Advertisement

ಹೇಳಿದ್ದೇ ಹೆಚ್ಚು, ಮಾಡಿದ್ದು ಕಡಿಮೆ ನಮಾಮಿ ಗಂಗೆ

02:49 PM Dec 20, 2017 | |

ಗಂಗಾ ನದಿ ಪುನರುತ್ಥಾನಕ್ಕಾಗಿ ಕೇಂದ್ರ ಸರಕಾರ ರೂಪಿಸಿದ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರು ನೀಡಿರುವ ವರದಿ ಸರಕಾರಕ್ಕೆ ಕಳವಳ ಉಂಟು ಮಾಡಿದ್ದರೆ ಆಶ್ಚರ್ಯವಿಲ್ಲ. ನಮಾಮಿ ಗಂಗೆಗಾಗಿ ಈ ಸಾಲಿನಲ್ಲಿ ಮಂಜೂರು ಮಾಡಿದ್ದ ಅನುದಾನದಲ್ಲಿ ಬಹುಪಾಲು ಮೊತ್ತ ಖರ್ಚಾಗದೆ ಉಳಿದಿದೆ ಎಂದಿದೆ ಮಹಾಲೇಖಪಾಲರ ವರದಿ. ಗಂಗೆಯನ್ನು ಸ್ವತ್ಛಗೊಳಿಸುವ ಸರಕಾರದ ಬದ್ಧತೆಯ ಎದುರು ಪ್ರಶ್ನಾರ್ಥಕ ಚಿಹ್ನೆಯಿಟ್ಟಿರುವ ವರದಿಯಿದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟಿನಿಂದ ಪದೇ ಪದೆ ತಪರಾಕಿಗೆ ಗುರಿಯಾದರೂ ಗಂಗಾ ಪುನರುತ್ಥಾನದಲ್ಲಿ ಸರಕಾರಕ್ಕೆ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದನ್ನು ವರದಿ ಸ್ಪಷ್ಟಪಡಿಸಿದೆ. ಹೇಳಿಕೇಳಿ ಗಂಗಾ ಪುನರುತ್ಥಾನ ಪ್ರಧಾನಿ ನರೇಂದ್ರ ಮೋದಿಯ ಹೃದಯಕ್ಕೆ ಹತ್ತಿರವಾಗಿರುವ ಕಾರ್ಯಕ್ರಮ. 2014ರಲ್ಲಿ ಗಂಗಾ ಮಾತೆ ಕರೆಯುತ್ತಿದ್ದಾಳೆ ಎಂದು ಹೇಳಿಯೇ ಮೋದಿ ವಾರಣಾಸಿಯಿಂದ ಸ್ಪರ್ಧಿಸಿದ್ದರು. ವಾರಣಾಸಿಯ ಜನರು ಕೂಡ ಮೋದಿಯನ್ನು ಅಭೂತ ಪೂರ್ವವಾಗಿ ಬೆಂಬಲಿಸಿ ಲೋಕಸಭೆಗೆ ಕಳುಹಿಸಿ ದ್ದಾರೆ. ಉತ್ತರ ಪ್ರದೇಶದಲ್ಲಿ 70ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವಲ್ಲಿ ಗಂಗೆಯ ಪಾಲೂ ಇತ್ತು ಎನ್ನುವುದು ನಿಜ. ಹೀಗಾಗಿ ಗಂಗೆಯನ್ನು ಮಲಿನಮುಕ್ತ ಗೊಳಿಸುವ ಆಶ್ವಾಸನೆಯನ್ನು ಮೋದಿ ಈಡೇರಿಸಲೇ ಬೇಕಿತ್ತು. ಇದಕ್ಕಾಗಿಯೇ ಹೊಸ ಖಾತೆಯನ್ನು ಸೃಷ್ಟಿಸಿ ದಕ್ಷ, ದಿಟ್ಟ ನಾಯಕಿ ಎಂಬ ಬಿರುದಾವಳಿಗಳನ್ನು ಹೊಂದಿರುವ ಉಮಾಭಾರತಿಯನ್ನು ಸಚಿವೆಯನ್ನಾಗಿ ಮಾಡಲಾಯಿತು. ನಮಾಮಿ ಗಂಗೆ ಎಂಬ ಕಾರ್ಯಕ್ರಮ ಘೋಷಿಸಿ ಇದರಡಿಯಲ್ಲಿ ಹತ್ತಾರು ಯೋಜನೆಗಳನ್ನು ರೂಪಿಸಲಾಯಿತು. ಐದು ವರ್ಷಗಳಲ್ಲಿ ಈ ಯೋಜನೆ ಯನ್ನು ಪೂರ್ತಿಗೊಳಿಸಲು 20,000 ಕೋ. ರೂ.ಯ ದೊಡ್ಡ ಅನುದಾನವನ್ನೇ ನೀಡಲಾಗಿದೆ. ಆದರೆ ಕಳೆದ ಮೂರು ವರ್ಷದಲ್ಲಿ ಉಮಾಭಾರತಿಗೂ ಮೋದಿಯ ನಿರೀಕ್ಷೆಗ ತಕ್ಕಂತೆ ಪುನರುತ್ಥಾನ ಕೆಲಸ ಮಾಡಲು ಸಾಧ್ಯವಾಗದ ಕಾರಣ ಪ್ರಸ್ತುತ ನಿತಿನ್‌ ಗಡ್ಕರಿಯನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಸಚಿ ವರು ಬದಲಾಗಿದ್ದರೂ ಗಂಗೆಯ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. 

