Advertisement

ಸ್ನೇಹಿತರ ಬಾಳಿಗೆ ಆಸರೆಯಾದ ಮಹಾನಾಯಕ

02:40 PM Jan 22, 2021 | Team Udayavani |

ಹುಬ್ಬಳ್ಳಿ: ನಿರುದ್ಯೋಗಿ ಸ್ನೇಹಿತರ ಸಂಕಷ್ಟಗಳಿಗೆ ಮಿಡಿದ ಸ್ನೇಹಿತರಿಬ್ಬರು ಅವರ ಜೀವನಕ್ಕೆ ಆಧಾರವಾಗಿ ನಿಲ್ಲಲು ಹೊಸ ಉದ್ಯಮಕ್ಕೆ ಕೈಹಾಕಿದ್ದಾರೆ.

Advertisement

“ಮಹಾನಾಯಕ’ ಹೆಸರಿನಲ್ಲಿ ಮೊಬೈಲ್‌ ಕ್ಯಾಂಟಿನ್‌ಗಳನ್ನು ಆರಂಭಿಸಿ ಸ್ನೇಹಿತರಿಗೆ ಉದ್ಯೋಗ ನೀಡುತ್ತಿದ್ದಾರೆ. ಇಲ್ಲಿನ ಯುವಕರಾಗಿರುವ ನಿರಂಜನ ಹೊಳೆಪ್ಪನವರ, ಸಂಜು ತಿರಕಣ್ಣವರ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಕೇವಲ 10 ಹಾಗೂ 8ನೇ ತರಗತಿ ಓದಿರುವ ಯುವಕರಿಬ್ಬರ ಕನಸು ಹಾಗೂ ಉದ್ದೇಶ ದೊಡ್ಡದಿದೆ.

ಕೆಲಸವಿಲ್ಲದೆ ಅಲೆಯುತ್ತಿದ್ದ  ಎರಡು ತಿಂಗಳ ನಿರಂತರ ಪ್ರಯತ್ನದಿಂದ “ಮಹಾನಾಯಕ’ ಮೊಬೈಲ್‌ ಹೋಟೆಲ್‌ಗ‌ಳ ಕನಸು ಸಾಕಾರಗೊಂಡಿದೆ. ನಗರದಲ್ಲಿ ಇದೀಗ 5 ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಿದ್ದು, ಮೊದಲ ಹಂತದಲ್ಲಿ ಕನಿಷ್ಠ 20 ಕ್ಯಾಂಟಿನ್‌ ಆರಂಭಿಸಿ ಸುಮಾರು 50 ಜನರಿಗಾದರೂ ಉದ್ಯೋಗ ಕಲ್ಪಿಸಬೇಕು ಎನ್ನುವ ಉದ್ದೇಶ ಇವರದ್ದಾಗಿದೆ. ಕಳೆದ ಎರಡು ದಿನಗಳಿಂದ ಕ್ಯಾಂಟೀನ್‌ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

