Advertisement

ಆರೋಗ್ಯಕ್ಕೆ ಸಿಗದ ಆದ್ಯತೆ: ಬೇಕು ಇನ್ನಷ್ಟು ಶ್ರಮ

06:00 AM Jun 23, 2018 | |

ಪ್ರಪಂಚದಲ್ಲೇ ಅತಿ ವೇಗದ ಜಿಡಿಪಿ ಬೆಳವಣಿಗೆ ದರ ಹೊಂದಿರುವ ಭಾರತವು, ದೇಶವಾಸಿಗಳ ಸ್ವಾಸ್ಥ್ಯಕ್ಕಾಗಿ ತನ್ನ ಒಟ್ಟು ಜಿಡಿಪಿಯಲ್ಲಿ ಕೇವಲ 1 ಪ್ರತಿಶತ ಪಾಲನ್ನು ಮಾತ್ರ ಮೀಸಲಿಡುತ್ತಿದೆ ಎನ್ನುತ್ತಿದೆ ಸೆಂಟ್ರಲ್‌ ಬ್ಯೂರೋ ಆಫ್ ಹೆಲ್ತ್‌ ಇಂಟೆಲಿಜೆನ್ಸ್‌ ಬಿಡುಗಡೆ ಮಾಡಿರುವ ನ್ಯಾಷನಲ್‌ ಹೆಲ್ತ್‌ ಪ್ರೊಫೈಲ್‌(ಎನ್‌ಎಚ್‌ಪಿ) ವರದಿ. ಗಮನಿಸಬೇಕಾದ ಅಂಶವೆಂದರೆ ಭೂತಾನ್‌, ಶ್ರೀಲಂಕಾ ರಾಷ್ಟ್ರಗಳು ತಮ್ಮ ಜಿಡಿಪಿಯಲ್ಲಿ ಕ್ರಮವಾಗಿ 2.5 ಮತ್ತು 1.6ರಷ್ಟು ಪಾಲನ್ನು ದೇಶವಾಸಿಗಳ ಆರೋಗ್ಯ ದೇಖರೇಖೀಗಾಗಿ ಮೀಸಲಿಡುತ್ತಿವೆ. ಇವಕ್ಕೆಲ್ಲ ಹೋಲಿಸಿದರೆ ಅಮೆರಿಕ ತನ್ನ ಹೆಲ್ತ್‌ಕೇರ್‌ಗಾಗಿ ಜಿಡಿಪಿಯಲ್ಲಿ ಖರ್ಚು ಮಾಡುತ್ತಿರುವ ಪ್ರಮಾಣ ಶೇ. 18 ರಷ್ಟು. ಆದಾಗ್ಯೂ ಭಾರತ ಜಿಡಿಪಿಯಲ್ಲಿ ಎಷ್ಟು ಪ್ರಮಾಣವನ್ನು ಆರೋಗ್ಯ ಸೇವೆಗೆ ವಿನಿಯೋಗಿಸುತ್ತಿದೆ ಎನ್ನುವುದು ರಹಸ್ಯ ಸಂಗತಿಯೇ ಅಲ್ಲವಾದರೂ ಈ ವರದಿ ಮತ್ತೂಮ್ಮೆ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಕರೆ ನೀಡುತ್ತಿದೆ ಎನ್ನಬಹುದು. 

Advertisement

ದೇಶದ ಆರೋಗ್ಯ ವಲಯಕ್ಕೆ ಬಹಳ ಮರಮ್ಮತ್ತು ಮಾಡಬೇಕಾದ ಅಗತ್ಯವಿದೆ. ಇಲ್ಲಿಯವರೆಗಿನ ಆಡಳಿತಗಳೆಲ್ಲ ಖಾಸಗಿಯವರಿಗೆ ಆರೋಗ್ಯ ಕ್ಷೇತ್ರದ ದ್ವಾರ ತೆರೆದು ನಿಶ್ಚಿಂತವಾಗಿದ್ದು ಬಿಟ್ಟರೆ ಸರ್ಕಾರಿ ಆಸ್ಪತ್ರೆಗಳು, ಸೇವೆಗಳ ಮೇಲೆ ನಿಜಕ್ಕೂ ಅಗತ್ಯವಿದ್ದಷ್ಟು ಗಮನವನ್ನು ಕೊಡಲಿಲ್ಲ. ದೇಶದ ಶ್ರೀಮಂತ ಮತ್ತು ಮಧ್ಯಮವರ್ಗದ ಜನರು ಆರೋಗ್ಯ ಸೇವೆಗಳಿಗಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗಿಲ್ಲ. 

