Advertisement

ದೇವದುರ್ಗ ಅಭಿವೃದ್ಧಿಗೆ ಶಾಸಕರ ಅಡ್ಡಗಾಲು

02:01 PM Jul 15, 2017 | Team Udayavani |

ರಾಯಚೂರು: ಸರ್ಕಾರ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎನ್ನುತ್ತಿರುವ ದೇವದುರ್ಗ ಶಾಸಕ ಶಿವನಗೌಡ ನಾಯಕ, ಕ್ಷೇತ್ರಕ್ಕೆ ಬಂದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಅವರೇ ಅಭಿವೃದ್ಧಿಗೆ ಅಡ್ಡಗಾಲಾಗಿದ್ದಾರೆ ಎಂದು ಸಂಸದ ಬಿ.ವಿ.ನಾಯಕ ಆರೋಪಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ವೆಂಕಟೇಶ ನಾಯಕ ಅವರ ಅವ ಧಿಯಲ್ಲಿ ದೇವದುರ್ಗ ತಾಲೂಕು ಅರಕೇರಾಕ್ಕೆ ಪಾಲಿಟೆಕ್ನಿಕ್‌ ಮಂಜೂರಾಗಿತ್ತು. ಸರ್ಕಾರಿ ಜಮೀನಿನಲ್ಲಿ ಕಾಲೇಜು ನಿರ್ಮಿಸಲು ಸ್ಥಳ ನಿಗದಿ ಮಾಡಲಾಗಿತ್ತು. 8 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಈಗಾಗಲೇ 2.56 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಅಲ್ಲಿ ಕಟ್ಟಡ
ನಿರ್ಮಿಸದಂತೆ ಶಾಸಕರು ಪತ್ರ ಬರೆದಿದ್ದರು. ಅಭಿವೃದ್ಧಿ ವಿಚಾರದಲ್ಲಿ ಅವರು ದ್ವಂದ್ವ ನಿಲುವು ತೋರುತ್ತಿದ್ದಾರೆ ಎಂದು ದೂರಿದರು.

ಇಲಾಖೆ ತಾಂತ್ರಿಕ ನಿರ್ದೇಶಕರಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೆ. ನಿರ್ದೇಶಕರು ಲಿಖೀತ ಉತ್ತರ ನೀಡಿದ್ದು, ಉದ್ದೇಶಿತ ಸ್ಥಳದಲ್ಲಿಯೇ ಕಾಮಗಾರಿ ನಿರ್ವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ವಿವರಿಸಿದರು. ಆರ್‌.ವಿ. ದೇಶಪಾಂಡೆ ಉನ್ನತ ಶಿಕ್ಷಣ ಖಾತೆ ಸಚಿವರಾಗಿದ್ದ ವೇಳೆ ದೇವದುರ್ಗ ತಾಲೂಕಿಗೆ ಎರಡು ಪಾಲಿಟೆಕ್ನಿಕ್‌ ಮಂಜೂರು ಮಾಡಿದ್ದರು. ದೇವದುರ್ಗ ಮತ್ತು ಅರಕೇರಾದಲ್ಲಿ ಏಕಕಾಲಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅರಕೇರಾ ಸಮೀಪದ 10 ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಈಗ ವಿನಕಾರಣ ಸ್ಥಳ ಬದಲಿಸಬೇಕು ಎಂದು
ಪತ್ರ ಬರೆದಿರುವುದು ವಿಪರ್ಯಾಸ. ಅರಕೇರಾ ಸಮೀಪದಲ್ಲಿ ಬೇರೆ ಎಲ್ಲೂ ಸರ್ಕಾರಿ ಜಮೀನು ಇಲ್ಲ. ಬೇರೆ ಕಡೆ ಖಾಸಗಿ ಸ್ಥಳ ಖರೀದಿಸಿ ಕಟ್ಟಡ ನಿರ್ಮಿಸಲು ಸರ್ಕಾರಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸ್ಥಳಾಂತರಿಸದಂತೆ ನಾನು ಕೂಡ ಪತ್ರ ಬರೆದಿದ್ದೆ ಎಂದು ತಿಳಿಸಿದರು.

