Advertisement

ಮೋದಿ ಜನರ ಮನಸ್ಸಿನಲ್ಲಿಲ್ಲ: ಚಂದ್ರಶೇಖರ್‌ ಭಟ್‌

03:34 PM Apr 13, 2019 | Team Udayavani |
ಕೊಪ್ಪಳ: ದೇಶದಲ್ಲಿ ಜನರು ಪ್ರಧಾನಿ ಮೋದಿ ನೋಡಿ ಭ್ರಮನಿರಸಗೊಂಡಿದ್ದಾರೆ. ವಾಸ್ತವವಾಗಿ ಜನರ ಮನಸ್ಸಿನಲ್ಲಿಯೇ ಮೋದಿ ಇಲ್ಲ. ಅದು ಕೇವಲ ಭ್ರಮೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌ ಭಟ್‌ ಹೇಳಿದರು.
ಕೊಪ್ಪಳ ಲೋಕಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ್‌ ಹಿಟ್ನಾಳ ಪರ ಹುಲಗಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಸುಭದ್ರ ಸರಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಸರ್ವರ ಹಿತ ಕಾಪಾಡಲು ಕಾಂಗ್ರೆಸ್‌ ಬೆಂಬಲಿಸಿ ಎಂದರಲ್ಲದೆ ದೇಶ ಮತ್ತು ಕೊಪ್ಪಳದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದರು.
ಮೈತ್ರಿ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ತಮ್ಮನ್ನು ಆಯ್ಕೆ ಮಾಡಿದಲ್ಲಿ ಮೂರು ಅಂಶಗಳ ಮೇಲೆ ತುಂಬ ದೊಡ್ಡ ಕೆಲಸ ಮಾಡುವ ಗುರಿ ಹೊಂದಿದ್ದೇನೆ. ನಮ್ಮ ಎಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಗಂಡು ಮಕ್ಕಳ ಜೊತೆಗೆ ಎಲ್ಲ ಹೆಣ್ಣುಮಕ್ಕಳು ಕನಿಷ್ಠ ಪದವಿ ಹೊಂದಬೇಕು. ಶಿಕ್ಷಣ ಪಡೆದರೆ ಸಾಲದು; ಸಾಧ್ಯವಾದ ಎಲ್ಲ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಆದ್ಯತೆ ಮೇರೆಗೆ ಜಿಲ್ಲೆಯ ಎಲ್ಲ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಸ್ಥಳೀಯರಿಗೆ ದೊರಕಿಸಿಕೊಡುವುದು. ಜೊತೆಗೆ ಎಲ್ಲ ಕುಟುಂಬಗಳು ನೆಮ್ಮದಿಯಿಂದ ಬಾಳಬೇಕು. ಅದಕ್ಕಾಗಿ ಆರ್ಥಿಕ ಸ್ಥಿರತೆ ತಂದುಕೊಡುವ ನಿಟ್ಟಿನಲ್ಲಿ ನಿರಂತರವಾಗಿ ದುಡಿಯುವುದಾಗಿ ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಮಾತನಾಡಿ, ಕಾಂಗ್ರೆಸ್‌ ಮಾಡಿದ ಸೇವೆ ಮತ್ತು ಜನಪರ ಕೆಲಸ ಜನರು ಮೆಚ್ಚಿಕೊಂಡಿದ್ದಾರೆ. ಅವುಗಳನ್ನು ಕಾಂಗ್ರೆಸ್‌ ಮಾಡಿದೆ ಎಂಬುದನ್ನು ತಿಳಿಸಬೇಕಿದೆ. ಸುಳ್ಳು ಹೇಳುವ ಮೂಲಕ ಬಿಜೆಪಿ
ಜನರಿಗೆ ಮೋಸ ಮಾಡಿದೆ. ಸಿದ್ದರಾಮಯ್ಯ ಸರಕಾರ, ಯುಪಿಎ 10 ವರ್ಷದ ಸರಕಾರ ಮಾಡಿದ ಸಾಧನೆ ಮತ್ತು ಸೇವೆಗಳ ಮೂಲಕ ಕಾಂಗ್ರೆಸ್‌ ಗೆಲ್ಲಲಿದೆ ಎಂದರು.
