Advertisement

ಗಂಡು ಮಕ್ಕಳಿಗೂ ಇರಲಿ ನೈತಿಕ ಬೋಧನೆ

10:28 PM Sep 02, 2021 | Team Udayavani |

ಹೆಣ್ಣು ಜನ್ಮವೇ ಸಾಕು ಎನ ಕಂಡು ಮರೆಯಿರೋ ಎಂದು ಅಲವತ್ತುಕೊಂಡಳಂತೆ ರಾವಣನ ಕೆಟ್ಟ ದೃಷ್ಟಿಯಿಂದ ನಲುಗಿ ಹೋದ, ನಿಷ್ಠೆ ತಪ್ಪದ ಶ್ರೀರಾಮಚಂದ್ರನ ಮಡದಿಯಾದ ಸೀತಾ ಮಾತೆ. ಕುರುಡ ಧೃತರಾಷ್ಟ್ರನ ತುಂಬಿದ ರಾಜಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗಿ ಮಾನಭಂಗ ಕ್ಕೊಳಗಾದಾಗ ಗಣ್ಯಾತಿಗಣ್ಯರೆಲ್ಲರೂ ಕಣ್ಣಿದ್ದೂ ಕುರುಡಾದರು, ಬಾಯಿಯಿದ್ದೂ ಮೂಕರಾದರು. ಆಕೆಯನ್ನು ಕೃಷ್ಣ ರಕ್ಷಿಸಿದ. ಅಂದರೆ ಹೆಣ್ಣಿನ ಮೇಲೆ ಕೆಟ್ಟ ಗಂಡಿನ ದೌರ್ಜನ್ಯ ಹೊಸತಲ್ಲ. ಆದರೆ ಆ ಕಾಲದಲ್ಲಿ ರಕ್ಷಿಸಲು ಬಂದ ದೇವರುಗಳು ಈ ಕಾಲದಲ್ಲಿಲ್ಲ. ಈಗಲೂ ಅಷ್ಟೇ. ಹೆಣ್ಣು ಹೆತ್ತವರು, ಹೆಣ್ಣಾಗಿ ಹುಟ್ಟಿದವರು ತಮಗೆ ತಾವೇ ಶಪಿಸಿಕೊಳ್ಳುವ ಹಾಗಿದೆ ಇಂದಿನ ವಿದ್ಯಮಾನಗಳು.

Advertisement

ಪ್ರತೀ ದಿನ, ಪ್ರತೀ ಕ್ಷಣ ಅತ್ಯಾಚಾರದ ಘಟನೆ ಗಳು ವರದಿಯಾದಾಗಲೂ ರಾಜಕೀಯ ಕೆಸರೆರ ಚಾಟಗಳೇ ಮೊದಲು ನಡೆಯುತ್ತವೆ. ಅನಂತರ ಪೊಲೀಸ್‌ ಇಲಾಖೆಯ ಮೇಲೆ ಆರೋಪ. ವರ್ಗಾವಣೆಯ ಬ್ರಹ್ಮಾಸ್ತ್ರಗಳ ಬಳಕೆ. ಆದರೆ ಅತ್ಯಾಚಾರಿಗಳ ಸೆರೆ, ಶಿಕ್ಷೆ ಎಲ್ಲವೂ ನಿಧಾನ. ಇವೆಲ್ಲದರ ಜತೆಗೆ ಅವರ ರಕ್ಷಣೆಗೆ ನಿಂತಿರುವವರೂ ನಮ್ಮೊಳಗಿದ್ದಾರೆ. ಇದರಿಂದಾಗಿ ಅತ್ಯಾಚಾರಿಗಳು ಸಿಕ್ಕಿ ಹಾಕಿಕೊಳ್ಳದೆ ತಪ್ಪಿಸಿಕೊಂಡು ಮರೆಯಾಗು ತ್ತಾರೆ. ಯಾವುದೇ ಭಯವಿಲ್ಲದೆ ಮತ್ತೂಂದು ಅತ್ಯಾಚಾರದ ಘಟನೆ ಮಾಮೂಲಿಯಂತೆ ನಡೆಯುತ್ತದೆ. ಹೆಣ್ಣು ಹೊರಗಡೆ ಕಾಲಿಡುವುದೇ ತಪ್ಪು ಎಂದು ಆರೋಪಿಸಲಾಗುತ್ತದೆ. ಹೆಣ್ಣು ಮಕ್ಕಳು ತೊಡುವ ಉಡುಪುಗಳ ಕುರಿತು ಟೀಕಿಸ ಲಾಗುತ್ತದೆ. ಆಕೆಯ ನಡೆ-ನುಡಿಗಳನ್ನು ಸಂದೇಹಿಸುವುದು ಸಾಮಾನ್ಯವಾಗುತ್ತದೆ. ಹೆಣ್ಣು ಮಕ್ಕಳಿಗೆ ಅತಿಯಾದ ಶಿಸ್ತು, ಸಂಯಮ, ನೀತಿ ನಿಯಮಗಳನ್ನು ಕಲಿಸಲಾಗುತ್ತದೆ. ಕತ್ತಲಾಗುವ ಮೊದಲು ಮನೆ ಸೇರುವ ಪಾಠವನ್ನು ಅವಳಿಗೆ ಬೋಧಿಸಲಾಗುತ್ತದೆ.

