Advertisement

ಮಳೆಗಾಲ: ವಾಹನ ಸವಾರರಿಗೆ ಮುನ್ನೆಚ್ಚರಿಕೆ

04:11 PM May 31, 2023 | Team Udayavani |

ಉಡುಪಿ: ಮಳೆಗಾಲ ಆರಂಭಗೊಂಡಿರುವ ನಡುವೆಯೇ ರಸ್ತೆ ಅಪಘಾತಗಳಂತಹ ಪ್ರಕರಣಗಳೂ ದಿನನಿತ್ಯ ಘಟಿಸುತ್ತಿವೆ. ಈ ಬಗ್ಗೆ ವಾಹನಸವಾರರು ಜಾಗರೂಕರಾಗಿರುವುದು ಅತೀ ಅಗತ್ಯವಾಗಿದೆ. ಮೊದಲ ಮಳೆ ಸುರಿದಾಗ ಹಾಗೂ ಅದರ ಬಳಿಕ ಎಚ್ಚರವಹಿಸುವುದು ಅತೀ ಅಗತ್ಯವಾಗಿರುತ್ತದೆ.

Advertisement

ದ್ವಿಚಕ್ರ ವಾಹನ ಸವಾರರಿಗೂ ಇತರ ಸಂದರ್ಭಗಳಲ್ಲಿ ನಿಯಂತ್ರಣದಲ್ಲಿರುವಷ್ಟು ಮಳೆ ಬಿದ್ದಾಗ ಇರುವುದಿಲ್ಲ. ಇದೇ ಕಾರಣಕ್ಕೆ ನಿಯಂತ್ರಣ ಕಳೆದುಕೊಂಡು ವಾಹನಗಳು ಸ್ಕಿಡ್‌ ಆಗುವುದು ಅಥವಾ ಬ್ರೇಕ್‌ ಸರಿಯಾಗಿ ಕಾರ್ಯನಿರ್ವಹಿಸದೆ ಅಪಘಾತಗಳು ಉಂಟಾಗುತ್ತವೆ.

ಉಡುಪಿಯಲ್ಲಿ ಮಂಗಳವಾರ ಸುರಿದ ಮಳೆಗೆ ಬಲೈಪಾದೆ ಬಳಿ ಗೇರುಬೀಜ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ. ಮಳೆಗೆ ಬ್ರೇಕ್‌ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆಸಂಭವಿಸಿದೆ. ಇದಕ್ಕೂ ಮುನ್ನ ಕಾಪು ಭಾಗದಲ್ಲಿ ಸುರಿದ ಭಾರೀ ಮಳೆಗೆ ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಬೃಹತ್‌ ಗಾತ್ರದ ಮರ ಬಿದ್ದು ಸವಾರರಿಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿತ್ತು.

ಎಚ್ಚರಿಕೆ ಅಗತ್ಯ
ವಾಹನಗಳಿಂದ ಸುರಿದ ದ್ರವವಸ್ತುಗಳು ಬಿಸಿಲಿಗೆ ರಸ್ತೆಯಲ್ಲಿ ಗಟ್ಟಿಯಾಗಿದ್ದರೂ ಮಳೆಬಂದಾಗ ಎಣ್ಣೆಯ ಅಂಶಗಳು ಚದುರಲ್ಪಡುತ್ತವೆ. ಈ ವೇಳೆ ವಾಹನಸವಾರರು ತುಸು ಬ್ರೇಕ್‌ ಹಾಕಿದರೂ ಸ್ಕಿಡ್‌ ಆಗಿ ಬೀಳುವ ಸಂಭವವೇ ಅಧಿಕವಾಗಿರುತ್ತದೆ. ಇದು ದ್ವಿಚಕ್ರ ವಾಹನ ಮಾತ್ರವಲ್ಲದೆ ಘನ ವಾಹನಗಳ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ನಿಧಾನಗತಿಯಲ್ಲಿ ಚಲಿಸುವುದೇ ಉತ್ತಮ.

ಗುಂಡಿಗಳ ಬಗ್ಗೆ ಎಚ್ಚರವಿರಲಿ
ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸವಾರರಿಗೆ ಕಾಣದಂತಿರುತ್ತದೆ. ಇದು ಬೃಹತ್‌ ಗಾತ್ರದ ಹೊಂಡವೂ ಆಗಿರಬಹುದು. ದಿನನಿತ್ಯ ಅದೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದರ ಅರಿವಿದ್ದರೂ ಬೇರೆ ರಸ್ತೆಗಳಲ್ಲಿ ಸಂಚರಿಸಿದಾಗ ನೀರು ತುಂಬಿರುವೆಡೆ ಸಂಚಾರ ಮಾಡುವಾಗ ಬಹಳಷ್ಟು ಜಾಗರೂಕರಾಗಿರಬೇಕು.

Advertisement

ಮರದಡಿ ವಾಹನ ನಿಲುಗಡೆ ಬೇಡ
ಬೇಸಗೆ ಕಾಲದಲ್ಲಿ ನೆರಳಿನ ಆಶ್ರಯಕ್ಕಾಗಿ ಮರದಿಡಿ ವಾಹನ ನಿಲುಗಡೆ ಮಾಡುಲು ಅಭ್ಯಾಸವನ್ನು ಹಲವಾರು ಮಂದಿ ಹೊಂದಿದ್ದರು. ಆದರೆ ಮಳೆಗಾಲಕ್ಕೂ ಇದನ್ನೇ ಮುಂದುವರಿಸಿದರೆ ಅಪಾಯ ಖಚಿತ. ಮರದ ಗೆಲ್ಲುಗಳು ಬಿದ್ದು ವಾಹನಕ್ಕೆ ಹಾನಿಯಾಗುವ ಸಂಭವವೇ ಅಧಿಕವಾಗಿರುತ್ತವೆ.

ಶಿಥಿಲಾವಸ್ಥೆಯಲ್ಲಿರುವ ಮರಗಳು ಬುಡ ಸಹಿತ ಬೀಳುವ ಘಟನೆಗಳೂ ನಡೆದಿವೆ. ಈ ಕಾರಣಕ್ಕೆ ಮರದ ಕೆಳಭಾಗ ಹಾಗೂ ವಿದ್ಯುತ್‌ ತಂತಿಗಳು, ಕಂಬಗಳು ಇರುವಲ್ಲಿ ವಾಹನ ನಿಲ್ಲಿಸದಿರುವುದೇ ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next