Advertisement

ತ್ಯಾಜ್ಯ ನೀರು ಶೇಖರಣ ಕೇಂದ್ರವಾಗುತ್ತಿರುವ ಮೊಗವೀರಪಟ್ಣ  ಬೀಚ್‌

10:32 AM May 27, 2018 | Team Udayavani |

ಉಳ್ಳಾಲ : ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿರುವ ಉಳ್ಳಾಲ ಮೊಗವೀರಪಟ್ಣ ಬೀಚ್‌ ನಗರದ ತ್ಯಾಜ್ಯ ನೀರಿನ ಶೇಖರಣ ಕೇಂದ್ರವಾಗಿ ಮಾರ್ಪಾಡಾಗುತ್ತಿದ್ದು, ಸ್ಥಳೀಯರು ಸಹಿತ ಬೀಚ್‌ಗೆ ಬರುವ ಪ್ರವಾಸಿಗರೂ ಸಾಂಕ್ರಾಮಿಕ ರೋಗಹರಡುವ ಭೀತಿಯಲ್ಲಿದ್ದಾರೆ.

Advertisement

ಉಳ್ಳಾಲದಲ್ಲಿ ಧಾರ್ಮಿಕ ಪ್ರವಾಸೋದ್ಯಮದೊಂದಿಗೆ ನೈಸರ್ಗಿಕವಾದ ಬೀಚ್‌ ಪ್ರವಾಸೋದ್ಯಮವೂ ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲೂ ಈ ವ್ಯಾಪ್ತಿಯ ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ದೇಶ ವಿದೇಶೀಯ ಪ್ರವಾಸಿಗರೂ ಉಳ್ಳಾಲದ ಮೊಗವೀರಪಟ್ಣ ಬೀಚ್‌ಗೆ ಒಮ್ಮೆ ಭೇಟಿ ನೀಡಿಯೇ ತೆರಳುತ್ತಾರೆ. ಆದರೆ ಬೀಚ್‌ ಪ್ರವಾಸೋದ್ಯಮ ಅಭಿವೃದ್ಧಿ ನನೆಗುದಿಗೆ ಬಿದ್ದಿದ್ದರೆ, ಇನ್ನೊಂದೆಡೆ ಬೀಚ್‌ ಸೌಂದರ್ಯ ಕೆಡಿಸುವ ತ್ಯಾಜ್ಯ ಡಂಪಿಂಗ್‌ ಮತ್ತು ತ್ಯಾಜ್ಯ ನೀರು ಶೇಖರಣೆಗೊಂಡು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಉಳ್ಳಾಲದ ತ್ಯಾಜ್ಯ ನೀರು
ಉಳ್ಳಾಲ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆಯಾಗುತ್ತಿದ್ದರೂ, ಈವರೆಗೆ ಒಳಚರಂಡಿ ಯೋಜನೆ ಸಮರ್ಪಕವಾಗಿ ಅಭಿವೃದ್ಧಿಗೊಂಡಿಲ್ಲ. ಹೆಚ್ಚುತ್ತಿರುವ ವಸತಿ ಸಂಕೀರ್ಣ, ಅಂಗಡಿ ಮುಗ್ಗಟ್ಟುಗಳು ಹೊಟೇಲ್‌ನ ತ್ಯಾಜ್ಯ ನೀರು ನೇರವಾಗಿ ಮೊಗವೀರಪಟ್ಣ ಬಳಿಯ ಬೀಚ್‌ನ ಖಾಲಿ ಪ್ರದೇಶಕ್ಕೆ ಹರಿದು ಶೇಖರಣೆಗೊಂಡಿದೆ. ಸ್ಥಳೀಯವಾಗಿ ಜೀವರಕ್ಷಕ ಈಜುಗಾರರ ಸಂಘ, ಮತ್ತು ಮನೆಗಳು ಈ ಪರಿಸರದಲ್ಲಿ ಇದ್ದು, ಒಂದು ಭಾಗದಲ್ಲಿ ತ್ಯಾಜ್ಯ ನೀರು ನಿಂತಿದೆ.

ತ್ಯಾಜ್ಯ ನೀರು ಸಂಗ್ರಹಣೆ ಟ್ಯಾಂಕ್‌ ಮುಳುಗಡೆ
ದೈನಂದಿನ ತ್ಯಾಜ್ಯ ನೀರು ಹರಿಯುವ ಭರದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಉಳ್ಳಾಲ ನಗರ ಸಭೆ ನಿರ್ಮಿಸಿರುವ ಕಾಂಕ್ರೀಟ್‌ ಟ್ಯಾಂಕ್‌ ತ್ಯಾಜ್ಯ ನೀರಿನಲ್ಲಿ ಸಂಪೂರ್ಣ ಮುಳುಗಿದೆ. ಟ್ಯಾಂಕ್‌ ನಿರ್ಮಾಣದ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಭೂಮಿಯೊಳಗೆ ಸೇರದೆ, ಕಾಂಕ್ರೀಟ್‌ನಲ್ಲಿ ಶೇಖರಣೆಯಾಗಿದ್ದು, ನೀರು ಹೆಚ್ಚಾಗಿ ಟ್ಯಾಂಕ್‌ ಮುಳುಗಡೆಯಾಗಿದೆ ಎನ್ನುತ್ತಾರೆ ಸ್ಥಳೀಯ ಜೀವರಕ್ಷಕ ಈಜುಗಾರ ಸಂಘದ ಪ್ರವೀಣ್‌ ಕೋಟ್ಯಾನ್‌.

