ಬಡತನ. ಸಾಧಕನ ಹುಟ್ಟಿಗೆ ಕಾರಣವಾಗುವ ಪರಿಸ್ಥಿತಿ.! ಈ ಪರಿಸ್ಥಿತಿಯಲ್ಲಿ ದನಿ ಎತ್ತದೇ ಅವಮಾನಿತರಾಗುವುದು, ಹಣವಿಲ್ಲದೆ ಇನ್ನೊಬ್ಬರ ಮುಂದೆ ಕೈ ಚಾಚುವುದು, ಹೊಟ್ಟೆಗಿಲ್ಲದೆ ಗಂಟಲು ಒಣಗುವುದು ಇವೆಲ್ಲಾ ಬಡವರ ಬದುಕಿಗೆ ಕೊಳ್ಳಿಯಿಡುವ ವಾಸ್ತವ ಸ್ಥಿತಿಗಳು. ಆದರೆ ಪ್ರತಿ ಬಡ ಜೀವಿಯಲ್ಲೂ ಬದುಕುವ ಆಸೆಯನ್ನು, ಮಿಂಚುವ ಆಕಾಂಕ್ಷೆಗಳನ್ನು ಜೀವಂತವಾಗಿರುಸುವುದು ಕನಸುಗಳು.! ಅದು ಅಂತಿಂಥ ಕನಸಲ್ಲ ಆಸೆಗಳೇ ಅಂತಿಮವಾಗದ ನಿರಂತರ ಕನಸು.!
ಕನಸು ಮಾತ್ರ ಬಡವರ ಮುಕ್ತ ಆಯ್ಕೆ. ಸಿರಿವಂತರಾಗುವ ಕನಸು, ಕಲಿಯುವ ಕನಸು, ಬೆಳಯುವ ಕನಸು. ಎಲ್ಲಾ ಕನಸುಗಳಿಗೆ ರೆಕ್ಕೆಗಳಿರುತ್ತವೆ ಆದರೆ ಬಣ್ಣ ಹಚ್ಚಿ ಆಕಾಶದೆತ್ತರಕ್ಕೆ ಹಾರಿಸಿ, ಹಾರೈಸುವ ಕೈಗಳು ಸಿಗಲ್ಲ.!
ಸೋನಲ್ ಶರ್ಮಾ. ರಾಜಸ್ಥಾನದ ಉದಯ್ ಪುರದಲ್ಲಿ ಜನಸಿದ ಹುಡುಗಿ. ಬಾಲ್ಯದಿಂದಲೇ ಮನೆಯೊಳಗಿನ ಪರಿಸ್ಥಿತಿಯನ್ನು ನೋಡುತ್ತಾ ಬೆಳೆದವಳು. ಅಂತರ್ ಜಾತೀಯೊಳಗೆ ಮದುವೆ ಆದ ತಂದೆ ತಾಯಿಗೆ ಊರಿನ ಯಾವ ಸಂಭ್ರಮ – ಸಡಗರಕ್ಕೆ ಬರುವುದು ಕೊನೆಯ ಆಮಂತ್ರಣ. ಎಲ್ಲರೂ ಹೋದ ಬಳಿಕವೇ ಸಮಾರಂಭಕ್ಕೆ ಹೋಗಿ ಬರಬೇಕೆನ್ನುವ ಸ್ವನಿರ್ಮಿತ ನಿಯಮ ಸೋನಲ್ ಮನೆಯೊಳಗೆ ಇತ್ತು. ಅದಕ್ಕಾಗಿ ಸೋನಲ್ ಮನೆಯ ಯಾವ ಸದಸ್ಯರು ಸಮಾರಂಭಕ್ಕೆ ಹೋಗುವುದು ತೀರಾ ಕಡಿಮೆ.
