Advertisement

Moodabidri ಪರಂಪರೆ, ತಂತ್ರಜ್ಞಾನ ಬೆರೆತ ಯುವಶಕ್ತಿಯಿಂದ ದೇಶ ಗುರುಸ್ಥಾನದತ್ತ

12:35 AM Aug 17, 2023 | Team Udayavani |

ಮೂಡುಬಿದಿರೆ: ಜಗತ್ತಿನಲ್ಲೇ ಗರಿಷ್ಠ ಪ್ರಮಾಣದ ಯುವಶಕ್ತಿಯನ್ನು ಹೊಂದಿರುವ ಭಾರತ ಆಧುನಿಕ ತಂತ್ರಜ್ಞಾನದಲ್ಲೂ ಸಶಕ್ತವಾಗಿದೆ. ಇದರೊಂದಿಗೆ ನಮ್ಮ ಪರಂಪರೆ, ಸಂಸ್ಕೃತಿಯನ್ನು ಉಳಿಸಿಕೊಂಡು ಮುನ್ನಡೆದರೆ ಭಾರತ ಜಗತ್ತಿನಲ್ಲೇ ಗುರುಸ್ಥಾನಕ್ಕೇರುವುದು ಖಂಡಿತ ಎಂದು ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಒಡೆಯರ್‌ ಹೇಳಿದರು.

Advertisement

ಅವರು ಮೂಡುಬಿದಿರೆ ಎಕ್ಸಲೆಂಟ್‌ ವಿದ್ಯಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ “ರಾಜ ಸಭಾಂಗಣ’ವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್‌ ಮಾತನಾಡಿ, ಈ ನೆಲ, ಜಲ, ನಾಡು ನುಡಿಯ ರಕ್ಷಣೆಯಲ್ಲಿ ಮೈಸೂರು ಅರಸರ ಕೊಡುಗೆ ಅನನ್ಯ ಎಂದರು.

ಸಾಧಕರಿಗೆ ಸಮ್ಮಾನ
ನೀಟ್‌, ಜೆಇಇ ಸಾಧಕರಾಗಿ ಏಮ್ಸ್‌, ಐಐಟಿಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು, ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ್‍ಯಾಂಕ್‌ ಗಳಿಸಿದ ಪ.ಪೂ. ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಸಹಿತ ಒಟ್ಟು 23 ಮಂದಿಯನ್ನು ಅರಸರು ಸಂಸ್ಥೆಯ ವತಿಯಿಂದ ಸಮ್ಮಾನ ಪತ್ರ, ನಗದು ನೀಡಿ ಗೌರವಿಸಿದರು. ಎರಡನೇ ಬಾರಿಗೆ ಶಾಸಕರಾಗಿರುವ ಉಮಾನಾಥ ಕೋಟ್ಯಾನ್‌ ಅವರನ್ನು ಸಮ್ಮಾನಿಸಲಾಯಿತು.

ಅರಸರಿಗೆ ಗೌರವ
ಅರಸರನ್ನು ನವಧಾನ್ಯ, ನವಫಲ, ನವಪುಷ್ಪ, ನವಭಕ್ಷ್ಯ, ಮಹಾವೀರ ಸ್ವಾಮಿಯ ಸ್ಮರಣಿಕೆ, ಐದೆಳೆ ಮಲ್ಲಿಗೆ ಹಾರ, ಹೊತ್ತಗೆ, ರೇಷ್ಮೆ ಶಾಲು ನೀಡಿ ಸಮ್ಮಾನಿಸಲಾಯಿತು.