ಅಂದರೆ ಗಾಂಧೀಜಿಯವರ ಸ್ವತಂತ್ರ ಭಾರತ ನಮಗಿನ್ನೂ ಲಭ್ಯವಾಗಿಲ್ಲ. ಅನ್ಯರ ಆಡಳಿತದಿಂದ ಮುಕ್ತರಾಗಿದ್ದೇವೆಯೇ ಹೊರತು ನಮ್ಮವರಿಂದಲೇ ಆಗುವ ದುಷ್ಕೃತ್ಯಗಳಿಂದ ಮುಕ್ತರಾಗಿಲ್ಲ. ರಾತ್ರಿ ವೇಳೆಯಲ್ಲಿ ಬಿಡೋಣ, ಹಾಡಹಗಲಲ್ಲೂ ಹೆಣ್ಣು ಮಕ್ಕಳಿಗೆ ಮುಕ್ತವಾಗಿ ತಿರುಗಾಡಲು ಭಯಪಡುವ ಪರಿಸ್ಥಿತಿ ಇದೆ. ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಶಕ್ತೀಕರಣದ ಯೋಜನೆಗಳೆಲ್ಲವೂ ಇಂಥ ಘಟನೆ ಗಳ ಮಧ್ಯೆ ನಾಚಿಕೊಳ್ಳುವಂತಾಗುತ್ತದೆ. ಹೆಣ್ಣು ಮಕ್ಕಳನ್ನು ತನ್ನ ತಾಯಿ, ಸಹೋದರಿಗೆ ಸಮಾನ ರೆಂದು ಕಾಣದ, ಅವರನ್ನು ಭೋಗದ ವಸ್ತು ಗಳನ್ನಾಗಿ ಮಾತ್ರ ಕಾಣುವ ಕಾಮದ ಕಣ್ಣುಗಳನ್ನು, ವಿಕೃತ ಮನಸ್ಸುಗಳನ್ನು, ಕಾಮತೃಷೆಯ ಅಸಹ್ಯ ದೇಹಗಳನ್ನು ತತ್‌ಕ್ಷಣ ಗಲ್ಲಿಗೇರಿಸುವುದೊಂದೇ ಪರಿಹಾರ. ಆದರೆ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದ್ಯಾವುದೂ ಆಗುತ್ತಿಲ್ಲ. ಹೆಣ್ಣು ಕಾಮ ಪಿಪಾಸುಗಳಿಗೆ ಬಲಿಯಾಗಿ ಸಮಾಜದೆದುರು ಅಪರಾಧಿಯಾಗುತ್ತಾಳೆ. ಮಾನಸಿಕವಾಗಿ ಜರ್ಝ ರಿತಳಾಗುತ್ತಾಳೆ. ಸಾಮಾಜಿಕವಾಗಿ ಶಿಕ್ಷೆ ಅನು ಭವಿಸುತ್ತಾಳೆ. ಆದರೆ ಅತ್ಯಾಚಾರಿಗಳು ಸೆರೆಯಾ ಗದೆ ತಪ್ಪಿಸಿಕೊಳ್ಳುತ್ತಾರೆ. ಸೆರೆಯಾದರೂ ಜೈಲಿ ನೊಳಗೆ ಕೆಲವು ಕಾಲ ರಕ್ಷಣೆ ಸಿಗುತ್ತದೆ. ಒಂದಷ್ಟು ಕಾಲಗಳ ಜೈಲುವಾಸ ಅನುಭವಿಸಿ, ಸಾಕ್ಷಿ ಸಿಗದಿದ್ದರೆ ಅಥವಾ ಅವುಗಳೆಲ್ಲವೂ ನಾಶವಾದ ಮೇಲೆ ಆತ ಮತ್ತೆ ಸಮಾಜದೊಳಗೆ ಒಂದಾಗಿ ಬಿಡುತ್ತಾನೆ.

