Advertisement

ಮೂಡುಬಿದಿರೆ: ವಿಶ್ವ ಜಾಂಬೂರಿಯಲ್ಲಿ “ನೈರ್ಮಲ್ಯ’ವೇ ಪ್ರಧಾನ!

01:16 PM Dec 27, 2022 | Team Udayavani |

ಮೂಡುಬಿದಿರೆ: ವಿಶ್ವ ಜಾಂಬೂರಿಯ ಕಳೆದ ಆರು ದಿನಗಳಲ್ಲಿಯೂ ಪ್ರತಿನಿತ್ಯ ಲಕ್ಷಗಟ್ಟಲೆ ಜನ ಸೇರಿದ್ದರೂ ಆಳ್ವಾಸ್‌ ಕ್ಯಾಂಪಸ್‌ನ 150 ಎಕ್ರೆ ಪ್ರದೇಶವೂ ಸ್ವಚ್ಛ ಸುಂದರವಾಗಿ ಗಮನ ಸೆಳೆದಿದೆ.

Advertisement

ವಿಶ್ವ ಜಾಂಬೂರಿಯ ಯಶಸ್ಸಿನಲ್ಲಿ ನೈರ್ಮಲ್ಯ, ಸ್ವಚ್ಛತೆಗೆ ನೀಡಲಾದ ಆದ್ಯತೆ ಬಹುಮುಖ್ಯ. ಡಾ| ಎಂ. ಮೋಹನ ಆಳ್ವ ಅವರ ನಿರ್ದೇಶ ನದಂತೆ, ಆಳ್ವಾಸ್‌ ಶಿಕ್ಷಣ ಸಂಸ್ಥೆಯ ತಂಡ ಸ್ಫೂರ್ತಿಯಿಂದ ಸ್ವಚ್ಛತೆಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಪೂರಕವಾಗಿ, ಡಾ| ಕುರಿಯನ್‌  ನೇತೃತ್ವದಲ್ಲಿ 300 ಜನರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಸ್ಥಿರ ನೈರ್ಮಲ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾಥಮಿಕ ಹಂತದಲ್ಲೇ ಹಸಿ, ಒಣ ಹಾಗೂ ಅಪಾಯಕಾರಿ ಕಸ ಎಂಬುದಾಗಿ ವಿಂಗಡಿಸಲು ವ್ಯವಸ್ಥೆ ಮಾಡಲಾಗಿದೆ. 120 ಕಸ ವಿಂಗಡಣೆ ಮಾಡುವವರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂದಂದಿನ ಹಸಿ ಕಸವನ್ನು ಅಂದೇ ಕೃಷಿ ಸಿರಿಯ ಪಕ್ಕದಲ್ಲೇ ಗುಂಡಿ ಗಳಲ್ಲಿ ಹಾಕಿ ಗೊಬ್ಬರ ಮಾಡಲಾಗುತ್ತದೆ. ಪುನಃ ಬಳಕೆ ಮಾಡಬಹುದಾದ ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಉಳಿದವುಗಳನ್ನು ಮಿಜಾರು ಡಂಪಿಂಗ್‌ ಯಾರ್ಡ್‌ ಮೂಲಕ ವಿಲೇ ಮಾಡಲಾಗುತ್ತದೆ.

ಪ್ರತಿದಿನ ಮುಂಜಾನೆ 2.30ರ ವೇಳೆಗೆ ಸಂಪೂರ್ಣ ಆವರಣ ಸ್ವಚ್ಛಗೊಳಿಸಲಾಗುತ್ತದೆ. ಖಾಸಗಿ ವ್ಯಾಪಾರಿಗಳನ್ನು ಹೊರತುಪಡಿಸಿ ಪ್ಲಾಸ್ಟಿಕ್‌, ಪೇಪರ್‌ ಲೋಟಗಳ ಬಳಕೆಯನ್ನು ಕೈಬಿಡಲಾಗಿತ್ತು.

ಪ್ರತಿದಿನ 80 ಟ್ಯಾಂಕರ್‌ ನೀರು ಲಕ್ಷಗಟ್ಟಲೆ ಜನರು ಭಾಗವಹಿಸಿದ ಕಾರ್ಯ ಕ್ರಮದಲ್ಲಿ ನೀರು ಸರಬರಾಜು ವ್ಯವಸ್ಥೆಯೇ ದೊಡ್ಡ ಸವಾಲು. ಕುಡಿಯುವ ನೀರಿನ ವ್ಯವಸ್ಥೆ, ಶೌಚ, ಸ್ನಾನ ಮೊದಲಾದ ವ್ಯವಸ್ಥೆಗಳಿಗಾಗಿ ತಲಾ 14000 ಲೀಟರ್‌ ಸಾಮರ್ಥ್ಯದ 12 ಟ್ಯಾಂಕರ್‌ಗಳ ಮೂಲಕ ದಿನವೊಂದಕ್ಕೆ 70ರಿಂದ 80 ಟ್ಯಾಂಕರ್‌ ನೀರು ಬಳಕೆಯಾಗಿದೆ.

