Advertisement

ಮೋದಿ ತತ್ವ ದೇಶಕ್ಕೆ ಮಾರಕ: ಖರ್ಗೆ

11:26 AM Mar 29, 2019 | pallavi |

ಜೇವರ್ಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಯಮಿಗಳ ಪರವಾಗಿದ್ದು, ಬಡವರ ಪರವಾಗಿಲ್ಲ. ಇವರ ಈ ತತ್ವ ದೇಶಕ್ಕೆ ಮಾರಕವಾಗಿದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ, ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಪಟ್ಟಣದ ಮಹಿಬೂಬ ಫಂಕ್ಷನ್‌ಹಾಲ್‌ನಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸಾರ್ವಜನಿಕರು, ರೈತರು, ವ್ಯಾಪಾರಸ್ಥರ ಸಂಕಷ್ಟ ಹೆಚ್ಚಿದ್ದು, ದೇಶ  ದಿವಾಳಿಯತ್ತ ಸಾಗಿದೆ. ಆರ್ಥಿಕ ವಲಯ, ಶೇರು ಮಾರುಕಟ್ಟೆ ವ್ಯಾಪಾರ-ವಹಿವಾಟು ಕಡಿಮೆಯಾಗಿದೆ ಎಂದು ಹೇಳಿದರು.

ಕಳೆದ 60 ವರ್ಷದಿಂದ ಕಾಂಗ್ರೆಸ್‌ ಪಕ್ಷ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ರಸ್ತೆ, ಶಾಲೆ, ಬೀದಿ ದೀಪಗಳನ್ನು ಅಳವಡಿಸಿದೆ. ಇದನ್ನೆಲ್ಲ ಬಿಜೆಪಿ ಮಾಡಿಲ್ಲ. ಮಹಾತ್ಮಾ ಗಾಂಧಿ , ಸುಭಾಶ್ಚಂದ್ರ ಬೋಸ್‌, ಪಂಡಿತ ಜವಾಹರಲಾಲ್‌ ನೆಹರು ಸೇರಿದಂತೆ ಅನೇಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟರು. ಆದರೆ ಬಿಜೆಪಿಯವರ್ಯಾರು ಪ್ರಾಣಬಿಟ್ಟಿಲ್ಲ
ಎಂದರು.

ದೇಶಕ್ಕೆ ಮೋದಿಯಿಂದ ಗಡಾಂತರವಿದೆ. ಏಕೆಂದರೆ ನೋಟು ಬ್ಯಾನ್‌ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರು. ಶ್ರೀಮಂತರಿಗೆ ಯಾವುದೇ ತೊಂದರೆ ಆಗಲೇ ಇಲ್ಲ. ಚಪ್ಪರದಲ್ಲಿಟ್ಟು, ಗಡಿಗೆಯಲ್ಲಿಟ್ಟ ಹಣವನ್ನು ಬದಲಿಸಲು ಬ್ಯಾಂಕಿನ ಎದುರು ಸರತಿಯಲ್ಲಿ ನಿಂತು ಸುಮಾರು 93 ಜನ ಬಡವರೇ ಸತ್ತರು. ಶ್ರೀಮಂತರು ಒಬ್ಬರೂ
ಸಾಯಲಿಲ್ಲ. ಅಲ್ಲದೇ ಉದ್ಯಮಿಗಳಾದ ನೀರವ ಮೋದಿ, ವಿಜಯ ಮಲ್ಯ, ಅಂಬಾನಿ ಅಂತವರಿಗೆ ಲಾಭ ಮಾಡಿಕೊಟ್ಟು ಹೊರದೇಶಕ್ಕೆ ಪರಾರಿಯಾಗಲು ಸಹಕರಿಸಿದರು ಎಂದು ಆರೋಪಿಸಿದರು.

ನಾನು ಕಲಬುರಗಿ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದೇನೆ. ಹೈದ್ರಾಬಾದ ಕರ್ನಾಟಕ ಭಾಗಕ್ಕೆ 371ನೇ (ಜೆ) ಕಲಂ ಜಾರಿಗೆ ತಂದಿದ್ದೇನೆ. ಇಎಎಸ್‌ ಆಸ್ಪತ್ರೆ, ಕೇಂದ್ರೀಯ ವಿಶ್ವವಿದ್ಯಾಲಯ, ಮೆಡಿಕಲ್‌ ಕಾಲೇಜು, ಜಯದೇವ ಆಸ್ಪತ್ರೆ, 23 ರೈಲುಗಳ ಸಂಚಾರ,
ಚಾಮನೂರ ಮತ್ತು ನರಿಬೋಳ ಬ್ರಿಡ್ಜ್, ಸರಡಗಿ ಬ್ರಿಡ್ಜ್, ರಾಷ್ಟ್ರೀಯ ಹೆದ್ದಾರಿ, ಶಹಾಪುರ ಜೆಬಿಸಿ ಕಾಲುವೆ, ಜೇವರ್ಗಿ ಕಾಲುವೆ ಇವೆಲ್ಲವನ್ನು ಮಾಡಿದ್ದೇನೆ. ಆದ್ದರಿಂದ ನನಗೆ ಮತ ನೀಡಿ ಎಂದು ಕೋರಿದರು.

