Advertisement

ದೇಶದ ಮೇಲಿನ ದಾಳಿ ಸಹಿಸಲ್ಲ

01:38 AM Apr 22, 2019 | Team Udayavani |

ಹೊಸದಿಲ್ಲಿ: ತನ್ನ ಮೇಲೆ ದಾಳಿ ನಡೆದರೂ ಮೋದಿ ತಡೆದುಕೊಳ್ಳಬಲ್ಲ, ಆದರೆ ದೇಶದ ಮೇಲೆ ದಾಳಿ ನಡೆದರೆ ಸಹಿಸುವುದಿಲ್ಲ ಎಂಬುದು ಜನರಿಗೆ ಅರಿವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ರವಿವಾರ ಚುನಾವಣಾ ರ್ಯಾಲಿ ನಡೆಸಿ ಅವರು ಮಾತನಾಡಿದ್ದಾರೆ.

Advertisement

ಪುಲ್ವಾಮಾದಲ್ಲಿ ದಾಳಿ ನಡೆದಾಗ ಮೋದಿ ಏನು ಮಾಡಬೇಕು ಎಂದು ದೇಶ ನಿರೀಕ್ಷಿಸುತ್ತಿತ್ತು? ಮುಂಬಯಿ ದಾಳಿ ನಡೆದಾಗ ಮನಮೋಹನ ಸಿಂಗ್‌ ಮಾಡಿದಂತೆ ನಾನೂ ಮಾಡಿದ್ದರೆ ದೇಶ ನನ್ನನ್ನು ಕ್ಷಮಿಸುತ್ತಿತ್ತೇ? ನಾನು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ನಮ್ಮ ಸೇನೆ ವಾಯು ದಾಳಿ ನಡೆಸಿತು. ಪಾಕಿಸ್ಥಾನ ಬಿಗಿ ಭದ್ರತೆ ಕೈಗೊಂಡಿತ್ತು. ಆದರೆ ನಾವು ಹನುಮಂತನನ್ನು ಆರಾಧಿಸುವುದರಿಂದ, ಯಶಸ್ಸು ಕಂಡಿದ್ದೇವೆ ಎಂದರು.

ವಾಯು ದಾಳಿ ಮಾಡಿದಾಗ ಸಾಕ್ಷ್ಯ ಕೇಳುತ್ತಿದ್ದ
ಕಾಂಗ್ರೆಸ್‌ಗೆ ಈ ಸಾಕ್ಷ್ಯ ಸಿಕ್ಕಿತೇ? ಅವರು ಸಾಕ್ಷ್ಯ ಕೇಳಿದ್ದಕ್ಕೆ ಜನ ಸಿಟ್ಟಾಗಿದ್ದಾರೆ. ಹೀಗಾಗಿ ಒಂದು ಹಾಗೂ ಎರಡನೇ ಹಂತದ ಮತದಾನದ ಅಅನಂತರ ಸಾಕ್ಷ್ಯ ಕೇಳುವುದನ್ನೇ ಅವರು ಬಿಟ್ಟಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ.

ಅಲ್ಲದೆ ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ಗುಜರಾತ್‌ನಲ್ಲಿ 1985ರಿಂದಲೂ ಯಾವುದೇ ಭದ್ರತಾ ಏರ್ಪಾಡನ್ನು ಕೇಂದ್ರ ಸರಕಾರ ಕೈಗೊಳ್ಳಲಿಲ್ಲ. ದೀಸಾದಲ್ಲಿ ಈಗ ಬೃಹತ್‌ ವಾಯುನೆಲೆಯನ್ನು ಸ್ಥಾಪಿಸಲಾಗು ತ್ತಿದೆ. 1985ರಿಂದಲೂ ಸೇನೆಗೆ ಹೋವಿಟ್ಜರ್‌ ಗನ್‌ಗಳನ್ನು ಕಾಂಗ್ರೆಸ್‌ ಸರಕಾರ ಒದಗಿಸಿರಲಿಲ್ಲ. ಆದರೆ ನಾವು ಈಗ ಸೇನೆಗೆ ಕೆ9 ವಜ್ರ ಹೋವಿಟ್ಜರ್‌ ಗನ್‌ಗಳನ್ನು ಒದಗಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ನಮ್ಮ ದೇಶ ಸ್ವಾತಂತ್ರ್ಯ ಪಡೆದ ಸಮಯದಲ್ಲೇ ಸ್ವಾತಂತ್ರ್ಯ ಪಡೆದಿದ್ದ ಸಣ್ಣ ದೇಶಗಳು ನಮಗಿಂತ ಅಭಿವೃದ್ಧಿಯಲ್ಲಿ ಮುಂದೆ ಸಾಗಿವೆ. ಆದರೆ ನಾವು ಹಿಂದುಳಿದಿದ್ದೇವೆ ಎಂದು ಅವರು ಟೀಕಿಸಿದ್ದಾರೆ. ಮೋದಿ ಪುನಃ ಅಧಿಕಾರಕ್ಕೇರಿದರೆ ಏನು ಮಾಡುತ್ತಾರೆ ಎಂಬುದು ಗೊತ್ತಿಲ್ಲ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಪವಾರ್‌ಗೆ ನಾನು ಏನು ಮಾಡುತ್ತೇನೆ ಎಂದು ಗೊತ್ತಿಲ್ಲ ಎಂದಾದ ಮೇಲೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಹೇಗೆ ಊಹಿಸಲು ಸಾಧ್ಯ ಎಂದಿದ್ದಾರೆ.