ಕಲಿಕೆಯ ಹಾದಿ :
ಇಂಥ ಪರಿಸ್ಥಿತಿಯನ್ನು ಹೊಗಲಾಡಿಸಿ, ಸಮಾಜದಲ್ಲಿ ಸೂಕ್ತ ಮಾರ್ಯಾದೆಯನ್ನು ಪಡೆದುಕೊಳ್ಳಲು ಸೋನಲ್ ಮನಸ್ಸಿಗೆ ಬಂದದ್ದು ಒಂದೇ ಯೋಚನೆ, ತಾನೊಂದು ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಬೇಕು ಎನ್ನುವುದು. ಅದು ಸಮಾಜ ಮೆಚ್ಚುವ ಸರ್ಕಾರಿ ಕೆಲಸ. ಯೋಚನೆ ಯೋಜನೆ ಆಗಿ ಕಾರ್ಯಗತವಾಗಲು ಹೆಚ್ಚೇನು ಸಮಯ ಬೇಕಾಗಿರಲಿಲ್ಲ. ಸಾಧಕನ ಮೊದಲ ಹೆಜ್ಜೆಯಲ್ಲಿ ಸೋನಲ್ ಯಶಸ್ಸಾಗಿದ್ದಳು. ಎಸ್.ಎಸ್.ಎಲ್ ಯಲ್ಲಿ ಉತ್ತಮ ಅಂಕಗಳಿಸಿ, ವಿಜ್ಞಾನದ ಆಯ್ಕೆ ಸುಲಭವಾಗಿದ್ದರೂ, ಸೋನಲ್ ಆಯ್ದುಕೊಂಡದ್ದು ಕಲಾ ವಿಭಾಗವನ್ನು.
ಕಲಾ ವಿಭಾಗದಲ್ಲಿ ಸೋನಲ್ ಗೆ ವಿಷಯಗಳು ಹೊಸದಾಗಿ ಕಂಡಿತ್ತು ವಿನಃ ಸೋನಲ್ ತನ್ನ ಕಲಿಕೆಯ ಉತ್ಸಾಹದಲ್ಲಿ ಯಾವ ಕಮ್ಮಿಯನ್ನು ತೋರ್ಪಡಿಸಿಕೊಳ್ಳಲಿಲ್ಲ. ಯಶಸ್ಸನ್ನು ಮುಂದುವರೆಸಿದ್ದಳು. ಸೋನಲ್ ಮುಂದೆ ಇದ್ದದು ಒಂದೇ ಸರ್ಕಾರಿ ಉದ್ಯೋಗ ಪಡೆದುಕೊಳ್ಳುವ ಹಟ. ಪಿಯುಸಿಯಲ್ಲಿ ಸೋನಾಲ್ ಮತ್ತೆ ಟಾಪರ್ ಆಗುತ್ತಾಳೆ. ಚಪ್ಪಳೆ,ಶುಭಾಶಯಗಳು ಸೋನಲ್ ಗೆ ದಕ್ಕುತ್ತದೆ.
ಗೋ ಸೇವೆಯೇ ಬದುಕಿಗೆ ಆಧಾರ :
ಸೋನಾಲ್ ಮನೆಯಲ್ಲಿ ಹೈನುಗಾರಿಕೆ ಮನೆಯವರ ಹೊಟ್ಟೆ ತುಂಬಿಸಲು ಇದ್ದ ಏಕೈಕ ಕೆಲಸ. ದನದ ಹಾಲು ಕರೆಯುವುದು, ಅದನ್ನು ಡೈರಿಗೆ ಮಾರುವುದು. ಬಂದ ಲಾಭದಲ್ಲೇ ದಿನದ ಊಟ, ಉಳಿದ ಹಣದಲ್ಲೇ ತಿಂಗಳ ಖರ್ಚು ವೆಚ್ಚ. ಸೋನಲ್ ಬೆಳಗ್ಗೆ ದನದ ಹಾಲನ್ನು ಕ್ಯಾನ್ ಯೊಳಗೆ ಹಾಕಿಟ್ಟು, ಸೆಗಣಿ ಸಾರಿಸಿಯೇ ಶಾಲೆಗೆ ಹೋಗುತ್ತಿದ್ದಳು. ಕಾಲೇಜಿನ ದಿನಗಳಲ್ಲಿ ಸೋನಾಲ್ ಬೆಳಗ್ಗೆ ಬೇಗ ಎದ್ದು, ಸಗಣಿ ತೆಗೆದು, ಹಾಲು ಕರೆದು ಸೈಕಲ್ ನಲ್ಲೇ ಕಾಲೇಜಿನ ಹೋಗುತ್ತಿದ್ದರು. ಸೋನಲ್ ಎಷ್ಟೋ ಸಲಿ ಕಾಲೇಜಿಗೆ ಹೋಗುವಾಗ, ಸಗಣಿ ತುಳಿದ ಅವಳ ಚಪ್ಪಲಿಯ ವಾಸನೆಯಿಂದ ಅವಳನ್ನು ಸ್ನೇಹಿತರು ತಮಾಷೆ ಮಾಡುತ್ತಿದ್ದರು. ಇದೆಲ್ಲದ್ದಕ್ಕೆ ಸೋನಲ್ ಬಳಿ ಇದ್ದ ಉತ್ತರ ಮೌನ ಮಾತ್ರ.
