Advertisement

ಮೋದಿ ಆಗಮನಕ್ಕೆ ಸಕಲ ಸಿದ್ಧತೆ

09:05 AM Oct 27, 2017 | |

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರು ಅ. 29ರಂದು ಧರ್ಮಸ್ಥಳ ಹಾಗೂ ಉಜಿರೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ.

Advertisement

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ಮೋದಿ ಅವರು ಆಸೀನರಾಗುವ ವೇದಿಕೆಯ ಪಕ್ಕದಲ್ಲಿಯೇ ಪ್ರಧಾನಿ ಕಚೇರಿ  ತಾತ್ಕಾ ಲಿಕವಾಗಿ ತೆರೆದುಕೊಳ್ಳಲಿದೆ. ಸಾಮಾನ್ಯ ವಾಗಿ ಪ್ರಧಾನಿ ಕಚೇರಿಯಿಂದ ಯಾವೆಲ್ಲ ಸಂವಹನಗಳನ್ನು ಮಾಡಲಾಗುತ್ತದೆಯೋ ಅವೆಲ್ಲ ಸಂವಹನ ಇಲ್ಲಿಯೂ ಸಾಧ್ಯ ವಾಗುವಂತೆ ಏರ್ಪಾಟು ಮಾಡಲಾಗುತ್ತಿದೆ. ಪ್ರಧಾನಿ ಕಚೇರಿಯ ಸಿಬಂದಿಯೇ ಇದನ್ನು ನಿರ್ವಹಿಸಲಿದ್ದಾರೆ. ಇದಕ್ಕಾಗಿ ಬಿಎಸ್‌ಎನ್‌ಎಲ್‌ ಹಾಗೂ ಮೆಸ್ಕಾಂನವರಿಗೆ ಪ್ರತ್ಯೇಕ ಸೂಚನೆಗಳನ್ನು ನೀಡಿ ದೂರವಾಣಿ, ವೈಫೈ, ನಿರಂತರ ವಿದ್ಯುತ್‌ ಸರಬರಾಜಿಗೆ ಸೂಚಿಸಲಾಗಿದೆ. ದೂರ ದರ್ಶನದಲ್ಲಿ ಕಾರ್ಯಕ್ರಮದ ನೇರಪ್ರಸಾರ ಇರಲಿದೆ.

ಆಸನ ಸೌಲಭ್ಯ
ಸಾಕಷ್ಟು ಸಂಖ್ಯೆಯ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹಾಗಿದ್ದರೂ ಜನರ ಆಗಮನ ಹೆಚ್ಚಾಗುವ ಕಾರಣ ಆಗಮಿ ಸುವ ಮಂದಿ ಬಿಸಿಲಿನ ಝಳದಿಂದ ತಪ್ಪಿಸಿ ಕೊಳ್ಳಲು ದಿನಪತ್ರಿಕೆ ಅಥವಾ ಬಟ್ಟೆ ತರ ಬೇಕಾಗಬಹುದು. ನೀರಿನ ಬಾಟಲ್‌ ಕೊಂಡೊಯ್ಯಲು ಅವಕಾಶ ಇಲ್ಲ. ಮೊಬೈಲ್‌ ಕೊಂಡೊಯ್ಯಬಹುದು. ಆದರೆ ಜಾಮರ್‌ ಅಳವಡಿಸಲಾಗುತ್ತದೆ.

ಗುರುವಾರ ಎಸ್‌ಪಿಜಿ ಭದ್ರತಾ ಅಧಿಕಾರಿಗಳು ಪ್ರಧಾನಿ ಕಾರ್ಯಕ್ರಮದ ವೇದಿಕೆ ತಪಾಸಣೆ ಮಾಡಿದರು. ವೇದಿಕೆ ನಿರ್ಮಾಣದ ವೇಳೆ ನೆಲೆ ಅಗೆದಿರುವ ಸ್ಥಳ ವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು.

