Advertisement

ಮತ ಎಣಿಕೆ ಕೇಂದ್ರ-ಸ್ಟ್ರಾಂಗ್‌ ರೂಮ್‌ ಪರಿಶೀಲನೆ

12:47 PM Apr 09, 2019 | Team Udayavani |
ಬೆಳಗಾವಿ: ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗುತ್ತಿರುವ ನಗರದ ಆರ್‌ಪಿಡಿ ಮಹಾವಿದ್ಯಾಲಯಕ್ಕೆ ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ರಾಜೀವ್‌ಚಂದ್ರ ದುಬೆ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್‌ ಆರ್‌. ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮತ ಎಣಿಕೆ ಕೊಠಡಿಗಳು ಹಾಗೂ ಮತಯಂತ್ರಗಳನ್ನು ಇರಿಸುವ ಸ್ಟ್ರಾಂಗ್‌ ರೂಮ್‌ ಗಳನ್ನು ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರವೇ ನಿರ್ಮಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಕೊಠಡಿಗಳು ಹಾಗೂ ಸ್ಟ್ರಾಂಗ್‌ ರೂಮ್‌ ನಿರ್ಮಾಣ ಕೆಲಸ ಪರಿಶೀಲಿಸಿದ ಅವರು, ಮತ ಎಣಿಕೆ ದಿನ ಭದ್ರತೆ ಸೇರಿದಂತೆ ಯಾವುದೇ ರೀತಿಯ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದರು.
ಈ ಬಾರಿ ಹೆಚ್ಚುವರಿ ಬ್ಯಾಲೆಟ್‌ ಯುನಿಟ್‌ಗಳನ್ನು ಬಳಸಬೇಕಿರುವುದರಿಂದ ಅಗತ್ಯಕ್ಕೆ ಅನುಸಾರವಾಗಿ ಇನ್ನಷ್ಟು ಕೊಠಡಿಗಳನ್ನು ಸಜ್ಜುಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್‌ ಅವರು ಚುನಾವಣಾ ವೀಕ್ಷಕರಿಗೆ ವಿವರಿಸಿದರು. ಮತ ಯಂತ್ರ, ವಿವಿಪ್ಯಾಟ್‌ ಹಾಗೂ ಬ್ಯಾಲೆಟ್‌ ಯೂನಿಟ್‌ಗಳನ್ನು ಪ್ರಾಯೋಗಿಕವಾಗಿ ಸ್ಟ್ರಾಂಗ್‌ ರೂಮ್‌ನಲ್ಲಿರಿಸಿ ಖುದ್ದಾಗಿ ಪರಿಶೀಲಿಸುವ ಮೂಲಕ ನಿಯಮ ಪಾಲನೆಯನ್ನು ಖಚಿತಪಡಿಸಿಕೊಂಡರು.
ಮತ ಎಣಿಕೆ ಕೌಂಟರ್‌ಗಳು, ಬ್ಯಾರಿಕೇಡ್‌ ವ್ಯವಸ್ಥೆ ಹಾಗೂ ಮತ ಎಣಿಕೆ ಸಿಬ್ಬಂದಿಗೆ ಕಲ್ಪಿಸಲಾಗುತ್ತಿರುವ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ನಂತರ ಮತ ಎಣಿಕೆ ಕೇಂದ್ರದಲ್ಲಿ ಸ್ಥಾಪಿಸಲಾಗುವ ಸಾಮಾನ್ಯ ವೀಕ್ಷಕರ ಕೊಠಡಿ, ಚುನಾವಣಾಧಿಕಾರಿಗಳ ಕೊಠಡಿ, ಮಾಧ್ಯಮ ಕೇಂದ್ರ ಮತ್ತಿತರ ವ್ಯವಸ್ಥೆ ಕಲ್ಪಿಸಲು ನಿಗದಿಪಡಿಸಲಾದ ಕೊಠಡಿಗಳನ್ನು ಸಾಮಾನ್ಯ ವೀಕ್ಷಕರಾದ ರಾಜೀವ್‌ ಚಂದ್ರ ದುಬೆ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ| ವಿಶಾಲ್‌ ಪರಿಶೀಲಿಸಿದರು.
ಭದ್ರತಾ ಕ್ರಮಗಳ ಕುರಿತು ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ್‌ ಕುಮಾರ ಅವರು ಚುನಾವಣಾ ವೀಕ್ಷಕರಿಗೆ ವಿವರಿಸಿದರು. ಡಿಸಿಪಿ ಸೀಮಾ ಲಾಟ್ಕರ್‌, ಡಿಸಿಪಿ ಯಶೋಧಾ ವಂಟಗೂಡಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜಯ ಹುಲಕಾಯಿ, ಹೆಸ್ಕಾಂ, ಎನ್‌ಐಸಿ ಅಧಿಕಾರಿಗಳು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next