Advertisement

ಅಧ್ಯಕ್ಷ, ಉಪಾಧ್ಯಕ್ಷರಾಗಲು ಹೆಚ್ಚು ಮಂದಿಗೆ ಅವಕಾಶ

12:11 PM Jan 04, 2021 | Team Udayavani |

ಕುಂದಾಪುರ, ಜ. 3: ಪಂಚಾಯತ್‌ ಚುನಾವಣೆಯ ಭರಾಟೆ ಮುಗಿದು ಮತ ಎಣಿಕೆ ನಡೆದು ವಿಜೇತರ ಸಂಭ್ರಮದ ಗುಂಗು ಕೂಡ ಮರೆಯಾಗುತ್ತಿದೆ. ಸೋತವರ ಹತಾಶೆಯೂ ಕಡಿಮೆಯಾಗುತ್ತಿದೆ. ಅಷ್ಟರಲ್ಲಿ ಅಧ್ಯಕ್ಷ, ಉಪಾಧ್ಯಕ್ಷತೆಗೆ ಸಂಬಂಧಿಸಿದಂತೆ ಸುದ್ದಿಯನ್ನು ಆಯೋಗ ನೀಡಿದೆ. ಆದರೆ ಈ ಬಾರಿ ಆಯೋಗ ಸಿಹಿಸುದ್ದಿಯನ್ನೇ ನೀಡಿದೆ. ಏಕೆಂದರೆ ಅಧ್ಯಕ್ಷ, ಉಪಾಧ್ಯಕ್ಷತೆ ಅವಧಿ 30 ತಿಂಗಳುಗಳಾಗಿದ್ದು ಸದಸ್ಯತ್ವ ಅವಧಿ ಮುಗಿಯುವ ಮುನ್ನ ಇನ್ನೊಂದು ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ಮೂಲಕ ಇನ್ನಿಷ್ಟೇ ಮಂದಿಗೆ ಅವಕಾಶ ಲಭ್ಯವಾಗಲಿದೆ.

Advertisement

ಸಿದ್ಧತೆ :

ಈಗಾಗಲೇ ಮತ ಎಣಿಕೆ ನಡೆದು ಅಧಿಕೃತ ವಾಗಿ ಘೋಷಣೆಯಾದ ಅಭ್ಯರ್ಥಿಗಳ ಪಟ್ಟಿ ಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬೇಕು. ಅದಾದ ಬಳಿಕ 30 ದಿನಗಳ ಒಳಗೆ ಅಧ್ಯಕ್ಷ, ಉಪಾಧ್ಯಕ್ಷತೆಯ ಮೀಸಲಾತಿ ಪ್ರಕಟವಾಗಬೇಕು. ಇದರಲ್ಲೂ ಅನೇಕ ಸೂಚನೆಗಳನ್ನು ಚುನಾವಣ ಆಯೋಗ ನೀಡಿದ್ದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಕಠಿನ ಸವಾಲಾಗಿದೆ. ಮೊದಲು ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ ಮೀಸಲಾತಿ ನಿಗದಪಡಿಸಿ ಅನಂತರವೇ ಸಾಮಾನ್ಯ ವರ್ಗದ ಮೀಸಲಾತಿ ನಿಗದಿಪಡಿಸಬೇಕು. ಇದು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಅನ್ವಯ. ಈ ವರ್ಗಗಳ ಮೀಸಲಾತಿ ನಿಗದಿಪಡಿಸುವಾಗ ಆಯಾ ವರ್ಗಗಳ ಸದಸ್ಯರು ಹೆಚ್ಚು ಇರುವಲ್ಲಿಗೇ ಮೀಸಲು ನಿಗದಿಗೊಳಿಸಬೇಕು. ಇದು ಸಾಮಾನ್ಯ ವರ್ಗದ ಮೀಸಲಾತಿಗೂ ಅನ್ವಯ. ಇಷ್ಟಲ್ಲದೇ ಒಂದೇ ಪಂಚಾಯತ್‌ನಲ್ಲಿ ಅಧ್ಯಕ್ಷ ಅನುಸೂಚಿತ ಜಾತಿ, ಉಪಾಧ್ಯಕ್ಷ ಅನುಸೂಚಿತ ಪಂಗಡ ಅಥವಾ ಅದರ ವಿರುದ್ಧ, ಅನುಸೂಚಿತ ಜಾತಿ ಅಥವಾ ಪಂಗಡದ ಅಧ್ಯಕ್ಷ, ಉಪಾಧ್ಯಕ್ಷರು, ಹಿಂದುಳಿದ ವರ್ಗ “ಎ’, “ಬಿ’ಯ ಅಧ್ಯಕ್ಷ, ಉಪಾಧ್ಯಕ್ಷರು, ಮಹಿಳಾ ಅಧ್ಯಕ್ಷ, ಉಪಾಧ್ಯಕ್ಷರು ಅಂದರೆ ಒಂದೇ ವರ್ಗಕ್ಕೆ ಸೇರಿದವರು ಅಧ್ಯಕ್ಷ, ಉಪಾಧ್ಯಕ್ಷರಾಗುವಂತೆಯೂ ಇಲ್ಲ. ಈ ಹಿಂದೆ ಇದೇ ವರ್ಗದವರು ಅಧ್ಯಕ್ಷ, ಉಪಾಧ್ಯಕ್ಷರು ಆಗಿ ಈ ಬಾರಿ ಪುನರಾವರ್ತನೆ ಆಗುವಂತಿಲ್ಲ. ಈ ಎಲ್ಲ ನಿಯಮಗಳನ್ನು ನೋಡಿಕೊಂಡು ಜಿಲ್ಲಾಡಳಿತ ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲು ನಿಗದಿ ಮಾಡಬೇಕಿದೆ. ಇದು ಸವಾಲಿನ ಕೆಲಸವೂ ಹೌದು.

