Advertisement

ಮೋಟಾರ್‌ ವಾಹನಗಳ ಮಾದರಿಯ ಕಾಯ್ದೆ, ರಸ್ತೆಗಳಿಗೇಕಿಲ್ಲ?

12:26 AM Sep 13, 2019 | mahesh |

ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ, 2019ರ ಪ್ರಕಾರ ಸೆ. 1ರಿಂದ ಮೋಟಾರ್‌ ವಾಹನಗಳಿಗೆ / ಚಾಲನೆಗೆ ಸಂಬಂಧಪಟ್ಟಂತೆ ಅಪರಾಧಗಳಿಗೆ ದಂಡವನ್ನು ಹಲವು ಪಟ್ಟು ಹೆಚ್ಚಿಸಿದ್ದು ಮಾತ್ರವಲ್ಲದೆ ಕೆಲವೊಂದು ಅಪರಾಧಗಳಿಗೆ ಜೈಲು ಶಿಕ್ಷೆ ನೀಡಬಹುದಾದ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ದಂಡನೆಗಳ ತೀವ್ರತೆ ಕಾಣುವಾಗ ಮುಂದುವರಿದ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿ ರುವಂತೆ ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಮಿಗಿಲಾಗಿ ದಂಡನೆಗಳನ್ನು ಅಳವಡಿಸಲಾಗಿದೆ ಎನ್ನಲಡ್ಡಿಯಿಲ್ಲ.

Advertisement

ಹೀಗಿರುವಾಗ, ಒಂದು ಲೆಕ್ಕದಲ್ಲಿ ಈ ತಿದ್ದುಪಡಿ ಕಾಯಿದೆ ನಮ್ಮ ದೇಶವೂ ಮುಂದುವರಿದಿರುವ/ತ್ತಿರುವ ಬಗ್ಗೆ ದೇಶವಾಸಿಗಳೆಲ್ಲರೂ ಹೆಮ್ಮೆಪಡಬೇಕಾದ ವಿಷಯ. ಅದೇ ಹೊತ್ತು ಮೋಟಾರ್‌ ವಾಹನಗಳಿಗೆ ಅತ್ಯಂತ ನಿಕಟವಾಗಿರುವ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ದೋಷ ಅಥವಾ ನ್ಯೂನತೆಗಳ ಕುರಿತು ಗಮನ ಹರಿಸಿದ್ದು ಕಡಿಮೆ ಎನ್ನಬಹುದು. ಹಳ್ಳಿಗಾಡಿನ ಒಳ ರಸ್ತೆಗಳು ಒತ್ತಟ್ಟಿಗಿರಲಿ ನಿನ್ನೆಮೊನ್ನೆ ಎಂಬಂತೆ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎದ್ದಿರುವ ಹೊಂಡಗಳು ರಸ್ತೆಗಳ ಆಲಕ್ಷ್ಯಕ್ಕೆ ಹಿಡಿದ ಕನ್ನಡಿಯಲ್ಲವೇ? ರಸ್ತೆಗೆ ಮಂಜೂರಾದ ಪೂರ್ತಿ ಮೊತ್ತ ಕಾಮಗಾರಿಗೆ ಹೋಗದಿರುವ ಸಾಧ್ಯತೆಯನ್ನು ಈ ಹೊಂಡಗಳು ತೋರಿಸುತ್ತಿವೆ. ಕಾಮಗಾರಿ ಕಳಪೆಯಾಗಿ ರುವುದನ್ನು ಆ ಹೊಂಡಗಳು ಸಾರಿ ಹೇಳುತ್ತವೆ. ಹಾಗಿರುವಾಗ ರಸ್ತೆ ಸಂಬಂಧಿ ಕಠಿಣ ನೀತಿ-ನಿಯಮಗಳ ಅನುಷ್ಠಾನವೂ ಅಗತ್ಯ ಎಂದನಿಸುವುದಿಲ್ಲವೇ?

