Advertisement

ಮುಂಗಾರು ಕಣ್ಣಾಮುಚ್ಚಾಲೆ: ಇವರು ಮಳೆಗಾಗಿ ಕೊಡೆ ಹಿಡಿದು ಕಾಯುತ್ತಿದ್ದಾರೆ !

03:47 PM Jun 14, 2024 | Team Udayavani |

ಮಹಾನಗರ: ರಾಜ್ಯ ಕರಾವಳಿಗೆ ಮುಂಗಾರು ಆಗಮನವಾದರೂ ನಗರದಲ್ಲಿ ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಒಂದು ದಿನ ಭಾರೀ ಮಳೆ ಯಾದರೆ ಮರುದಿನ ಕಡಿಮೆಯಾಗುತ್ತಿದೆ. ನಿರಂತರ ಮಳೆ ಇರದ ಕಾರಣ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಯಾಕೆಂದರೆ, ರೈನ್‌ ಕೋಟ್‌, ಕೊಡೆ ಸಹಿತ ವಿವಿಧ ವಸ್ತುಗಳ ಮಾರಾಟ ಇನ್ನೂ ಸರಿಯಾಗಿ ಕುದುರಿಲ್ಲ.

Advertisement

ಕೊಡೆ, ರೈನ್‌ ಕೋಟ್‌ ಮತ್ತಿತರ ಸಾಮಗ್ರಿಗಳನ್ನು ವ್ಯಾಪಾರಿಗಳು ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ತರಿಸಿ ಸಂಗ್ರಹ ಇಟ್ಟಿರುತ್ತಾರೆ. ಮೇ ಅಂತ್ಯದಲ್ಲಿ ಶಾಲೆ – ಕಾಲೇಜು ಆರಂಭಕ್ಕೆ ಮುನ್ನ ಸ್ವಲ್ಪ ವ್ಯಾಪಾರ ಇರುತ್ತದೆ. ಆದರೆ ನಿಜ ವಾದ ವ್ಯಾಪಾರ ಆರಂಭವಾಗುವುದು ಮಳೆ ಜೋರಾಗಿ ಬಿದ್ದಾಗ. ಹೀಗಾಗಿಯೇ ಜೂನ್‌ ಮೊದಲ ವಾರದಲ್ಲಿ ನಗರದ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ರೈನ್‌ ಕೋಟ್‌, ಕೊಡೆ ಮಾರಾಟ ಕಾಣಸಿಗುತ್ತದೆ. ಆದರೆ ಈ ಬಾರಿ ಒಂದೆರಡು ಕಡೆ ಮಾತ್ರ ಮಾರಾಟಕ್ಕೆ ಇಡಲಾಗಿದೆ.ಅವರಿಗೂ ವ್ಯಾಪಾರ ಇಲ್ಲ!

ಮುಂಬಯಿ, ಗುಜರಾತ್‌ನಿಂದ ಪೂರೈಕೆ
ನಗರದ ಶಾಪ್‌ ಗಳಿಗೆ ರೈನ್‌ಕೋಟ್‌, ಕೊಡೆಗಳು ಗುಜರಾತ್‌, ಮುಂಬಯಿಯಿಂದ ಪೂರೈಕೆಯಾಗುತ್ತವೆ. ಈಗಾಗಲೇ ಎಲ್ಲ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆರ್ಡರ್‌ ಕೊಟ್ಟು ತರಿಸಿಕೊಂಡಿದ್ದಾರೆ. ಆದರೆ ಮಳೆ ವಿಳಂಬವಾಗಿರುವುದರಿಂದ ವ್ಯಾಪಾರ ಆರಂಭವಾಗಿಲ್ಲ. ಹಾಗಂತ ಇದೇನೂ ಹಾಳಾಗುವ ವಸ್ತುವಲ್ಲ ಎಂಬ ಕಾರಣಕ್ಕೆ ಹೆಚ್ಚು ತಲೆ ಬಿಸಿ ಇಲ್ಲ.

28 ರೂ.ಗೆ ಒಂದು ರೈನ್‌ ಕೋಟ್‌!
ಈ ಬಾರಿ ಮಾರುಕಟ್ಟೆಯಲ್ಲಿ ಮಳೆಗಾಲಕ್ಕೆ ಸಂಬಂಧಿತ ವಸ್ತುಗಳ ಉತ್ತಮ ಸಂಗ್ರಹವಿದೆ. ಮಕ್ಕಳ ವಿಭಾಗ  ದಲ್ಲಿ 300 ರೂ.ನಿಂದ 650 ರೂ. ಮತ್ತು ವಯಸ್ಕರಲ್ಲಿ ಸುಮಾರು 500 ರೂ. ನಿಂದ 2,000 ರೂ.ವರೆಗೂ ದರ ವೈವಿಧ್ಯವಿದೆ. ಈ ಬಾರಿಯ ವಿಶೇಷ ಎಂಬಂತೆ ಕೇವಲ 28 ರೂ.ಗೆ ಒಂದು ಬಾರಿ ಉಪಯೋಗಿಸಬಹುದಾದ ರೈನ್‌ ಕೋಟ್‌ ಕೂಡ ಇದೆ.

ನಿರಂತರ ಮಳೆ ಸುರಿಯದ ಹಿನ್ನೆಲೆಯಲ್ಲಿ ವ್ಯಾಪಾರ ಕುದುರಿಲ್ಲ
ಪೂರ್ಣ ಪ್ರಮಾಣದಲ್ಲಿ ಮಳೆಗಾಲ ಆರಂಭವಾಗದ ಹಿನ್ನೆಲೆಯಲ್ಲಿ ರೈನ್‌ ಕೋಟ್‌, ಕೊಡೆ ವ್ಯಾಪಾರ ಕುದುರಿಲ್ಲ. ಶಾಲಾ – ಕಾಲೇಜು ಆರಂಭದ ವೇಳೆ ಮಾರಾಟಕ್ಕೆ ತುಸು ಬೇಡಿಕೆ ಇತ್ತು. ನಿರಂತರ ಮಳೆ ಸುರಿಯಲಾರಂಭಿಸಿದ ಬಳಿಕ ವ್ಯಾಪಾರ ಚುರುಕುಗೊಳ್ಳಬಹುದು.

Advertisement

*ಸಂತೋಷ್‌ ಕುಮಾರ್‌, ಉದ್ಯಮಿ-ಉರ್ವ

 

Advertisement

Udayavani is now on Telegram. Click here to join our channel and stay updated with the latest news.

Next