Advertisement

ಹೊಸದಲ್ಲದ ಸಮಸ್ಯೆಗೆ ಹೊಳೆಯುತ್ತಿಲ್ಲ ಐಡಿಯಾ

08:40 AM May 15, 2018 | Karthik A |

ಸುಬ್ರಹ್ಮಣ್ಯ : ಸಣ್ಣ ಗುಡುಗು ಮಿಂಚು ಬಂದರೂ ಸಾಕು ಈ ಪ್ರದೇಶಗಳಲ್ಲಿ ಮೊಬೈಲ್‌ ಸಂಪರ್ಕ ಕಡಿತಗೊಂಡು ಬಿಡುತ್ತದೆ. ಹೊರಗಿನ ಸಂಪರ್ಕವೇ ಇಲ್ಲದಾಗುತ್ತದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡು ಯಾತನೆ ಪಡಬೇಕು. ಇದು ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನಕಿದು ಈ ಐದು ಗ್ರಾಮಗಳ ಜನತೆಯ ನಿತ್ಯದ ಗೋಳಾಗಿಬಿಟ್ಟಿದೆ. ಕೊಲ್ಲಮೊಗ್ರು, ಹರಿಹರ, ಕಲ್ಮಕಾರು ಈ ಮೂರು ಕಡೆಗಳಲ್ಲಿ ಮೊಬೈಲ್‌ ಟವರ್‌ ಕಾರ್ಯಾಚರಿಸುತ್ತಿದೆ. ಬಿ.ಎಸ್‌.ಎನ್‌.ಎಲ್‌. ಹೊರತು ಪಡಿಸಿ ಇನ್ಯಾವುದೇ ಸಂಪರ್ಕ ವ್ಯವಸ್ಥೆಗಳು ಈ ಪ್ರದೇಶದಲ್ಲಿ ಇಲ್ಲ. ತುರ್ತು ಆವಶ್ಯಕತೆ ಸೇರಿದಂತೆ ಇತರ ಬಳಕೆಗೆ ನೆಟ್‌ವರ್ಕ್‌ ಸೇವೆಯು ಸಿಗದಿರುವುದು ಇಲ್ಲಿನ ಮಂದಿಗೆ ದೊಡ್ಡ ತಲೆನೋವು ತಂದಿದೆ.

Advertisement

ಬಹುತೇಕ ದಿನಗಳಲ್ಲಿ ಈ ಭಾಗದಲ್ಲಿ ಸಂಜೆ ವೇಳೆಗೆ ಮಳೆ ಜತೆಗೆ ಗುಡುಗು ಮಿಂಚು ಇರುತ್ತದೆ. ಈ ಸಮಯದಲ್ಲಿ ಟವರ್‌ ಸಿಗ್ನಲ್‌ ಅನ್ನು ನಿಷ್ಕ್ರಿಯಗೊಳಿಸುತ್ತಾರೆ. ಸಣ್ಣ ಮೋಡ ಬಂದರು ಸಹಿತ ಕೆಲವೊಮ್ಮೆ ಮುಂಜಾಗ್ರತೆ ನೆಪದಲ್ಲಿ ಸಿಗ್ನಲ್‌ ಕಡಿತಗೊಳಿಸುತ್ತಾರೆ.

ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಮೊಬೈಲ್‌ ಟವರ್‌ಗಳು ನಿಯಂತ್ರಿಣದಲ್ಲಿರುವುದು ದೂರದ ಸುಳ್ಯ ಮತ್ತು ಸುಬ್ರಹ್ಮಣ್ಯ ಪ್ರಮುಖ ಕೇಂದ್ರಗಳಲ್ಲಿ. ಅಲ್ಲಿ ಗುಡುಗು ಆರಂಭವಾದ ಸಮಯದಲ್ಲಿ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಟವರ್‌ಗಳ ಸಿಗ್ನಲ್‌ ತೆಗೆದುಬಿಡುತ್ತಾರೆ. ಆ ಹೊತ್ತಿಗೆ ಈ ಮೂರು ಟವರ್‌ಗಳ ವ್ಯಾಪ್ತಿಯಲ್ಲಿ ಸಿಗ್ನಲ್‌ ಸಿಗದೆ ಆ ಭಾಗಗಳ ಜನತೆ ತೊಂದರೆಗೆ ಒಳಗಾಗುತ್ತಾರೆ. ಕೆಲವೊಮ್ಮೆ ಆ ಭಾಗದಲ್ಲಿ ಮಳೆ, ಗುಡುಗು, ಮಿಂಚು ಇಲ್ಲದೆ ಇದ್ದ ಸಂದರ್ಭದಲ್ಲೂ  ಸಿಗ್ನಲ್‌ ಇಲ್ಲದೆ ಜನರು ಪರದಾಡುತ್ತಿದ್ದಾರೆ‌.