Advertisement

ತಂಡವಾಗಿ ಕಾರ್ಯನಿರ್ವಹಣೆ ಶಿಬಿರಾರ್ಥಿಗಳು ಹಾಗೂ ಅತಿಥಿಗಳು ತಂಗಿದ್ದ ವಸತಿ ಕೇಂದ್ರಗಳಲ್ಲಿ ಸ್ವಚ್ಛತೆಯ ಕಾರ್ಯಕ್ಕಾಗಿ 10 ತಂಡಗಳನ್ನು ಮಾಡಲಾಗಿದೆ. ಓರ್ವ ಮೇಲ್ವಿಚಾರಕ, ಇಬ್ಬರು ಸ್ವಯಂಸೇವಕರು, ಜತೆಗೆ 10ರಿಂದ 12 ಮಂದಿ ಕೆಲಸಗಾರರು ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜತಗೆ 120 ಕಸ ವಿಂಗಡಿಸುವವರಿದ್ದಾರೆ. ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಸ್ವತ್ಛತೆ, ನೈರ್ಮಲ್ಯವನ್ನು ಕಾಯ್ದುಕೊಳ್ಳಲಾಗಿದೆ ಎಂದು ವಿಶ್ವ ಜಾಂಬೂರಿ ಸ್ವತ್ಛತೆಯ ಉಸ್ತುವಾರಿ ಡಾ| ಕುರಿಯನ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ ಸಮಾರೋಪ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತಾರಾಷ್ಟ್ರೀಯ ಜಾಂಬೂರಿಯಂಗವಾಗಿ ಡಿ.21ರಿಂದ ಡಿ.26ರವರೆಗೆ “ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ’ ಎಂಬ ಧ್ಯೇಯದೊಂದಿಗೆ ಮೂಡುಬಿದಿರೆಯ ಸುತ್ತಮುತ್ತಲಿ 8 ಕಡೆಗಳಲ್ಲಿ ದಿನಕ್ಕೆ 5 ಕಿ.ಮೀ.ಉದ್ದಕ್ಕೂ ನಡೆದ ಸ್ವಚ್ಛತಾ ಅಭಿಯಾನದಲ್ಲಿ 30,000 ಪ್ರಶಿಕ್ಷಣಾರ್ಥಿಗಳು 8 ತಂಡಗಳಾಗಿ ಆಂದೋಲನದಲ್ಲಿ ಭಾಗವಹಿಸಿ ಮೂಡುಬಿದಿರೆ ಆಸುಪಾಸಿನ 250 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯಕ್ರಮದಲಿ ತೊಡಗಿಸಿಕೊಂಡರು. ಸಮಾರೋಪದ ಭಾಗವಾಗಿ ಮೂಡುಬಿದಿರೆ ನಗರ ಕೇಂದ್ರಿತವಾಗಿ ಸೋಮವಾರ ನಡೆದ ಸ್ವಚ್ಛತ ಕಾರ್ಯದಲ್ಲಿ ಎಂಟೂ ದಿಕ್ಕುಗಳಿಂದ ಹರಿದು ಬಂದ ಸುಮಾರು 5,000 ಮಂದಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಕ್ಲಬ್‌ಗಳು, ಸೇವಾ ಸಂಘಟನೆಗಳ ಸದಸ್ಯರು ಪಾಲ್ಗೊಂಡರು.

ಸ್ವರಾಜ್ಯ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಭಾರತ ಈ ಹಿಂದೆ ಸ್ವತ್ಛತೆಯಲ್ಲಿ ಮುಂಚೂಣಿಯಲ್ಲಿತ್ತು. ಇತ್ತೀಚೆಗೆ ಜನರು ಪ್ಲಾಸ್ಟಿಕ್‌ ಬಳಕೆ ಹೆಚ್ಚಿಸಿರುವುದರಿಂದ ಪರಿಸರ ಮಲಿನಗೊಳ್ಳುತ್ತಿರುವುದನ್ನು ಗಮನಿಸಿ, ಸಾಧ್ಯವಾದಷ್ಟು ಅಜೈವಿಕ ತ್ಯಾಜ್ಯ ಉತ್ಪಾದಿಸುವುದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಸ್ವಚ್ಚತೆ ನಮ್ಮ ಕರ್ತವ್ಯ. ಇದು ಮಾನವನ ದಿನಚರಿಯ ಭಾಗ. ಈ ಆಂದೋಲನದಲ್ಲಿ ಮಕ್ಕಳ ಭಾಗವಹಿಸಿರುವುದು ನಾಗರಿಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಪುರಸಭೆಯ ಮುಖ್ಯ ಅಧಿಕಾರಿ ಇಂದು ಎಂ., ಸ್ವಚ್ಚತ ಆಂದೋಲನದ ಎಂಟು ಪ್ರಮುಖರು ಇದ್ದರು. ಆಳ್ವಾಸ್‌ ಪದವಿಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್‌ ನಿರೂಪಿಸಿದರು. ಅಭಿಯಾನದಲ್ಲಿ ಪಾಲ್ಗೊಂಡ ವರಿಗೆ ಪುರಸಭೆ ವತಿಯಿಂದ ಕಲ್ಲಂಗಡಿ ಹಣ್ಣುಗಳನ್ನು ಯಥೇತ್ಛವಾಗಿ ವಿತರಿಸಲಾಯಿತು.

ಸತ್ಯಾ ಕೆ

Advertisement

Udayavani is now on Telegram. Click here to join our channel and stay updated with the latest news.

Next