ಅವೆಷ್ಟು ಪ್ರತಿಭಟನೆಗಳು ನಡೆದರೂ ಅತ್ಯಾ ಚಾರದ ವರದಿಗಳು ಹೆಚ್ಚುತ್ತಿವೆಯೇ ಹೊರತು ನಿಂತಿಲ್ಲ. ನಮ್ಮ ಕಾನೂನು ವ್ಯವಸ್ಥೆ, ರಾಜಕೀಯ ಹಿತಾಸಕ್ತಿಗಳು, ಅಧಿಕಾರದ ದುರುಪಯೋಗಗಳು ಬದಲಾವಣೆಯಾಗದೆ ಇಂಥ ಘಟನೆಗಳು ನಿಲ್ಲದು. ಇದರೊಂದಿಗೆ ಸಾಮಾಜಿಕ ಬದಲಾವಣೆ ಅತ್ಯಂತ ಅಗತ್ಯವಾದ ವಿಚಾರವಾಗಿದೆ. ಏಕೆಂದರೆ ಅನೇಕ ಸಲ ಅತ್ಯಾಚಾರಗಳು ಸಂಬಂಧಿಗಳಿಂದ, ಗೆಳೆಯರಿಂದ, ಪರಿಚಿತರಿಂದಲೂ ನಡೆಯುತ್ತವೆ. ಮಕ್ಕಳ ಮೇಲೆ, ಅಪ್ರಾಪ್ತರ ಮೇಲೆ ನಡೆಯುವ ಎಷ್ಟೋ ಲೈಂಗಿಕ ದೌರ್ಜನ್ಯಗಳು ವರದಿಯಾಗದೆ ಉಳಿಯುತ್ತವೆ ಅಥವಾ ತಡವಾಗಿ ವರದಿ ಯಾಗುತ್ತವೆ. ಇಲ್ಲಿ ಹೆಣ್ಣು ಮಕ್ಕಳು ಹೊರಗಡೆ ಸುತ್ತಾಡಲು ಹೋಗದಿದ್ದಾಗಲೂ ಆಕೆಯ ಅಸಹಾಯಕ ಪರಿಸ್ಥಿತಿಯಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಯಾರಿಗೂ ಶಿಕ್ಷೆಯಾಗುವುದಿಲ್ಲ. ಹೆಣ್ಣು ಮಕ್ಕಳೇ ಬಲಿಪಶುಗಳಾಗಿ ಜೀವನ ಪರ್ಯಂತ ಮಾನಸಿಕವಾಗಿ ತೊಳಲಾಡುವ ಸ್ಥಿತಿ ಎದುರಾಗುತ್ತದೆ.

