Advertisement

ಬಾಯಿ ನೀರೂರಿಸುವ ಪಾಕೋತ್ಸವ

06:25 AM Dec 29, 2018 | |

ಬೆಂಗಳೂರು: ಒಗ್ಗರಣೆ ಅವಲಕ್ಕಿ, ತೆಳು ಅವಲಕ್ಕಿ, ಬಳಿ ಅವಲಕ್ಕಿ, ಸಿಹಿ ಅವಲಕ್ಕಿ, ಚಟ್ಟಂಬಡೆ, ಹೋಳಿಗೆ, ತೆಂಗಿನ ಕಾಯಿ ಹೋಳಿಗೆ… ಇದು ಯಾವುದೇ ಭೋಜನ ಗೃಹದ ಮೆನು ಕಾರ್ಡ್‌ ಅಲ್ಲ. ಬೆಂಗಳೂರಿನ ಅರಮನೆ ಮೈದಾನದ ರಾಯಲ್‌ ಸೆನೆಟ್‌ ಮತ್ತು ಗ್ರ್ಯಾಂಡ್‌ ಕ್ಯಾಸಲ್‌ನಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಎರಡನೇ ವಿಶ್ವ ಹವ್ಯಕ ಸಮ್ಮೇಳನದ ಪ್ರಯುಕ್ತ ಆಯೋಜಿಸಲಾಗುತ್ತಿರುವ “ಹವ್ಯಕ ಪಾಕೋತ್ಸವ’ದಲ್ಲಿ ಕಂಡು ಬರುವ ವಿಶೇಷಗಳು.

Advertisement

ದೋಸೆಗಳಲ್ಲಂತೂ ಸಮುದಾಯದಲ್ಲಿ ಹೊಂದಿರುವಷ್ಟು ವಿಧಗಳು ಬೇರೆ ಕಂಡು ಬರದು. ಬಾಳೆಹಣ್ಣು ದೋಸೆ, ಸೌತೆಕಾಯಿ ದೋಸೆ, ಮಸಾಲೆ ದೋಸೆ, ಕಬ್ಬಿನ ಹಾಲು ದೋಸೆ ಹೀಗೆ ಹಲವು ವಿಧಗಳ ದೋಸೆಗಳು ಅಲ್ಲಿ ಸವಿಯಲು ಸಿದ್ಧವಾಗಿತ್ತು. ಪುತ್ತೂರು, ಮಂಗಳೂರು, ಬಂಟ್ವಾಳ, ಶಿರಸಿ, ಸಿದ್ಧಾಪುರ, ಹೊನ್ನಾವರ ಸೇರಿದಂತೆ ವಿವಿಧ ಸ್ಥಳಗಳಿಂದ ಬಂದಿದ್ದ ಸಮುದಾಯದ ಹಿರಿಯರು, ಕಿರಿಯರು ತಮ್ಮದೇ ಆಗಿರುವ ತಿಂಡಿಯನ್ನು ಬೆಂಗಳೂರಿನಂಥ ಮಹಾನಗರಿಯಲ್ಲಿ ಖುಷಿಯಿಂದ ಸವಿಯುತ್ತಿದ್ದರು. 

ವಿಧ ವಿಧದ ದೋಸೆಗಳ ವಿಭಾಗದ ನೇತೃತ್ವ ವಹಿಸಿದ್ದ ಹವ್ಯಕ ಗೃಹಿಣಿಯೊಬ್ಬರು ವಾಣಿಜ್ಯಿಕವಾಗಿ ಪ್ರತ್ಯೇಕವಾಗಿರುವ ಹವ್ಯಕ ಸಮುದಾಯದ ತಿನಸುಗಳ ಮಳಿಗೆ ಉದ್ಯಾನ ನಗರದಲ್ಲಿ ಶುರುವಾಗಬೇಕು ಎಂದರು. ಪಾಕೋತ್ಸವಕ್ಕೆ ಪಾಕಶಾಲೆ: ಸಮುದಾಯದ ತಿಂಡಿ ತಿನಸುಗಳನ್ನು ಸಿದ್ಧಪಡಿಸಲೆಂದೇ ಪ್ರತ್ಯೇಕ ಪಾಕಶಾಲೆ ನಿರ್ಮಿಸಲಾಗಿತ್ತು.

ಈ ಮೂಲಕ ಸಮ್ಮೇಳನಕ್ಕೆ ಆಗಮಿಸುವವರಿಗಾಗಿ ಅಡುಗೆ ಸಿದ್ಧಪಡಿಸಲು ಸಮಸ್ಯೆಯಾಗದಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಏಕೆಂದರೆ ಹವ್ಯಕ ಬ್ರಾಹ್ಮಣರ ನೀರು ದೋಸೆ ಮತ್ತು ಕಾಯಿ ಬೆಲ್ಲ ಈಗಾಗಲೇ ಹಲವು ಹೋಟೆಲ್‌ಗ‌ಳ ಮೆನು ಕಾರ್ಡ್‌ಗಳಲ್ಲಿ ಸೇರ್ಪಯಾಡಿ ವರ್ಷಗಳೇ ಕಳೆದಿವೆ ಮತ್ತು ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಇದೆ.

