Advertisement

ಡಿಸಿಸಿ ಬ್ಯಾಂಕ್‌ನಿಂದ ಆರ್ಥಿಕ ವಲಯದಲ್ಲಿ ಸಂಚಲನ

04:54 PM Nov 23, 2017 | |

ಕೋಲಾರ: ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಜಿಲ್ಲೆಯ ಆರ್ಥಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಅಭಿಪ್ರಾಯಪಟ್ಟರು.

Advertisement

ಬುಧವಾರ ತಾಲೂಕಿನ ವೇಮಗಲ್‌ ಎಸ್‌ಎಫ್ ಸಿಎಸ್‌ ಆಶ್ರಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ವತಿಯಿಂದ ಮಹಿಳಾ ಸಂಘಗಳ ಫ‌ಲಾನುಭವಿಗಳಿಗೆ ಸಾಲದ ಚೆಕ್‌ಗಳನ್ನು ವಿತರಿಸಿ ಮಾತನಾಡುತ್ತಿದ್ದರು.

ಆರ್ಥಿಕ ವಲಯದಲ್ಲಿ ಸಂಚಲನ: ಬ್ಯಾಂಕ್‌ ದಿವಾಳಿಯಾದಾಗ ಸರ್ಕಾರದ ಶೇ.4 ಬಡ್ಡಿ ಸಾಲ ಯೋಜನೆ, ಸಾಲ ಮನ್ನಾ ಪ್ರಯೋಜನ ಸಿಗದೇ ಎರಡೂ ಜಿಲ್ಲೆಯ ಜನತೆ ವಂಚನೆಗೊಳಗಾಗಿದ್ದರು. ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಾಗ ದಿವಾಳಿಯಾಗಿದ್ದ ಬ್ಯಾಂಕ್‌ ಸುಸ್ಥಿತಿಗೆ ತರಲು ಸಾಧ್ಯವೇ ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿತ್ತು. ಆದರೆ, ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡುವ ರೀತಿಯಲ್ಲಿ ಸರ್ಕಾರ ರೈತರು, ಮಹಿಳೆಯರಿಗೆ ನೀಡುವ ಶೂನ್ಯ ಬಡ್ಡಿ ಸಾಲ ಯೋಜನೆಯಲ್ಲಿ ಇಡೀ ರಾಜ್ಯ 900 ಕೋಟಿ ರೂ.ಸಾಲ ಕೊಟ್ಟರೆ ಕೋಲಾರ ಡಿಸಿಸಿ ಬ್ಯಾಂಕ್‌ ಒಂದೇ 490 ಕೋಟಿ ರೂ.ನೀಡಿ, ಆರ್ಥಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ ಎಂದರು. 

ಇಡೀ ರಾಜ್ಯಕ್ಕೆ ನಂ.1 ಪಟ್ಟ: ಎರಡೂ ಜಿಲ್ಲೆಗಳ 2.29 ಲಕ್ಷ ಮಹಿಳೆಯರ ಆರ್ಥಿಕ ಸುಸ್ಥಿತಿಗೆ ನೆರವಾಗುವುದು ಸಾಮಾನ್ಯ ಮಾತಲ್ಲ. ಮುಳುಗಿದ್ದ ಬ್ಯಾಂಕ್‌ ಇಂದು ಮಾಡಿರುವ ಸಾಧನೆ ಸಹಕಾರ ರಂಗದಲ್ಲೇ ದಾಖಲೆಯಾಗಿದೆ. ಬ್ಯಾಂಕ್‌ ಇಡೀ ರಾಜ್ಯಕ್ಕೆ ನಂ.1 ಪಟ್ಟ ಪಡೆದಿದ್ದು, ಈ ಗೌರವ ಉಳಿಸಿಕೊಂಡುವ ಹೋಗುವ ಸಂಕಲ್ಪ ಮಾಡಬೇಕೆಂದು ಸಲಹೆ ನೀಡಿದರು.