15 ರೂ.ಗೆ ಪಲಾವ್‌: ಕ್ಯಾಂಟೀನ್‌ನಲ್ಲಿ ಸದ್ಯಕ್ಕೆ ಪಲಾವ್‌ ಹಾಗೂ ಚಹಾ ಮಾತ್ರ ದೊರೆಯುತ್ತಿದೆ. ದುಡಿಯುವ ಜನರಿಗೆ ಹೊಟ್ಟೆ ತುಂಬಾ ನೀಡಬೇಕು ಎನ್ನುವ ಕಾರಣಕ್ಕೆ ಪಲಾವ್‌ ಮಾತ್ರ ಲಭ್ಯವಿದ್ದು, ಜನರ ಬೇಡಿಕೆ ನೋಡಿಕೊಂಡು ಇನ್ನಿತರೆ ಒಂದೆರಡು ಪದಾರ್ಥಗಳನ್ನು ಹೆಚ್ಚಿಸಬೇಕು ಎನ್ನುವ ಗುರಿ ಹೊಂದಿದ್ದಾರೆ. ಅಂದಹಾಗೆ ಇಲ್ಲಿ ಪಲಾವ್‌ಗೆ 15 ರೂ. ಹಾಗೂ ಒಂದು ಚಹಾಕ್ಕೆ 5 ರೂ. ಮಾತ್ರ. ಕಿಮ್ಸ್‌ ಹಿಂಭಾಗ, ಕೋರ್ಟ್‌ ವೃತ್ತ, ಎಚ್‌ ಡಿಎಫ್‌ಸಿ ಬ್ಯಾಂಕ್‌ ಹತ್ತಿರ, ಹೊಸ ಕೋರ್ಟ್‌ ಬಳಿ ಆರಂಭವಾಗಿರುವ ಐದು ಕ್ಯಾಂಟೀನ್‌ಗಳಲ್ಲಿ ಸುಮಾರು 15 ಸ್ನೇಹಿತರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ನಿತ್ಯ ಕನಿಷ್ಠ 250-300 ರೂ. ವೇತನ ನೀಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ನಿಗದಿತ ಸ್ಥಳಗಳಲ್ಲಿ ಮೊಬೈಲ್‌ ಕ್ಯಾಂಟೀನ್‌ ಲಭ್ಯವಿರುತ್ತದೆ. ಹೆಚ್ಚಾಗುವ ಪಲಾವ್‌ಅನ್ನು ಅನಾಥಾಶ್ರಮಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಉತ್ತಮ ಪ್ರತಿಕ್ರಿಯೆ: ಎರಡು ದಿನಗಳಿಂದ ಎಲ್ಲಾ ಕ್ಯಾಂಟೀನ್‌ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊಬೈಲ್‌ ಕ್ಯಾಂಟಿನ್‌ಗಳ ಜೊತೆಗೆ ಮಹಾನಾಯಕ ಹೆಸರಲ್ಲಿ ದೊಡ್ಡ ಹೋಟೆಲ್‌ ಆರಂಭಿಸಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಊಟ-ಉಪಹಾರ ನೀಡಬೇಕು ಎನ್ನುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ನಿರಂಜನ ಹಾಗೂ ಸಂಜು. ಆಕರ್ಷಣೆಯ ಮಹಾನಾಯಕ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಜೀವನ ಆಧಾರಿತ ಮಹಾನಾಯಕ ಧಾರವಾಹಿಯ ಪ್ರೇರಣೆಗೊಳಗಾಗಿ ಅವರ ಹೆಸರನ್ನೇ ಹೋಟೇಲ್‌ಗ‌ಳಿಗೆ ನಾಮಕರಣ ಮಾಡಿದ್ದಾರೆ. ಬಡ ಕೂಲಿ ಕಾರ್ಮಿಕರಿಗೂ ನೆರವಾಗಬೇಕು ಎನ್ನುವ ಉದ್ದೇಶ ಇವರದ್ದಾಗಿದೆ. ಹೀಗಾಗಿ ಕಾರ್ಮಿಕರು ಹೆಚ್ಚಿರುವ ಸ್ಥಳ ಹಾಗೂ ಸರಕಾರಿ ಆಸ್ಪತ್ರೆಗಳು ಇವರ ಮಾರಾಟ ಸ್ಥಳವಾಗಿವೆ.

Advertisement

ಇದನ್ನೂ ಓದಿ:ಸರ್ಚಿಂಗ್ ನಿಷ್ಕ್ರಿಯಗೊಳಿಸ್ತೇವೆ: ಆಸ್ಟ್ರೇಲಿಯಾ ಸರ್ಕಾರ v\s ಗೂಗಲ್ ಜಟಾಪಟಿ!

ನಾನು ಬದುಕಿ ಇನ್ನೊಬ್ಬರನ್ನು ಬದುಕಿಸಬೇಕು ಎನ್ನುವ ತುಡಿತ ಬಹಳ ಇತ್ತು. ಮಾಡುವ ಕೆಲಸ ಬಡವರಿಗೆ ನೆರವಾಗಬೇಕು ಎನ್ನುವ ಕನಸಿತ್ತು. ಸತತ 2 ತಿಂಗಳ ಕಾಲ ಸ್ನೇಹಿತರೊಂದಿಗೆ ಚರ್ಚಿಸಿ ಕೊನೆಗೆ ಮಹಾನಾಯಕರ ಹೆಸರಲ್ಲಿ ಮೊಬೈಲ್‌ ಕ್ಯಾಂಟೀನ್‌ ಸಾಕಾರಗೊಂಡಿದೆ. ಕೆಲಸವಿಲ್ಲದೆ ಅಲೆದಾಡುತ್ತಿದ್ದ ಸ್ನೇಹಿತರು ಮನಪೂರ್ವಕ ವಾಗಿ ಕಾಯಕದಲ್ಲಿ ತೊಡಗಿದ್ದಾರೆ.

ನಿರಂಜನ ಹಂದಿಗೋಳ,ಕ್ಯಾಂಟೀನ್‌ ರೂವಾರಿ


ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next