ಗೆದ್ದವರ ಸಮ್ಮುಖದಲ್ಲಿ  :

ಇಷ್ಟೆಲ್ಲ ಸಿದ್ಧತೆಗಳನ್ನು ಮಾಡಿಕೊಂಡ ಬಳಿಕ ಗೆದ್ದವರ ಸಮ್ಮುಖದಲ್ಲಿಯೇ ಮೀಸಲಾತಿಯ ಘೋಷಣೆ ಮಾಡಬೇಕು. ಇದರಲ್ಲೂ ಎರಡು ಆಯ್ಕೆಗಳಿವೆ. ಚೀಟಿ ಎತ್ತುವುದು ಹಾಗೂ ಎನ್‌ಐಸಿ ಸಿದ್ಧಪಡಿಸಿದ ಸಾಫ್ಟ್ ವೇರ್‌ ಅನ್ನು ಬಳಸುವುದು. ಯಾವುದನ್ನು ಆಯ್ಕೆ ಮಾಡುವುದು ಎಂದು ಜಿಲ್ಲಾಡಳಿತ ಇನ್ನೂ ನಿರ್ಧರಿಸಿಲ್ಲ. ಇವೆರಡರ ಪೈಕಿ ಯಾವುದಾದರೂ ಸದಸ್ಯರ ಉಪಸ್ಥಿತಿಯಲ್ಲಿಯೇ ನಡೆಯಲಿದೆ.

Advertisement

ಕುಂದಾಪುರ: ಮೀಸಲಾತಿ :

ಕುಂದಾಪುರ ತಾಲೂಕಿನಲ್ಲಿ 43 ಪಂಚಾಯತ್‌ಗಳಲ್ಲಿ  23 ಗ್ರಾ.ಪಂ.ಗಳಲ್ಲಿ  ಮಹಿಳಾ ಮೀಸಲು ಇರಬೇಕಿದೆ. ಅನುಸೂಚಿತ ಜಾತಿಯ ಮೂವರು ಅಭ್ಯರ್ಥಿಗಳು ಅದರಲ್ಲಿ ಇಬ್ಬರು ಮಹಿಳೆಯರು,  ಅನುಸೂಚಿತ ಪಂಗಡದ ಒಬ್ಬ ಮಹಿಳೆ, ಹಿಂದುಳಿದ ವರ್ಗ “ಎ’ ಗೆ ಒಟ್ಟು 12 ಸ್ಥಾನ ಮೀಸಲು ಅದರಲ್ಲಿ 6 ಮಹಿಳೆಯರಿಗೆ, ಹಿಂದುಳಿದ ವರ್ಗ ಬಿಗೆ 3 ಸ್ಥಾನ ಮೀಸಲು, ಅದರಲ್ಲಿ 2 ಮಹಿಳೆಯರಿಗೆ. ಸಾಮಾನ್ಯ ವರ್ಗಕ್ಕೆ 26 ಸ್ಥಾನ ಮೀಸಲು ಅದರಲ್ಲಿ 12 ಮಹಿಳೆಯರಿಗೆ ಮೀಸಲಾಗಿಡಲಾಗಿದೆ.