ಸಹಕಾರ ರಂಗದ ಗಮನ ಜಿಲ್ಲೆಯತ್ತ: ಮಾಜಿ ಸಚಿವ ಹಾಗೂ ಇಪ್ರೋ ವಿಮಾ ಸಂಸ್ಥೆ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಮಾತನಾಡಿ, ದೇಶ ಹಾಗೂ ರಾಜ್ಯದ ಸಹಕಾರ ರಂಗ ಇಂದು ಕೋಲಾರ ಡಿಸಿಸಿ ಬ್ಯಾಂಕಿನತ್ತ ನೋಡುತ್ತಿದೆ. 

Advertisement

ದಿವಾಳಿಯಾಗಿದ್ದ ಬ್ಯಾಂಕ್‌ ಕೇವಲ 3 ವರ್ಷಗಳಲ್ಲಿ ಈ ಸಾಧನೆ ಮಾಡಿರುವುದನ್ನು ಬೆರಗುಗಣ್ಣಿನಿಂದ ಗಮನಿಸುತ್ತಿದ್ದಾರೆ. ಸಾಲ ಪಡೆದವರು ಸಮರ್ಪಕ ಮರುಪಾವತಿ ಮೂಲಕ ಬ್ಯಾಂಕನ್ನು ರಕ್ಷಿಸಬೇಕೆಂದರು.

ಬ್ಯಾಂಕಿನ ಬದ್ಧತೆ ಶ್ಲಾಘನೀಯ: ಸಾಲಕ್ಕಾಗಿ ಅಲೆದಾಟ, ದಾಖಲೆಗಳಿಗಾಗಿ ಓಡಾಟ ರೈತರು, ಮಹಿಳೆಯರ ದುಸ್ಥಿತಿಗೆ ಸಾಕ್ಷಿ ಎಂದ ಅವರು, ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಿ ರೈತರ, ತಾಯಂದಿರ ಮನೆ ಬಾಗಿಲಿಗೇ ಸಾಲ ತಲುಪಿಸುವ ಬ್ಯಾಂಕಿನ ಬದ್ಧತೆ ಶ್ಲಾಘನೀಯ ಎಂದರು.

ಪ್ರತಿ ಕುಟುಂಬಕ್ಕೂ ಸಾಲದ ನೆರವು: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, 15
ವರ್ಷಗಳ ನಂತರ ಜಿಲ್ಲೆಯಲ್ಲಿ ಮಳೆಯಾಗಿದೆ. ಎಲ್ಲಿ ನೋಡಿದರೂ ಹಸಿರೇ ಕಾಣುತ್ತಿದೆ. ಆದರೆ, ಈ ಹಸಿರನ್ನು ಬೆಳೆಯಾಗಿಸಲು ರೈತರಿಗೆ ಹಣದ ತೊಂದರೆ ಇದೆ. ರೈತರು, ಮಹಿಳೆಯರು ಕೃಷಿ ಚಟುವಟಿಕೆ, ಹೈನುಗಾರಿಕೆಗೆ ಬಡ್ಡಿದಾರರ ಶೋಷಣೆಗೆ ಒಳಗಾಗಬಾರದು ಎಂಬುದೇ ಬ್ಯಾಂಕಿನ ಧ್ಯೇಯವಾಗಿದೆ. ಎರಡೂ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಸಾಲದ ನೆರವು ಸಿಗುವಂತೆ ಮಾಡುವುದೇ ನಮ್ಮ ಆಡಳಿತ ಮಂಡಳಿ ಮುಖ್ಯ ಗುರಿ ಎಂದು ತಿಳಿಸಿದರು.

ಬದ್ಧತೆಯಿಂದ ಕೆಲಸ ಮಾಡಿ: ಎಸ್‌ಎಫ್ಸಿಎಸ್‌ನ ಕಾರ್ಯದರ್ಶಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆ ಯಿಂದ ಕಾರ್ಯನಿರ್ವಹಿಸಿ, ಸೊಸೈಟಿ ಎಂದರೆ ಪಡಿತರ ವ್ಯವಸ್ಥೆಗೆ ಸೀಮಿತವೆಂಬ ಭಾವನೆ ಹೋಗಲಾಡಿಸಿ, ಸಾಲ ನೀಡುವ ಮತ್ತು ವಸೂಲಿಗೆ ಬದ್ಧತೆಯಿಂದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