60 ಸ್ಟಾಲ್‌ಗ‌ಳು: ಹವ್ಯಕ ಸಂಪ್ರದಾಯಕವನ್ನು ಬಿಂಬಿಸುವ, ಸಾಂಸ್ಕೃತಿಕ, ಸಾಹಿತ್ಯಕ್ಕೆ ಸಂಬಂಧಿಸಿದ 60 ಮಳಿಗೆಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ. 

Advertisement

ಸಾಂಪ್ರದಾಯಿಕ ವಸ್ತುಗಳು: ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಹವ್ಯಕ ಮನೆಯಲ್ಲಿ ಬಳಕೆಯಾಗುತ್ತಿದ್ದ ಚಿಮಿಣಿ ದೀಪ, ಲಾಟೀನು, ದೇವರ ಪೂಜೆಗೆ ಬಳಸುವ ಪೀಠ, ಮೆಣಸು, ಜೀರಿಗೆ, ಸಾಸಿವೆಗೆ ಹಾಕಲು ಬಳಕೆ ಮಾಡುವ ಮರದ ಮುಚ್ಚಿದ ಪಾತ್ರೆಗಳ ಸ್ಟಾಲ್‌ ಗಮನ ಸೆಳೆಯುತ್ತಿತ್ತು. 

ಅಡಕೆ ಕೊಯ್ಯಲು  ಟ್ರೀ ಕ್ಲೈಂಬರ್‌: ಅಡಕೆ ಬೆಳೆಗಾರರಿಗೆ ಫ‌ಸಲು ಕೊಯ್ಯಲು ಇತ್ತೀಚಿನ ವರ್ಷಗಳಲ್ಲಿ ಕೆಲಸಗಾರರ ಸಮಸ್ಯೆ. ಹೀಗಾಗಿ, ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸಿದ ಟ್ರೀ ಕ್ಲೈಂಬರ್‌ ಈಗ ಅಡಕೆ ಬೆಳೆಗಾರರ ನಡುವೆ ಜನಪ್ರಿಯವಾಗುತ್ತದೆ. ಕೊಯಿದು ಹಾಕಿದ ಅಡಕೆಯಯನ್ನು ಸಣ್ಣ ಟ್ರಾಲಿಯಲ್ಲಿ ಕೊಂಡೊಯ್ಯಬಹುದು.

ಅದಕ್ಕಾಗಿಯೂ ಕೂಡ ಯಾಂತ್ರೀಕೃತ ಸಣ್ಣ ಪ್ರಮಾಣದ ಟ್ರಾಲಿಯೂ ಇದೆ. ಅದನ್ನು ಮಹಿಳೆಯರೂ ಸುಲಭವಾಗಿ ನಿರ್ವಹಿಸಬಹುದಾಗಿದೆ. ಇದರ ಜತೆಗೆ ಅಡಕೆಗೆ ಮಳೆಗಾಲದಲ್ಲಿ ಸುಲಭವಾಗಿ ಔಷಧ ಸಿಂಪಡಿಸಲು ಕೂಡ ವ್ಯವಸ್ಥೆ ಇದೆ. ನೀರಾವರಿಯಲ್ಲಿ ವಿವಿಧ ರೀತಿಯ ಆಧುನಿಕ ವ್ಯವಸ್ಥೆಗಳ ಸ್ಟಾಲ್‌ಗ‌ಳೂ ಇವೆ.

75 ಯಜ್ಞ ಕುಂಡಗಳು: “ಯಜ್ಞೊ ಹಿ ಶ್ರೇಷ್ಠತಮಂ ಕರ್ಮ’ ವೇದದ ಉಕ್ತಿ. ಅದಕ್ಕಾಗಿ 75 ವಿವಿಧ ಯಜ್ಞಗಳ ಕುಂಡಗಳ ಮಾದರಿಗಳನ್ನು ನಿರ್ಮಿಸಲಾಗಿದೆ. “ಶ್ರೀಮದ್ಭಾಗವತದಶಮಸ್ಕಂದ ಹವನ’, “ಕ್ಷಿಪ್ರ ಗಣಪತಿ ಮಂತ್ರ ಹವನ’, “ಶ್ರೀರಾಮಮಂತ್ರ ಹವನ’, “ನಕ್ಷತ್ರಸೂತ್ರ ಹವನ’ “ವಿಶ್ವಾವಸು ಮಂತ್ರ ಹವನ’, “ಯೋಗೇಶ್ವರಿ ಮಂತ್ರ ಹವನ’ ಹೀಗೆ 75 ವಿಧಗಳ ಹವನ, ಅದಕ್ಕೆ ಎಷ್ಟು ಮಂದಿ ಋತ್ವಿಜರು ಬೇಕಾಗುತ್ತಾರೆ,

