Advertisement

ಸಹಕಾರ ಚಳವಳಿಯ ಹರಿಕಾರ ಮೊಳಹಳ್ಳಿ ಶಿವರಾವ್‌

11:33 PM Aug 03, 2021 | Team Udayavani |

ಸಹಕಾರ ಚಳವಳಿಯ ಹರಿಕಾರರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ರಂಗದ ಬೆಳವಣಿಗೆಗೆ ಅಹರ್ನಿಶಿ ದುಡಿದ ಮೊಳಹಳ್ಳಿ ಶಿವರಾಯರು ಸಹಕಾರಿ ರಂಗದಲ್ಲಿ ಮರೆಯಲಾಗದ ವ್ಯಕ್ತಿ. ತನ್ನ ಸರ್ವಸ್ವವನ್ನು ಸಹಕಾರ ರಂಗಕ್ಕೆ ಅರ್ಪಿಸಿದ ಇವರು ಸಮಾಜಸೇವೆಯನ್ನೇ ತಮ್ಮ ಪರಮ ಗುರಿ ಯನ್ನಾಗಿಸಿಕೊಂಡವರು. ಜನಸೇವೆಗಾಗಿ ದುಡಿದು ಕಾರ್ಯಸಂಪನ್ನರಾಗಿದ್ದ ಇವರ ಪವಾಡಸದೃಶ ಕಾರ್ಯ ವೈಖರಿಯಿಂದ ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ಬಲವಾಗಿ ಬೇರೂರಿದೆ. ಕಠಿನ ದುಡಿಮೆಯನ್ನೇ ಜೀವನದ ಮೂಲ ಮಂತ್ರವನ್ನಾಗಿಸಿಕೊಂಡ ಶಿವರಾಯರು ಜಿಲ್ಲೆಯ ಸಹಕಾರ ಆಂದೋಲನದ ಮೂಲ ಪುರುಷರು. ಆಗಸ್ಟ್‌ – 4 ಮೊಳಹಳ್ಳಿ ಶಿವರಾಯರ ಜನ್ಮದಿನ.

Advertisement

ಆದರ್ಶನೀಯ ವ್ಯಕ್ತಿತ್ವದ ಮೊಳಹಳ್ಳಿ ಶಿವರಾಯರು ರಂಗಪ್ಪಯ್ಯ ಹಾಗೂ ಮೂಕಾಂಬಿಕಾ ದಂಪತಿಯ ಸುಪುತ್ರ. 1880ರ ಆಗಸ್ಟ್‌ 4ರಂದು ಪುತ್ತೂರಿನಲ್ಲಿ ಜನಿಸಿದ ಇವರು ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮುಂದೆ ಸಹಕಾರ ಕ್ಷೇತ್ರದ ಜತೆಗೆ ಅನೇಕ ವಿದ್ಯಾ ಸಂಸ್ಥೆಗಳ ಸ್ಥಾಪನೆಗೆ ಕಾರಣಕರ್ತರಾದ ಇವರು ಸಾರ್ವಜನಿಕ ಕ್ಷೇತ್ರಗಳಲ್ಲಿ ಕೂಡ ಪ್ರಾಮಾಣಿಕ, ದಕ್ಷ ಸೇವೆಯನ್ನು ಸಲ್ಲಿಸಿ ಸಾಮಾಜಿಕ ಪರಿವರ್ತನೆಯ “ಹರಿಕಾರ’ರೆನಿಸಿಕೊಂಡರು. ಶಿವರಾಯರು ಕೇವಲ ವ್ಯಕ್ತಿಯಾಗಿರದೆ ಒಂದು “ಮಹಾನ್‌ ಚೇತನ’ವಾಗಿ ಇಂದು ಕೂಡ ಸಹಕಾರಿಗಳೆಲ್ಲರೂ ಸ್ಮರಿಸುವ ಅಪೂರ್ವ ವ್ಯಕ್ತಿ ಹಾಗೂ ಶಕ್ತಿ.