ಬ್ಯಾಂಕಿನ ನಿರ್ದೇಶಕ ನಾಗನಾಳ ಸೋಮಣ್ಣ, ವೇಮಗಲ್‌ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗಿದ್ದು, ಮಹಿಳಾ ಸಂಘಗಳು, ರೈತರಿಗೆ ಹೆಚ್ಚಿನ ಸಾಲದ ನೆರವು ನೀಡುವ ಮೂಲಕ ಆರ್ಥಿಕ ವಹಿವಾಟು ಹೆಚ್ಚಿಸಿಕೊಳ್ಳಬೇಕು. ಕೇವಲ ಪಡಿತರ ವಿತರಣೆಗೆ ಸೀಮಿತವಾಗಆರದೆಂದು ಕಿವಿಮಾತು ಹೇಳಿದರು. 

ನಿರ್ದೇಶಕ ಕೆ.ವಿ.ದಯಾನಂದ್‌, ಸಹಕಾರ ವ್ಯವಸ್ಥೆ ಗಟ್ಟಿಗೊಳ್ಳಲು ಎರಡೂ ಜಿಲ್ಲೆಗಳ ಎಲ್ಲಾ ಎಸ್‌ಎಫ್ ಸಿಎಸ್‌ಗಳೂ ಡಿಸಿಸಿ ಬ್ಯಾಂಕ್‌ಗೆ ಸಹಕಾರ ನೀಡಬೇಕು, ಕಾರ್ಯದರ್ಶಿಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಪ್ರಾಮಾಣಿಕತೆ, ಪಾರದರ್ಶಕತೆಗೆ ಒತ್ತು ನೀಡಬೇಕೆಂದರು.

ನಿರ್ದೇಶಕ ಹೊಳಲಿ ಪ್ರಕಾಶ್‌, ನಾವು ಸಾಲ ನೀಡಲು ಸಿದ್ದರಿದ್ದೇವೆ, ಅಷ್ಟೇ ಬದ್ಧತೆಯಿಂದ ಮಹಿಳೆಯರು ಸಾಲ ಮರುಪಾವತಿ ಮಾಡಿ ನಂಬಿಗೆ ಉಳಿಸಿಕೊಳ್ಳಬೇಕೆಂದು ಕೋರಿದರು. 

ಎಸ್‌ಎಫ್ಸಿಎಸ್‌ ಅಧ್ಯಕ್ಷೆ ಶೈಲಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಮೂರಾಂಡಹಳ್ಳಿ ಗೋಪಾಲ್‌, ಟಿಎಪಿಸಿಎಂಎಸ್‌ ನಿರ್ದೇಶಕ ನಾಗೇಶ್‌, ಸೊಸೈಟಿ ಉಪಾಧ್ಯಕ್ಷ ವೆಂಕಟರಾಯಪ್ಪ, ನಿರ್ದೇಶಕರಾದ ಶಂಕರಪ್ಪ, ವೆಂಕಟರಾಂ, ಮಂಜುನಾಥ್‌, ಕಾರ್ಯದರ್ಶಿ ಶಂಕರಪ್ಪಮತ್ತಿತರರು ಉಪಸ್ಥಿತರಿದ್ದರು

ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಸಾಧನೆ ಇನ್ನೂ ಕಡಿಮೆಯೇ. ನಮ್ಮ ಗುರಿ ಇನ್ನೂ ಎತ್ತರದಲ್ಲಿದೆ. ಇದನ್ನು
ಸಾಕಾರಗೊಳಿಸಲು ಇಡೀ ಆಡಳಿತ ಮಂಡಳಿ ಪರಿಶ್ರಮದಿಂದ ಕೆಲಸ ಮಾಡುತ್ತಿದೆ. ಪ್ರತಿ ಮಹಿಳೆ ಹಾಗೂ ರೈತರಿಗೆ ನೆರವಾದಾಗ ಮಾತ್ರ ಸಾರ್ಥಕತೆ ಕಾಣುತ್ತೇವೆ.
●ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌ 

Advertisement

Udayavani is now on Telegram. Click here to join our channel and stay updated with the latest news.

Next