Advertisement

ಅಮ್ಮನ ಅರಸಿ ಭಾವುಕ ಪಯಣ…

09:16 AM Mar 25, 2019 | |

ಅವನಿಗೆ ಜೀವನ ಕೊಟ್ಟವರು ಒಬ್ಬರಾದರೆ, ಜನ್ಮ ಕೊಟ್ಟವರು ಮತ್ತೂಬ್ಬರು…! ಅವನ ಲೈಫ‌ಲ್ಲಿ ಎಲ್ಲವೂ ಇದೆ. ಆದರೆ, ಮಹತ್ವದ್ದನ್ನೇನೋ ಕಳೆದುಕೊಂಡಂತಹ ನೋವು ಅವನದು. ಕಣ್ಣಲ್ಲಿ ಹುಡುಕಾಟದ ಛಾಯೆ, ಮನಸ್ಸಲ್ಲಿ ಕಳೆದುಕೊಂಡ ನೋವು. ದೊಡ್ಡ ಶ್ರೀಮಂತನೇನೋ ಹೌದು, ಆದರೆ ಸಂಭ್ರಮವಿಲ್ಲ. ದೂರದಲ್ಲೆಲ್ಲೋ ತನ್ನವರಿದ್ದಾರೆ. ಇಂದಲ್ಲ, ನಾಳೆ ಸಿಕ್ಕೇ ಸಿಗುತ್ತಾರೆ ಎಂಬ ಆಶಾಭಾವದಲ್ಲೇ ಎರಡುವರೆ ದಶಕ ಕಳೆದ ಕಾಣೆಯಾದ ಹುಡುಗನೊಬ್ಬನ ಭಾವುಕ ಪಯಣವಿದು.

Advertisement

ಹಾಗೆ ಹೇಳುವುದಾದರೆ, ಇದು ಕಾಣೆಯಾದವನ ಸತ್ಯಕಥೆ. ಅದು “ಮಿಸ್ಸಿಂಗ್‌ ಬಾಯ್‌’ ಚಿತ್ರವಾಗಿದೆ. ಕನ್ನಡದಲ್ಲಿ ಅನೇಕ ನೈಜ ಘಟನೆ ಚಿತ್ರಗಳು ಬಂದಿವೆ. ಆ ಸಾಲಿಗೆ ಇದು ಒಂದಾದರೂ, ಇಲ್ಲಿ ಆಳವಾದ ನೋವಿದೆ, ಮಾನವೀಯ ಸ್ಪರ್ಶವಿದೆ. ವಿದೇಶದಿಂದ ಸ್ವದೇಶಕ್ಕೆ ಅಪ್ಪ-ಅಮ್ಮನ ಹುಡುಕಿ ಬಂದವನ ಕಥೆ ಮತ್ತು ವ್ಯಥೆ ತುಂಬಿದೆ. ಇದೆಲ್ಲವನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಣ್ಣುಗಳು ಒದ್ದೆಯಾಗುವಂತೆ ಕಟ್ಟಿಕೊಟ್ಟಿರುವ ಪ್ರಯತ್ನವೂ ಸಾರ್ಥಕವಾಗಿದೆ.

ನಿರ್ದೇಶಕ ರಘುರಾಮ್‌ ಒಳ್ಳೆಯ ಸತ್ಯಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇಂತಹ ಕಥೆಯನ್ನು ಮನಮುಟ್ಟುವಂತೆ ಚಿತ್ರಿಸಿ, ತೋರಿಸುವುದೇ ಚಾಲೆಂಜ್‌. ಅದರಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಹಾಗಂತ, ಇಲ್ಲಿ ಯಾವುದೇ ಕಮರ್ಷಿಯಲ್‌ ಅಂಶಗಳನ್ನು ನಿರೀಕ್ಷಿಸುವಂತಿಲ್ಲ. ಇಂಥದ್ದೇ ವರ್ಗಕ್ಕೆ ಸೀಮಿತವಾದ ಚಿತ್ರವೂ ಅಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ, ಇದು ಎಲ್ಲಾ ವರ್ಗಕ್ಕೂ, ಎಲ್ಲಾ ಕಾಲಕ್ಕೂ ಸಲ್ಲುವ ಚಿತ್ರ.