ದೇಶದ ನೀತಿ ನಿರೂಪಣೆಯ ಮೇಲೆ ಇವೆರಡೂ ವರ್ಗದ ಆಸೆ ಆಕಾಂಕ್ಷೆಗಳ ಒತ್ತಡ ಹೆಚ್ಚಿರುತ್ತದಾದ್ದರಿಂದ, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಉತ್ತಮ ಪಡಿಸಬೇಕೆಂಬ ಒತ್ತಡ ಆಡಳಿತಗಳ ಮೇಲೆ ಅಷ್ಟೇನೂ ಇಲ್ಲ. ಈ ಸಮಸ್ಯೆಯ ಪ್ರಮಾಣ ಬೃಹತ್ತಾಗಿ ಇದೆಯಾದರೂ, ಇಂದು “ಆರೋಗ್ಯ’ ಎನ್ನುವುದು ಚುನಾವಣೆಯ ಪ್ರಮುಖ ವಿಷಯವಾಗುತ್ತಲೇ ಇಲ್ಲ. ಹೌದು, ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಸ್ವಾಸ್ಥ್ಯದ ಮೇಲಿನ ಸರ್ಕಾರಿ ವಿನಿಯೋಗವನ್ನು ಹೆಚ್ಚಿಸುವ ಮಾತನಾಡುತ್ತವೆ, ಆದರೆ ಅಧಿಕಾರಕ್ಕೆ ಬಂದ ನಂತರ ಆರೋಗ್ಯ ಸೇವೆಗಳನ್ನು ಉತ್ತಮಪಡಿಸುವ ವಿಚಾರವನ್ನು ಅವು ಮರೆತೇ ಬಿಡುತ್ತಿವೆ. ಸರ್ಕಾರಿ ಆಸ್ಪತ್ರೆಗಳ ಮೇಲೆ ಅನಿವಾರ್ಯವಾಗಿ ಅವಲಂಬಿತರಾದ ಜನರೂ ಕೂಡ ಈ ವಿಷಯಗಳನ್ನಿಟ್ಟುಕೊಂಡು ಮತ ನೀಡುವುದಿಲ್ಲ. 

ಇದೇನೇ ಇದ್ದರೂ ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಶ್ಲಾಘನೀಯ ಕೆಲಸಗಳನ್ನು ಮಾಡಿದೆ ಎನ್ನುವುದನ್ನು ಇಲ್ಲಿ ಉಲ್ಲೇಖೀಸ ಲೇಬೇಕು. ಔಷಧಗಳ ಬೆಲೆಯನ್ನು ತಗ್ಗಿಸಿರುವುದು, ಜನೌಷಧಿ ಕೇಂದ್ರಗಳ ಮೂಲಕ ಕಡಿಮೆ ಬೆಲೆಯಲ್ಲಿ ಔಷಧ ವಿತರಣೆಯ ಯೋಜನೆ, ಮೆಡಿಕಲ್‌ ಇಂಪ್ಲಾಂಟ್‌ಗಳ (ಸ್ಟೆಂಟ್‌ಗಳ ಬೆಲೆಯಲ್ಲಿ ಗಣನೀಯ ಇಳಿಕೆ), ಮಿಷನ್‌ ಇಂದ್ರಧನುಷ್‌ನಂಥ ಲಸಿಕಾ ಕಾರ್ಯಕ್ರಮ, ದೇಶದ 40 ಪ್ರತಿಶತ ಜನಸಂಖ್ಯೆಗೆ ವಿಮಾ ಸೌಲಭ್ಯವನ್ನು ಒದಗಿಸುವ ಉದ್ದೇಶವಿರುವ ಆಯುಷ್ಮಾನ್‌ ಭಾರತ್‌ನಂಥ ಕ್ರಾಂತಿಕಾರಿ ಕಾರ್ಯಕ್ರಮಗಳು ಕೆಲವು ಉದಾಹರಣೆಗಳಷ್ಟೆ. 