Advertisement

ಆ್ಯನಿಮೇಟೆಡ್‌ ವೀಡಿಯೋ ಬಿಡುಗಡೆ ಮಾಡಿದ ಬಿಜೆಪಿ
ಚುನಾವಣಾ ಪ್ರಚಾರಕ್ಕೆ ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಿರುವ ಬಿಜೆಪಿ ಈಗ ಆ್ಯನಿಮೇಟೆಡ್‌ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋಗಳಲ್ಲಿ ಕ್ರಿಕೆಟ್‌, ಕಬಡ್ಡಿ, ಚೆಸ್‌ ಹಾಗೂ ಇತರ ಕ್ರೀಡೆಗಳನ್ನು ಬಳಸಿಕೊಂಡು ವಿಪಕ್ಷಗಳನ್ನು ಟೀಕಿಸಲಾಗಿದೆ. ಈ ವಿಡಿಯೋಗಳನ್ನು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹಾಗೂ ಪಿಯೂಷ್‌ ಗೋಯೆಲ್‌ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಟ್ವಿಟರ್‌ ಖಾತೆಯಲ್ಲಿ ಇದು ಲಭ್ಯವಿದೆ. ಎಲ್ಲ ವೀಡಿಯೋ ಗಳಲ್ಲಿ ಪ್ರಧಾನಿ ಮೋದಿಯನ್ನು ಹೀರೋ ರೀತಿ ತೋರಿಸಲಾಗಿದೆ.

ಕಾಣೆಯಾದ ಎಂಪಿಗೆ ವಿದಾಯ ಹೇಳಿ
ಕ್ಷೇತ್ರದಲ್ಲಿ ಯಾರ ಕೈಗೂ ಸಿಗದೆ “ಕಾಣೆಯಾಗಿರುವ ಸಂಸದ’ ರಿಗೆ ಈ ಬಾರಿ ವಿದಾಯ ಹೇಳಿ ಅಮೇಠಿಯಿಂದ ಕಮಲವನ್ನು ದಿಲ್ಲಿಗೆ ಆಯ್ದು ಕಳುಹಿಸಿ ಎಂದು ಸಚಿವೆ ಸ್ಮತಿ ಇರಾನಿ ಅಮೇಠಿ ಮತದಾರರಿಗೆ ಕರೆ ನೀಡಿದ್ದಾರೆ. ರಾಹುಲ್‌ ಗಾಂಧಿ ಮೋದಿ ಯನ್ನು ಕಳ್ಳ ಎಂದು ಕರೆಯುತ್ತಾರೆ. ಆದರೂ ಮೋದಿ ಅಮೇಠಿಯ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ ಎಂದಿದ್ದಾ ರೆ.

ಮಸೀದಿ ಕೆಡವಿದ್ದಕ್ಕೆ ಹೆಮ್ಮೆಯಿದೆ
ಬಿಜೆಪಿ ಟಿಕೆಟ್‌ ಪಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಲೇ ಇರುವ ಭೋಪಾಲ್‌ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವುವಾಗ ನಾನೂ ಹೋಗಿದ್ದೆ. ಗೋಪುರದ ಮೇಲೆ ಹತ್ತಿ ಮಸೀದಿಯನ್ನು ಕೆಡವಿದ್ದೆ. ಬಾಬರಿ ಮಸೀದಿಯನ್ನು ಉರುಳಿಸಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಸಂದರ್ಶನವೊಂದರಲ್ಲಿ ಪ್ರಜ್ಞಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಚುನಾವಣಾ ಆಯೋಗ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ಮುಂಬಯಿ ದಾಳಿಯಲ್ಲಿ ಹುತಾತ್ಮರಾದ ಐಪಿಎಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಅವರ ಸಾವಿಗೆ ನನ್ನ ಶಾಪವೇ ಕಾರಣ ಎಂದು ಹೇಳಿಕೆ ನೀಡಿದ್ದ ಪ್ರಜ್ಞಾರಿಗೆ 2 ದಿನಗಳ ಹಿಂದಷ್ಟೇ ಆಯೋಗವು ಮೊದಲ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