ಶಾಸಕರು ರಾಜಕೀಯ ದುರುದ್ದೇಶದಿಂದ ಹೋರಾಟ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅ ಧಿಕಾರಿಗಳು ಆತ್ಮಗೌರವಕ್ಕೆ ಧಕ್ಕೆಯಾಗುವ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಲ್ಯಾಂಡ್‌ ಆರ್ಮಿಯವರು ಕೂಡ ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡಲು ಆಗುವುದಿಲ್ಲ. ಬಹುತೇಕ ಅಂತಿಮಗೊಂಡಿದ್ದ
28 ಕೋಟಿ ರೂ. ಕಾಮಗಾರಿಗಳನ್ನು ಅವರು ಹಿಂದಿರುಗಿಸಿದ್ದರು. ಅದರಲ್ಲಿ 11 ಕೋಟಿ ರೂ. ಹಣವನ್ನು ಆಗಿನ ಪ್ರಾದೇಶಿಕ ಆಯುಕ್ತ ಬಿಸ್ವಾಸ್‌ ರಾಯಚೂರು ಗ್ರಾಮಾಂತರ ಕ್ಷೇತ್ರಕ್ಕೆ ನೀಡಿದ್ದರು. ತಾಲೂಕಿನ ಅಭಿವೃದ್ಧಿಗೆ ತಾವೇ ಕಂಟಕರಾಗಿದ್ದಾರೆ ಎಂದು ದೂರಿದರು. ಯಾವುದೇ ಪಕ್ಷಗಳು ಅಭಿವೃದ್ಧಿಗೆ ಅಡ್ಡಿಪಡಿಸುವುದಿಲ್ಲ. ಜನಪ್ರತಿನಿಧಿಗಳಿಗೆ ತಮ್ಮದೇ ಹಕ್ಕುಗಳಿರುತ್ತವೆ. ಅವುಗಳಿಗೆ ಧಕ್ಕೆ ಬರುವಂತೆ
ಯಾವುದೇ ಸರ್ಕಾರಗಳು ನಡೆದುಕೊಳ್ಳುವುದಿಲ್ಲ. ಅಧಿಕಾರಿಗಳು ಯಾರ ಗುಲಾಮರಲ್ಲ. ಜನರು ಕೂಡ ನಂಬಿಕೆ ಇಟ್ಟು ಜನಪ್ರತಿನಿಧಿಗಳನ್ನು ಚುನಾಯಿಸಿರುತ್ತಾರೆ. ಆದರೆ, ಅದನ್ನು ಬಿಟ್ಟು ಸವಾಧಿಕಾರಿ ಧೋರಣೆಯಿಂದ ಅಧಿಕಾರ ಮಾಡಿ ಅಭಿವೃದ್ಧಿಗೆ ಅಡ್ಡಿಪಡಿಸುವುದು ಸರಿಯಲ್ಲ. ಶಾಸಕರಿಗೆ ಪ್ರಜ್ಞೆ ಇದ್ದರೆ ಹೋರಾಟ ಕೈ ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ ಎಂದು ಸಲಹೆ ನೀಡಿದರು.

ಏನಿದು ಸಮಸ್ಯೆ?
ಅರಕೇರಾ ಸಮೀಪದ ಸರ್ವೆ ನಂ.39ರಲ್ಲಿ ಮೂರು ವರ್ಷದ ಹಿಂದೆ ಪಾಲಿಟೆಕ್ನಿಕ್‌ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇಲ್ಲಿ 40ರಿಂದ 50 ಎಕರೆ ಸರ್ಕಾರಿ ಸ್ಥಳವಿದ್ದು, ಇಲ್ಲಿ ಪರಿಶಿಷ್ಟ ವರ್ಗ, ಪಂಗಡಗಳ ವಸತಿ ನಿಲಯವಿದೆ. ಅಲ್ಲದೇ, ವಸತಿಗೃಹ, ಹಾಸ್ಟೆಲ್‌ ಸೇರಿ ಇತರೆ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ. ಎಂಟು ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದ್ದು, ಮೆ| ರೈಟ್ಸ್‌ ಎನ್ನುವ
ಸಂಸ್ಥೆಗೆ ಕಾಮವಾರಿ ನಿರ್ವಹಣೆಗೆ ವಹಿಸಲಾಗಿದೆ. ಈಗಾಗಲೇ 2.56 ಕೋಟಿ ರೂ. ಅನುದಾನ ಕೂಡ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕಿಯೆ ನಡೆಯುತ್ತಿದೆ. ಆದರೆ, ಬೇರೆ ಕಡೆ ಕಟ್ಟಡ ನಿರ್ಮಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಸಂಸದ ಬಿ.ವಿ.ನಾಯಕ ಸ್ಥಳಾಂತರಿಸದಂತೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರ ನೀಡಿರುವ ಇಲಾಖೆ ನಿರ್ದೇಶಕರು ಉದ್ದೇಶಿತ ಸ್ಥಳದಲ್ಲೇ ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next