ಬೈಂದೂರು: ಮೀಸಲಾತಿ  :

ಬೈಂದೂರು ತಾಲೂಕಿನಲ್ಲಿ 15 ಪಂಚಾಯತ್‌ಗಳಲ್ಲಿ  8 ಗ್ರಾ.ಪಂ.ಗಳಲ್ಲಿ  ಮಹಿಳಾ ಮೀಸಲು ಇರಬೇಕಿದೆ. ಅನುಸೂಚಿತ ಜಾತಿಯ ಒಬ್ಬ ಮಹಿಳಾ ಅಭ್ಯರ್ಥಿ, ಅನುಸೂಚಿತ ಪಂಗಡದ ಒಬ್ಬ ಮಹಿಳೆ, ಹಿಂದುಳಿದ ವರ್ಗ ಎ ಗೆ ಒಟ್ಟು 4 ಸ್ಥಾನ ಮೀಸಲು ಅದರಲ್ಲಿ 2 ಮಹಿಳೆಯರಿಗೆ, ಹಿಂದುಳಿದ ವರ್ಗ ಬಿ ಒಬ್ಬ ಮಹಿಳೆಗೆ ಮೀಸಲು, ಸಾಮಾನ್ಯ ವರ್ಗಕ್ಕೆ 8 ಸ್ಥಾನ ಮೀಸಲು ಅದರಲ್ಲಿ 3 ಮಹಿಳೆಯರಿಗೆ ಮೀಸಲಾಗಿಡಲಾಗಿದೆ.

30 ತಿಂಗಳು ಅಧ್ಯಕ್ಷಾವಧಿ :

ಕಳೆದ ಬಾರಿ ಐದು ವರ್ಷಗಳ ಅಧ್ಯಕ್ಷಾವಧಿ ಇತ್ತು. ಇದು ಸಾಕಷ್ಟು ಅಸಮಾಧಾನಕ್ಕೂ ಕಾರಣವಾಗಿತ್ತು. ಕೆಲವೆಡೆ ಅಧ್ಯಕ್ಷರ ಮೇಲೆ ಒಲವು ಇಲ್ಲದೇ ಇದ್ದರೆ ಅವಿಶ್ವಾಸ ನಿರ್ಣಯವನ್ನೇ ಮಾಡಬೇಕಿತ್ತು. ಇದು ಸದಸ್ಯರೊಳಗೆ ಆಂತರಿಕ ಕಲಹಕ್ಕೂ ಕಾರಣವಾಗುತ್ತಿತ್ತು. ಆದರೆ ಈ ಬಾರಿ 1993ರ ಕರ್ನಾಟಕ ಪಂಚಾಯತ್‌ರಾಜ್‌ ಅಧಿನಿಯಮವು ಪ್ರಾರಂಭವಾದ ಅನಂತರ ನಡೆಸುವ ಪ್ರಥಮ ಚುನಾವಣೆಯಿಂದ ಅಧ್ಯಕ್ಷ, ಉಪಾಧ್ಯಕ್ಷ‌ ಹುದ್ದೆಯ ರೊಟೇಶನ್‌ ಪದ್ಧತಿ ಆರಂಭವಾಗಲಿದೆ. ಅದರಂತೆ ಮೀಸಲಾತಿ ಪುನರಾವರ್ತನೆಯಾಗುವುದಿಲ್ಲ.

ಅದೃಷ್ಟದಾಟ :

ಮೀಸಲಾತಿ ಪ್ರಕಾರ ಕೆಲವರಿಗೆ ಅಧ್ಯಕ್ಷತೆ ಒಲಿದು ಬರಲಿದೆ. ಪಕ್ಷಗಳ ಬೆಂಬಲಿಗರು ಏನೇ ಬಲಾಬಲ ಲೆಕ್ಕಾಚಾರ ಹಾಕಿದರೂ ಅದೃಷ್ಟ ಚೀಟಿ ಅಧ್ಯಕ್ಷತೆಯನ್ನು ಕೆಲವರ ಪಾಲಿಗೆ ತಂದುಕೊಡುವ ಸಾಧ್ಯತೆಯಿದೆ. ಆದರೆಈ ಹಿಂದಿನ ವರ್ಷಗಳಂತೆ ಇದ್ದ ಒಂದು ಮೀಸಲಿಗೇ ಅಧ್ಯಕ್ಷತೆ ಎನ್ನುವಆಯ್ಕೆ ದೊರೆಯುವುದು ಕಷ್ಟ. ಏಕೆಂದರೆ ಈ ಬಾರಿ ಆಯಾ ವರ್ಗದಸದಸ್ಯರು ಹೆಚ್ಚು ಇರುವಲ್ಲಿಗೇ ಮೀಸಲಾತಿ ನಿಗದಿಯಾಗಬೇಕು ಎಂದು ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಆದ್ದರಿಂದ ಅಧ್ಯಕ್ಷ ಉಪಾಧ್ಯಕ್ಷತೆಗೆ ಚುನಾವಣೆ ಅಥವಾ ಒಮ್ಮತದ ಅಭ್ಯರ್ಥಿಯ ಆಯ್ಕೆಯೇ ಅನಿವಾರ್ಯವಾಗಲಿದೆ.

