Advertisement

ಮೊಯ್ಲಿ, ಬಚ್ಚೇಗೌಡ ಭವಿಷ್ಯ ನಿರ್ಧಾರ ಇಂದು

09:37 AM May 23, 2019 | Suhan S |

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಫ‌ಲಿತಾಂಶ ಹೊರ ಬೀಳಲು ಕ್ಷಣಗಣನೆ ಆರಂಭಗೊಂಡಿದ್ದು, ಸತತ ಎರಡು ಬಾರಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ ಯಲ್ಲಿ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್‌ನ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ, ಕಳೆದ ಬಾರಿ ಮೋದಿ ಹವಾ ನಡುವೆಯೂ ಅಲ್ಪಮತಗಳ ಅಂತರದಿಂದ ಸೋತ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಸೇರಿದಂತೆ ಅಖಾಡದಲ್ಲಿರುವ 15 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರ ವಾಗಲಿದೆ.

Advertisement

ಈ ಬಾರಿಯ ಲೋಕಸಭಾ ಚುನಾವಣೆಯ ಫ‌ಲಿತಾಂಶ ಜಿಲ್ಲೆಯ ಭವಿಷ್ಯದ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳಲ್ಲಿ ಫ‌ಲಿತಾಂಶ ಬಗ್ಗೆ ಸಂಚಲನ ಉಂಟಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಕಾಂಗ್ರೆಸ್‌ ಶಾಸಕರು ಆಪರೇಷನ್‌ ಕಮಲಕ್ಕೆ ಒಳಗಾಗುತ್ತಾರೆಂಬ ಊಹಾಪೋಹಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವುದು ಸಂಚಲನ ಮೂಡಿಸಿದ್ದು, ಲೋಕ ಫ‌ಲಿತಾಂಶ ಮಹತ್ವ ಪಡೆದುಕೊಂಡಿದೆ.

ದಾಖಲೆಯ ಮತದಾನ: ಜಿಲ್ಲಾದ್ಯಂತ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಶೇ. 76.61 ರಷ್ಟು ದಾಖಲೆಯ ಮತದಾನ ನಡೆದು ಹಿಂದಿನ ಚುನಾವಣೆಗಳ ಮತ ದಾನದ ದಾಖಲೆಗಳನ್ನು ಅಳಿಸಲಾಗಿದೆ. ಮತದಾನ ಮುಗಿದ ಬಳಿಕ ಸುಮಾರು ಒಂದು ತಿಂಗಳ ಕಾಲ ಫ‌ಲಿತಾಂಶಕ್ಕಾಗಿ ಎದುರು ನೋಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿ ಕೊಂಡು ಚುನಾವಣೆ ಎದುರಿಸಿದೆ. ಅದೇ ರೀತಿ ಬಿಜೆಪಿ ಕೂಡ ಪ್ರಧಾನಿ ನರೇಂದ್ರ ಮೋದಿ ಅಲೆ ಬಳಸಿಕೊಂಡು ಮೈತ್ರಿ ಒಡಕಿನ ಲಾಭ ಬಳಸಿಕೊಂಡು ಚುನಾವಣೆ ಎದುಸಿರಿದ್ದು, ಚುನಾವಣಾ ಅಖಾಡ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದರಿಂದ ಫ‌ಲಿತಾಂಶ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

15 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ, ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ, ಸಿಪಿಎಂ ಎಸ್‌.ವರಲಕ್ಷ್ಮೀ, ಬಹು ಜನ ಸಮಾಜ ಪಕ್ಷದ ಡಾ.ಸಿ.ಎಸ್‌.ದ್ವಾರಕನಾಥ್‌ ಸೇರಿದಂತೆ ಪಕ್ಷೇತರರು ಸೇರಿ ಒಟ್ಟು 15 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಹಾಗೂ ಬಿಜೆಪಿ ನಡುವೆಯೇ ನೇರ ಹಣಾಹಣಿ ನಡೆದಿದ್ದು, ಇಬ್ಬರ ನಡುವೆ ಗೆಲುವು ತೀರ್ಮಾನವಾದರೂ ಇಬ್ಬರ ಯಾರ ಸೋಲು, ಗೆಲುವಿನಲ್ಲಿ ಸಿಪಿಎಂ ಹಾಗೂ ಬಿಎಸ್ಪಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಮಾತ್ರ ಕೇಳಿಬರುತ್ತಿದೆ.

