Advertisement

ಬಡ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಟ್ಟ ಶಾಸಕ..!

04:56 PM Feb 03, 2020 | Suhan S |

ಮಂಡ್ಯ: ಬಡ ಕುಟುಂಬವೊಂದಕ್ಕೆ ಉಚಿತವಾಗಿ ಮನೆ ಕಟ್ಟಿಸಿಕೊಟ್ಟಿರುವ ಶಾಸಕ ಎಂ.ಶ್ರೀನಿವಾಸ್‌ ಅವರ ಮಾದರಿ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ನಗರದ ಹೊಸಹಳ್ಳಿ ಗುರುಮಠದ ಬಳಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದ ತುಳಸಿ-ರೇಣುಕಾ ಕುಟುಂಬಕ್ಕೆ ಸುಮಾರು 6 ಚದರದ ಮನೆ ನಿರ್ಮಿಸಿಕೊಟ್ಟಿದ್ದು, ಭಾನುವಾರ ಮನೆಯ ಗೃಹ ಪ್ರವೇಶ ನೆರವೇರಿಸಿದರು. ಮನೆಯ ಕುಟುಂಬ ಸದಸ್ಯರೆಲ್ಲರೂ ಶ್ರೀನಿವಾಸ್‌ರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

Advertisement

ಮಳೆಯಿಂದ ಕುಸಿದಿದ್ದ ಗುಡಿಸಲು: ಕಳೆ ದೊಂದು ವರ್ಷದ ಹಿಂದೆ ಹೊಸಹಳ್ಳಿಯ ಗುರುಮಠದ ಬಳಿ ಇದ್ದ ತುಳಸಿ-ರೇಣುಕಾ ಅವರಿಗೆ ಸೇರಿದ ಹಳೆಯ ಗುಡಿಸಲೊಂದು ಮಳೆಯಿಂದ ಕುಸಿತಗೊಂಡಿತ್ತು. ಆ ಮನೆಯಲ್ಲಿ ಒಟ್ಟು 9 ಜನರಿದ್ದು ಅವರೆಲ್ಲರೂ ನಿರ್ಗತಿಕರಾಗಿದ್ದರು. ಕುಟುಂಬದವರು ಎಂ.ಶ್ರೀನಿವಾಸ್‌ರನ್ನು ಭೇಟಿ ಯಾಗಿ ವೇದನೆಯನ್ನು ನಿವೇದಿಸಿಕೊಂಡರು.

ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ್ದ ಶಾಸಕ: ಸಂತ್ರಸ್ತರ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಎಂ.ಶ್ರೀನಿವಾಸ್‌ ಅವರು ಕುಟುಂಬ ಸದಸ್ಯರ ಸ್ಥಿತಿಯನ್ನು ಕಂಡು ಮರುಕ ವ್ಯಕ್ತಪಡಿಸಿದರು. ಈ ಗುಡಿಸಲಿರುವ ಆಸುಪಾಸಿನಲ್ಲಿ ಸುಂದರವಾದ ಮನೆಗಳು ತಲೆಎತ್ತಿದ್ದು, ಇದೊಂದು ಮಾತ್ರ ಗುಡಿಸಲಿತ್ತು. ಅದಕ್ಕಾಗಿ ಇಲ್ಲೊಂದು ಮನೆಯನ್ನು ಕಟ್ಟಿಸಿಕೊಡುವ ಸಂಕಲ್ಪ ಮಾಡಿ ಕುಟುಂಬದವರಿಗೆ ವಾಗ್ಧಾನ ನೀಡಿದರು.

6 ಚದರದ ಮನೆ: ಒಂದು ವರ್ಷದೊಳಗೆ 30/25 ಅಳತೆಯ ನಿವೇಶನದಲ್ಲಿ ಎರಡು ಬೆಡ್‌ ರೂಂ, ಒಂದು ಅಡುಗೆ ಮನೆ, ಒಂದು ಹಾಲ್, ಸ್ನಾನದ ಮನೆಯನ್ನೊಳಗೊಂಡ 6 ಚದರದ ಮನೆಯನ್ನು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದಾರೆ. ಇದರಿಂದ ಗುಡಿಸಲು ಕಳೆದುಕೊಂಡು ನಿರ್ಗತಿಕರಾಗಿದ್ದ ಕುಟುಂಬದ 9 ಮಂದಿಗೆ ಸೂರು ದೊರಕಿದಂತಾಗಿದೆ.

ಮನೆಗೆ ಶ್ರೀನಿವಾಸ ಕೃಪೆ ಎಂದು ನಾಮಕರಣ: ಶಾಸಕ ಎಂ.ಶ್ರೀನಿವಾಸ್‌ರವರ ಕೊಡುಗೆಗೆ ಪ್ರತಿಯಾಗಿ ತುಳಸಿ-ರೇಣುಕಾ ಕುಟುಂಬದವರು ಮನೆಗೆ ಶ್ರೀನಿವಾಸ ಕೃಪೆ ಎಂದು ನಾಮಕರಣ ಮಾಡಿದ್ದಾರೆ. ಶಾಸಕರ ಮಾನವೀಯ ಹೃದಯವನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next