ಸ್ವಾತಂತ್ರ್ಯ ಪೂರ್ವದಲ್ಲಿ ಅಥವಾ ಐವತ್ತನೇ, ಅರ್ವತ್ತನೇ ದಶಕದಲ್ಲಿ ಡಾಮಾರಿಕರಣಗೊಂಡು ನಿರ್ಮಿತವಾಗಿರುವ ಅನೇಕ ರಸ್ತೆಗಳು ಸದೃಢವಾಗಿವೆ. ಉದಾ: ಕರಾವಳಿ ಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (ಹಿಂದೆ 17, ಈಗ 66) ಅರ್ವತ್ತನೇ ದಶಕದ ಬಳಿಕ ನಿರ್ಮಾಣಗೊಂಡಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಅದನ್ನು ಚತುಷ್ಪಥಗೊಳಿಸುವ‌ ಕಾಮಗಾರಿ ನಡೆದಿದ್ದು ಕೆಲವೆಡೆ ಆ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಕಾಮಗಾರಿ ಪೂರ್ಣಗೊಂಡಿರುವ ಕೆಲವೆಡೆ ನಾಲ್ಕೈದು ವರ್ಷಗಳನ್ನು ಪೂರೈಸುವ ಮೊದಲೇ ದೊಡ್ಡದೊಡ್ಡ ಹೊಂಡಗಳು ಎದ್ದಿರುವುದು ಏನನ್ನು ಸೂಚಿಸುತ್ತದೆ? ಕಾಮಗಾರಿ ಪೂರ್ಣಗೊಂಡಿಲ್ಲ ದಿದ್ದರೂ, ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದ್ದರೂ ಟೋಲನ್ನು ಮಾತ್ರ ಅನಾಯಾ ಸವಾಗಿ ಸಂಗ್ರಹಿಸಲಾಗುತ್ತದೆ.

ದೇಶದ ಪ್ರಗತಿ, ಹಣಕಾಸಿನ ಸ್ಥಿತಿಗತಿ ಹಿಂದಿನ ಕಾಲಕ್ಕಿಂತಲೂ ಇಂದು ಬೆಳೆದಿದೆ. ಆ ಕಾಲಕ್ಕಿಂತಲೂ ತಾಂತ್ರಿಕತೆ ಇಂದು ಹೆಚ್ಚು ಅಭಿವೃದ್ಧಿಗೊಂಡಿದೆ. ದೇಶದ ಒಟ್ಟಾರೆ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಆ ಕಾಲದಲ್ಲಿ ನಿರ್ಮಿತವಾಗಿರುವ ಕಾಮಗಾರಿಗಳು ನಾಲ್ಕೈದು ದಶಕಗಳಿಗೂ ಮೀರಿ ಬಾಳ್ವಿಕೆ ಬರುತ್ತಿದ್ದರೆ ಹಣಕಾಸು, ತಾಂತ್ರಿಕತೆ ಮತ್ತಿತರ ಎಲ್ಲಾ ವಿಷಯಗಳಲ್ಲಿಯೂ ಮೇಲ್ಮಟ್ಟದಲ್ಲಿರುವ ಇಂದಿನ ಕಾಲದ ಕಾಮಗಾರಿಗಳು ನಾಲ್ಕೈದು ವರ್ಷಗಳೂ ಬಾಳ್ವಿಕೆ ಬರುವುದಿಲ್ಲ ಅಂದರೆ ಏನರ್ಥ? ಅಂದಿನ ಪ್ರಾಮಾಣಿಕತೆ ಇಂದು ಉಳಿದಿಲ್ಲ ಎಂದೇ ಹೇಳಬಹುದಲ್ಲವೇ? ಮಾನವ ಘಟಿತ ಲೋಪಗಳಿಗೆ ಕೆಲವೊಮ್ಮೆ ಪ್ರಕೃತಿಯನ್ನು ದೂರು ವುದಿದೆ. ಅದರಂತೆ ಕರಾವಳಿ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಕಾರಣ ರಸ್ತೆ ಮತ್ತಿತರ ಕಾಮಗಾರಿಗಳ ಗುಣಮಟ್ಟ ಕೆಡುತ್ತದೆ ಎಂದು ಹೇಳುವುದಿದೆ. ಮಳೆ ಪ್ರಮಾಣದಲ್ಲಿ ಹಿಂದಿನ ಕಾಲ ಮತ್ತು ಇಂದಿಗೆ ಅಜಗಜಾಂತರವೇನೂ ಇಲ್ಲ. ಆದರೂ ಇಂದಿನ ಕಾಮಗಾರಿಗಳು ಬಾಳ್ವಿಕೆ ಬರುವುದಿಲ್ಲ ಅಂದರೆ ಕಾಮಗಾರಿಗಳಲ್ಲಿ ಅಗತ್ಯವಾಗಿರುವ ವಸ್ತುಗಳು ಬೇಕಾದ ಪ್ರಮಾಣದಲ್ಲಿ ಉಪಯೋಗವಾ ಗದಿರುವುದು ಅಥವಾ ಕಾಮಗಾರಿಗಳ ನಿರ್ವಹಣೆಯಲ್ಲಿ ದೋಷ ಇರುವುದು ಕಾರಣ ಯಾಕಾಗಬಾರದು?