ಸಹಕಾರ ಸಂಸ್ಥಾಪಕ:

ಶಿವರಾಯರು ಗಣ್ಯ ವಕೀಲರಾಗಿದ್ದರೂ ಅವರನ್ನು ಆಕರ್ಷಿಸಿದ್ದು ಸಹಕಾರಿ ಕ್ಷೇತ್ರ. ಅವರು ಬಯಸಿದ್ದು ಬಡರೈತರ ಕ್ಷೇಮಾಭಿವೃದ್ಧಿ. ಭಾರತದಲ್ಲಿ ಸಹಕಾರ ಆಂದೋಲನವು 1904ರ ಮಾರ್ಚ್‌-23ರಂದು ಕಾಯಿದೆ ರೂಪದಲ್ಲಿ ಜಾರಿಗೆ ಬಂದಾಗ ಇದರ ಪ್ರಭಾವವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಸರಿಸಿತು. ಸಹಕಾರಿ ಕಾಯಿದೆಯ ಮಹತ್ವವನ್ನು ಮನಗಂಡ ಶಿವರಾಯರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಕಾಯಿದೆ ಸಹಕಾರಿಯಾಗುವುದೆಂದು ತಿಳಿದುಕೊಂಡರು. “ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ’ ಎಂಬ ತಾತ್ವಿಕ ನೆಲೆಯಲ್ಲಿ ಸಹಕಾರ ಸಂಘಗಳ ಸಂಘಟನೆ ಮಾಡಿದರು.

ಶಿವರಾಯರು ಮೊದಲಿಗೆ ಹುಟ್ಟೂರಾದ ಪುತ್ತೂರಿನಲ್ಲಿ ಸಹಕಾರಿ ಕ್ರೆಡಿಟ್‌ ಸೊಸೈಟಿಯನ್ನು 1909ರಲ್ಲಿ ಸ್ಥಾಪಿಸಿದರು. ಸಹಕಾರ ಚಳವಳಿಯನ್ನು ಇನ್ನಷ್ಟು ಫ‌ಲಪ್ರದವನ್ನಾಗಿಸುವ ಇರಾದೆಯಿಂದ ಹಳ್ಳಿ ಹಳ್ಳಿಗಳಿಗೂ ಸಂಚರಿಸಿದ ಇವರು “ಸಹಕಾರ ತಣ್ತೀ’ದ ಮಹತ್ವವನ್ನು ವಿವರಿಸಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದರು. “ಸಹಕಾರ’ ಶಿವರಾಯರ ಅಂತರಂಗದಲ್ಲಿ ಕುದಿಯುತ್ತಿದ್ದ ಸಾರ್ವಜನಿಕ ಸೇವಾಕಾಂಕ್ಷೆಯಾದ ಕಾರಣ ಅವರು ವಕೀಲ ವೃತ್ತಿಗೆ ತಿಲಾಂಜಲಿಯನ್ನು ನೀಡಬೇಕಾಯಿತು. “ಸಹಕಾರ’ ಅವರ ಬಾಳಿನ ಉಸಿರಾಯಿತು.

Advertisement

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸ್ಥಾಪನೆ:

