Advertisement

ಸ್ವಂತ ಬಲದಿಂದ ಅಧಿಕಾರಕ್ಕೇರುವ ವಿಶ್ವಾಸ

04:13 PM Nov 09, 2021 | Team Udayavani |

ತುಮಕೂರು: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಕಾಂಗ್ರೆಸ್‌ ಅಧಿಕಾರ ಬರುವುದು ಖಚಿತ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಹಾನಗಲ್‌, ಸಿಂಧಗಿ ಉಪಚುನಾವಣೆ ಫ‌ಲಿತಾಂಶ ಕಾಂಗ್ರೆಸ್‌ಗೆ ಮುಂದಿನ ಚುನಾವಣೆಗೆ ದಿಕ್ಸೂಚಿ, ಆತ್ಮವಿಮರ್ಶೆಯ ಪಾಠ ಎರಡನ್ನೂ ಕಲಿಸಿದ್ದು, 2023ರಲ್ಲಿ ಕಾಂಗ್ರೆಸ್‌ ಸ್ವಂತ ಬಲದ ಮೆಲೆ ಅಧಿಕಾರಕ್ಕೇರುವ ವಿಶ್ವಾಸ ಮೂಡಿಸಿದೆ ಎಂದರು.

ಭಾನುವಾರ ನಡೆದ ಕಾಂಗ್ರೆಸ್‌ ಪರಾಮರ್ಶನಾ ಸಭೆಯಲ್ಲಿ ಬೂತ್‌ಮಟ್ಟದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ವೃದ್ಧಿ ಹಾಗೂ ಡಿಸಿಸಿ, ಕೆಪಿಸಿಸಿ ಹಾಗೂ ಎಐಸಿಸಿಗೆ ಪ್ರತಿನಿಧಿಗಳನ್ನು ಸದಸ್ಯರ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ಕೊಡಲು ಚರ್ಚಿಸಲಾಗಿದೆ. ಪ್ರತಿ ರಾಜ್ಯ, ಜಿಲ್ಲೆಯಿಂದ ಎಐಸಿಸಿಗೆ ಆಯ್ಕೆಯಾದ ಪ್ರತಿನಿಧಿಗಳು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಬಿಜೆಪಿ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಜನಜಾಗೃತಿ ಸಮಾವೇಶವನ್ನು ಜಿಲ್ಲಾ, ತಾಲೂಕು, ಬ್ಲಾಕ್‌ಮಟ್ಟದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಬಿಜೆಪಿಯಿಂದ ದಲಿತ ಮಾತು ಅನಗತ್ಯ: ಬಿಜೆಪಿಯಿಂದ ದಲಿತ ಮುಖ್ಯಮಂತ್ರಿ ಎನ್ನುವ ಮಾತು ಅನಗತ್ಯ ಸಮಾನತೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ ಪಕ್ಷ ದಲಿತರಿಗೆ ಸಿಎಂ ಪದವಿ ನೀಡುವ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿಯವರು ರಾಜಕಾರಣದ ದೃಷ್ಟಿಯಿಂದ ದಲಿತ ಸಿಎಂ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್‌ ದಲಿತ ನಾಯಕರಿಗೆ ಅವರ ಅರ್ಹತೆ ಆಧಾರದಲ್ಲಿ ಸಂದರ್ಭ ಒದಗಿ ಬಂದಾಗಲೆಲ್ಲ ಉನ್ನತ ಸ್ಥಾನಮಾನ ನೀಡಿದೆ. ಮಹಾರಾಷ್ಟ್ರದ ದಲಿತ ನೇತಾರ ಸುಶೀಲ್‌ಕುಮಾರ್‌ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ರಾಜ್ಯಪಾಲರನ್ನಾಗಿಸಿದ್ದು ಕಾಂಗ್ರೆಸ್‌ ಎಂದರು.