‘ಸರ್’ ನೀಡಿದ ಸಲಹೆ ; ಸೋನಾಲ್ ಸಾಧನೆಗೆ ಮುನ್ನುಡಿ :
ಸೋನಲ್ ಮಾತಿನಲ್ಲಿ ಚತುರೆ. ಕಾಲೇಜಿನ ದಿನಗಳಲ್ಲಿ ಮಾಡುತ್ತಿದ್ದ ನಿರೂಪಣೆಗಳು ಸೋನಲ್ ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅದೇ ಕಾರಣದಿಂದ ಸರ್ ಒಬ್ಬರು ‘ಲಾ’ ಕಲಿಕೆಗೆ ಪ್ರೋತ್ಸಾಹ ನೀಡುತ್ತಾರೆ. ಲಾ ಶಿಕ್ಷಣಕ್ಕೆ ದಾಖಲಾತಿ ಆದ ಮೇಲೆ, ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಸೋನಲ್ ತನ್ನ ಪ್ರತಿಭಾ ಪ್ರದರ್ಶನವನ್ನು ಬಿಟ್ಟಿಲ್ಲ. ಎಲ್ಲದರಲ್ಲೂ ಭಾಗವಹಿಸಿ ತನ್ನೊಳಗಿನ ಹಿಂಜರಿಕೆಯನ್ನು ಮುರಿದು ಹಾಕುತ್ತಾರೆ. ಕಾಲೇಜಿನ ಕಾರ್ಯಕ್ರಮಕ್ಕೆ ಬರುವ ಕೆಲ ಜಿಲ್ಲಾ ಹಾಗೂ ಹೈಕೋರ್ಟ್ ನ್ಯಾಯಾಧೀಶರಿಗೆ ಸಿಗುವ ಗೌರವವನ್ನು ಕಂಡು, ಸೋನಲ್ ಯೊಳಗಿನ ಹಟದ ಹುಳ ಗುರಿಯನ್ನು ಹುಡುಕಲು ಶುರು ಮಾಡುತ್ತದೆ. ಸೋನಲ್ ಜಡ್ಜ್ ಆಗುವ ಕನಸನ್ನು ಮನಸ್ಸಿನೊಳಗೆಯೇ ಕಾಪಿಟ್ಟುಕೊಂಡು, ಕ್ಪಲಿಸಿಕೊಳ್ಳಲು ಶುರು ಮಾಡುತ್ತಾರೆ.
RJS (ರಾಜಸ್ಥಾನ ನ್ಯಾಯಾಂಗ ಸೇವೆ) ಗೆ ತಯಾರಿ :
ಲಾ ಕಲಿಕೆಯ ಮೊದಲ ವರ್ಷದಿಂದಲೇ ಜಡ್ಜ್ ಆಗುವ ಗುರಿಯಿಂದ, ಯಶಸ್ಸಿನ ದಾರಿಯಲ್ಲಿ ನಡೆಯಲು ತಯಾರಿ ನಡೆಸುತ್ತಿದ್ದ ಸೋನಲ್, ಮನೆಯಲ್ಲಿ ಗೋವಿನ ಸೇವೆ ಮಾಡುತ್ತಾ, ಹಾಲಿನ ಕ್ಯಾನ್ ನನ್ನೇ ಉಲ್ಟಾ ಇಟ್ಟು ಅದನ್ನೇ ತಮ್ಮ ಸ್ಟಡಿ ಟೇಬಲ್ ಮಾಡಿ, ದನದ ಕೊಟ್ಟಿಗೆಯಲ್ಲಿ ಪರೀಕ್ಷೆ ತಯಾರಿ ನಡೆಸುತ್ತಾರೆ.
