Advertisement

ಆಶ್ವಾಸನೆಗಷ್ಟೇ ಸೀಮಿತವಾದ ಎಂಎಲ್‌ಎ

11:19 AM Nov 11, 2018 | Team Udayavani |

ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ರಾಜಕೀಯ ರಂಗ, ರಂಗು-ರಂಗಾಗಿರುತ್ತದೆ. ಇಂತಹ ರಾಜಕೀಯವನ್ನು ಚಿತ್ರದ ಮೂಲಕ ತೆರೆಮೇಲೆ ತಂದರೆ ಅದರ ರಂಗು ಹೇಗಿರಬಹುದು? ಇಂಥದ್ದೊಂದು ರಾಜಕೀಯ ಚಿತ್ರಣವನ್ನು ತೆರೆಮೇಲೆ ಕಟ್ಟಿಕೊಡಲು ಹೊರಟಿರುವುದು “ಎಂಎಲ್‌ಎ’ ಚಿತ್ರ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ಪಡ್ಡೆ ಹುಡುಗರ ತುಂಟಾಟ, ರಾಜಕೀಯ ಚದುರಂಗದಾಟ, ನಡುವೆ ಪ್ರೀತಿಯ ಕಣ್ಣಾಮುಚ್ಚಾಲೆ ಇವಿಷ್ಟೂ ಸೇರಿದರೆ, “ಎಂಎಲ್‌ಎ’ ಚಿತ್ರವಾಗುತ್ತದೆ. 

Advertisement

ಕೆಲಸ-ಕಾರ್ಯವಿಲ್ಲದೆ, ಸಮಾಜದಲ್ಲಿ ಅಂಕು-ಡೊಂಕುಗಳನ್ನು ತಿದ್ದುವ ಒಳ್ಳೆ ಹುಡ್ಗ ಪ್ರಥಮ್‌ಗೆ ಒಂದಷ್ಟು ತರಲೆ ಸ್ನೇಹಿತರು. ಹೀಗೆ ಒಂದಷ್ಟು ತರಲೆ ಕೆಲಸಗಳನ್ನು ಮಾಡಿಕೊಂಡಿರುವಾಗಲೇ ನಡುವೆ ಸಿಗುವ‌ ಹುಡುಗಿಯೊಬ್ಬಳ ಮೇಲೆ ಪ್ರೀತಿಯಾಗುತ್ತದೆ. ಇದೇ ಹೊತ್ತಿಗೆ ಚುನಾವಣೆ ಕೂಡ ಘೋಷಣೆಯಾಗುತ್ತದೆ. ಅಚಾನಕ್‌ ಆಗಿ ನಡೆಯುವ ಸನ್ನಿವೇಶದಲ್ಲಿ ಒಳ್ಳೆ ಹುಡ್ಗ ಪ್ರಥಮ್‌ ಹಾಲಿ ನಗರಾಭಿವೃದ್ಧಿ ಸಚಿವರ ವಿರುದ್ದ ಚುನಾವಣೆಗೆ ನಿಲ್ಲಬೇಕಾಗುತ್ತದೆ.

ಅಲ್ಲಿಯವರೆಗೆ ಮಾಡಿದ ಪರೋಪಕಾರಿ ಕೆಲಸಗಳು ಈಗ ಪ್ರಥಮ್‌ ಕೈ ಹಿಡಿಯುತ್ತವೆ. ಕೇವಲ ನೂರು ವೋಟ್‌ ತೆಗೆದುಕೊಂಡು ತನ್ನ ಸಾಮರ್ಥ್ಯವನ್ನು ತೋರಿಸುತ್ತೇನೆ ಎಂದು ಹೊರಟ ಪ್ರಥಮ್‌, ನೋಡುನೋಡುತ್ತಿದ್ದಂತೆ ಸಾವಿರಾರು ವೋಟ್‌ ಲೀಡ್‌ ತೆಗೆದುಕೊಂಡು ಹಾಲಿ ಸಚಿವರನ್ನು ಸೋಲಿಸಿ, ಎಂಎಲ್‌ಎ ಪ್ರಥಮ್‌ ಆಗುತ್ತಾನೆ. ಸರ್ಕಾರ ರಚನೆಗೆ ಕೇವಲ ಒಂದೇ ಒಂದು ಮತ ಮ್ಯಾಜಿಕ್‌ ನಂಬರ್‌ ಆಗಿದ್ದರಿಂದ, ಪಕ್ಷೇತರ ಎಂಎಲ್‌ಎ ಪ್ರಥಮ್‌ಗೆ ಎಲ್ಲಿಲ್ಲದ ಬೇಡಿಕೆ!

