ದಾರೆ.

Advertisement

ಸಭಾಪತಿ ಜತೆಗೆ ಸಭೆ: ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಜತೆಗೆ ವಿಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಪಕ್ಷಗಳ ನಾಯಕರು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ರದ್ದು ಮಾಡಬೇಕು ಎಂದು ಕೋರಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ನಾಯ್ಡು, ಸಂಸದರು ಕ್ಷಮೆ ಕೋರಿದ ತತ್‌ಕ್ಷಣ ನಿರ್ಧಾರ ವಾಪಸ್‌ ಪಡೆಯುವುದಾಗಿ ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ರಾಣಿ ಅಥವಾ ಯುವರಾಜ; ಯಾರೂ ದೊಡ್ಡವರಲ್ಲ: ವಿಪಕ್ಷ ನಾಯಕ ಖರ್ಗೆ ಮಾಡಿರುವ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತಿರಸ್ಕರಿಸಿದ್ದಾರೆ. “ರಾಣಿ ಅಥವಾ ಯುವರಾಜ ಯಾರೇ ಆಗಲಿ ಪ್ರಜಾಪ್ರಭುತ್ವ ದಲ್ಲಿ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಿಂದ ಕಾಂಗ್ರೆಸ್‌ ಅತ್ಯಂತ ಎತ್ತ ರದಲ್ಲಿದೆ ಎಂಬ ಭಾವನೆಯನ್ನು ಹೊಂದಿದೆ. ಅವರು ಕಾನೂನು ಮತ್ತು ತನಿಖೆ ಎದುರಿಸಲು ಹಿಂದೇಟು ಹಾಕುತ್ತಿರುವುದೇಕೆ’ ಎಂದು ಪ್ರಶ್ನೆ ಮಾಡಿದ್ದಾರೆ.

7.22 ಲಕ್ಷ ಜನರಿಗೆ ಉದ್ಯೋಗ: 2014ರಿಂದ 2022ರವರೆಗೆ ದೇಶದಲ್ಲಿ ಕೇಂದ್ರ ಸರಕಾರ 7.22 ಲಕ್ಷ ಜನರಿಗೆ ತನ್ನ ಅಧೀನದ ಇಲಾಖೆಗಳಲ್ಲಿ ಉದ್ಯೋಗ ಕೊಟ್ಟಿದೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿದೆ. ನಾನಾ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದ್ದು ಒಟ್ಟು 22.05 ಕೋಟಿ ಜನರು ಅರ್ಜಿಯನ್ನು ಸಲ್ಲಿಸಿದ್ದರು. ಅವರಲ್ಲಿ 7.22 ಲಕ್ಷ ಜನರು ಉದ್ಯೋಗಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಆಪ್‌ ಸಂಸದ ಸಂಜಯ್‌ ಅಮಾನತು
ಬುಧವಾರ ಬೆಳಗ್ಗೆ ಆರಂಭಗೊಂಡ ರಾಜ್ಯಸಭಾ ಕಲಾಪಗಳಿಗೆ ಪುನಃ ವಿಪಕ್ಷಗಳ ಅಡಚಣೆ ಎದುರಾಯಿತು. ಬೆಲೆಯೇರಿಕೆ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿದ್ದ ವಿಪಕ್ಷಗಳ ಸಂಸದರು, ಸರಕಾರದ ಯಾವುದೇ ಮಸೂದೆಗಳ ಮಂಡನೆಗೆ ಅವಕಾಶ ಕೊಡಲಿಲ್ಲ. ಈ ಸಂದರ್ಭದಲ್ಲಿ ಗುಜರಾತ್‌ನಲ್ಲಿ ನಕಲಿ ಮದ್ಯ ದುರಂತ ಸಂಭವಿಸಿರುವುದನ್ನು ತೀವ್ರವಾಗಿ ಖಂಡಿಸಿದ ಆಮ್‌ ಆದ್ಮಿ ಪಾರ್ಟಿಯ (ಆಪ್‌) ಸಂಸದ ಸಂಜಯ್‌ ಸಿಂಗ್‌, ನಕಲಿ ಮದ್ಯ ನಿಯಂತ್ರಣಕ್ಕೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸದನಕ್ಕೆ ವಿವರಿಸಬೇಕು ಎಂದು ಪಟ್ಟು ಹಿಡಿದರು. ಆದರೆ ತೀವ್ರವಾಗಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಈ ಬಾರಿಯ ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತುಗೊಳಿಸಲಾಯಿತು.

ಮತ್ತೊಂದೆಡೆ, ವಿಪಕ್ಷಗಳ ತೀವ್ರ ಗದ್ದಲ ದಿಂದಾಗಿ ಬೆಳಗ್ಗೆಯ ಕಲಾಪವನ್ನು 12 ಗಂಟೆ ತನಕ ಮೂಂದೂಡಲಾಯಿತು. ಉಪ ಸ್ಪೀಕರ್‌ ಹರಿವಂಶ್‌ ಅವರು 256ನೇ ವಿಧಿಯ ಪ್ರಕಾರ, ಸಂಜಯ್‌ ಅವರ ಅಮಾನತು ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next