Advertisement

ಲೀಡ್‌ ಕೊಟ್ಟವರಿಗೆ ಮಾತ್ರ ಎಂಎಲ್‌ಎ ಟಿಕೆಟ್‌!

09:58 AM Apr 03, 2019 | Team Udayavani |

ಕಲಬುರಗಿ: ರಾಜ್ಯದಲ್ಲಿ 22 ಸೀಟುಗಳನ್ನು ಬಿಜೆಪಿ ಗೆಲ್ಲಲೇಬೇಕು ಹಾಗೂ ತೀವ್ರ ಹಣಾಹಣಿ ಎದುರಿಸುತ್ತಿರುವ, ಪ್ರತಿಷ್ಠಿತ ಕ್ಷೇತ್ರಗಳಲ್ಲೂ ಹೇಗಾದರೂ ಮಾಡಿ ಜಯಶಾಲಿ ಆಗಲೇಬೇಕೆಂಬ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್‌ ಹಲವಾರು ತಂತ್ರಗಾರಿಕೆ ರೂಪಿಸಿದ್ದು, ಅದರಲ್ಲಿ ಮುಂದಿನ ವಿಧಾನಸಭೆ
ಚುನಾವಣೆಯಲ್ಲಿ ಟಿಕೆಟ್‌ ನೀಡಿಕೆ ವಿಷಯದ ಎಚ್ಚರಿಕೆ ಬಾಣ ಬಿಟ್ಟಿದೆ.

Advertisement

ರಾಜ್ಯದಲ್ಲಿ 104 ಸೀಟುಗಳನ್ನು ಬಿಜೆಪಿ ಗೆದ್ದಿದೆ. ಇದರಲ್ಲಿ ಹಲವು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹೆಚ್ಚಿನ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯೇ ಹೆಚ್ಚಿನ ಸ್ಥಾನಗಳನ್ನು ಪಡೆದಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಇರುವುದರಿಂದ 2018ರ ವಿಧಾನಸಭೆ ಕ್ಷೇತ್ರದಲ್ಲಿ ತಾವು ಗಳಿಸಿದ್ದಕ್ಕಿಂತ ಹೆಚ್ಚಿನ (ಲೀಡ್‌) ಮತಗಳನ್ನು ಈ ಲೋಕಸಭೆ ಚುನಾವಣೆಯಲ್ಲಿ ತರಬೇಕು. ಒಂದು ವೇಳೆ ತರದೇ ಇದ್ದರೆ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವುದಕ್ಕೆ ಹಿಂದೆ-ಮುಂದೆ ನೋಡಬೇಕಾ ಗುತ್ತದೆ
ಎಂದು ಸ್ಪಷ್ಟ ಸಂದೇಶ ರವಾನಿಸಲಾಗಿದೆ.

ಕಳೆದ ಸಲ ಲೋಕಸಭೆ ಚುನಾವಣೆ ನಡೆದಾಗ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲೇ ಪಕ್ಷಕ್ಕೆ ಕಡಿಮೆ ಮತಗಳು ಲಭಿಸಿದ್ದವು. ಅಲ್ಲದೇ ಮಾಜಿ ಶಾಸಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿದ್ದ ಮತಗಳಿಗಿಂತ ಕಡಿಮೆ ಮತಗಳು ಅವರ ಕ್ಷೇತ್ರದಿಂದ ಲಭಿಸಿದ್ದವು. ಆದ್ದರಿಂದ ಕಲಬುರಗಿ
ಜಿಲ್ಲೆಯಲ್ಲಿ ಹಾಲಿ ಬಿಜೆಪಿ ಸದಸ್ಯರಿಗೆ ಈ ಸಂದೇಶ ರವಾನಿಸಲಾಗಿದೆ. ಅದೇ ರೀತಿ ಕ್ಷೇತ್ರದಲ್ಲಿ ಪರಾಭವ ಗೊಂಡಿರುವ ಮಾಜಿ ಶಾಸಕರು ಇಲ್ಲವೇ ಪಕ್ಷದ ಅಭ್ಯರ್ಥಿ ಗಳಿಗೂ ಪಕ್ಷಕ್ಕೆ ಲೀಡ್‌ ತಂದು ಕೊಟ್ಟಲ್ಲಿ ಮಾತ್ರ ಮುಂದಿನ ಬಾರಿ ಟಿಕೆಟ್‌ ಎಂದು ಹೇಳಿದ್ದರಿಂದ, ಮಾಜಿ ಶಾಸಕರೆಲ್ಲ ತಾವೇ
ಚುನಾವಣೆಯಲ್ಲಿ ನಿಂತಂತೆ ಓಡಾಡಲಾರಂಭಿಸಿದ್ದಾರೆ.

ಕಲಬುರಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮೂರು, ಕಾಂಗ್ರೆಸ್‌ ನಾಲ್ಕು ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಇದೆ. ಶಾಸಕರು ಶಕ್ತಿ ಮೀರಿ ಲೀಡ್‌ ತಂದು ಕೊಟ್ಟಲ್ಲಿ ಜತೆಗೆ ಸೋತ ಕ್ಷೇತ್ರಗಳಲ್ಲಿ ಮೋದಿ ಹವಾ ಹಾಗೂ ಪಕ್ಷದ ಸಂಘಟನೆ ಆಧಾರದ ಮೇಲೆ ಲೀಡ್‌ ತಂದಲ್ಲಿ ಗೆಲುವು ಸಾಧ್ಯ ಎಂದು ಪಕ್ಷದ ವರಿಷ್ಠರು ನಿರ್ದೇಶನ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಒಂದೂವರೆ
ತಿಂಗಳಿನಿಂದ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದು, ಎಲ್ಲ ಆಗು ಹೋಗುಗಳ ಮೇಲೆ ತೀವ್ರ ನಿಗಾ ವಹಿಸಿ, ಸ್ವತಃ ತಂತ್ರಗಾರಿಕೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ
ಎನ್ನುವುದು ಕುತೂಹಲ ಮೂಡಿಸಿದೆ.

ಪಕ್ಷದ ಶಾಸಕರೇ ಒಳಗೊಳಗೆ ಕಾಂಗ್ರೆಸ್‌ ಪರ ಕೆಲಸ ಮಾಡುತ್ತಾರೆಯೇ ಎನ್ನುವ ಗುಮಾನಿ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್‌ ಈ ನಿರ್ದೇಶನ ನೀಡಿದೆ ಎನ್ನಲಾಗಿದೆ. ಇದರಿಂದ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆ ಹೈವೊಲ್ಟೆàಜ್‌ ಕ್ಷೇತ್ರ ಆಗುವಂತೆ ಮಾಡಿದೆ. ಈಗಾಗಲೇ
ಪ್ರಧಾನಿ ಮೋದಿ ಕಲಬುರಗಿಗೆ ಬಂದು ಚುನಾವಣಾ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕೆಂಬ ಸ್ಪಷ್ಟ ಸಂದೇಶ ನೀಡಿ ಹೋಗಿದ್ದಾರೆ.

Advertisement

ಇತ್ತ ಕಾಂಗ್ರೆಸ್‌ ಪಕ್ಷವೂ ಗೆಲ್ಲಲು ತಂತ್ರಗಾರಿಕೆ ರೂಪಿಸಿದೆ. ಪಕ್ಷ ಗೆದ್ದರೆ ತಮಗೆಲ್ಲ ಅನುಕೂಲವಾಗುತ್ತದೆ. ಅಲ್ಲದೇ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೊರೆತಿರುವ ಲೀಡ್‌ ಗಳನ್ನು ಉಳಿಸುವತ್ತ ನೋಟ ಬೀರಿ ಎಂದು ಪಕ್ಷದ ಹೈಕಮಾಂಡ್‌ ತನ್ನ ಶಾಸಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಇನ್ನು ಬಿಜೆಪಿ ನೆಚ್ಚಿಕೊಂಡಿರುವ ಮತಗಳ ವಿಭಜನೆ ಮಾಡಲು ಕಾರ್ಯಗಳನ್ನು ರೂಪಿಸುತ್ತಿದೆ ಎನ್ನಲಾಗಿದೆ. ಇದೇ ನಿಟ್ಟಿನಲ್ಲಿ ಮುಖಂಡರನ್ನು ಸೆಳೆಯಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲೂ ಪರಿಣಾಮಕಾರಿ ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ ಹಾಗೂ ಪರಿಣಾಮ ಬೀರುತ್ತದೆ ಎನ್ನುವ ದೃಷ್ಟಿಯಿಂದ ಆಂತರಿಕವಾಗಿ ಸೂಚಿಸಲಾಗಿದೆ. ಒಟ್ಟಾರೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಇದೊಂದು ತಂತ್ರಗಾರಿಕೆ.
ಎನ್‌.ರವಿ ಕುಮಾರ್ ಬಿಜಪಿ ರಾಜ್ಯ ಪ್ರ. ಕಾರ್ಯದರ್ಶಿ, ಉಸ್ತುವಾರಿ ಕಲಬುರಗಿ ಕ್ಷೇತ್ರ

ಹನುಮಂತರಾವ ಬೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next