Advertisement

ಸಾರಿಗೆ ವ್ಯವಸ್ಥೆ  ಸುಧಾರಣೆಗೆ ಮೊಬೈಲ್‌ ಆ್ಯಪ್‌

10:51 AM Dec 20, 2018 | Harsha Rao |

ಮಂಗಳೂರು: ನಗರದ ಸಮಗ್ರ ಸಾರಿಗೆ ವ್ಯವಸ್ಥೆ ಸುಧಾರಣೆ,  ಸುಗಮ ಸಂಚಾರ ನಿರ್ವಹಣೆಗೆ ಜಿಲ್ಲಾಡಳಿತದ ವತಿಯಿಂದ ಮೊಬೈಲ್‌ ಆ್ಯಪ್‌ನ್ನು 4 ತಿಂಗಳ ಒಳಗೆ ಜಾರಿಗೊಳಿಸುವುದಾಗಿ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದರು.

Advertisement

ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಬಸ್‌ ಹಾಗೂ ಆಟೋ ರಿಕ್ಷಾಗಳ ನಿಯಮ ಬಾಹಿರ ಸಂಚಾರಗಳ ಬಗ್ಗೆ, ಬಸ್‌ನ ಚಾಲಕ, ನಿರ್ವಾಹಕರ ವರ್ತನೆಯ ಬಗ್ಗೆ, ರೂಟ್‌ ತಪ್ಪಿಸಿ ಸಂಚರಿಸುವ ಬಸ್‌ಗಳ ಬಗ್ಗೆ, ಟಿಕೆಟ್‌ ನೀಡದಿರುವ ಬಗ್ಗೆ ನಾಗರಿಕರು ಆ್ಯಪ್‌ ಮೂಲಕವೇ ದೂರು ನೀಡಲು ಅವಕಾಶ ಕಲ್ಪಿಸಲಾಗುವುದು. ಇದರ ಮೇಲೆ ಜಿಲ್ಲಾಡಳಿತ ಮತ್ತು ಆರ್‌ಟಿಒ ನಿಗಾ ವಹಿಸಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ರೇಟಿಂಗ್‌ ಸೌಲಭ್ಯ
ಖಾಸಗಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆಯಾದರೆ ರೇಟಿಂಗ್‌ ನೀಡಲು ಕೂಡ ಅವಕಾಶ ಕಲ್ಪಿಸಲಾಗುವುದು. ಈ ಮೂಲಕ ಬಸ್‌ಗಳ ಲೋಪವನ್ನು ಸರಿಪಡಿಸಲು ಹಾಗೂ ಗುಣಮಟ್ಟದ ಬಸ್‌ ಸೇವೆಯನ್ನು ಪ್ರೋತ್ಸಾಹಿಸಲು ಕೂಡ ಅವಕಾಶ ನೀಡಲಾಗುವುದು. ಸ್ಮಾರ್ಟ್‌ಸಿಟಿಗೆ ಪೂರಕವಾಗಿ ಆ್ಯಪ್‌ ಮೂಲಕ ಸಂಚಾರ ಸುಧಾರಣೆ ಹೊಸ ಪ್ರಯತ್ನ ನಡೆಯಲಿದೆ ಎಂದರು.

ಬಸ್‌ ಮಾಲಕರ ಸಂಘದ ರಾಜವರ್ಮ ಬಲ್ಲಾಳ್‌ ಹಾಗೂ ದಿಲ್‌ರಾಜ್‌ ಆಳ್ವ ಮಾತನಾಡಿ, ಖಾಸಗಿ ಬಸ್‌ಗಳು ಜಿಪಿಎಸ್‌ ಹಾಗೂ ಸ್ಮಾರ್ಟ್‌ಕಾರ್ಡ್‌ ಅಳವಡಿಕೆಗೆ ಮುಂದಾಗಿವೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ದಿಶೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರದಲ್ಲಿ ಗ್ರಾಮಾಂತರ ರಿಕ್ಷಾ!
ಗ್ರಾಮಾಂತರ ಪರವಾನಿಗೆಯ ರಿಕ್ಷಾಗಳ ನಗರ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಬೇಕು. ಹಳೆ ಪರವಾನಿಗೆ ವರ್ಗಾಯಿಸಿದ ಬಳಿಕ ಮತ್ತೆ ಆಟೋ ಪರವಾನಿಗೆ ನೀಡಬಾರದು. ಪ್ರಸ್ತುತ ನೂರಾರು ಗ್ರಾಮೀಣ ಪರವಾನಿಗೆ ಆಟೋಗಳು ನಗರದಲ್ಲಿ ಅನಧಿಕೃತವಾಗಿ ಓಡಾಡುತ್ತಿವೆ. ಪರವಾನಿಗೆ ನೀಡುವಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದು ಆಟೋ ಚಾಲಕರು ಆರೋಪಿಸಿದರು. ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