Advertisement

ಸಿಎಜಿ ವರದಿ ಪ್ರಕಾರ ಒಟ್ಟಾರೆ ಯಾಗಿ ಸುಮಾರು 2133 ಕೋ. ರೂ. ಬಳಕೆಯಾಗದೆ ಉಳಿದಿದೆ. ಈ ಪೈಕಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಂಜೂರು ಮಾಡಿದ್ದ 200 ಕೋ. ರೂ.ಯಲ್ಲಿ ಬಳಕೆಯಾ ಗಿರುವುದು ಬರೀ 14 ಕೋ. ರೂ. ಮಾತ್ರ. ಗಂಗಾ ಸ್ವತ್ಛತಾ ರಾಷ್ಟ್ರೀಯ ಕಾರ್ಯಕ್ರಮದಡಿ ಮೂರು ಪ್ರಮುಖ ಕಾಮಗಾರಿಗಳ ಮೇಲೆ ಕಣ್ಗಾವಲು ಇಡಲು ಈ ಮೊತ್ತವನ್ನು ಮಂಜೂರು ಮಾಡಲಾಗಿತ್ತು. ನದಿ ಸ್ವತ್ಛಗೊಳಿಸುವುದು, ತ್ಯಾಜ್ಯ ಸಂಸ್ಕರಣೆ ಮತ್ತು ಶೌಚಾಲಯ ನಿರ್ಮಾಣ ಮತ್ತಿತರ ಯೋಜನೆಗಳು ಲೋಪದೋಷಗಳಾಗಿವೆ ಎನ್ನುವುದನ್ನು ವರದಿ ಎತ್ತಿ ತೋರಿಸಿದೆ. ನದಿ ಸ್ವತ್ಛತೆಯ ಮೂಲವೇ ಇದು. ನದಿಗೆ ಹರಿದು ಬರುತ್ತಿರುವ ಗ್ಯಾಲನYಟ್ಟಲೆ ತ್ಯಾಜ್ಯವನ್ನು ಸಂಸ್ಕರಿಸದಿದ್ದರೆ ಸ್ವತ್ಛತೆಗಾಗಿ ಎಷ್ಟೇ ಹಣ ಸುರಿದರೂ ಅದು ನೀರ ಮೇಲಿಟ್ಟ ಹೋಮದಂತೆ. ಅಂತೆಯೇ ಶೌಚಾಲಯ ನಿರ್ಮಾಣ. ಆದರೆ ಈ ಮೂಲಭೂತ ಅಗತ್ಯವನ್ನೇ ಪೂರೈಸಲು ಸಾಧ್ಯವಾಗದೆ ನದಿ ಸ್ವತ್ಛಗೊಳಿಸುವುದು ಅಸಾಧ್ಯ ಎನ್ನುವುದು ಸರಕಾರಕ್ಕೇಕೆ ಅರ್ಥವಾಗುವುದಿಲ್ಲವೋ? 