ಯಾವ ರೀತಿಯ ವಸ್ತುಗಳು, ಯಾವ ಉದ್ದೇಶಕ್ಕಾಗಿ ಅದನ್ನು ಮಾಡಲಾಗುತ್ತದೆ ಎನ್ನುವುದನ್ನು ಸರಳವಾಗಿ ವಿವರಿಸಲಾಗಿದೆ. ಈ ಬಗ್ಗೆ ವಿವರಣೆ ನೀಡಿದ ಕರ್ನಾಟಕ ಸಂಸ್ಕೃತ ವಿವಿಯ ಪ್ರಾಧ್ಯಾಪಕ ಡಾ.ರಾಮಕೃಷ್ಣ ಭಟ್‌ ಕೂಟೇಲು ಯಜ್ಞದಲ್ಲಿ  ಗೃಹ್ಯ ಮತ್ತು ಶೌತ ಎಂಬ 2 ವಿಧಗಳು. ಗೃಹ್ಯದಲ್ಲಿ “ನವಕುಂಡಿ’ ಅಂದರೆ ಒಂಭತ್ತು ರೀತಿಯ ಯಜ್ಞ ಕುಂಡಗಳ ವಿಧಾನವಿದೆ.

ಅದನ್ನೂ ವಿವರಿಸಲಾಗಿದೆ. ಮೂರು ದಿನಗಳ ಕಾಲ ಮೂರು ವಿಧದ ಯಜ್ಞಗಳು ನಡೆಯಲಿವೆಯ ಜತೆಗೆ ಅದಕ್ಕೆ ಬೇಕಾದ ಕಲಶಗಳ ಮಾದರಿಯೂ ಇದೆ. ಅಖೀಲ ಹವ್ಯಕ ಮಹಾಸಭೆಗೆ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ 75 ಕುಂಡಗಳ ಮಾದರಿ ಸಿದ್ಧಪಡಿಸಲಾಗಿದೆ ಎಂದರು.

ಅಡುಗೆಗಾಗಿ ಉತ್ತಮ ದರ್ಜೆಯ ವಸ್ತುಗಳನ್ನೇ ಬಳಕೆ ಮಾಡುತ್ತಿದ್ದೇವೆ. ಬೆಲ್ಲದಿಂದ ಸಿದ್ಧಪಡಿಸಿದ ಸಿಹಿ ತಿನಿಸುಗಳಿಗೆ ಆದ್ಯತೆ ನೀಡಿದ್ದೇವೆ. ಕಾಸರಗೋಡು, ದ.ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಂದ ಪರಿಣತ ಬಾಣಸಿಗರನ್ನು ಕರೆಸಿಕೊಂಡಿದ್ದೇವೆ.
-ಮಹೇಶ್‌, ಪಾಕಶಾಲೆ ವಿಭಾಗದ ಉಸ್ತುವಾರಿ

ಸಮ್ಮೇಳನದಲ್ಲಿ ಹಳೆಯ ಕಾಲದ ವಸ್ತುಗಳನ್ನು ನೋಡಿ ಸಂತೋಷವಾಯಿತು. ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಅದನ್ನು ನಾವೂ ಬಳಸುತ್ತಿದ್ದೇವೆ. ಪ್ಲಾಸ್ಟಿಕ್‌ ವಸ್ತುಗಳಿಗಿಂತ ನಮ್ಮ ಗ್ರಾಮ್ಯ ವಸ್ತುಗಳಲೇ ಒಳ್ಳೆಯದು.
-ಸರೋಜಿನಿ ಭಟ್‌, ಕಾಸರಗೋಡು ನಿವಾಸಿ

ಪುತ್ತೂರಿನಲ್ಲಿ ಹಿಂದೆ ನಡೆದಿದ್ದ ಸಮ್ಮೇಳನಕ್ಕೂ ಇದಕ್ಕೂ ವ್ಯತ್ಯಾಸವಿದೆ. ಈಗಿನ ಯುವ ಜನತೆ ಪೇಟೆಯ ಸೊಗಡನ್ನು ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ತೆರಳಿ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಜತೆಗೆ ವಾಣಿಜ್ಯ ವಹಿವಾಟು ನಡೆಸುತ್ತಿದ್ದಾರೆ.
-ರಾಮಪ್ರಸಾದ್‌ ಕರಿಯಾಲ, ಪುತ್ತೂರು ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next