ಶಾಸಕ, ಸಂಸದೀಯ ಕಾರ್ಯದರ್ಶಿ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, 2014ರ ಚುನಾವಣೆಯಲ್ಲಿ ಬಿಜೆಪಿ ಮೋದಿ ಹೆಸರಲ್ಲಿ ದೊಡ್ಡ ಭರವಸೆಗಳನ್ನು ನೀಡಿ, ಒಂದನ್ನೂ ಈಡೇರಿಸಿಲ್ಲ, ಅದು ಕೇವಲ ಮಾತನಾಡುತ್ತದೆಯೇ ಹೊರತು ಏನನ್ನೂ ಮಾಡುತ್ತಿಲ್ಲ. ಎಲ್ಲ ವರ್ಗದ ಜನರಿಗೆ ಕಾಂಗ್ರೆಸ್‌ ಸಮಾನ ಅವಕಾಶ ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತು ಮೈತ್ರಿ ಸರಕಾರಗಳ ಸಾಧನೆಯೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ.
165 ಭರವೆ ಕೊಟ್ಟ ಕಾಂಗ್ರೆಸ್‌ ಸರಕಾರ ಅದಷ್ಟನ್ನೂ ಈಡೇರಿಸಿವೆ. ಆದರೆ ಜನರಿಗೆ ಅವುಗಳನ್ನು ತಿಳಿಸಲು ಹಿಂದೆ ಬಿದ್ದಿದ್ದು, ಈಗ ಜನರಿಗೆ ಅರಿವಾಗಿದೆ. ಮೋದಿಯ ಸುಳ್ಳಿನ ಭಾವನಾತ್ಮಕ ಧರ್ಮ ಒಡೆಯುವ ಭಾಷಣದಿಂದ ಏನೂ
ಆಗುವುದಿಲ್ಲ. ಕಾಂಗ್ರೆಸ್‌ ಬೆಂಬಲಿಸಿದಲ್ಲಿ ಪ್ರತಿ ವರ್ಷ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ 72 ಸಾವಿರ ಕೊಡುವ ಭರವಸೆ ಜೊತೆಗೆ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದರು.
ಅಕ್ಬರ್‌ ಅಲಿ ಹುಲಿಗಿ ಪ್ರಾರ್ಥಿಸಿದರು. ಖಾಜಾವಲಿ ಸ್ವಾಗತಿಸಿದರು. ಕೆಪಿಸಿಸಿ ಕಾರ್ಮಿಕ ರಾಜ್ಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿದರು. ಹನುಮಂತಪ್ಪ ನಾಯಕ್‌ ವಂದಿಸಿದರು. ಎಸ್‌. ಬಿ. ನಾಗರಳ್ಳಿ, ಪ್ರಭುರಾಜ ಪಾಟೀಲ್‌, ವಿಶ್ವನಾಥ ರಾಜು, ಅಮ್ಜದ್‌ ಪಟೇಲ್‌, ಮುತ್ತುರಾಜ ಕುಷ್ಟಗಿ, ಸಿದ್ದು ಮ್ಯಾಗೇರಿ, ಗುರುಬಸವರಾಜ ಹಲಗೇರಿ, ಅಕ್ಬರ್‌ ಪಾಶಾ ಪಲ್ಟನ್‌, ಮಾಲತಿ ನಾಯಕ್‌, ಸುರೇಶ್‌ ಭೂಮರಡ್ಡಿ, ಬಸವರಾಜ ಮಳಿಮಠ, ವೀರನಗೌಡ ಪಾಟೀಲ್‌, ಮುಖಂಡರಾದ ವೆಂಕಟೇಶ ಕಂಪಸಾಗರ, ರವಿ ಕುರಗೋಡ ಯಾದವ್‌, ನವೋದಯ ವಿರೂಪಾಕ್ಷಪ್ಪ, ನಾಗರಾಜ ನಂದಾಪುರ, ಹನುಮಂತಪ್ಪ ಹ್ಯಾಟಿ ಸೇರಿ ಇತರರು ಉಪಸ್ಥಿತರಿದ್ದರು.
ರಫೇಲ್‌ ಹಗರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಸುಪ್ರೀಂಕೋರ್ಟ್‌ ಅನುಮತಿ ಮೇರೆಗೆ ಮುಂದೆ ಕಾಂಗ್ರೆಸ್‌
ಸರಕಾರ ಬಂದರೆ ನಿಶ್ಚಿತವಾಗಿ ಮೋದಿ ಜೈಲು ಹಕ್ಕಿಯಾಗುವುದರಲ್ಲಿ ಸಂದೇಹವೇ ಇಲ್ಲ. ಅವರು ಹೇಳಿದ ಅಷ್ಟೂ ಸುಳ್ಳಿನಿಂದ ಅವರು ನಿರ್ನಾಮವಾಗುತ್ತಾರೆ.
ಚಂದ್ರಶೇಖರ್‌ ಭಟ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
Advertisement

Udayavani is now on Telegram. Click here to join our channel and stay updated with the latest news.

Next