Advertisement

ಶ್ರದ್ಧಾ-ಭಕ್ತಿಯಿಂದ ಮೊಹರಂ ಆಚರಣೆ

10:44 AM Sep 11, 2019 | Suhan S |

ಗದಗ: ಭಾವೈಕ್ಯತೆ ಸಂಕೇತವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಹಿಂದೂ- ಮುಸ್ಲಿಮರು ಒಟ್ಟಾಗಿ ಶ್ರದ್ಧಾ- ಭಕ್ತಿಯಿಂದ ಆಚರಿಸಿದರು. ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಮೊಮ್ಮಕ್ಕಳಾದ ಹಜರತ್‌ ಹಸನ್‌-ಹುಸೇನ್‌ ಅವರ ತ್ಯಾಗ, ಬಲಿದಾನ ಸ್ಮರಿಸುವ ಮೂಲಕ ನಮನ ಸಲ್ಲಿಸಲಾಯಿತು.

Advertisement

ನಗರದ ಮಾಬುಸುಬಾನಿ ಕಟ್ಟೆ, ಜುಮ್ಮಾ ಮಸೀದಿ, ದಖನಿ ಗಲ್ಲಿ, ಒಕ್ಕಲಗೇರಿ ಓಣಿ, ಖಾನ್‌ತೋಟ, ಮುಕ್ತುಂ ಗರಡಿ, ಹಳೇ ಕಚೇರಿ, ಹನುಮನ ಗರಡಿ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪವಿತ್ರ ಪಂಜಾ ಹಾಗೂ ಡೋಲಿಗಳ ಮೆರವಣಿಗೆ ನಡೆಯಿತು.

ನಗರದ ಕಾಗದಗೇರಿ ಓಣಿಯಲ್ಲಿರುವ ಬಾವಿ ಹಾಗೂ ಮುಕ್ತುಮ್‌ ಬಾವಡಿಯಲ್ಲಿ ಮೊಹರಂ ಆಚರಣೆ ಭಾಗವಾಗಿ ಹತ್ತಾರು ಪವಿತ್ರ ತಾಬೂತ್‌ಗಳು ಸಮಾವೇಶಗೊಂಡವು. ಬಳಿಕ ವಿಧಿವತ್ತಾಗಿ ಪಾಂಜಾಗಳನ್ನು ಹೊಳೆಗೆ ಕಳುಹಿಸಲಾಯಿತು. ಈ ವೇಳೆ ನಡೆದ ಝುಲೂಸ್‌ನಲ್ಲಿ

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ವೇಷಧಾರಿಗಳು ಹಾಗೂ ಕಲಾ ತಂಡಗಳ ಕುಣಿತ ಮೆರವಣಿಗೆಗೆ ಮೆರಗು ನೀಡಿತು.

ತಾಲೂಕಿನ ಶ್ಯಾಗೋಟಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಹುತೇಕ ಹಿಂದೂಗಳು ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.

Advertisement

ಗ್ರಾಮೀಣ ಭಾಗದ ಹಲವೆಡೆ ಕೆಂಡ ಹಾಯುವ ಧಾರ್ಮಿಕ ಕಾರ್ಯಕ್ರಮವು ನೆರವೇರಿಸಲಾಯಿತು. ಈ ಸಂದರ್ಭ ಅನೇಕರು ಯ್ಯೋಮೆ ಅಶುರಾ (ಉಪವಾಸ) ಆಚರಿಸಿದರು. ಕಳೆದೈದು ದಿನಗಳಿಂದ ಹಸನ್‌-ಹುಸೇನ್‌ರ ತ್ಯಾಗ-ಬಲಿದಾನ ಸ್ಮರಿಸುವ ಕಾರ್ಯಕ್ರಮ ನಡೆದವು.

ಪಂಜಾ ಕೂರಿಸಿದ್ದ ಕಟ್ಟೆಗಳಲ್ಲಿ ಕವಡೆ-ಊದು ಹಾಕಿ, ಹೂವಿನಿಂದ ಅಲಂಕರಿಸಿ, ಮಗ್ದುಮ್ ಸಕ್ಕರೆ ಫಾತೆಹಾ ಅರ್ಪಿಸಲಾಯಿತು. ಯುವಕರು ಹಾಗೂ ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ, ಅಳ್ಳೊಳ್ಳಿ ಬಾವಾ, ಹುಲಿ ವೇಷ ಧರಿಸಿ ಅಲಾಹಿ ಕುಣಿತದಲ್ಲಿ ಪಾಲ್ಗೊಳ್ಳುವ ಮೂಲಕ ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next