ಪ್ರತಿಭಟನೆಗೆ ಸಿದ್ಧತೆ
ಈ ವೇಳೆ ಅನಾರೋಗ್ಯ ಇತ್ಯಾದಿ ತುರ್ತು ಸೇವೆಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಜನ ತೊಂದರೆಗೆ ಒಳಗಾಗಬೇಕಾಗುತ್ತಾರೆ. ಹೀಗಾಗಿ ಮೊಬೈಲ್‌ ಸೇವೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ನೋವು ಇಲ್ಲಿನ ಜನರನ್ನು ಕಾಡುತ್ತಿದೆ. ದಟ್ಟಾರಣ್ಯಗಳ ಅಂಚಿನಲ್ಲಿರುವ ಈ ಐದು ಗ್ರಾಮಗಳ ಜನತೆ ದಿನ ನಿತ್ಯ ಇಲಾಖೆಯ ಈ ಕ್ರಮಕ್ಕೆ ಹಿಡಿಶಾಪ ಹಾಕುತ್ತಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾಡು ಪ್ರಾಣಿಗಳ ಹಾವಳಿ ಇದೆ. ಕೃಷಿ ಅವಲಂಬಿತರಿರುವ ಈ ಭಾಗಗಳ ಮನೆಗಳಲ್ಲಿ ವಯೋವೃದ್ಧರು ವಾಸವಿದ್ದು, ಅಗತ್ಯ ಸಂದರ್ಭ ಕೈಕೊಡುವ ಈ ಮೊಬೈಲ್‌ ಸೇವೆಯಲ್ಲಿನ ವ್ಯತ್ಯಯದ ಕುರಿತು ಜನ ಆಕ್ರೋಶಿತರಾಗಿದ್ದು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ತಾಂತ್ರಿಕ ಅಡಚಣೆ ಇದೆ
ಗುಡುಗು ಮಿಂಚು ಬಂದಾಗ ಅದರ ತೀವ್ರತೆಗೆ ಉಪಕರಣದ ಭಾಗಗಳು ಕೆಟ್ಟುಹೋಗುತ್ತವೆ. ಜಾಗರೂಕತೆಗಾಗಿ ಈ ರೀತಿ ಗುಡುಗು ಮಿಂಚುವಿನ ಹೊತ್ತಲ್ಲಿ ಸಿಗ್ನಲ್‌ ತೆಗೆಯುತ್ತೇವೆ. ಒಂದು ವೇಳೆ ಮುಂಜಾಗರೂಕತೆ ವಹಿಸದೆ ಇದ್ದಲ್ಲಿ ಮಿಂಚು-ಗುಡುಗಿಗೆ ಸಾಧನಗಳು ಕೆಟ್ಟು ಹೋಗುತ್ತವೆ ಮಿಂಚು ನಿರೋಧಕ ಅಳವಡಿಸಿದ್ದರೂ ತಾಂತ್ರಿಕ ತೊಂದರೆ ಬರುತ್ತದೆ.
– ಸದಾಶಿವ ಹೊಳ್ಳ, ಬಿಎಸ್ಸೆನ್ನೆಲ್‌ ನ ಮೊಬೈಲ್‌ ವಿಭಾಗ ಅಧಿಕಾರಿ

Advertisement

ಬೇರೆಡೆ ನಿಯಂತ್ರಣ ಬೇಡ
ಮಿಂಚು ಗುಡುಗು ತೀವ್ರವಿದ್ದಾಗ ಸಿಗ್ನಲ್‌ ತೆಗೆಯುವುದಕ್ಕೆ ಯಾರೂ ಆಕ್ಷೇಪ ಮಾಡುವುದಿಲ್ಲ. ತಿಳಿಯಾದ ಬಳಿಕ ಹಾಗೂ ಮಿಂಚು – ಗುಡುಗು ಇಲ್ಲದೆ ಇದ್ದಾಗಲೂ ತುಂಬಾ ಹೊತ್ತು ಸಿಗ್ನಲ್‌ ತೆಗೆಯುವುದಕ್ಕೆ ಜನರ ವಿರೋಧವಿದೆ. ಜತೆಗೆ ಇಲ್ಲಿಯ ಟವರ್‌ಗಳನ್ನು ಬೇರೆಡೆಯ ಕೇಂದ್ರಗಳಲ್ಲಿ ನಿಯಂತ್ರಿಸುವದಕ್ಕೆ ನಮ್ಮ ವಿರೋಧವಿದೆ. ಇನ್ನು ಕೂಡ ಇದೇ ರೀತಿ ವ್ಯತ್ಯಯ ಮುಂದುವರಿದಲ್ಲಿ ಸಂಸ್ಥೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅನಿವಾರ್ಯ.
– ಗ್ರಾಮಸ್ಥರು

— ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next