Advertisement

ಶೂನ್ಯ ತ್ಯಾಜ್ಯ ಕ್ಯಾಂಪಸ್‌
ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ಕ್ಯಾಂಪಸ್‌ ಆಗಿ ಪರಿವರ್ತನೆಗೊಂಡ ಪ್ರಥಮ ಅನುದಾನರಹಿತ ವಿದ್ಯಾ ಸಂಸ್ಥೆ ಎಂಬ ಘೋಷಣೆಗೆ ಎಕ್ಸಲೆಂಟ್‌ ಪಾತ್ರವಾಗಿದ್ದು ಆ ಘೋಷಣಾ ಪತ್ರವನ್ನು ಪ್ರಾಂಶುಪಾಲ ಪ್ರದೀಪ್‌ ಕುಮಾರ ಶೆಟ್ಟಿ ವಾಚಿಸಿದರು. ಶಿಕ್ಷಕಿ ಜಯಲಕ್ಷಿ$¾à ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು.

ಮಾಜಿ ಶಾಸಕ, ಎಕ್ಸಲೆಂಟ್‌ ಗೌರವಾಧ್ಯಕ್ಷ ಅಭಯಚಂದ್ರ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್‌ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್‌ ಸ್ವಾಗತಿಸಿ, ಶೈಕ್ಷಣಿಕ ನಿರ್ದೇಶಕ ಡಾ| ಬಿ.ಪಿ. ಸಂಪತ್‌ ಕುಮಾರ್‌ ವಂದಿಸಿದರು. ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ನಿರ್ವಹಿಸಿದರು.

ಸೈಬರ್‌ ಕ್ರೈಂ ತಡೆ: 5 ಲಕ್ಷ ಉದ್ಯೋಗಾವಕಾಶ
ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಒಡೆಯರ್‌ ಅವರು, ಬದುಕಿನಲ್ಲಿ ರೂಢಿಸಿಕೊಂಡು ಬಂದಿರುವ ಕಟ್ಟು ಕಟ್ಟಲೆಗಳು ಸೈಬರ್‌ ಜಗತ್ತಿನಲ್ಲಿಲ್ಲದ ಕಾರಣ ಸೈಬರ್‌ ಕ್ರೈಂ ಪ್ರಮಾಣ ಹೆಚ್ಚಾಗುತ್ತಿದ್ದು ಇದನ್ನು ತಡೆಯಲು ಮೈಸೂರು ಕೇಂದ್ರವಾಗಿ ದೊಡ್ಡ ಮಟ್ಟದ ಸೈಬರ್‌ ಕ್ರೈಂ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ. ಇದರ ಮೂಲಕ 5 ಲಕ್ಷ ಯುವಜನರಿಗೆ ಉದ್ಯೋಗ ಅವಕಾಶ ನಿರ್ಮಾಣವಾಗಲಿದೆ ಎಂದರು.

ವಸಾಹತುಶಾಹಿಯ ಇತಿಹಾಸ ದಿಲ್ಲಿ ಕೇಂದ್ರಿತವಾಗಿದ್ದು ಕರ್ನಾಟಕ ಒಳಗೊಂಡಂತೆ ದೇಶದ ಇತರೆಡೆಗಳ ಅರಸು ಮನೆತನಗಳ ಬಗ್ಗೆ ನಮಗೆ ತಿಳಿಸುವ ಯತ್ನ ನಡೆದಿಲ್ಲ. ಜ್ಞಾನವನ್ನು ವಿಸ್ತರಿಸಬೇಕಾದರೆ ಹೊಸ ವಿಚಾರಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸಶಿಕ್ಷಣ ನೀತಿಯ ಆವಶ್ಯಕತೆ ತುಂಬಾ ಇದೆ ಎಂದವರು ಅಭಿಪ್ರಾಯಪಟ್ಟರು. ಉದ್ಯೋಗದಲ್ಲಿ ಮೀಸಲಾತಿಯ ಪರಿಕಲ್ಪನೆಯನ್ನು ದೇಶದಲ್ಲಿ ಮೊತ್ತ ಮೊದಲು ಜಾರಿಗೆ ತಂದವರೇ ಮೈಸೂರು ಆರಸರು. ಅಂಬೇಡ್ಕರ್‌ ಅವರಿಗೆ ಪ್ರೇರಣೆಯಾದರು ಎಂದು ಯದುವೀರ್‌ ಉಲ್ಲೇಖಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next