ಆದರೆ ಇಷ್ಟೆಲ್ಲ ಯೋಜನೆಗಳ ತರುವಾಯವೂ ಆಗಬೇಕಾದ ಕೆಲಸ ಬಹಳಷ್ಟಿದೆ. 2002ರಲ್ಲಿ ಆಗಿನ ಕೇಂದ್ರ ಸರ್ಕಾರದ ಸ್ವಾಸ್ಥ್ಯ ನೀತಿಯಲ್ಲಿ, ಆರೋಗ್ಯ ಸೇವೆಗಳ ಮೇಲೆ ಜಿಡಿಪಿಯ 2 ಪ್ರತಿಶತ ಪಾಲನ್ನು ವಿನಿಯೋಗಿಸಬೇಕೆಂಬ ಗುರಿಯೂ ಇತ್ತು. ಆದರೆ ಆ ಗುರಿ ಇಂದಿಗೂ ಈಡೇರಿಲ್ಲ. ಕಳೆದ ವರ್ಷ ಕೇಂದ್ರ ಸರ್ಕಾರ ಆರೋಗ್ಯ ಸೇವೆಗಳಿಗಾಗಿ ಜಿಡಿಪಿಯ 2.5 ಪ್ರತಿಶತದಷ್ಟು ವಿನಿಯೋಗಿಸುವ ಮಾತನಾಡಿತ್ತು. ಆದರೆ ಇನ್ನೊಂದು ವರ್ಷದಲ್ಲಿ ಆ ಚಮತ್ಕಾರ ನಡೆಯುವುದಾ?

Advertisement

ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸುವ ಕೆಲಸ ವೇಗವಾಗಿ ನಡೆಯಬೇಕಿದೆ. ಸಾರ್ವ ಜನಿಕ ಸಂವಹನದಲ್ಲಿ, ಚರ್ಚೆಗಳಲ್ಲಿ ಈ ವಿಷಯ ಇನ್ನಷ್ಟು ಹೆಚ್ಚಿನ ಪ್ರಮಾಣ ದಲ್ಲಿ ಕಾಣಿಸಿಕೊಳ್ಳಬೇಕಿದೆ. ಆರೋಗ್ಯ ಬಜೆಟ್‌ನಲ್ಲಿ ಗಮನಾರ್ಹ ಹೆಚ್ಚಳ ಮಾಡದೇ ಭಾರತದ ಆರೋಗ್ಯ ಗುರಿಗಳನ್ನು ಸಾಧಿಸುವುದು ಕಷ್ಟ. ಗರ್ಭಿಣಿ-ಶಿಶು ಮರಣ ಪ್ರಮಾಣವನ್ನು 2020ರೊಳಗೆ ಗಣನೀಯವಾಗಿ ತಗ್ಗಿಸುವ ಮತ್ತು ದೇಶವನ್ನು 2025ರ ವೇಳೆಗೆ ಕ್ಷಯಮುಕ್ತ ಮಾಡುವಂಥ ಕನಸುಗಳು ನನಸಾಗಬೇಕೆಂದರೆ ಆರೋಗ್ಯ ವಲಯದಲ್ಲಿ ಸರ್ಕಾರ(ಕೇಂದ್ರ ಮತ್ತು ರಾಜ್ಯಗಳು) ಹೆಚ್ಚಿನ ಪ್ರಮಾಣದಲ್ಲಿ 
ಹಣ ಮತ್ತು ಗಮನವನ್ನು ವಿನಿಯೋಗಿಸಲೇಬೇಕಾಗುತ್ತದೆ. ಅಲ್ಲದೆ ಸದ್ಯಕ್ಕೆ ಮೀಸಲಿಡಲಾಗುತ್ತಿರುವ ಪರಿಣಾಮಕಾರಿಯಾಗಿ ವಿನಿಯೋಗ ವಾಗಬೇಕು. ಇದನ್ನು ಸಾಧ್ಯಮಾಡಬೇಕಾದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next