ಸ್ಥಾಪನೆಗೊಂಡ ಸಹಕಾರ ಸಂಘಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಒಂದು ಮಾತೃಸಂಸ್ಥೆಯ ಆವಶ್ಯಕತೆ ಇರುವುದನ್ನು ಮನಗಂಡ ಶಿವರಾಯರು 1914ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌)ನ್ನು ಸ್ಥಾಪಿಸಿದರು. ಮುಂದೆ ಜನತೆಯ ಅನುಕೂಲತೆಗೋಸ್ಕರ ಈ ಬ್ಯಾಂಕ್‌ನ್ನು ಜಿಲ್ಲಾ ಕೇಂದ್ರವಾದ ಮಂಗಳೂರಿಗೆ 1925ರಲ್ಲಿ ವರ್ಗಾಯಿಸಲಾಯಿತು. ಶಿವರಾಯರಿಂದ ಸ್ಥಾಪನೆಗೊಂಡ ಈ ಬ್ಯಾಂಕ್‌ ಇಂದು 107 ವರ್ಷಗಳನ್ನು ಆದರ್ಶಯುತವಾಗಿ ಪೂರೈಸಿ ಸಹಕಾರ ಕ್ಷೇತ್ರದಲ್ಲಿ ನೂತನ ಮೈಲುಗಲ್ಲನ್ನು ಸ್ಥಾಪಿಸಿದೆ. ಶಿವರಾಯರ ಆಶಯವನ್ನು ಜೀವಂತವಾಗಿರಿಸಿಕೊಂಡ ಈ ಬ್ಯಾಂಕ್‌ ಇಂದು ವಾಣಿಜ್ಯ ಬ್ಯಾಂಕ್‌ಗಳಿಗೆ ಸರಿಸಮಾನವಾಗಿ ಪೈಪೋಟಿ ನಡೆಸಿ, ರಾಜ್ಯದ ಸಹಕಾರಿ ಬ್ಯಾಂಕ್‌ಗಳಿಗೆ ಮಾದರಿಯಾಗಿ ಅಗ್ರಸ್ಥಾನದಲ್ಲಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಶಿವರಾಯರ ಮಹತ್ವಾಕಾಂಕ್ಷೆಯ ಸಹಕಾರ ಕ್ಷೇತ್ರವನ್ನು ಈ ಬ್ಯಾಂಕ್‌ ಪ್ರಜ್ವಲಿಸುವಂತೆ ಮಾಡಿದೆ. ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ನೇತೃತ್ವದಲ್ಲಿ ಬ್ಯಾಂಕ್‌ ಇಂದಿಗೂ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.

ಸಹಕಾರಿ ರಂಗದ ಅಗ್ರಜ:

ಸಹಕಾರ ಕ್ಷೇತ್ರದ ರಚನಾತ್ಮಕ ಕಾರ್ಯಗಳ ಮೂಲಕ ಶೋಷಣೆ ರಹಿತ ಸಮಾಜ ನಿರ್ಮಾಣ ಶಿವರಾಯರ ಕನಸಾಗಿತ್ತು. ಅವರ ಎಲ್ಲ ಚಟುವಟಿಕೆಗಳ ಕೇಂದ್ರಬಿಂದು ಕೃಷಿಕರಾಗಿದ್ದರು. ರೈತಾಪಿ ವರ್ಗವನ್ನು ಶೋಷಣೆಯಿಂದ ಮುಕ್ತಗೊಳಿಸುವುದು ಅವರ ಉದ್ದೇಶವಾಗಿತ್ತು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಕರ ಶ್ರೇಯೋಭಿವೃದ್ಧಿಯನ್ನೇ ಸಹಕಾರ ಸಂಘದ ಮುಖ್ಯ ಧ್ಯೇಯವನ್ನಾಗಿಸಿ ಶಿವರಾಯರು ಶ್ರಮಿಸಿದರು.

1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್‌ನ ಸ್ಥಾಪನೆ, ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್‌ ಸಂಘ, ಸಹಕಾರಿ ಸ್ಟೋರ್, ಧಾನ್ಯದ ಬ್ಯಾಂಕ್‌, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂಗ್‌ ಸೊಸೈಟಿ ಸಹಿತ ಹಲವು ಸಹಕಾರಿ ಸಂಘಗಳನ್ನು ಅವರು ಪುತ್ತೂರಿನಲ್ಲಿ ಸ್ಥಾಪಿಸಿದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಜಿಲ್ಲಾದ್ಯಂತ ತಲೆದೋರಿದ ಆಹಾರ ಧಾನ್ಯದ ಕೊರತೆಯಿಂದ ಜನ ಕಂಗಾಲಾಗಿದ್ದ ಸಂದರ್ಭದಲ್ಲಿ ಶಿವರಾಯರು “ದ.ಕ. ಜಿಲ್ಲಾ ಸೆಂಟ್ರಲ್‌ ಕೋ-ಅಪರೇಟಿವ್‌ ಹೋಲ್‌ಸೇಲ್‌ ಸ್ಟೋರ್’ ಸಂಘವನ್ನು ಸ್ಥಾಪಿಸಿದರು. ಆಹಾರ, ಧಾನ್ಯಗಳನ್ನು ಸಂಗ್ರಹಿಸಿ ಅದರ ಕ್ರಮಬದ್ಧ ವಿತರಣೆಗೆ ಆಹೋರಾತ್ರಿ ಶ್ರಮಿಸಿ ಮನಗೆದ್ದರು. ನಿಸ್ವಾರ್ಥ ಸೇವೆಯ ಮೂಲಕ ನಾಡಿಗೆ ಬಂದ ಭೀಕರ ಪರಿಸ್ಥಿತಿಯನ್ನು ಶಿವರಾಯರು ನಿಭಾಯಿಸಿ ಆಗಿನ ಮದ್ರಾಸ್‌ ರಾಜ್ಯ ಸರಕಾರದಿಂದ ಪ್ರಶಸ್ತಿ, ಪುರಸ್ಕಾರಗಳಿಂದ ಸಮ್ಮಾ¾ನಿಸಲ್ಪಟ್ಟರು.

