Advertisement

ಮುಂಗಾರು ದುರ್ಬಲ: ಬಿತ್ತನೆಗೆ ಭತ್ತ ಬೆಳೆಗಾರರ ಹಿಂದೇಟು

11:14 PM Jun 20, 2019 | mahesh |

ಬೆಳ್ತಂಗಡಿ: ಮುಂಗಾರು ಹಂಗಾಮಿನಲ್ಲಿ ಸೂಕ್ತ ಮಳೆ ಕೊರತೆ ಕಾರಣ ಜಿಲ್ಲೆಯಾದ್ಯಂತ ಭತ್ತ ಬಿತ್ತನೆ ಪ್ರದೇಶ ನಿಗದಿತ ಗುರಿಗಿಂತ ಕುಂಠಿತವಾಗಿದೆ. ಮುಂಗಾರು ಸಮಯದಲ್ಲಿ ಭತ್ತ ನಾಟಿ ಮಾಡುವ ಅವಧಿ ಸುಮಾರು ಒಂದು ತಿಂಗಳು ವಿಳಂಬವಾಗಿದೆ.ತಾಲೂಕಿನಲ್ಲಿ ಈ ಬಾರಿ 3,000 ಹೆಕ್ಟೇರ್‌ ಭತ್ತ ಬಿತ್ತನೆ ಗುರಿ ಹೊಂದಲಾಗಿದ್ದು, ಕೈಕೊಟ್ಟ ಮುಂಗಾರಿನಿಂದ ರೈತರು ಬಿತ್ತನೆಗೆ ಮುಂದಾಗಿಲ್ಲ. ಜಿಲ್ಲೆಯಲ್ಲಿ ಈ ಬಾರಿ 15,900 ಹೆಕ್ಟೇರ್‌ ಭತ್ತ ಬಿತ್ತನೆ ಗುರಿ ಇರಿಸಲಾಗಿತ್ತು. ಮಂಗಳೂರು 6,700, ಬೆಳ್ತಂಗಡಿ 3,000, ಬಂಟ್ವಾಳ 5,000, ಪುತ್ತೂರು 900, ಸುಳ್ಯ 300 ಹೆಕ್ಟೇರ್‌ ಭತ್ತ ಕೃಷಿಗೆ ಮಂಗಾರು ದುರ್ಬಲ ವಾದ್ದರಿಂದ ಶೇ. 40ರಷ್ಟು ಬಿತ್ತನೆ ನಡೆದಿಲ್ಲ.

Advertisement

ಒಂದು ತಿಂಗಳು ವಿಳಂಬ
ಪ್ರತಿ ವರ್ಷ ಮೇ 15ರ ಬಳಿಕ ಪೂರ್ವ ಮುಂಗಾರು ಆರಂಭಗೊಂಡು ಜೂನ್‌ ಆರಂಭದಲ್ಲಿ ಭತ್ತ ಕೃಷಿ ಗರಿಗೆದರುತ್ತಿತ್ತು. ಪ್ರಸಕ್ತ ಜಿಲ್ಲೆಯಲ್ಲಿ ಜೂ. 15ರ ವರೆಗೂ ಸಂಪೂರ್ಣ ಮಳೆ ಪ್ರಮಾಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಎಪ್ರಿಲ್‌-ಮೇ ತಿಂಗಳಲ್ಲಿ ಬೀಜ ಬಿತ್ತನೆ ಮಾಡಿ ಜೂನ್‌ ಒಳಗಾಗಿ ನೇಜಿ ನಾಟಿ ಕಾರ್ಯವಾಗುತ್ತಿತ್ತು. ಈ ಬಾರಿ ಜೂ. 20 ಆದರೂ ಬಿತ್ತನೆಗೆ ಮಳೆ ಧೈರ್ಯ ನೀಡುತ್ತಿಲ್ಲ ಎಂಬುದು ರೈತರ ಅಳಲು.

ಭತ್ತ ಕೃಷಿ ಇಳಿಮುಖ
ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಪ್ರದೇಶ ಸುಮಾರು ಒಂದು ಸಾವಿರ ಎಕ್ರೆಯಷ್ಟು ಕಡಿಮೆ ಯಾಗಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭತ್ತ ಬೆಳೆ ಒಟ್ಟು 22 ಸಾವಿರ ಹೆಕ್ಟೇರ್‌ ಪ್ರದೇಶ ಕಡಿಮೆಯಾಗಿದೆ. ಕಳೆದ ವರ್ಷ ದ.ಕ.ದಲ್ಲಿ 28 ಸಾವಿರ ಹೆಕ್ಟೇರ್‌ ಹಾಗೂ ಉಡುಪಿ ಜಿಲ್ಲೆಯಲ್ಲಿ 44 ಸಾವಿರ ಹೆಕ್ಟೇರ್‌ ಸಹಿತ ಒಟ್ಟು 72 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. 8 ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಒಟ್ಟು 34 ಸಾವಿರ ಹೆಕ್ಟೇರ್‌ ಕಡಿಮೆಯಾಗಿದೆ.