Advertisement

ಶಾಸಕ, ದೆಹಲಿ ವಿಶೇಷ ಪ್ರತಿನಿಧಿ  ಡಾ| ಅಜಯಸಿಂಗ ಮಾತನಾಡಿ, ಕಲಬುರಗಿ ಅಭಿವೃದ್ಧಿಯತ್ತ ಸಾಗಲು ಮಲ್ಲಿಕಾರ್ಜುನ ಖರ್ಗೆ ಕಾರಣ. ಅವರು ಅಭಿವೃದ್ಧಿ ಮಾಡಿದ್ದು ನಮ್ಮ ಕಣ್ಮುಂದೆ ಇದೆ. ಅವರಿಗೆ ಮೋದಿ ಅವರನ್ನು ಎದುರಿಸುವ ಶಕ್ತಿಯಿದೆ. ಮೂರನೇ
ಬಾರಿಯೂ ಎರಡು ಲಕ್ಷಕ್ಕಿಂತಲೂ ಹೆಚ್ಚು ಮತದಿಂದ ಅವರನ್ನು ಸಂಸತ್‌ಗೆ ಆಯ್ಕೆ ಮಾಡೋಣ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಲಂಪ್ರಭು ಪಾಟೀಲ ಮಾತನಾಡಿ, ಅಣ್ಣ ಬಸವಣ್ಣನವರ ಸಾರವಾದ “ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ’ ಎನ್ನುವ
ವಚನದಂತೆ ಮೋದಿ ನಡೆದುಕೊಂಡಿಲ್ಲ. ಅವರು ಸುಳ್ಳು ಹೇಳಿದ್ದಾರೆ. ತಮ್ಮನ್ನು ತಾವೇ ವರ್ಣಿಸಿಕೊಳ್ಳುತ್ತಿದ್ದಾರೆ. ಇದೇ ಅಂತರಂಗದ ಸಾಧನೆಯೇ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ಇಕ್ಬಾಲ್‌ ಅಹ್ಮದ್‌ ಸರಡಗಿ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪ ಸಲದಾಪುರ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ರಾಜಶೇಖರ ಸೀರಿ, ಶಾಂತಪ್ಪ ಕೂಡಲಗಿ, ಶೌಕತಲಿ ಆಲೂರ, ಚಂದ್ರಶೇಖರ ಹರನಾಳ, ಕಾಸೀಂಪಟೇಲ ಮುದಬಾಳ, ರುಕಂಪಟೇಲ ಇಜೇರಿ,
ಸಿದ್ಧಲಿಂಗರಡ್ಡಿ ಇಟಗಾ, ಸಿದ್ರಾಮಪ್ಪಗೌಡ ಹರನೂರ, ಮಹಾದೇವಪ್ಪ ನೀರಲಕೋಡ, ಮರೆಪ್ಪ ಸರಡಗಿ, ನೀಲಕಂಠ ಆವಂಟಿ, ರವಿ ಕೋಳಕೂರ, ಶ್ರೀಮಂತ ಧನ್ನಕರ, ಬಸಣ್ಣ ಸರಕಾರ, ಭೀಮಶಂಕರ ಬಿಲ್ಲಾಡ, ಶಂಕರಲಿಂಗ ರ್ಯಾವನೂರ, ಲಿಂಗರಾಜ ಮಾಸ್ಟರ, ಶರಣು ಗುತ್ತೇದಾರ, ಸಂತೋಷ ಭಾವಿ, ಸಂತೋಷ ಚನ್ನೂರ, ಹಾಗೂ ಇನ್ನಿತರರು ಇದ್ದರು.