ಹೆಣ್ಣು ಮಕ್ಕಳಿಗೆ ಕೊಟ್ಟ ಸ್ವಾತಂತ್ರ್ಯ ಅತಿ ಯಾಯಿತೆಂದು ಹೇಳುವವರು ಇದೇ ಮಾತನ್ನು ಗಂಡು ಮಕ್ಕಳಿಗೆ ಯಾಕೆ ಹೇಳುವುದಿಲ್ಲ? ಕೆಟ್ಟ ಚಟಗಳಿಗೆ ದಾಸರಾಗದಂತೆ ಅವರಿಗೇಕೆ ತಿಳಿ ಹೇಳುವುದಿಲ್ಲ? ಗಂಡು ಮಕ್ಕಳ ಕುರಿತು ಅದೇಕೆ ಅಷ್ಟು ರಿಯಾಯಿತಿ? ಕುಡಿತ, ಮಾದಕ ವ್ಯಸನ, ಜೂಜುಗಳಲ್ಲಿ ತೊಡಗಿರುವ ಗಂಡು ಮಕ್ಕಳು ಮನೆಗೆ ತಡವಾಗಿ ಬಂದರೂ ಅವರಿಗೆ ರಿಯಾಯಿತಿ ನೀಡುವ ಹೆತ್ತವರು ಇವರನ್ನೇಕೆ ತಿದ್ದಬಾರದು? ಗಂಡು ಮಕ್ಕಳು ಎಷ್ಟು ಹೊತ್ತಿಗಾದರೂ ಮನೆ ಸೇರಬಹುದೆಂಬ ಅಲಿಖೀತ ನಿಯಮಕ್ಕೆ ಸಮಾಜ ಅಂಟಿಕೊಂಡಿದೆ. ಹೊತ್ತು ಮುಳುಗುವ ಮೊದಲು ಮನೆ ಸೇರುವುದಕ್ಕೆ ಗಂಡು ಮಕ್ಕಳಿಗೂ ತಿಳಿ ಹೇಳಬೇಕು. ಬಾಲ್ಯದಿಂದಲೇ ಅವರಿಗೆ ಹೆಣ್ಣು ಮಕ್ಕಳನ್ನು ಗೌರವಿಸಲು ಕಲಿಸಬೇಕು.

Advertisement

ಸಮಾಜದ ದೃಷ್ಟಿಕೋನವೂ ಬದಲಾಗಬೇಕಿದೆ. ತಮ್ಮ ಮಕ್ಕಳಿಗೆ ನೀಡಿದ ಅತಿಯಾದ ಸ್ವಾತಂತ್ರ್ಯವೂ ಇಂತಹ ಹೇಯ ಕೃತ್ಯಗಳಿಗೆ ಕಾರಣ. ಕುಡಿತ, ಮೋಜು-ಮಸ್ತಿಗಳಲ್ಲಿ ಕಳೆಯುವ ನಮ್ಮ ಯುವ ಪೀಳಿಗೆ ಬದಲಾಗಬೇಕಿದೆ. ಜವಾಬ್ದಾರಿಯುತ ಜೀವನ ನಡೆಸುವ ರೀತಿ ನೀತಿಗಳನ್ನು ಕಲಿಯ ಬೇಕಿದೆ. ಗಂಡು ಮಕ್ಕಳು ಮಾಡುವ ತಪ್ಪನ್ನೂ ಸಮಾಜ ಸಮರ್ಥಿಸದೇ ಪ್ರಬಲವಾಗಿ ಖಂಡಿಸ ಬೇಕು. ಹುಡುಗಿಯರೇಕೆ ಆ ಹೊತ್ತಿನಲ್ಲಿ ಹೊರ ಹೋಗಬೇಕು? ಎಂದು ಲಕ್ಷ್ಮಣರೇಖೆ ಎಳೆಯು ವವರು ಹುಡುಗರ ಬೇಕಾಬಿಟ್ಟಿ ತಿರುಗಾಟಕ್ಕೂ ಕಡಿವಾಣ ಹಾಕುವ ಪ್ರಯತ್ನ ಮಾಡಬೇಕಿದೆ. ಮದ್ಯಪಾನ, ಮಜಾ ಮಾಡುವುದು, ಕಣ್ಣೆದುರು ಬಂದ ಹುಡುಗಿಯರನ್ನು ಚುಡಾಯಿಸುವವರಿಗೆ ಕಠಿನ ಕಾನೂನುಗಳ ಮೂಲಕ ಶಿಕ್ಷೆ ಜಾರಿಗೊಳಿಸ ಬೇಕು. ಶಾಲಾಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಮಹಿಳಾ ವೇದಿಕೆ ಇರುವ ಹಾಗೆಯೇ ಯಾಕೆ ಗಂಡು ಮಕ್ಕಳಿಗೊಂದು ನೈತಿಕ ಬೋಧನೆಯ ವೇದಿಕೆಯಿಲ್ಲ? ಬಾಲ್ಯದಿಂದಲೇ ಇದೊಂದು ನೀತಿ ಪಾಠದ ಅಗತ್ಯವಿದೆ.