ಸರಕಾರ ನಮಾಮಿ ಗಂಗೆ ಎಂಬ ಆಕರ್ಷಕ ಹೆಸರಿನ ಕಾರ್ಯಕ್ರಮ ಘೋಷಿಸಿದ್ದರೂ ನದಿ ಸ್ವತ್ಛಗೊಳಿಸಲು ಸಮರ್ಪಕವಾದ ಕ್ರಿಯಾ ಯೋಜನೆಯನ್ನೇ ರಚಿಸಿಲ್ಲ ಎನ್ನುವುದರತ್ತ ವರದಿ ಬೆಟ್ಟು ಮಾಡಿದೆ. ಯಾವುದೇ ಕಾರ್ಯಕ್ರಮ ಸಫ‌ಲವಾಗಬೇಕಾದರೆ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು. ಆದರೆ ಕೇಂದ್ರ ಸಮರ್ಪಕ ಕ್ರಿಯಾ ಯೋಜನೆಯನ್ನೇ ರೂಪಿಸಿಲ್ಲ ಎಂದಾಗ ಈ ಯೋಜನೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಹ ಬರುತ್ತದೆ. 2,525 ಕಿ. ಮೀ. ಉದ್ದವಿರುವ ಗಂಗಾ ನದಿ ಉತ್ತರಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಾಗಿ ಹರಿದು ಹೋಗುತ್ತದೆ. 167 ಲೋಕಸಭಾ ಕ್ಷೇತ್ರಗಳೂ ಗಂಗಾ ನದಿಯ ತಟದಲ್ಲಿವೆ ಎನ್ನುವುದು ಪ್ರಾಕೃತಿಕವಾಗಿ ಮಾತ್ರವಲ್ಲದೆ ರಾಜಕೀಯವಾಗಿಯೂ ಗಂಗೆಗೆ ಎಷ್ಟು ಮಹತ್ವವಿದೆ ಎನ್ನುವುದನ್ನು ತಿಳಿಸುತ್ತದೆ. ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸರಕಾರವೇ ಇದೆ. ಐದು ವರ್ಷಗಳಲ್ಲಿ ಹೇಳಿದ ಶೇ. 50ರಷ್ಟಾದರೂ ಸ್ವತ್ಛತೆಯ ಕೆಲಸ ಮಾಡದಿದ್ದರೆ ಅದರ ಪರಿಣಾಮ ಏನಾಗ ಬಹುದು ಎಂದು ಉಳಿದವರಿಗಿಂತ ಬಿಜೆಪಿಗೆ ಹೆಚ್ಚು ಚೆನ್ನಾಗಿ ಗೊತ್ತಿರಬಹುದು. ಇನ್ನಷ್ಟು ಕಾರ್ಯಕ್ರಮಗಳನ್ನು ಘೋಷಿಸಿ ಕಾಲಹರಣ ಮಾಡುವಷ್ಟು ಸಮಯಾವಕಾಶವೂ ಇಲ್ಲ. ಹೀಗಾಗಿ ನಿತಿನ್‌ ಗಡ್ಕರಿ ಸಮರೋಪಾದಿಯಲ್ಲಿ ಕೆಲಸ ಮಾಡಲು ಕಾರ್ಯತ‌ತ್ಪರರಾಗುವ ಅಗತ್ಯವಿದೆ. ಏಕೆಂದರೆ ಗಂಗೆಯ ನೀರಿನಲ್ಲಿ ಜನರ ಧಾರ್ಮಿಕ ಭಾವನೆಯೂ ಸೇರಿಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next