ಆಧಾರ್‌ ಕಡ್ಡಾಯ
ಮೋದಿ ಅವರ ಸಭೆಗೆ ಬರಲೂ ಆಧಾರ್‌ ಕಡ್ಡಾಯ ಮಾಡಲಾಗಿದೆ. ವಿಐಪಿ ಪಾಸ್‌ ಇದ್ದವರಿಗೆ ಆಧಾರ್‌ ಅಥವಾ ಭಾವಚಿತ್ರ ಇರುವ ಗುರುತು ಚೀಟಿ ಕಡ್ಡಾಯ ಮಾಡಲಾಗಿದ್ದು ಪಾಸ್‌ ಇಲ್ಲದೆ ಪ್ರವೇಶ ಬಯಸುವವರಿಗೆ ಆಧಾರ್‌ ಇರಬೇಕೇ ಬೇಡವೇ ಎಂಬ ಗೊಂದಲ ಶುಕ್ರವಾರ ವೇಳೆಗೆ ಪರಿಹಾರವಾಗಲಿದೆ. ಸಾರ್ವಜನಿಕ ಪ್ರವೇಶ, ಎಷ್ಟು ಗಂಟೆಗೆ ಬರಬೇಕು, ಯಾವ ದಾರಿಯನ್ನು ಬಳಸಬೇಕು ಇತ್ಯಾದಿ ಕುರಿತು ಶುಕ್ರವಾರ ಸಂಘಟಕರಿಂದ ಸ್ಪಷ್ಟ ಮಾರ್ಗಸೂಚಿ ದೊರೆಯಲಿದೆ.

Advertisement

ಹೆಗ್ಗಡೆ ನಿವಾಸಕ್ಕೆ ಭೇಟಿ
ಪ್ರಧಾನಿ ಭೇಟಿಯ ಪೂರ್ವ ಸಿದ್ಧತೆಗೆ ಕನಿಷ್ಠ ಸಮಯ ಲಭಿಸಿರುವ ಕಾರಣ ತರಾತುರಿಯಲ್ಲಿ ಸಿದ್ಧತೆಗಳಾಗುತ್ತಿವೆ. ಎಸ್‌ಪಿಜಿಯ ಐಜಿ ದರ್ಜೆ ಅಧಿಕಾರಿ ದಿಲ್ಲಿಯಿಂದ ಆಗಮಿಸಿದ್ದು ಗುರುವಾರ ಉಜಿರೆ ಯಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗ ದರ್ಶನ ನೀಡಿದರು. ಉಜಿರೆಯಲ್ಲಿ ಸಮಾ ರಂಭ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಧರ್ಮಸ್ಥಳಕ್ಕೆ ತೆರಳಿದರು. ಹೆಗ್ಗಡೆ ನಿವಾಸ (ಬೀಡು)ಕ್ಕೆ ಪ್ರಧಾನಿ ಆಗಮಿಸುವ ವೇಳಾಪಟ್ಟಿ ಇದ್ದು ಅಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಅನಂತರ ದೇವಸ್ಥಾನ ಪರಿಸರದ ಭದ್ರತೆ ಕುರಿತು ಮಾರ್ಗದರ್ಶನ ನೀಡಿದರು. ದೇವಸ್ಥಾನದಲ್ಲಿ ಶನಿವಾರ ಅಪರಾಹ್ನದಿಂದ ಭಕ್ತರ ಭೇಟಿಗೆ ತಡೆಯಿದ್ದುದನ್ನು ಸಡಿಲಗೊಳಿಸಲಾಗಿದೆ.

ರವಿವಾರ ಮೋದಿ ಭೇಟಿ ಸಂದರ್ಭ ದೇವಸ್ಥಾನದ ನೌಕರ ವೃಂದದವರಿಗೆ ಮೋದಿ ಅವರನ್ನು ನೋಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹೆಗ್ಗಡೆ ಕುಟುಂಬದ ಸದಸ್ಯರ ಜತೆ ಮೋದಿ ಮಾತನಾಡಲಿದ್ದು ಅನಂತರ ವಿಶೇಷ ಭದ್ರತೆಯ ವಾಹನದಲ್ಲಿ ಆ ಸದಸ್ಯರು ಉಜಿರೆಗೆ ಬರಲಿದ್ದಾರೆ. ಇವರ ಹೊರ ತಾಗಿ ಧರ್ಮಸ್ಥಳದಲ್ಲಿರುವ ಯಾವುದೇ ವ್ಯಕ್ತಿ ಈ ಸಂದರ್ಭ ಉಜಿರೆಗೆ ಬರುವಂತಿಲ್ಲ. ಉಜಿರೆಯಲ್ಲಿದ್ದವರು ಧರ್ಮಸ್ಥಳಕ್ಕೆ ಹೋಗುವಂತಿಲ್ಲ.