ಹಾಗೆಂದು ಹೆಣ್ಣು ಮಕ್ಕಳು ತಮ್ಮ ಸ್ವಾತಂತ್ರ್ಯವನ್ನು ಬಳಸಿ ಸ್ವೇಚ್ಛಾಚಾರಿಗಳಾಗಲೂ ಬಾರದು. ಹೊರ ಗಿನ ಕ್ರೂರ ಪ್ರಪಂಚದ ಕುರಿತು ಜಾಗೃತರಾಗಿರ ಬೇಕಿರುವುದು ಅವಶ್ಯವಾಗಿದೆ. ನಮ್ಮ ಚಲನವಲನ ಗಳನ್ನು ಗಮನಿಸುತ್ತಿರುವ, ಹೊಂಚು ಹಾಕುತ್ತಿರುವ ಕಿರಾತಕರು ನಮ್ಮ ಸುತ್ತಲೂ ಇದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಡೆದಾಡಬೇಕು. ಸ್ವೇಚ್ಛಾ ಚಾರದಿಂದಾಗಿ ಯಾರ ಬದುಕೂ ಬಲಿಯಾಗ ಕೂಡದು. ಯಾರದೋ ಪೈಶಾಚಿಕ ಕೃತ್ಯಕ್ಕೆ ಜೀವ ನಲುಗಿ ಹೋಗಬಾರದು. ಇಂತಹ ಕಿರಾತಕರಿಂದ ತತ್‌ಕ್ಷಣ ಯಾರು ಯಾರನ್ನೂ ರಕ್ಷಿಸಲಾರರೆಂಬುದು ಅನೇಕ ಸಲ ರುಜುವಾತಾಗಿದೆ. ಅದಕ್ಕೆ ಯಾರಾ ದರೂ ಸರಿ, ಹೆಣ್ಣಾದರೂ ಗಂಡಾದರೂ ಹೊತ್ತು ಮುಳುಗುವ ಮುನ್ನ ಮನೆಗೆ ಬಂದುಬಿಡಿ. ಪಾನಮತ್ತರಾಗಿ ಮೈ ಮರೆತು ಮೃಗವಾಗುವ ಬದಲು ಮನುಷ್ಯರಾಗಿ ಬದುಕಿ. ಇತರರಿಗೂ ಬದುಕಲು ಬಿಡಿ. ನೆಮ್ಮದಿಯಿಂದ ಬದುಕುವ ಹಕ್ಕು ಎಲ್ಲರಿಗೂ ಇದೆ. ಹೆಣ್ಣು ಮಕ್ಕಳೂ ಧೈರ್ಯ ದಿಂದ ಈ ನೆಲದಲ್ಲಿ ಬದುಕಬೇಕು, ನಡೆದಾಡ ಬೇಕು. ಅವಳನ್ನು ಅವಳ ಪಾಡಿಗೆ ನಡೆಯಲು ಬಿಡಿ. ಈ ನೆಲದಲ್ಲಿ ಹೆಣ್ಣಾಗಿ ಹುಟ್ಟಿರುವುದಕ್ಕೆ ಆಕೆ ಹತಾಶಳಾಗದೆ ಸಂಭ್ರಮಿಸಲಿ. ಹೆಣ್ಣು ಹೆತ್ತವರು ನೆಮ್ಮದಿಯ ಉಸಿರಾಡಲಿ.

 

-ವಿದ್ಯಾ ಅಮ್ಮಣ್ಣಾಯ, ಕಾಪು

Advertisement

Udayavani is now on Telegram. Click here to join our channel and stay updated with the latest news.

Next