ಕೈಕೊಟ್ಟ ಮಳೆ
ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಶೇ. 62ರಷ್ಟು ಕೊರತೆಯಾಗಿದೆ. ಜೂ. 17ರ ವರೆಗೆ ತಾ|ನಲ್ಲಿ 411 ಮಿ.ಮೀ. ವಾಡಿಕೆ ಮಳೆಯಾಗುವಲ್ಲಿ 172.8 ಮಿ.ಮೀ. ಮಳೆಯಾಗಿದ್ದು, ಶೇ.58ರಷ್ಟು ಮಳೆ ಕೊರತೆ ಕಾಡಿದೆ. ಬಂಟ್ವಾಳ 224.0, ಮಂಗಳೂರು 212.0, ಪುತ್ತೂರು 11.3, ಸುಳ್ಯ 110.7 ಮಿ.ಮೀ. ಮಳೆಯಾಗಿದೆ.

ಕೃಷಿ ಇಲಾಖೆ ಭತ್ತದ ಗದ್ದೆ ಹಡೀಲು
ಭತ್ತ ಬೆಳೆಯಿಂದ ವಿಮುಖವಾಗುತ್ತಿರುವುದು ಹಾಗೂ ಕೃಷಿಕರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಕಡಿಮೆಯಾಗಿರುವುದರಿಂದ ಬೆಳ್ತಂಗಡಿ ಕೃಷಿ ಇಲಾಖೆಯ ಬೀಜ ಉತ್ಪಾದನೆ ಕೇಂದ್ರದ 5 ಎಕ್ರೆ ಗದ್ದೆ ಹಡೀಲು ಬೀಳುವಂತಾಗಿದೆ. ಪ್ರತಿ ವರ್ಷ ಇಲ್ಲಿ ಸರಾಸರಿ 60ರಿಂದ 70 ಕೆ.ಜಿ. ಭತ್ತ ಬೆಳೆಯಲಾಗುತ್ತಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಗದ್ದೆಯಲ್ಲಿ ಕಳೆ ಆವರಿಸಿದೆ.

Advertisement

ಕುಂಠಿತವಾಗಲಿದೆ
1 ಎಕ್ರೆ ಪ್ರದೇಶದಲ್ಲಿ ನಾನು ಪ್ರತಿ ವರ್ಷ ಎರಡು ಬೆಳೆ ಭತ್ತ ಬೆಳೆಯುತ್ತಿದ್ದೇನೆ. ಪ್ರಸಕ್ತ ವರ್ಷ ದುರ್ಬಲ ಮುಂಗಾರಿನಿಂದ ಶೇ.50ರಷ್ಟು ಭತ್ತ ಕೃಷಿ ಕುಂಠಿತವಾಗಲಿದೆ. ಬೈಲು ಗದ್ದೆಯಲ್ಲಿ ಭತ್ತ ಮಾಡುವವರಿಗೆ ಅವಕಾಶವಿದೆ. ಬೆಟ್ಟು ಗದ್ದೆ ಹಾಗೂ ಮಜಲು ಗದ್ದೆಯಲ್ಲಿ ಭತ್ತ ಬೆಳೆಯುವವರಿಗೆ ಮಳೆ ಕೈಕೊಡುವ ಭಯದಿಂದ ಬೀಜ ಬಿತ್ತನೆ ವಿಳಂಬವಾಗುತ್ತಿದೆ.
– ಪ್ರಭಾಕರ್‌ ಮಯ್ಯ, ಸುರ್ಯ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು

 ಕೃಷಿಕರಲ್ಲಿ ಹಿಂಜರಿಕೆ
ಮಳೆ ವಿಳಂಬವಾಗಿರುವುದರಿಂದ ತಾಲೂಕಿನಲ್ಲಿ ಭತ್ತ ಬಿತ್ತನೆಗೆ ಕೃಷಿಕರು ಹಿಂಜರಿಯುತ್ತಿದ್ದಾರೆ. ತಾಲೂಕಿನ ಬೆಳ್ತಂಗಡಿ, ಕೊಕ್ಕಡ, ವೇಣೂರು ಹೋಬಳಿಗಳ ರೈತರು ಗದ್ದೆ ಹದಗೊಳಿಸಿ ಬಿತ್ತನೆಗೆ ಕೃಷಿ ಇಲಾಖೆಯಿಂದ 30 ಕ್ವಿಂಟಾಲ್‌ ಭತ್ತ ಖರೀದಿಸಿದ್ದಾರೆ.
 - ಪ್ರೇಮಾ ಡಿ. ಕಾಮ್ಲೆ
ಸ. ಕೃಷಿ ನಿರ್ದೇಶಕರು, ಬೆಳ್ತಂಗಡಿ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next