ಇಂದಿನ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ ಮಾದರಿಯಲ್ಲಿಯೇ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿಯೂ (ಮತ್ತು ಇತರ ಕಾಮಗಾರಿಗಳಿಗೆ ಕೂಡ) ಕಟ್ಟುನಿಟ್ಟಿನ ಕಾಯ್ದೆ ಜಾರಿ ಗೊಳಿಸಬೇಕು. ಕಾಮಗಾರಿಗಳನ್ನು ನಿರ್ವಹಿಸಿದವರಿಂದ ಇಂತಿಷ್ಟೇ ಅವಧಿಗೆ ಕಾಮಗಾರಿಗಳ ಸುಸ್ಥಿತಿ ಬಗ್ಗೆ ಹೊಣೆಗಾರಿಕೆ ಅಥವಾ ಗ್ಯಾರಂಟಿ ಪಡೆಯಬೇಕು. ಕಾಂಕ್ರಿಟ್, ಡಾಮಾರು ಅಥವಾ ಜಲ್ಲಿಗಳು ಎದ್ದು ಹೋಗುವುದು, ಹೊಂಡ ಬೀಳುವುದು ಇತ್ಯಾದಿಗಳಿಗೆ ಅವರನ್ನು ಜವಾಬ್ದಾರರನ್ನಾಗಿ ಮಾಡಬೇಕು. ಈ ಸಂಬಂಧ ಈಗಾಗಲೇ ಇರುವ ಕಾಯ್ದೆಗಳನ್ನು ಬಲಪಡಿಸುವುದರ ಅಥವಾ ಹೊಸತಾಗಿ ರೂಪಿಸುವುದರ ಮೂಲಕ ತಪ್ಪಿತಸ್ಥರನ್ನು ದಂಡನೆಗೆ ಗುರಿಪಡಿಸಬೇಕು. ಆಗಲೇ ನಮ್ಮ ದೇಶ ನಿಜವಾಗಿಯೂ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ.

Advertisement

ಇಂದಿನ ಮೋಟಾರ್‌ ವಾಹನ (ತಿದ್ದುಪಡಿ) ಕಾಯ್ದೆ ಮಾದರಿಯಲ್ಲಿಯೇ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿಯೂ ಕಟ್ಟುನಿಟ್ಟಿನ ಕಾಯ್ದೆ ಜಾರಿ ಗೊಳಿಸಬೇಕು.

ಎಚ್‌. ಆರ್‌. ಆಳ್ವ

Advertisement

Udayavani is now on Telegram. Click here to join our channel and stay updated with the latest news.

Next