ಮೇಲು-ಕೀಳು ಬೇಡ: ಮೇದಾವಿ ರಾಜನೀತಜ್ಞ ಕೆ.ಆರ್‌. ನಾರಾಯಣನ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಯಾರು? ಬಿಜೆಪಿಯವರು ಸಂವಿಧಾನಕ್ಕೆ ಅಪಮಾನಿಸುವಂತೆ ದಲಿತ ಸಮುದಾಯವನ್ನು ಅನಗತ್ಯವಾಗಿ ಎಳೆದು ತರುವುದು ಬೇಡ. ಬಸವಣ್ಣ, ಬುದ್ಧ ಅವರು ಪ್ರತಿಪಾದಿಸಿದ ಮೇಲು-ಕೀಳು ಬೇಡ. ಮನುಷ್ಯರೆಲ್ಲರೂ ಒಂದೇ ಎಂಬ ಪರಿಕಲ್ಪನೆಯನ್ನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಪ್ರಸ್ತಾವನೆಯಲ್ಲೇ ಉಲ್ಲೇಖೀಸಿದ್ದಾರೆ ಎಂದರು.

Advertisement

ಕಾಂಗ್ರೆಸ್‌ ಪಕ್ಷದಲ್ಲಿ ಬಹುಮತ ಪಡೆದ ಮೇಲೆ ಪಕ್ಷದ ಶಾಸಕರ ಶಾಸಕಾಂಗ ಸಭೆ ನಡೆಸಿ ಆ ಸಭೆಯಲ್ಲಿ ಸಿಎಂ ಆಗಿ ಆಯ್ಕೆ ಮಾಡಲಾಗುತ್ತದೆ. ಪರಿಸ್ಥಿತಿಗನುಗುಣವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಇತರೆ ಸಮುದಾಯಗಳಿಗೂ ಕಾಂಗ್ರೆಸ್‌ನಲ್ಲಿ ಅವಕಾಶ ಲಭ್ಯವಾಗಲಿದೆ. ಬಿಜೆಪಿಯವರು ಮೂಗು ತೂರಿಸುವ ಅಗತ್ಯವಿಲ್ಲ ಎಂದರು.