ಉಪಸ್ಥಿತಿ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ, ಎಎಸ್‌ಪಿ, ಸಹಾಯಕ ಕಮಿಷನರ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶಿವಪ್ರಸಾದ್‌, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌, ಬಿಎಸ್‌ಎನ್‌ಎಲ್‌ ಸಹಾಯಕ ಎಂಜಿನಿಯರ್‌ ಅಣ್ಣಿ ಪೂಜಾರಿ ಮೊದ ಲಾದವರು ಉಪಸ್ಥಿತರಿದ್ದರು.

ಡಾ| ಡಿ. ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ಹಷೇìಂದ್ರ ಕುಮಾರ್‌ ಮೊದಲಾದವರ ಜತೆ ಅಧಿಕಾರಿಗಳು ಮಾತುಕತೆ ನಡೆಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ|ಎಲ್‌.ಎಚ್‌. ಮಂಜುನಾಥ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಪೂರಕ ಮಾಹಿತಿ ನೀಡಿದರು.

ರಸ್ತೆ ಬಂದ್‌ ಅವಧಿ ಕಡಿತ
ಶನಿವಾರದಿಂದಲೇ ಉಜಿರೆಯಿಂದ ಧರ್ಮಸ್ಥಳದ ಪುದುವೆಟ್ಟು ತಿರುವಿನ ವರೆಗೆ ರಸ್ತೆ, ಅಂಗಡಿ ಬಂದ್‌ ಮಾಡಬೇಕೆಂಬ ಆತಂಕ ಇತ್ತು. ಆದರೆ ಎಸ್‌ಪಿಜಿ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರಿಗೆ ಪ್ರಧಾನಿ ಭೇಟಿ ಯಿಂದ ತೊಂದರೆಯಾಗಬಾರದು ಎಂಬ ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇವರ ದರ್ಶನದ ಅವಧಿಯಲ್ಲೂ ಭಕ್ತರಿಗೆ ಹೆಚ್ಚಿನ ಸಮಯ ದೊರೆತಿದ್ದು ವಾಹನ ಸಂಚಾರಕ್ಕೂ ಹೆಚ್ಚು ಸಮಯಾವಕಾಶ ನೀಡಿದ್ದಾರೆ. ರವಿವಾರ ಬೆಳಗ್ಗೆ 9ರ ವರೆಗೆ ಧರ್ಮಸ್ಥಳದಿಂದ ಉಜಿರೆ ವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ. ಇದರಿಂದಾಗಿ ದೂರ ದೂರಿನಿಂದ ಬರುವ ಯಾತ್ರಿಕರಿಗೆ ಅನನುಕೂಲವಾಗುವುದು ತಪ್ಪಿದೆ.

ನೋಟಿಸ್‌
ಮೋದಿ ಅವರು ಧರ್ಮಸ್ಥಳದಿಂದ ಉಜಿರೆಗೆ ರಸ್ತೆ ಮೂಲಕ ತೆರಳಲಿದ್ದು ಈ ಅವಧಿಯಲ್ಲಿ ಧರ್ಮಸ್ಥಳದಿಂದ ಉಜಿರೆ ವರೆಗಿನ ಅಂಗಡಿಗಳು ಮುಚ್ಚಲಿವೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಅಂಗಡಿಯವರಿಗೆ ನೋಟಿಸ್‌ ನೀಡಿದ್ದಾರೆ.

ಭಕ್ತರಿಗೆ ದೇವರ ದರ್ಶನ ಸಮಯ
ಪ್ರಧಾನಿ ಮೋದಿ ಅವರು ಅ. 29ರಂದು ಧರ್ಮಸ್ಥಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅ. 28ರ ಶನಿವಾರ ರಾತ್ರಿ 9ರ ವರೆಗೆ ಹಾಗೂ ರವಿವಾರ ಅಪರಾಹ್ನ ಎರಡು ಗಂಟೆ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಹಾಗೂ ಸಾರ್ವಜನಿಕರು ಇದನ್ನು ಗಮನಿಸಿ ಸಹಕರಿಸಬೇಕು ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸುವವರು ರವಿವಾರ ಬೆಳಗ್ಗೆ 9.30ರೊಳಗೆ ಆಸೀನರಾಗಬೇಕು ಎಂದು ಪ್ರಕಟನೆಯಲ್ಲಿ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next