ಭಾರತದ ಪ್ರಧಾನ ಮಂತ್ರಿಯಾಗಿದ್ದ ದಿ| ಜವಾಹರ ಲಾಲ್‌ ನೆಹರೂ ಅವರು ಒಂದು ಹಳ್ಳಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ, ಒಂದು ಪಂಚಾಯತ್‌ ಬಹಳ ಅಗತ್ಯವೆಂದು 1949ರಲ್ಲಿ ಅಭಿಪ್ರಾಯ ಪಟ್ಟಿದ್ದರು. ಆದರೆ ಶಿವರಾಯರು ಇದಕ್ಕಿಂತ ಸುಮಾರು 35 ವರ್ಷಗಳ ಮೊದಲೇ ಇದನ್ನು ಕಾರ್ಯರೂಪಕ್ಕೆ ತಂದಿರುವುದು ಇಲ್ಲಿ ಉಲ್ಲೇಖನೀಯ. ಸಹಕಾರಿ ರಂಗವನ್ನು ಶಕ್ತಿಪೂರ್ಣ, ಪ್ರಭಾವಶಾಲಿಯನ್ನಾಗಿ ರೂಪಿಸಿದ ಮೊಳಹಳ್ಳಿ ಶಿವರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಆಂದೋಲನದಲ್ಲಿ ಮಾಡಿದ ಸೇವೆ ಶ್ಲಾಘನೀಯ ಹಾಗೂ ಅಪ್ರತಿಮವಾದುದು. ಸಹಕಾರ ಆಂದೋಲನದ ಪೀಳಿಗೆಯೊಂದಕ್ಕೆ ಉಸಿರನ್ನು ತುಂಬಿ ಜೀವನವಿಡೀ “ಸಹಕಾರ’ ಮಂತ್ರವನ್ನು ಜಪಿಸಿದ ಶಿವರಾಯರು 1967ರ ಜುಲೈ 4ರಂದು ಕೀರ್ತಿಶೇಷರಾದರು. ಶಿವರಾಯರು ತಮ್ಮ 87 ವರ್ಷಗಳ ಜೀವಿತ ಅವಧಿಯಲ್ಲಿ 58 ವರ್ಷಗಳ ಕಾಲವನ್ನು “ಸಹಕಾರ ರಂಗ’ಕ್ಕೆ ಮೀಸಲಿರಿಸಿದರು. ಅಮರ ಚೇತನವಾಗಿ ಸಹಕಾರಿ ರಂಗವನ್ನು ಪ್ರಜ್ವಲಿಸಿದ ಮೊಳಹಳ್ಳಿ ಶಿವರಾಯರಿಗೆ ಸಹಕಾರಿಗಳೆಲ್ಲರೂ ಅವರ 141ನೇ ಹುಟ್ಟುಹಬ್ಬದ ಸ್ಮರಣೆಯ ಜತೆಗೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತಿದ್ದಾರೆ.

 

ಎಸ್‌. ಜಗದೀಶ್ಚಂದ್ರ ಅಂಚನ್‌, ಸೂಟರ್‌ಪೇಟೆ

Advertisement

Udayavani is now on Telegram. Click here to join our channel and stay updated with the latest news.

Next