Advertisement

ಕೊಟ್ಟ ಭರವಸೆ ಒಂದೂ ಈಡೇರಿಸದ ಮೋದಿ

11:25 AM Apr 10, 2019 | Team Udayavani |

ಚಾಮರಾಜನಗರ: ಪ್ರಧಾನಿ ನರೇಂದ್ರಮೋದಿ ಕಳೆದ ಲೋಕಸಭಾ ಚುನಾವಣಾ ಪೂರ್ವದಲ್ಲಿ ಕೊಟ್ಟ ಪ್ರಣಾಳಿಕೆಯ ಒಂದು ಭರವಸೆಯನ್ನು ಸಹ ಈಡೇರಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಟೀಕಿಸಿದರು.

Advertisement

ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸ್ವಿಸ್‌ ಬ್ಯಾಂಕ್‌ನಲ್ಲಿರುವ ದೇಶದ ಕಪ್ಪು ಹಣವನ್ನು 100 ದಿನದೊಳಗೆ ವಾಪಸ್‌ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಜಮಾ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಐದು ವರ್ಷಗಳಾದರೂ 15 ಪೈಸೆಯನ್ನು ಯಾರ ಖಾತೆಗೂ ಜಮಾ ಮಾಡಿಲ್ಲ. ಬರೀ ಸುಳ್ಳು ಆಶ್ವಾಸನೆಗಳನ್ನು ಹೇಳಿ ಜನತೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದರು.

ಧ್ರುವ ಬೆಂಬಲಿಸಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾದರೂ ಕೂಡ ರಾಜ್ಯದ ಅಭಿವೃದ್ಧಿ ಶೂನ್ಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಸಿದ್ದರಾಮಯ್ಯರವರು ನುಡಿದಂತೆ ನಡೆದರು. ಚುನಾವಣಾ ಪ್ರಣಾಳಿಕೆಯಂತೆ 165 ಭರವಸೆಗಳನ್ನು ಈಡೇರಿಸಿದರು. ರೈತರ ಸಾಲಮನ್ನಾ ಮಾಡಿದರು. ಸರಳ, ಸಜ್ಜನ ರಾಜಕಾರಣಿಯಾದ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ಮತ್ತೂಂದು ಅವಕಾಶ ಕೊಡಿ: ಅಭ್ಯರ್ಥಿ ಆರ್‌.ಧ್ರುವನಾರಾಯಣ ಮಾತನಾಡಿ, ನಾಗವಳ್ಳಿ ನನಗೆ ತವರುಮನೆ ಇದ್ದಂತೆ. ಪ್ರತಿ ಚುನಾವಣೆಯಲ್ಲಿ ತಮಗೆ ಸಹಾಯ ಮಾಡಿದೆ. ಕಾಂಗ್ರೆಸ್‌ ಸರ್ಕಾರ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತಾ ಯೋಜನೆ, ಕಡ್ಡಾಯ ಶಿಕ್ಷಣ ನೀತಿ, ರೈತರ ಸಾಲ ಮನ್ನಾ ಮಾಡಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾನದಂಡವಾಗಿಟ್ಟುಕೊಂಡು ಕಾಂಗ್ರೆಸ್‌ ಮತ ಕೇಳುತ್ತಿದೆ. ಏ. 18 ರಂದು ನಡೆಯುವ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ಹಾಕುವ ಮೂಲಕ ಮತ್ತೂಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಆಗಲ್ಲೇ ಕೆಲಸ ಮಾಡಿಲ್ಲ ಈಗ ಮಾಡುವರೇ: ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್‌ ಅವರು ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅವರು ಮನಸು ಮಾಡಿದ್ದರೆ ಜಿಲ್ಲೆಯನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸಬಹುದಿತ್ತು. ಉತ್ತಮ ಅವಕಾಶ ಸಿಕ್ಕಿದ ಆ ಸಂದರ್ಭದಲ್ಲೇ ಯಾವುದೇ ರೀತಿಯ ಕೆಲಸ ಮಾಡದವರು, ಈಗ ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

Advertisement

ಉತ್ತಮ ಕೆಲಸ ನೋಡಿ ಮತ ನೀಡಿ: ಆರ್‌.ಧ್ರುವನಾರಾಯಣ್‌ ಅವರು ಕಳೆದ 10 ವರ್ಷದಿಂದ ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಭಾರಿ ಗೆಲವು ಸಾಧಿಸಿದರೆ ಇನ್ನೂ ಅನೇಕ ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂದು ಹೇಳಿದರು.

ವಿವಿಧೆಡೆ ಮತಯಾಚನೆ: ತಾಲೂಕಿನ ವ್ಯಾಪ್ತಿಗೆ ಸೇರಿದ ಮಂಗಲ ,ದೂಡ್ಡಮೋಳೆ ವೆಂಕಟಯ್ಯನ ಛತ್ರ, ಬಿಸಲವಾಡಿ, ಮೂಕನಪಾಳ್ಯ, ಅಟ್ಟುಗುಳಿಪುರ, ಸಿದ್ದಯ್ಯನಪುರ, ಹೆಬ್ಬಸೂರು, ಚಂದಕವಾಡಿ, ನಾಗವಳ್ಳಿ, ಜ್ಯೋತಿಗೌಡನಪುರ, ಕಾಗಲವಾಡಿ, ಆಲೂರು, ಕೂಡೂರು ಮತ್ತಿತರ ಗ್ರಾಮಗಳಲ್ಲಿ ಸಂಸದರು, ಸಚಿವರು ಮತ ಯಾಚಿಸಿದರು.

ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್‌.ಮಹದೇವು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎ.ಎಸ್‌.ಗುರುಸ್ವಾಮಿ, ಮಹಮದ್‌ಅಸರ್‌, ನಗರಸಭಾ ಮಾಜಿ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಸದಸ್ಯ ಎಸ್‌.ಸೋಮನಾಯಕ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್‌, ಮುಖಂಡರಾದ ನಾಗಯ್ಯ, ಕಪನಿನಾಯಕ, ನಾಸಿರ್‌ಅಹಮದ್‌, ಕಮಲ್‌, ಪಟೇಲ್‌ಸುಬ್ಬಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next