Advertisement

ಮೋದಿ ದೇಶದ ದೊಡ್ಡ ಸಂತ: ಡಾ|ಮೂಜಗು

06:17 PM Dec 14, 2021 | Team Udayavani |

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ಕ್ಷೇತ್ರ ಅಭಿವೃದ್ಧಿಗೊಳಿಸುವ ಸಂಕಲ್ಪ ತೊಟ್ಟಿದ್ದರು. ಅದರಂತೆ 351 ವರ್ಷಗಳ ಬಳಿಕ ಕಾಶಿ ಅಭಿವೃದ್ಧಿ ಕಾಣುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

Advertisement

ಇಲ್ಲಿನ ಮೂರುಸಾವಿರಮಠದಲ್ಲಿ ಸೋಮವಾರ ಭವ್ಯಕಾಶಿ, ದಿವ್ಯಕಾಶಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಾಶಿ ಅಭಿವೃದ್ಧಿ ಘೋಷಣೆ ಮಾಡಿದ ಸಂದರ್ಭದಲ್ಲಿ ಅನೇಕರು ಇದು ಅಸಾಧ್ಯ ಎಂದಿದ್ದರು. ಆದರೆ ತೊಟ್ಟಿದ್ದ ಸಂಕಲ್ಪವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ಮುಂದಾಗಿದ್ದಾರೆ. ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ. ಕಾಶಿ ಅಭಿವೃದ್ಧಿ ವಿಚಾರದಲ್ಲಿ ನುಡಿದಂತೆ ನಡೆದುಕೊಂಡಿದ್ದಾರೆ ಎಂದರು.

ಮೂರುಸಾವಿರಮಠದ ಜಗದ್ಗುರು ಡಾ|ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ದೊಡ್ಡ ಸಂತ. ಇಂತಹ ವ್ಯಕ್ತಿಗಳು ಶತಮಾನಕ್ಕೊಬ್ಬರು ಹುಟ್ಟುತ್ತಾರೆ. ದೇಶದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಿರುವ ಅಪ್ರತಿಮ ದೇಶ ಭಕ್ತರಾಗಿದ್ದಾರೆ. ಜನಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಹಿಂದೆ ಘೋಷಿಸಿದಂತೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.

ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೆ ಇಕ್ಕೆಲ ಜಾಗದಲ್ಲಿ ಲಕ್ಷಾಂತರ ಜನರು ಓಡಾಡುವಂತಹ ಪರಿಸ್ಥಿತಿಯಿತ್ತು. ಎರಡೂ ಕಡೆಯೂ ಅಂಗಡಿ ಮುಗ್ಗಟ್ಟುಗಳಿಂದ ರಸ್ತೆಯೇ ಇಲ್ಲದಂತಾಗಿತ್ತು. ಇದೀಗ ಅವೆಲ್ಲವುಗಳನ್ನೂ ತೆರವುಗೊಳಿಸಿ ಕ್ಷೇತ್ರದ ಅಭಿವೃದ್ಧಿಯಾಗುತ್ತಿದೆ. ನಿತ್ಯವೂ ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ಕೊಡುತ್ತಿರುವ ಪವಿತ್ರ ಕ್ಷೇತ್ರವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರವಾಸಿಗರನ್ನು, ಭಕ್ತರನ್ನು ಸೆಳೆಯಲಿದೆ. ಈ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ
ಕಾಶಿಯಿಂದ ಆಹ್ವಾನ ಬಂದಿತ್ತು. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಲಿಲ್ಲ ಎಂದರು.

ಕಾಶಿ ಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಷಣದ ನೇರ ಪ್ರಸಾರದ ವ್ಯವಸ್ಥೆ ವೀಕ್ಷಿಸಲು ಎಲ್‌ ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಮುಖಂಡರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ನಾರಾಯಣ ಜರತಾರಘರ, ನಾಗೇಶ ಕಲಬುರ್ಗಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಚಂದ್ರಶೇಖರ ಗೋಕಾಕ, ರಾಜು ಕೋರ್ಯಾಣಮಠ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next