ಮನೆ ಕಟ್ಟಿದವರು ನಾವು, ಸುಣ್ಣ-ಬಣ್ಣ ಹಚ್ಚಿದ್ದೇ ದೊಡ್ಡ ಸಾಧನೆಯೇ?
ಕಲಬುರಗಿ: ಕಳೆದ 70 ವರ್ಷಗಳಲ್ಲಿ ಸಾಕ್ಷತರೆ, ವೈದ್ಯಕೀಯ, ವಿದ್ಯುತ್‌ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಧನೆ ಕೈಗೊಂಡು ದೇಶದ ಅಭಿವೃದ್ಧಿಯ ಮನೆ ಕಟ್ಟಿದ್ದರೆ, ಮೋದಿ ಈಗ ಬಂದು ಸುಣ್ಣ-ಬಣ್ಣ ಹಚ್ಚುತ್ತಿರುವುದನ್ನೇ ಪ್ರಧಾನಿ ದೊಡ್ಡದಾಗಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಹ್ಯಾಕಾಶದಿಂದಲೇ ದೇಶದ ಮೇಲೆ ಗೂಢಚಾರಿಕೆ ನಡೆಸುವಂತಹ ಉಪಗ್ರಹಗಳನ್ನು ಹೊಡೆದುರುಳಿರುವ ಎ-ಸ್ಯಾಟ್‌ನ್ನು ದೇಶದಲ್ಲಿ 2012ರಲ್ಲಿಯೇ ರೂಪಿಸಿಡಲಾಗಿತ್ತು. ಈಗ ಅದನ್ನು ಡಿಆರ್‌ ಡಿಒ ವಿಜ್ಞಾನಿಗಳು ಯಶಸ್ವಿ ಪರೀಕ್ಷೆ ನಡೆಸಿದ್ದಾರೆ. ಅಂತಹದ್ದರಲ್ಲಿ ಪ್ರಧಾನಿ ಸಾಧನೆ ಎಲ್ಲಿ ಬಂತು, ಸೈನ್ಯಾಧಿಕಾರಿಗಳು ಯಾರದ್ದೇ ಸರ್ಕಾರ ಇರಲಿ, ತಮ್ಮ ಸೇನಾ ಸೇವೆ ಹಾಗೂ ಕಾರ್ಯಾಚರಣೆ ಮುಂದುವರಿಸುತ್ತಲೇ ಇರ್ತಾರೆ. ಆದರೆ ಅದನ್ನು ತಮ್ಮದೆಂದು ಹೇಳಿರುವ ಮೋದಿ ಮಾತು ಕಾಂಗ್ರೆಸ್‌ನವರು ಕಟ್ಟಿಸಿದ ಮನೆಗೆ ಸುಣ್ಣ-ಬಣ್ಣ ಬಳೆದಂತಿದೆ ಎಂದು ವ್ಯಂಗ್ಯವಾಡಿದರು. ಭಾರತೀಯ ಸೇನೆ, ಡಿಆರ್‌ಡಿಎ ,ಇಸ್ರೋ ಸಂಸ್ಥೆಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ. ಇಂತಹ ಸಂಸ್ಥೆಗಳನ್ನು ಹುಟ್ಟು ಹಾಕಿದ ಮಾಜಿ ಪ್ರಧಾನಿ ಜವಾಹರಲಾಲ ನೆಹರು, ಇಂದಿರಾಗಾಂಧಿ ಅವರ ಹೆಸರನ್ನು ಒಮ್ಮೆಯಾದರೂ ಪ್ರಸ್ತಾಪಿಸಿದ್ದಾರೆಯೇ ಎಂದು ಕಿಡಿಕಾರಿದ ಖರ್ಗೆ, 1947ರಿಂದ ಕೈಗೊಂಡ ಶಿಕ್ಷಣ ಸುಧಾರಣೆ, ಆಹಾರ ಉತ್ಪಾದನೆ ದ್ವಿಗುಣ, ಜೀವನ ಮಟ್ಟ ಸುಧಾರಣೆ ಕಾರ್ಯಗಳನ್ನು ಮೋದಿಯವರು ಮಾಡಿದ್ದಾರೆಯೇ? ಇಷ್ಟೆಲ್ಲ ಮಾಡಿದ್ದು ಗೊತ್ತಿದ್ದರೂ ಸುಮ್ಮನೆ ಬಣ್ಣದ ಮಾತುಗಳನ್ನಾಡಿ ಜನರ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಮೋದಿಗೆ ತಿರುಗೇಟು ನೀಡಿದರು.

ಹಲವರು ಸೇರ್ಪಡೆ: ಈಗಾಗಲೇ ಮಾಜಿ ಸಚಿವ ಕೆ.ಬಿ. ಶಾಣಪ್ಪ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅದೇ ರೀತಿ ಮಾಜಿ ಸಚಿವ ಬಾಬುರಾವ್‌ ಚವ್ಹಾಣ ಹಾಗೂ ಮುಖಂಡ ಸುಭಾಷ ರಾಠೊಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರಲ್ಲದೇ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಅಧಿ ಕಾರಕ್ಕೆ ಬಂದ ತಕ್ಷಣವೇ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿದ್ದರು. ಈ ಮಾತನ್ನು ಈಡೇರಿಸಲಿಲ್ಲ. ನಮ್ಮ ಆಡಳಿತದ ಅವಧಿಯಲ್ಲಿ ಡಾಕ್ಟರ್‌, ಇಂಜಿನಿಯರ್‌ ಶಿಕ್ಷಣ ಕಲಿತವರು ಇಂದು ನಮ್ಮ
ವಿರುದ್ಧವೇ ಮಾತನಾಡುತ್ತಿದ್ದಾರೆ. ಇದು ಯಾವ ನ್ಯಾಯ? ಇವರೆಲ್ಲ ಸೇರಿ ಪ್ರಜಾಪ್ರಭುತ್ವ ನಾಶ ಮಾಡಲು ಹೊರಾಟಿದ್ದಾರೆ.

ಸಂವಿಧಾನ ಬದಾಲಾವಣೆ ಮಾಡಲು ನಾವು ಬಂದಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿದಾಗಲೂ ಪ್ರಧಾನಿ ತುಟಿ ಬಿಚ್ಚಲಿಲ್ಲ. ಹೀಗಾಗಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್‌ ಬೆಂಬಲಿಸಿ.
ಡಾ| ಮಲ್ಲಿಕಾರ್ಜುನ ಖರ್ಗೆ, ಸಂಸದ, ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next