ಸೋಮವಾರಪೇಟೆ: ಭಾರೀ ಮಳೆ ಗಾಳಿಗೆ ತತ್ತರಿಸಿರುವ ತಾಲೂಕಿನ ಹಲವೆಡೆಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, ಮಳೆಹಾನಿ ಪೀಡಿತ ಪ್ರದೇಶಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನಾದ್ಯಂತ ಮರಗಳು ಉರುಳಿಬಿದ್ದು ಹಲವಷ್ಟು ಮನೆಗಳಿಗೆ ಹಾನಿಯಾಗಿದ್ದು, ಬಡ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸುವ ಗ್ರಾಮ ಲೆಕ್ಕಿಗರು ಮತ್ತು ಲೋಕೋಪಯೋಗಿ ಇಲಾಖಾ ಅಭಿಯಂತರರು ಸರಕಾರಕ್ಕೆ ವಸ್ತುನಿಷ್ಠ ವರದಿ ನೀಡಬೇಕೆಂದು ಅಪ್ಪಚ್ಚು ರಂಜನ್ ಸೂಚಿಸಿದ್ದಾರೆ.
ಸೋಮವಾರ ಕುಂಬೂರು, ಐಗೂರು, ಕಾಜೂರು, ಹಾನಗಲ್ಲು ಬಾಣೆ, ಹಾನಗಲ್ಲು ಶೆಟ್ಟಳ್ಳಿ ಭಾಗದಲ್ಲಿ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಮನೆಯ ಛಾವಣಿ ಸಂಪೂರ್ಣ ಜಖಂಗೊಂಡಿರುವ ವನಜಾಕ್ಷಿ ಅವರ ಮನೆ ಪರಿಶೀಲಿಸಿದ ಶಾಸಕರು, ಗ್ರಾಮ ಲೆಕ್ಕಿಗರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಾಸ್ತವ ವರದಿಯನ್ನು ನೀಡುವ ಮೂಲಕ ಹೆಚ್ಚಿನ ಪರಿಹಾರವನ್ನು ಒದಗಿಸಲು ಸರಕಾರಕ್ಕೆ ವರದಿ ಸಲ್ಲಿಸಬೇಕು. ವರದಿಯ ಪ್ರತಿಯನ್ನು ತಮ್ಮ ಕಚೇರಿಗೂ ಸಲ್ಲಿಸಬೇಕು ಎಂದು ಸೂಚಿಸಿದರು.ಹಾನಗಲ್ಲು ಬಾಣೆಯಲ್ಲಿ ಅತೀ ಶೀತದಿಂದ ಕುಸಿಯುವ ಸ್ಥಿತಿಗೆ ತಲುಪಿರುವ ರಮೇಶ್, ಮನುಕುಮಾರ್ ಅವರುಗಳ ಮನೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ವಸತಿ ಯೋಜನೆಯಡಿ ನೂತನ ಮನೆ ಮಂಜೂರಾತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ನಿರ್ದೇಶ ನೀಡಿದರು.
ಮಡಿಕೇರಿ ಕ್ಷೇತ್ರದಾದ್ಯಂತ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಸರಕಾರಿ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಸೂಚನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಭಾರೀ ನಷ್ಟವಾಗಿದೆ. ಮಳೆಹಾನಿ ಪರಿಹಾರ ನಿಧಿ ಸೇರಿದಂತೆ ವಿಶೇಷ ಅನುದಾನ ಒದಗಿಸಲು ಸರಕಾರ ಮುಂದಾಗಬೇಕಿದೆ ಎಂದು ರಂಜನ್ ಅಭಿಪ್ರಾಯಿಸಿದರು.ಮಳೆಯಿಂದ ಹಾನಿಗೊಳಗಾದ ಮನೆ, ರಸ್ತೆಗಳನ್ನು ತುರ್ತು ಗಮನ ಹರಿಸಿ ದುರಸ್ತಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಅನುದಾನಕ್ಕಾಗಿ ಸರಕಾರದ ಗಮನ ಸೆಳೆಯಲಾಗುವದು ಎಂದು ಶಾಸಕರು ತಿಳಿಸಿದರು.