ನಾಲ್ಕನೇ ಸೆಮಿಸ್ಟರ್ ಮುಗಿದ ಬಳಿಕ ತಮ್ಮ ಗುರಿಯ ಮೊದಲ ಹಂತದತ್ತ ಹೆಜ್ಜೆ ಹಾಕುತ್ತಾರೆ. ಸೋನಾಲ್ ಗೆ ತರಬೇತಿ ಅನಿವಾರ್ಯವಾಗಿತ್ತು . ಆದರೆ ಆರ್ಥಿಕ ಸಮಸ್ಯೆಯಿಂದ ಸೋನಾಲ್ ಯಾವ ತರಬೇತಿಯಿಲ್ಲದೆಯೇ ಪರೀಕ್ಷೆಗೆ ತಯಾ ರಾಗುತ್ತಾರೆ. ಬಿಎ. , ಎಲ್. ಎಲ್.ಬಿಯಲ್ಲಿ ಟಾಪ್ ಸ್ಥಾನಗಳಿಸಿದ್ದ ಸೋನಾಲ್ ಮುಂದೆ RJS ಪರೀಕ್ಷೆಯನ್ನು ಬರೆಯುತ್ತಾರೆ.
ದುರಾದೃಷ್ಟವಶಾತ್ ಸೋನಾಲ್ ತಮ್ಮ ಮೊದಲ ಪ್ರಯತ್ನದಲ್ಲಿ ಮೂರು ಅಂಕಗಳಿಂದ ಜನರಲ್ ಕೆಟಗೆರಿಗೆ ತೇರ್ಗಡೆ ಆಗುವಲ್ಲಿ ಹಿಂದೆ ಉಳಿಯುತ್ತಾರೆ. ಸೋತ ಮುಖ ಇಟ್ಟುಕೊಂಡು, ಸವಾಲನ್ನು ಸಮಸ್ಯೆ ಆಗಿ ಸ್ವೀಕರಿಸದೆ ಸೋನಾಲ್ ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆಯುತ್ತಾರೆ. ಈ ಬಾರಿಯ ಶ್ರಮ ಸೋನಲ್ ರಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಆದರೆ ಸಾಮಾನ್ಯ ಕೆಟಗರಿಯಿಂದ ಸೋನಾಲ್ ಈ ಬಾರಿಯೂ ಕೇವಲ ಒಂದೇ ಅಂಕದಿಂದ ಹಿಂದುಳಿದು ಆಯ್ಕೆ ಆಗದೆ ವೇಟಿಂಗ್ ಲಿಸ್ಟ್ ನಲ್ಲಿ ಉಳಿಯುತ್ತಾರೆ. ಈ ಸಲಿ ಸೋನಾಲ್ ಸೋತು ಕೂತುವ ವ್ಯಕ್ತಿಯಾಗಿ, ಮೌನದ ಜತೆ ಸಂಭಾಷಣೆ ನಡೆಸುವ ವ್ಯಕ್ತಿ ಆಗಿ ಕಾಣುತ್ತಾರೆ. ಖಿನ್ನತೆ ಸೋನಲ್ ರನ್ನು ಹಿಂಡಿ ಬಿಡುತ್ತದೆ.
ಆದರೆ ದೇವರ ಆಟವೇ ಬೇರೆ ಇತ್ತು. ಆಯ್ಕೆ ಆದ ಉದ್ಯೋಗಸ್ಥರಲ್ಲಿ ಕೆಲವರು ಬಾರದೆ ಇದ್ದಾಗ. ವೇಟಿಂಗ್ ಲಿಸ್ಟ್ ನಲ್ಲಿದ್ದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸರ್ಕಾರ ಆದೇಶ ನೀಡುತ್ತದೆ. ವೇಟಿಂಗ್ ಲಿಸ್ಟ್ ನಲ್ಲಿದ್ದ ಸೋನಲ್ ಗೆ ಅವಕಾಶ ಸಿಗುತ್ತದೆ. ಸೋನಾಲ್ ಅಪ್ಪ ಅಮ್ಮನ ಕೀರ್ತಿಯನ್ನು ಹೆಚ್ಚಿಸುತ್ತಾಳೆ. ಸೋನಲ್ ಕರಿ ಕೋರ್ಟ್ ಹಾಕಿ ನ್ಯಾಯಧೀಶೆಯ ಸ್ಥಾನದಲ್ಲಿ ಕೂರುತ್ತಾರೆ.
– ಸುಹಾನ್ ಶೇಕ್