ಈ ಹಿಂದೆ ಚೀಟಿಯಲ್ಲಿ ಮೀಸಲು ನಿಗದಿಯಾಗಿ ಆ ಪಂಚಾಯತ್‌ನಲ್ಲಿನಿಗದಿಯಾದ ಮೀಸಲಿನ ಒಬ್ಬರೇ ಅಭ್ಯರ್ಥಿಯಿದ್ದರೆ ಅವರಿಗೇ ಹುದ್ದೆ ದೊರೆಯುತ್ತಿತ್ತು. ಈ ಸಲ ಅದಕ್ಕೆ ಅವಕಾಶ ಇಲ್ಲ. ಅಷ್ಟಲ್ಲದೇ ಎರಡೂ ಹುದ್ದೆಒಂದೇ ಮೀಸಲಿಗೆ ಹೋಯಿತು ಎಂದು ಆಕ್ಷೇಪ ಎತ್ತುವಂತೆಯೂ ಇಲ್ಲ. ಅದಕ್ಕೆಲ್ಲ ಆಯೋಗ ಸ್ಪಷ್ಟ ನಿರ್ದೇಶ ನೀಡಿದೆ. ಮೀಸಲು ನಿಗದಿಯಾಗದೇಯಾವ ಅಭ್ಯರ್ಥಿ ಯಾವ ರಾಜಕಾರಣಿಯ ಮನೆಗೆ ಎಡತಾಕಿದರೂ ಪ್ರಯೋಜನ ಶೂನ್ಯವೇ. ಗೆದ್ದ ಅಭ್ಯರ್ಥಿಗಳ ಎದುರೇ ಪಾರದರ್ಶಕವಾಗಿ ಮೀಸಲು ಆಯ್ಕೆ ನಡೆಯುವ ಕಾರಣ ರಾಜಕಾರಣಿಗಳ ಪ್ರಭಾವ ಕಡಿಮೆ ಬಳಕೆಯಾಗಲಿದೆ. ಅಷ್ಟರಮಟ್ಟಿಗೆ ಆಯೋಗ ರಾಜಕಾರಣಿಗಳನ್ನು ದೂರ ಇಟ್ಟಿದೆ. ತಾ.ಪಂ., ಪುರಸಭೆ ಮೊದಲಾದ ಮೀಸಲುಗಳಲ್ಲ ರಾಜಕಾರಣಿಗಳ ಹಸ್ತಕ್ಷೇಪ ಹೆಚ್ಚಾಗಿ ನಡೆಯುತ್ತದೆ. ಪಂಚಾಯತ್‌ಗಳಲ್ಲಿ ಅದಕ್ಕೆ ಅವಕಾಶವನ್ನೇ ನೀಡಿಲ್ಲ

ಸಿದ್ಧತೆ ನಡೆಯುತ್ತಿದೆ : ಆಯ್ಕೆಯಾದವರ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬೇಕಿದೆ. ಅದರ ಅನಂತರವೇ ಮೀಸಲು ನಿಗದಿ ನಡೆಯಲಿದೆ.ಆಯೋಗ ತಿಳಿಸಿದ ಮಾರ್ಗಸೂಚಿಯನ್ವಯಪಾರದರ್ಶಕವಾಗಿ, ಗೆದ್ದ ಸದಸ್ಯರಸಮಕ್ಷಮದಲ್ಲಿಯೇ ಮೀಸಲು ನಿಗದಿನಡೆಯಲಿದೆ. ಯಾವ ಮಾದರಿಯಲ್ಲಿ ಆಯ್ಕೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಸದಾಶಿವ ಪ್ರಭು ಅಪರ ಜಿಲ್ಲಾಧಿಕಾರಿ, ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next