ಮಳೆಗಾಲ ಎಚ್ಚರಿಕೆ ಅಗತ್ಯ
ಒಂದೆಡೆ ಬೀಚ್‌ ಇನ್ನೊಂದೆಡೆ ತ್ಯಾಜ್ಯ ನೀರು. ಮಳೆಗಾಲ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ತ್ಯಾಜ್ಯ ನೀರು ಬೀಚ್‌ಗೆ ಹರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರವೀಣ್‌. ಒಂದೆಡೆ ಸೊಳ್ಳೆ ಭೀತಿ, ಇನ್ನೊಂದೆಡೆ ತ್ಯಾಜ್ಯ ನೀರು ಸ್ಥಳೀಯ ಮನೆಗಳಿಗೆ ಮತ್ತು ಸಂಘದ ಕಟ್ಟಡಕ್ಕೆ ನುಗ್ಗುವ ಭೀತಿಯಲ್ಲಿದ್ದು, ಜನಪ್ರತಿನಿಧಿಗಳು ಮತ್ತು ಸ್ಥಳಿಯಾಡಳಿತ ಸ್ಪಂದಿಸಬೇಕಾಗಿದೆ.

Advertisement

ತಾತ್ಕಾಲಿಕ ಪರಿಹಾರಕ್ಕೆ ಕ್ರಮ
ತ್ಯಾಜ್ಯ ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ದೂರು ಬಂದಿದೆ. ಶಾಶ್ವತ ಪರಿಹಾರಕ್ಕೆ ದೊಡ್ಡ ಮಟ್ಟದ ಅನುದಾನದ ಅಗತ್ಯವಿರುವುದರಿಂದ ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದು, ಅವರು ಯೋಜನೆ ರೂಪಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರಕ್ಕೆ ಎಂಜಿನಿಯರ್‌ ಬಳಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.
 - ಹುಸೈನ್‌ ಕುಂಇಮೋನು,
    ಅಧ್ಯಕ್ಷರು, ಉಳ್ಳಾಲ ನಗರಸಭೆ 

ಹಲವು ಬಾರಿ ನಗರ ಸಭೆಗೆ ಮನವಿ
ಮೊಗವೀರಪಟ್ಣ ಬೀಚ್‌ ಸಮೀಪ ತ್ಯಾಜ್ಯ ನೀರು ಸಂಗ್ರಹಣೆಯಾಗುತ್ತಿರುವ ವಿಚಾರದಲ್ಲಿ ಹಲವು ಬಾರಿ ಉಳ್ಳಾಲ ನಗರಸಭೆಗೆ ಮನವಿ ಮಾಡಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ಒಂದು ವರ್ಷದ ಹಿಂದೆ ಅಧಿಕಾರಿಗಳು, ನಗರಸಭಾ ಅಧ್ಯಕ್ಷರು ಸಹಿತ ಸ್ಥಳೀಯ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಸಿ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ.
 - ಮೋಹನ್‌ ಪುತ್ರನ್‌,
ಅಧ್ಯಕ್ಷರು, ಜೀವರಕ್ಷಕ ಈಜುಗಾರ ಸಂಘ

ಸೊಳ್ಳೆಗಳ ಹಾವಳಿ
ಬೇಸಗೆಯಲ್ಲಿ ಸೊಳ್ಳೆಗಳ ಹಾವಳಿಯಿಂದಾಗಿ ಇಲ್ಲಿ ವಾಸಿಸುವುದೇ ಕಷ್ಟಕರವಾಗಿದೆ. ನಮ್ಮ ಹಣದಿಂದ ಸುಣ್ಣದ ಹುಡಿ ಹಾಕಿ ಸೊಳ್ಳೆ ಬರದಂತೆ ಮುನ್ನಚ್ಚೆರಿಕೆ ಕ್ರಮಕೈಗೊಳ್ಳುತ್ತಿದ್ದೇವೆ. ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸೊಳ್ಳೆ ಹೆಚ್ಚಾಗಿ ಪ್ರವಾಸಿಗರು ಸಂಜೆ ಹೊತ್ತು ಬೀಚ್‌ ಬಳಿ ಕುಳಿತುಕೊಳ್ಳುವುದು ಕಡಿಮೆ ಮಾಡಿದ್ದಾರೆ.
ಸುಧೀರ್‌ ಸುವರ್ಣ,
ಮೊಗವೀರಪಟ್ಣ ನಿವಾಸಿ

ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next