ಯಾದಗಿರಿ: ಸೊಳ್ಳೆ ನಿಯಂತ್ರಣದಿಂದ ಮಲೇರಿಯಾ ರೋಗ ಸಂಪೂರ್ಣ ತಡೆಯಬಹುದು. ರೋಗ ಬಂದ ನಂತರ ಚಿಕಿತ್ಸೆ ಪಡೆದುಕೊಳ್ಳುವ ಬದಲು ರೋಗ ಬರದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ ಕುರಕುಂದಿ ಹೇಳಿದರು.
ಶಹಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವನದುರ್ಗಾ ವ್ಯಾಪ್ತಿಯ ಗಂಗನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊಳ್ಳೆಯಿಂದ ಮಲೇರಿಯಾ, ಡೆಂಘೀ, ಆನೆಕಾಲು ರೋಗಗಳು ಹರಡುತ್ತವೆ. ಆದ್ದರಿಂದ ನಿಮ್ಮ ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಕೊಂಡು ಸೊಳ್ಳೆಗಳನ್ನು ನಿಯಂತ್ರಿಸಲು ಮುಂದಾಗಬೇಕು. ಮನೆ ಸುತ್ತಲೂ ಸೊಳ್ಳೆ ಉತ್ಪತ್ತಿ ನಿಯಂತ್ರಿಸಿದರೆ, ಸಾಂಕ್ರಾಮಿಕ ಕಾಯಿಲೆಗಳಿಗೆ ಭಯಪಡುವ ಅಗತ್ಯವಿಲ್ಲ ಎಂದರು.
ಡ್ರಮ್, ಬ್ಯಾರಲ್, ಸಿಮೆಂಟ್ ಡೋಣಿ, ಮಡಿಕೆ, ಹಳೆಯ ಟೈರ್, ತೆಂಗಿನ ಚಿಪ್ಪುಗಳಲ್ಲಿ ನಿಂತ ನೀರಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ಅನಾಫಿಲಿಸ್, ಈಡಿಸ್ ಇಜಿಪ್ತ್ ಸೊಳ್ಳೆ ಲಾರ್ವಾ ಇಡುತ್ತವೆ. ಇದಕ್ಕೆ ಕಡಿವಾಣ ಹಾಕಿದರೆ ರೋಗಗಳು ಹರಡಂತೆ ನೋಡಿಕೊಳ್ಳಬಹುದು. ಯಾವುದೇ ಜ್ವರ ಕಂಡು ಬಂದ ತಕ್ಷಣ ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಬೇಕು. ಮುಂಜಾಗ್ರತೆಗಾಗಿ ಮನೆ ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆಶಾಕಾರ್ಯಕರ್ತರಾದ ಸಿದ್ದಮ್ಮ, ಅಡವಿಯಮ್ಮ, ಸಂಗಪ್ಪ, ಅಂಗನವಾಡಿ ಕಾರ್ಯಕರ್ತೆರಾದ
ಶೋಭಾ, ಯಲ್ಲಮ್ಮ ಸೇರಿದಂತೆ ಇತರರು ಇದ್ದರು.