ಪ್ರಜ್ಞಾ ಹೇಳಿಕೆಗೆ ಸಮೀರ್‌ ಕುಲಕರ್ಣಿ ಆಕ್ಷೇಪ: ನಾನು ಶಾಪ ಹಾಕಿದ್ದರಿಂದಲೇ ಎಟಿಎಸ್‌ ಮುಖ್ಯಸ್ಥ ಹೇಮಂತ ಕರ್ಕರೆ ಸಾವನ್ನಪ್ಪಿದ್ದಾರೆ ಎಂಬ ಪ್ರಜ್ಞಾ ಸಿಂಗ್‌ ಹೇಳಿಕೆಯನ್ನು, ಮಾಲೇಗಾಂವ್‌ ಸ್ಫೋಟಕ ಮತ್ತೂಬ್ಬ ಆರೋಪಿ ಸಮೀರ್‌ ಕುಲಕರ್ಣಿ ಖಂಡಿಸಿದ್ದಾರೆ. ಆದರೆ ಆಕೆಯ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಾಗಿ ಅವರು ಹೇಳಿದ್ದಾರೆ. ಹುತಾತ್ಮರ ಬಗ್ಗೆ ಯಾರೂ ಆ ರೀತಿಯ ಹೇಳಿಕೆ ನೀಡಬಾರದು. ನಾವು ಹಲವು ವರ್ಷಗಳವರೆಗೆ ಕಸ್ಟಡಿಯಲ್ಲಿದ್ದಾಗ ನಿರಂತರ ದೌರ್ಜನ್ಯ ಅನುಭವಿಸಿದ್ದೇವೆ. ಇದರ ಸಿಟ್ಟಲ್ಲಿ ಸಾಧ್ವಿ ಈ ಹೇಳಿಕೆ ನೀಡಿರಬಹುದು ಎಂದು ಸಮೀರ್‌ ಹೇಳಿದ್ದಾರೆ.

ನಿರ್ಮಲಾ ಪ್ರಚಾರ
ಕೇರಳದ ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಭಾರತ ಧರ್ಮ ಜನಸೇನಾ ಅಭ್ಯರ್ಥಿ ತುಷಾರ್‌ ವೆಳ್ಳಪಳ್ಳಿ ಪರವಾಗಿ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಚಾರ ನಡೆಸಿದ್ದಾರೆ. ತುಷಾರ್‌ಗೆ ಮತ ನೀಡುವ ಮೂಲಕ ದಿಲ್ಲಿಯಿಂದ ಹಠಾತ್ತನೆ ಧುಮುಕಿ ದವರು ನಮಗೆ ಅಗತ್ಯವಿಲ್ಲ ಎಂಬ ಸಂದೇಶವನ್ನು ಕಳುಹಿಸಿ ಎಂದು ಕರೆ ನೀಡಿದ್ದಾರೆ. ಕೇರಳ ಸರಕಾರ ಸಮಯಕ್ಕೆ ಸರಿಯಾಗಿ ಅಣೆಕಟ್ಟೆಯ ಗೇಟ್‌ ತೆರೆಯದೇ ಪ್ರವಾಹ ಪರಿಸ್ಥಿತಿ ತಲೆದೋರಿತು. ಪ್ರವಾಹ ಸನ್ನಿವೇಶದಲ್ಲಿ ಕೇಂದ್ರ ಸರಕಾರ ಸಹಾಯ ಮಾಡಿತು ಎಂದಿದ್ದಾರೆ.

ವಿಷವುಣಿಸಿ ಕೊಲ್ಲಲು ಯತ್ನ
ನನ್ನ ಪತಿ ಲಾಲು ಪ್ರಸಾದ್‌ ಯಾದವ್‌ಗೆ ಆಸ್ಪತ್ರೆಯಲ್ಲೇ ವಿಷವುಣಿಸಿ ಕೊಲ್ಲುವ ಸಂಚನ್ನು ಬಿಜೆಪಿ ಮಾಡುತ್ತಿದೆ ಎಂದು ರಾಬ್ರಿ ದೇವಿ ಆರೋಪ ಮಾಡಿದ್ದಾರೆ. ಕೇಂದ್ರ ಸರಕಾರ, ಬಿಹಾರ ಸರಕಾರವು ನಮ್ಮ ಇಡೀ ಕುಟುಂಬ ವನ್ನೇ ಕೊಲ್ಲುವುದಿದ್ದರೂ ಕೊಲ್ಲಲಿ. ಆದರೆ, ನಿಮ್ಮ ಸರ್ವಾ ಧಿಕಾರವನ್ನು ಯಾರೂ ಒಪ್ಪುವುದಿಲ್ಲ ಎಂದಿದ್ದಾರೆ. ಆದರೆ ಇವರ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.

ಸುಮಿತ್ರಾ ಮಹಾಜನ್‌ ಕ್ಷೇತ್ರಕ್ಕೆ ಲಲ್ವಾನಿ
ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ಕ್ಷೇತ್ರವಾದ ಇಂದೋರ್‌ನಲ್ಲಿ ಯಾರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಕುತೂಹಲಕ್ಕೆ ಬಿಜೆಪಿ ತೆರೆಎಳೆದಿದೆ. ಈ ಕ್ಷೇತ್ರದಲ್ಲಿ ಇಂದೋರ್‌ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಶಂಕರ್‌ ಲಲ್ವಾನಿ ಅವರನ್ನು ಕಣಕ್ಕಿಳಿಸಿದೆ. ರವಿವಾರ ಒಟ್ಟು 7 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸಚಿವ ಹದೀìಪ್‌ ಸಿಂಗ್‌ ಪುರಿ ಅವರಿಗೆ ಅಮೃತಸರದ ಟಿಕೆಟ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next