Advertisement

ಯಾವ ಕ್ಷೇತ್ರ ಯಾರ ಕೈ ಹಿಡಿಯುತ್ತೆ? ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ಇದ್ದಾರೆ. ಅವರಲ್ಲಿ ಇಬ್ಬರು ಮಂತ್ರಿಗಳಾಗಿದ್ದಾರೆ. ಇನ್ನೂ 2 ಜೆಡಿಎಸ್‌ ಶಾಸಕರು ಇದ್ದು, ಒಬ್ಬರು ಮಾತ್ರ ಬಿಜೆಪಿ ಶಾಸಕರು ಇದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸಮರ್ಪಕವಾಗಿ ವರ್ಕೌಟ್ ಆಗಿದ್ದರೆ ಸುಲಭವಾಗಿ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಆದರೆ ಮೋದಿ ಹವಾ ಹಾಗೂ ಮೈತ್ರಿಯ ಒಳೇಟು ಬಿಜೆಪಿಗೆ ಭಾರಿ ಯಶಸ್ಸು ತಂದುಕೊಟ್ಟಿದೆಯೆಂಬ ಮಾತು ಕೇಳಿ ಬರುತ್ತಿದೆ. ಚುನಾವಣೆಯಲ್ಲಿ ಒಕ್ಕಲಿಗ ಮತಗಳು ಬಹುಪಾಲು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರಿಗೆ ವರದಾನವಾಗಿದೆ ಎಂಬ ಮಾತು ಇದೆ. ಹೀಗಾಗಿ 8 ಕ್ಷೇತ್ರಗಳಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಬರುತ್ತದೆ, ಯಾವ ಕ್ಷೇತ್ರ ಯಾರ ಕೈ ಹಿಡಿಯುತ್ತದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

ಕ್ಷೇತ್ರದಲ್ಲಿ ಕೈ ಕೋಟೆ ಉಳಿಯುತ್ತಾ?: ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ, ಚಿಕ್ಕಬಳ್ಳಾಪುರ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ನಡೆದ 11 ಚುನಾವಣೆಗಳಲ್ಲಿ 10 ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಒಮ್ಮೆ ಮಾತ್ರ 1996 ರಲ್ಲಿ ಆರ್‌.ಎಲ್.ಜಾಲಪ್ಪ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಬಿಟ್ಟರೆ ಇದುವರೆಗೂ ಕಾಂಂಗ್ರೆಸ್‌ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ.

ಪ್ರತಿ ಚುನಾವಣೆಯಲ್ಲಿ ಪ್ರಬಲ ಕೋಮಿನ ಅಭ್ಯರ್ಥಿಗಳಿಗಿಂತ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಕ್ಷೇತ್ರದ ಮತದಾರರು ಮಣೆ ಹಾಕಿರುವುದು ಕ್ಷೇತ್ರದ ಇತಿಹಾಸದಲ್ಲಿ ಎದ್ದು ಕಾಣುತ್ತಿದೆ. ಚುನಾವಣೆಯ ಫ‌ಲಿತಾಂಶ ಆಡಳಿತರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ.

ಒಟ್ಟಾರೆ ಜಿಲ್ಲೆಯ ಲೋಕಸಭಾ ಚುನಾವಣೆ ಫ‌ಲಿತಾಂಶ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಆಡಳಿತರೂಢ ಕಾಂಗ್ರೆಸ್‌ಗೆ ತನ್ನ ಭದ್ರಕೋಟೆ ಉಳಿಸಿಕೊಳ್ಳುವ ಚಿಂತೆಯಾದರೆ ಎದುರಾಳಿ ಬಿಜೆಪಿ ಕಾಂಗ್ರೆಸ್‌ ಕೋಟೆಯಲ್ಲಿ ಖಾತೆ ತೆರೆಯುವ ಹಂಬಲ ಹೊಂದಿದೆ.

ಚುನಾವಣೆಯಲ್ಲಿ ಮತದ ಮುದ್ರೆ ಒತ್ತಿರುವ ಕ್ಷೇತ್ರದ 13 ಲಕ್ಷಕ್ಕೂ ಅಧಿಕ ಮತದಾರರು ಯಾವ ಪಕ್ಷದ ಅಭ್ಯರ್ಥಿಯ ಕೊರಳಿಗೆ ಜಯದಮಾಲೆ ಹಾಕಲಿದ್ದಾರೆ ಎನ್ನುವುದಕ್ಕೆ ಇಂದು ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next