ಅಧಿಕಾರ ಕೇಂದ್ರೀಕರಣ ಹುನ್ನಾರ: ಜಿಲ್ಲಾ ಪಂಚಾಯತ್‌ , ತಾಲೂಕು ಪಂಚಾಯತ್‌ ಚುನಾವಣೆಯನ್ನು ಕಾಲಕಾಲಕ್ಕೆ ನಡೆಸದೆ ಇದ್ದರೆ ಅಧಿಕಾರ ವಿಕೇಂದ್ರಿಕರಣದ ಆಶಯವೇ ಮೂಲೆ ಗುಂಪಾಗಲಿದೆ. ಆಡಳಿತಾರೂಢ ಬಿಜೆಪಿಯವರು ಇನ್ನು 9ತಿಂಗಳು ಚುನಾವಣೆ ವಿಳಂಬ ಮಾಡಲು ಮುಂದಾಗುವ ಮೂಲಕ ಅಧಿಕಾರ ವಿಕೇಂದ್ರಿಕರಣದ ವಿರೋಧಿಗಳೆಂದು ಸಾಬೀತು ಪಡಿಸುತ್ತಿದ್ದಾರೆ. ಅಧಿಕಾರವನ್ನೆಲ್ಲ ತಮ್ಮ ಬಳಿಯೇ ಕೇಂದ್ರಿಕರಿಸುವುದು ಬಿಜೆಪಿಯವರ ಉದ್ದೇಶ ಎಂದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಸಲಿ: 400 ಕೋಟಿ ರೂ. ವೆಚ್ಚ ಮಾಡಿ ಕಟ್ಟಿದ ಬೆಳಗಾವಿ ಸುವರ್ಣಸೌಧ ಹಾಳಾಗುತ್ತಿದ್ದು, ನಿಯಮಿತವಾಗಿ ಅಲ್ಲಿ ಅಧಿವೇಶನ ನಡೆಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ ಡಾ.ಜಿ.ಪರಮೇಶ್ವರ, ಸರ್ಕಾರಿ ಕಚೇರಿಗಳನ್ನು ಆಭಾಗಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದರೂ ಆ ಕೆಲಸವನ್ನು ಸರ್ಕಾರ ಮಾಡಿಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಲು ವೇದಿಕೆಯಾಗಬೇಕಾದ ಸುವರ್ಣ ಸೌಧ, ಇಲಿ-ಹೆಗ್ಗಣಗಳ ತಾಣವಾಗಿ ಧೂಳು ಹಿಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುದ್ದಹನುಮೇಗೌಡರು ಕಾಂಗ್ರೆಸ್‌ ಬಿಡುವುದಿಲ್ಲ : ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‌ನ ಕ್ರಿಯಾಶೀಲ ಸಂಸದರಾಗಿ ಕಾರ್ಯನಿರ್ವಹಿಸಿದವರು. ಸಂಸತ್‌ನ ಚರ್ಚೆಗಳಲ್ಲಿ ತಮ್ಮ ವಾಕ³ಟುತ್ವದಿಂದ ದೇಶದ ಗಮನ ಸೆಳೆದಿದ್ದಾರೆ. ಅವರು ಕಾಂಗ್ರೆಸ್‌ನ ಚಟುವಟಿಕೆಯಲ್ಲಿ ಸಕ್ರಿಯವಾಗಿಲ್ಲವೆಂಬ ಕಾರಣಕ್ಕೆ ಅವರು ಕಾಂಗ್ರೆಸ್‌ ತೊರೆಯುತ್ತಾರೆ ಎಂದು ಹೇಳುವುದು ತಪ್ಪು, ಮುದ್ದಹನುಮೇಗೌಡರು ಕಾಂಗ್ರೆಸ್‌ ತೊರೆಯುವುದಿದ್ದರೆ ಹಿಂದೆ ತಾವು ಪ್ರತಿನಿಧಿಸಿದ್ದ ಕುಣಿಗಲ್‌ನಿಂದ ಮರಳಿ ಪಕ್ಷದ ಟಿಕೆಟ್‌ ಕೊಡಿ ಎಂದು ಕೇಳುತ್ತಿರಲಿಲ್ಲ. ಟಿಕೆಟ್‌ ಬಗ್ಗೆ ಹೈಕಮಾಂಡ್‌ ನಿರ್ಧರಿಸಲಿದೆ. ಅವರಿಗೇನಾದರೂ ಅಸಮಾಧಾನವಿದ್ದರೆ ನಾನೇ ಖುದ್ದು ಅವರ ಮನೆಗೆ ತೆರಳಿ ಸಮಸ್ಯೆ ಬಗೆಹರಿಸುವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಬಿಟ್‌ ಕಾಯಿನ್‌ ಸಮಗ್ರ ತನಿಖೆ ನಡೆಸಿ: ಶಾಸಕ: ಭಾರೀ ಸುದ್ದಿಯಾಗಿರುವ ಬಿಟ್‌ ಕಾಯಿನ್‌, ಕ್ರಿಪ್ಕೊ ಕರೆನ್ಸಿ ದೇಶದಲ್ಲಿ ನಿಷೇಧಿತವಾಗಿದ್ದು, ಇದರ ಚಲಾವಣೆ ಮಾಡುತ್ತಿದ್ದ ಆರೋಪಿ ಶ್ರೀಕಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಪೊಲೀಸರು ಸಮಗ್ರ ತನಿಖೆ ನಡೆಸಿ ಸತ್ಯ ಬಹಿರಂಗಗೊಳಿಸಬೇಕಿದೆ. ಈ ಬಿಟ್‌ ಕಾಯಿನ್‌ ಚಲಾವಣೆ ಹಿಂದೆ ರಾಜಕಾರಣಿಗಳ ಮಕ್ಕಳು, ಐಪಿಎಸ್‌ ಅಧಿಕಾರಿಗಳು ಹೀಗೆ ಹಲವು ಗಣ್ಯರು ಹೆಸರುಗಳು ಕೇಳಿಬರುತ್ತಿದ್ದು, ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಹಗರಣದಿಂದಿರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕಾರ್ಯಮಾಡಬೇಕು ಎಂದು ಡಾ.ಜಿ.ಪರಮೇಶ್ವರ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next