ಇಲ್ಲಿ ಭಾವನೆಗಳ ಜೊತೆ ಆಟವಾಡಿದ್ದಾರೆ. ಭಾವನಾತ್ಮಕ ಅಂಶಗಳೇ ಮೇಳೈಸಿವೆ. ಸಂಬಂಧಗಳ ಮೌಲ್ಯ, ಮನಸ್ಸುಗಳ ಬೆಸುಗೆ, ಹುಡುಕಾಟದ ತಳಮಳ ಚಿತ್ರದ ಮೌಲ್ಯಕ್ಕೆ ಹಿಡಿದ ಕನ್ನಡಿ. ಇಲ್ಲಿ ಮುಖ್ಯವಾಗಿ ಕಾಡುವ ಅಂಶವೆಂದರೆ, ಜಾತಿ ಹಾಗು ಧರ್ಮ ಮೀರಿದ ಒಂದೊಳ್ಳೆಯ ಸಂದೇಶವಿದೆ. ಮಾನವೀಯ ಗುಣವಿರುವ ಈ ಚಿತ್ರದಲ್ಲಿ ಸೂಕ್ಷ್ಮ ಸಂವೇದನೆಯ ವಿಷಯಗಳೂ ಆಗಾಗ ನೋಡುವ ಮನಸ್ಸನ್ನು ಭಾವುಕತೆಗೆ ದೂಡುವುದುರ ಜೊತೆಗೆ ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವಂತಹ ತಾಕತ್ತು ಇಲ್ಲಿದೆ. ಮರಸುತ್ತುವ ಹಾಡುಗಳಿಲ್ಲ. ಹಾರಿ, ಎಗರಿ ಬೀಳುವ ದೃಶ್ಯಗಳಿಲ್ಲ.

ಆರಂಭದಿಂದ ಅಂತ್ಯದವರೆಗೂ ಮನಸ್ಸು ಗಟ್ಟಿ ಹಿಡಿದು, ಕಣ್ಣಂಚಲ್ಲಿ ತುಸು ಹನಿ ತುಂಬಿಕೊಂಡು ನೋಡುವ ಮತ್ತು ಕಾಡುವ ಚಿತ್ರವಾಗಿ ಇಷ್ಟವಾಗುತ್ತದೆ. ಮೊದಲೇ ಹೇಳಿದಂತೆ ಇಲ್ಲಿ ಸಂಬಂಧಕ್ಕೆ ಹೆಚ್ಚು ಅರ್ಥ ಕಲ್ಪಿಸಲಾಗಿದೆ. ಒಂದು ನೈಜ ಕಥೆ ಇಟ್ಟುಕೊಂಡು ಮಾಡುವುದು ಕಷ್ಟದ ಕೆಲಸವಾದರೂ, ಅದನ್ನಿಲ್ಲಿ ತುಂಬಾ ಎಚ್ಚರಿಕೆಯಿಂದ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸೇರಿಸಿಕೊಂಡು ಎದೆಭಾರವಾಗಿಸುತ್ತಲೇ, ನೋಡುಗರು ಮೆಲ್ಲನೆ ನಿಟ್ಟುಸಿರುವ ಬಿಡುವಂತಹ ಕೆಲಸವನ್ನು ಅಷ್ಟೇ ಜಾಣತನದಿಂದ ನಿರ್ವಹಿಸಿದ್ದಾರೆ ನಿರ್ದೇಶಕರು.