Advertisement

ಪಿಲಿಕುಳದಲ್ಲಿ ಎಲೆಕ್ಟ್ರಿಕ್‌ ವಾಹನ
ಪಿಲಿಕುಳ ನಿಸರ್ಗಧಾಮಕ್ಕೆ ಇನ್ನು ಮುಂದೆ ನಗರ ಸಾರಿಗೆ ಬಸ್‌ಗಳಿಗೆ ಪ್ರವೇಶ ಇರುವುದಿಲ್ಲ. ಸಿಟಿ ಬಸ್‌ಗಳು ಪಿಲಿಕುಳ ಪ್ರವೇಶ ದ್ವಾರದವರೆಗೆ ಮಾತ್ರ ಸಂಚರಿಸಬಹುದು. ಅಲ್ಲಿಂದ ಪಿಲಿಕುಳದ ಒಳಭಾಗಕ್ಕೆ 14 ಎಲೆಕ್ಟ್ರಿಕಲ್‌ ವಾಹನಗಳ ಸೌಲಭ್ಯ ಒದಗಿಸಲಾಗಿದೆ. ಆ ವಾಹನಗಳಲ್ಲಿ ಪಿಲಿಕುಳ ಪ್ರದಕ್ಷಿಣೆಗೆ ಅವಕಾಶ ಇದೆ. ಖಾಸಗಿ ವಾಹನಗಳ ಪ್ರವೇಶಕ್ಕೆ ಅಡ್ಡಿ ಇಲ್ಲ ಎಂದರು.

ಅಪರ ಜಿಲ್ಲಾಧಿಕಾರಿ ಕುಮಾರ್‌, ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ, ಡಿಸಿಪಿ ಉಮಾ ಪ್ರಶಾಂತ್‌, ಆರ್‌ಟಿಒ ಜಾನ್‌ ಮಿಸ್ಕಿತ್‌, ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ಉಪಸ್ಥಿತರಿದ್ದರು.

ಸ್ಮಾರ್ಟ್‌ಸಿಟಿ; ಬಸ್‌ಗಳಿಗೆಲ್ಲ ಏಕಬಣ್ಣ !
ಮಂಗಳೂರು “ಸ್ಮಾರ್ಟ್‌ಸಿಟಿ’ಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಏಕರೂಪದ ಬಣ್ಣ, ಬಣ್ಣದ ಪಟ್ಟಿ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಬಸ್‌ಗಳಿಗೆ ನಸು ನೀಲಿ ಬಣ್ಣ, ಕವಚದ ಸುತ್ತ 5 ಸೆಂ.ಮೀ. ಅಗಲದ ಮೂರು ಬಿಳಿ ಪಟ್ಟಿ ಬಳಿಯಲು ಚಿಂತಿಸಲಾಗಿದೆ. ಗ್ರಾಮಾಂತರ ಬಸ್‌ಗಳು ನಸು ಬೂದು ಬಣ್ಣ, ಕವಚದ ಸುತ್ತ ಮಧ್ಯಭಾಗದಲ್ಲಿ 5 ಸೆಂ.ಮೀ. ಅಗಲದ 3 ಬಿಳಿಪಟ್ಟಿಗಳು ಹಾಗೂ ಇತರ ಮಜಲು ವಾಹನಗಳು ನಸು ಗುಲಾಬಿ ಬಣ್ಣ, ಕವಚದ ಸುತ್ತ ಮಧ್ಯಭಾಗದಲ್ಲಿ ಬಿಳಿಪಟ್ಟಿ ಬಳಿಯುವ ಬಗ್ಗೆ ಯೋಚಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು 
ಜಿಲ್ಲಾಧಿಕಾರಿ ತಿಳಿಸಿದರು.

ಆಟೋ, ಬಸ್‌ ದರ ಏರಿಕೆ: ಮನವಿ
ರಿಕ್ಷಾ ದರವನ್ನು ಪರಿಷ್ಕರಿಸದೆ ಮೂರು ವರ್ಷಗಳು ಕಳೆದಿವೆ. ಕನಿಷ್ಠ 5 ರೂ.ಗಳಷ್ಟು ದರ ಏರಿಕೆ ಮಾಡುವಂತೆ ಆಟೋರಿಕ್ಷಾ ಸಂಘಟನೆಗಳು ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು. ಈ ಬಗ್ಗೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ, ರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿ ಆರ್‌ಟಿಒ ನೇತೃತ್ವದಲ್ಲಿ ಉಪ ಸಮಿತಿ ರಚಿಸಲಾಗುವುದು. ಈ ಸಮಿತಿ 3 ವಾರದೊಳಗೆ ವರದಿ ಸಲ್ಲಿಸಲಿದ್ದು, ಮುಂದೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಖಾಸಗಿ ಬಸ್‌ಗಳ ಟಿಕೆಟ್‌ ದರ ಪರಿಷ್ಕರಿಸುವಂತೆ ಬಸ್‌ ಮಾಲಕರು ಪ್ರಾಧಿಕಾರವನ್ನು ಒತ್ತಾಯಿಸಿದರು. ಆದರೆ ಬಸ್‌ ಪ್ರಯಾಣ ದರ ಪರಿಷ್ಕರಣೆ ವಿಚಾರ ಹೈಕೋರ್ಟ್‌ನಲ್ಲಿ ಇರುವುದರಿಂದ ಇಲ್ಲಿ ಪ್ರಸ್ತಾವಿಸುವುದು ಸರಿಯಲ್ಲ. ಸದ್ಯ ಆರ್‌ಟಿಎ ಕೂಡ ಏನೂ ಮಾಡುವಂತಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next