ಇದೇ ಅವಕಾಶವನ್ನು ಬಳಸಿಕೊಂಡು ತನ್ನ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟು ಎಂಎಲ್‌ಎ ಪ್ರಥಮ್‌ ಅಂದುಕೊಂಡಂತೆ ನಗರಾಭಿವೃದ್ಧಿ ಸಚಿವನಾಗುತ್ತಾನೆ. ರಾಜಕೀಯದ ಆಳ-ಅಗಲ ಗೊತ್ತಿಲ್ಲ ಎಂಎಲ್‌ಎ ಕಂ ನಗರಾಭಿವೃದ್ಧಿ ಸಚಿವ ಮುಂದೇನು ಮಾಡುತ್ತಾನೆ? ಪ್ರಥಮ್‌ ಅಧಿಕಾರವಧಿಯಲ್ಲಿ ಏನೇನು ಕೆಲಸ-ಕಾರ್ಯಗಳು ಆಗುತ್ತವೆ? ಬಚ್ಚಾ ಎಂದು ಕರೆಸಿಕೊಳ್ಳುವ ಹುಡ್ಗ ಹೇಗೆ ಅಚ್ಚಾ ಎಂದೆನಿಸಿಕೊಳ್ಳುತ್ತಾನಾ? ಅನ್ನೋದೇ ಚಿತ್ರದ ಕಥಾಹಂದರ.

ಇದನ್ನ ಕಣ್ಣಾರೆ ಕಾಣಬೇಕೆಂಬ ಕುತೂಹಲವಿದ್ದರೆ, ನೀವು “ಎಂಎಲ್‌ಎ’ ಚಿತ್ರವನ್ನು ನೋಡಬಹುದು. ಯಾವುದೇ ಹೊಸತನವಿಲ್ಲದೆ ಸರಳ ಕಥೆಯೊಂದನ್ನು, ಒಂದಷ್ಟು ಮೇಲೊಗರ, ಒಗ್ಗರಣೆ ಸೇರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ನಿರ್ದೇಶಕ ಮೌರ್ಯ. ಕಥೆಗಿಂತ ಹೆಚ್ಚಾಗಿ ಸನ್ನಿವೇಶಗಳ ಮೂಲಕ ನೋಡುಗರನ್ನು ರಂಜಿಸಲು ಮುಂದಾಗಿರುವ ನಿರ್ದೇಶಕರು ಅದಕ್ಕೆ ತಕ್ಕಂತೆ ದೃಶ್ಯಗಳನ್ನು ಜೋಡಿಸಿ ಜಾಣ್ಮೆ ಮೆರೆದಿದ್ದಾರೆ.

Advertisement

ಅದನ್ನೂ ಹೊರತುಪಡಿಸಿದರೆ, ಚಿತ್ರದ ಬೇರಾವ ಸಂಗತಿಗಳು ಗಮನ ಸೆಳೆಯುವುದಿಲ್ಲ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ನಾಯಕ ಪ್ರಥಮ್‌ ಬಿಗ್‌ಬಾಸ್‌ ಮನೆಯೊಳಗೆ-ಹೊರಗೆ ಹೇಗೆ ವರ್ತಿಸುತ್ತಿದ್ದರೊ ಅದೇ ವರ್ತನೆ ಈ ಚಿತ್ರದಲ್ಲೂ ಮುಂದುವರೆಸಿದ್ದಾರೆ. ನಾಯಕಿ ಸೋನಾಲ್‌ ಮೊಂತೆರೋ ಮತ್ತು ರೇಖಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಪ್ರೇಕ್ಷಕರನ್ನು ನಗಿಸುವ ಸಲುವಾಗಿಯೇ ಸೃಷ್ಟಿಸಿದ ಕುರಿ ಪ್ರತಾಪ್‌ ಮತ್ತಿತರ ಪಾತ್ರಗಳು ಅಲ್ಲಲ್ಲಿ ಒಂದಷ್ಟು ನಗುತರಿಸುತ್ತವೆ.

ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ವಿಕ್ರಮ್‌ ಸುಬ್ರಮಣ್ಯ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಗುನುಗುವಂತಿವೆ. ಕೃಷ್ಣ ಸಾರಥಿ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ಕೆ.ಆರ್‌ ಲಿಂಗರಾಜು ಸಂಕಲನ ಕೆಲವು ಕಡೆಗಳಲ್ಲಿ ಇನ್ನಷ್ಟು ಮೊನಚಾಗಿದ್ದರೆ, ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಒಟ್ಟಾರೆ ತೀರಾ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗುವವರಿಗೆ “ಎಂ.ಎಲ್‌.ಎ’ ಹಿಡಿಸುವುದು ತುಸು ಕಷ್ಟ ಎನ್ನಬಹುದು. 

ಚಿತ್ರ: ಎಂಎಲ್‌ಎ
ನಿರ್ಮಾಣ: ವೆಂಕಟೇಶ್‌ ರೆಡ್ಡಿ 
ನಿರ್ದೇಶನ: ಮೌರ್ಯ
ತಾರಾಗಣ: ಪ್ರಥಮ್‌, ಸೋನಾಲ್‌ ಮಂತೇರೋ, ರೇಖಾ, ಕುರಿ ಪ್ರತಾಪ್‌, ರಾಜಶೇಖರ್‌, ನವೀನ್‌ ಪಡೀಲ್‌, ಚಂದ್ರಕಲಾ ಮೋಹನ್‌, ಕುರಿರಂಗ, ಹೆಚ್‌.ಎಂ ರೇವಣ್ಣ ಮತ್ತಿತರರು. 

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next