Advertisement

ಒಂದು ಚಿತ್ರ ನೋಡುಗರ ಮನಸ್ಸು ತಟ್ಟಲು ಕಾರಣ ಕಥೆ ಮತ್ತು ಚಿತ್ರಕಥೆ, ಜೊತೆಗೆ ಅದಕ್ಕೆ ಪೂರಕವಾದ ಮಾತುಗಳು, ತೆರೆ ಮೇಲಿನ ಪಾತ್ರಗಳು. ಅವೆಲ್ಲವೂ ಇಲ್ಲಿ ವಕೌìಟ್‌ ಆಗಿವೆ. ಮುಖ್ಯವಾಗಿ ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರವಹಿಸಬೇಕು. ಅದಿಲ್ಲಿ ಸಾಂಗೋಪವಾಗಿ ನಡೆದಿದೆ. ಮೊದಲರ್ಧದ ಇಪ್ಪತ್ತು ನಿಮಿಷ ಮಾತ್ರ, ಚಿತ್ರದ ವೇಗ ನಿಧಾನ. ಯಾವಾಗ ಅವನು ಹೆತ್ತವರ ಹುಡುಕಾಟಕ್ಕೆ ಹೊರಡುತ್ತಾನೋ, ಅಲ್ಲಿಂದ ಕೊನೆಯವರೆಗೂ ಮಿಂಚಿನ ಓಟ.

ಅವನ ಹುಡುಕಾಟ ಶುರುವಾಗಿದ್ದೇ ತಡ, ಚಿತ್ರ ಮುಗಿದದ್ದೂ ಗೊತ್ತಾಗಲ್ಲ. ಹಾಗೆಯೇ, ಕಣ್ಣುಗಳು ಒದ್ದೆಯಾಗುವುದೂ ಗೊತ್ತಾಗಲ್ಲ. ಅಷ್ಟೊಂದು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. “ಮಿಸ್ಸಿಂಗ್‌ ಬಾಯ್‌’ ಬಗ್ಗೆ ಹೇಳುವುದಾದರೆ, 27 ವರ್ಷದ ಹಿಂದೆ ನಡೆದ ಘಟನೆಯನ್ನು ಒಬ್ಬ ಪೊಲೀಸ್‌ ಅಧಿಕಾರಿಯೊಬ್ಬ ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಥ್ರಿಲ್ಲರ್‌ ಅಂಶದೊಂದಿಗೆ ಕಥೆ ಸಾಗಲಿದೆ. ಸುಮಾರು ಐದು ವರ್ಷದ ಹುಡುಗನೊಬ್ಬ, ಆಟವಾಡುತ್ತಲೇ ರೈಲಿನಲ್ಲಿ ಪಯಣ ಬೆಳೆಸಿ ಕಾಣೆಯಾಗುತ್ತಾನೆ.

ಹಾಗೆ ಕಾಣೆಯಾದವನು ದೂರದ ಸ್ವೀಡನ್‌ ದೇಶದ ಸಾಕು ಅಪ್ಪ,ಅಮ್ಮನನ್ನು ಸೇರಿಕೊಳ್ಳುತ್ತಾನೆ. ಇಪ್ಪತ್ತೇಳು ವರ್ಷದ ಬಳಿಕ ಸುಮಾರು 35 ವರ್ಷ ವಯಸ್ಸಿನವನಾದ ಆ ಯುವಕ ಸ್ವೀಡನ್‌ನಿಂದ ತನ್ನ ಸ್ವಂತ ಅಪ್ಪ-ಅಮ್ಮನನ್ನು ಹುಡುಕಿ ಕೊಡಿ ಎಂದು ಪೊಲೀಸ್‌ ಠಾಣೆಯ ಮೊರೆ ಹೋಗುತ್ತಾನೆ. ಕಳೆದು ಹೋಗಿದ್ದ ಹುಡುಗ ಪುನಃ ವಿದೇಶದಿಂದ ಸ್ವದೇಶಕ್ಕೆ ಬಂದು ಅಪ್ಪ-ಅಮ್ಮ ಬೇಕು ಅಂದಾಗ, ಪೊಲೀಸರು ಹೇಗೆಲ್ಲಾ ಅವನ ಹೆತ್ತವರನ್ನು ಹುಡುಕುತ್ತಾರೆ.

ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ, ಕೊನೆಗೆ ಅವನ ಹೆತ್ತವರು ಸಿಗುತ್ತಾರಾ ಇಲ್ಲವಾ ಎಂಬುದೇ ಸಾರಾಂಶ. “ಮಿಸ್ಸಿಂಗ್‌ ಬಾಯ್‌’ ಆಗಿ ಕಾಣಿಸಿಕೊಂಡಿರುವ ಗುರುನಂದನ್‌, ಎಲ್ಲರನ್ನೂ ಭಾವುಕರನ್ನಾಗಿಸುತ್ತಾರೆ. ಹೆತ್ತವರನ್ನು ಹುಡುಕಿಕೊಡಲು ಹೊರಡುವ ರಂಗಾಯಣ ರಘು ಸಹ ಅಷ್ಟೇ ವಿಶೇಷ ಎನಿಸುತ್ತಾರೆ. ರವಿಶಂಕರ್‌ಗೌಡ ಅವರ ಪಾತ್ರಕ್ಕೂ ಇಲ್ಲಿ ತೂಕವಿದೆ. ಉಳಿದಂತೆ ನಾಯಕಿ ಅರ್ಚನಾ ತಕ್ಕಮಟ್ಟಿಗೆ ಗಮನಸೆಳೆಯುತ್ತಾರೆ. ಜೈಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌ ಸಾಕು ಅಪ್ಪ,ಅಮ್ಮನಾಗಿ ತೆರೆಮೇಲೆ ಇರುವಷ್ಟು ಸಮಯ ಇಷ್ಟವಾಗುತ್ತಾರೆ.

ಕ್ಲೈಮ್ಯಾಕ್ಸ್‌ನ ಒಂದೇ ರೀಲ್‌ ಕಾಣಿಸಿಕೊಂಡರೂ ರಂಗಭೂಮಿ ಕಲಾವಿದೆ ಭಾಗಿರಥಿ ಬಾಯಿ ಅವರ ಇಡೀ ದೃಶ್ಯವನ್ನು ಆವರಿಸಿಕೊಂಡಿದ್ದಾರೆ. ಮಗನ ಕಳೆದುಕೊಂಡ ತಾಯಿಯ ಸಂಕಟ, ನೋವು, ಹೇಗಿರುತ್ತೆ ಎಂಬುದನ್ನು ಪಾತ್ರ ಮೂಲಕ ಸಾಕ್ಷೀಕರಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳೆಲ್ಲವೂ ದೃಶ್ಯಕ್ಕೆ ಪೂರಕ. ಹರಿಕೃಷ್ಣ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ವೇಗಕ್ಕೆ ಹೆಗಲುಕೊಟ್ಟಿದೆ. ಜೆ.ಎಸ್‌.ವಾಲಿ ಅವರ ಛಾಯಾಗ್ರಹಣದಲ್ಲಿ ಯಾವುದೂ “ಮಿಸ್‌’ ಆಗಿಲ್ಲ.

ಚಿತ್ರ: ಮಿಸ್ಸಿಂಗ್‌ ಬಾಯ್‌
ನಿರ್ಮಾಣ: ಕೊಲ್ಲ ಪ್ರವೀಣ್‌, ಕೊಲ್ಲ ಮಹೇಶ್‌, ಆರ್‌.ಕೆ.ಹೇಮಂತ್‌ಕುಮಾರ್‌
ನಿರ್ದೇಶನ: ರಘುರಾಮ್‌
ತಾರಾಗಣ: ಗುರುನಂದನ್‌, ಅರ್ಚನಾ ಜಯಕೃಷ್ಣ, ರಂಗಾಯಣ ರಘು, ರವಿಶಂಕರ್‌ಗೌಡ, ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಭಾಗಿರಥಿ ಬಾಯಿ, ಮಾ.ಅಭಿಜಯ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next