Advertisement

ಅಭಿವೃದ್ಧಿಗೆ ಮುಂದಿನ 15 ದಿನಗಳೊಳಗೆ ಅನುದಾನ

01:13 PM Jun 27, 2023 | Team Udayavani |

ಕೆ.ಆರ್‌.ನಗರ: ಪಟ್ಟಣದ ಅಭಿವೃದ್ಧಿಗೆ ಪುರಸಭೆಗೆ ವಿಶೇಷ ಅನುದಾನ ನೀಡುವಂತೆ ಪೌರಾಡಳಿತ ಸಚಿವ ರಹೀಂಖಾನ್‌ರವರಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ 15 ದಿನಗಳೊಳಗೆ ಅನುದಾನ ಮಂಜೂರಾಗಲಿದೆ. ಆ ನಂತರ ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್‌ ಹೇಳಿದರು.

Advertisement

ನಗರದ 17ನೇ ವಾರ್ಡಿನ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ನಡೆದ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪೌರಾಡಳಿತ ಇಲಾಖೆಯಿಂದ ಬರುವ ಅನುದಾನದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ಮತ್ತು ಹೊಸ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹೈಮಾಸ್ಕ್ ದೀಪ ಅಳವಡಿಸಲು ಅನುದಾನ: ಈ ದೇವಾಲಯದ ಸುತ್ತ ತಡೆಗೋಡೆ ನಿರ್ಮಾಣ ಮಾಡಿ ಮತ್ತು ಹೈಮಾಸ್ಕ್ ದೀಪ ಅಳವಡಿಸಲು ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು, ಕನಕನಗರ, ಟೆಲಿಕಾಂ ಬಡಾವಣೆ, ಸಕ್ಕರೆ ನಗರದ ಜನತೆಗೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲು ಬದ್ಧನಾಗಿದ್ದು, ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಮತ್ತೆ ಅನುದಾನ ಬಿಡುಗಡೆ: ಹೊಸ ಬಡಾವಣೆ ಯಾಗಿರುವ 17ನೇ ವಾರ್ಡಿನ ಅಭಿವೃದ್ಧಿಗೆ ಒಂದು ಕೋಟಿ ರೂಗಳನ್ನು ಬಿಜೆಪಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಎಂಟಿಬಿ ನಾಗರಾಜ್‌ ರವರು ಮಂಜೂರು ಮಾಡಿಸಿದ್ದರು. ಸ್ಥಳೀಯ ಶಾಸಕರಾಗಿದ್ದವರು ಕಾರಣಕ್ಕಾಗಿ ಅನುದಾನ ತಡೆ ಹಿಡಿಸಿದ್ದರು. ಈ ಅನುದಾನವನ್ನು ಮತ್ತೆ ಬಿಡುಗಡೆ ಮಾಡಿಸಲಾಗಿದ್ದು, ಇದರಿಂದ ಬಡಾವಣೆ ಸಮಗ್ರ ವಾಗಿ ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು.

ಎಲ್ಲಾ ವಾರ್ಡುಗಳಲ್ಲೂ ಒಳಚರಂಡಿ ವ್ಯವಸ್ಥೆ: ಹೊಸ ಬಡಾವಣೆಗಳು ಸೇರಿದಂತೆ ಪುರಸಭೆಯ ಎಲ್ಲಾ ವಾರ್ಡುಗಳಲ್ಲೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲಾಗುತ್ತದೆ. ನಮ್ಮ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ನಗರದ ಜನತೆಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲು ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆ ಗೇರಿಸಲಾಗುತ್ತದೆ ಎಂದು ಪ್ರಕಟಿಸಿದರು.

Advertisement

ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಲಾದ ಐದು ಗ್ಯಾರಂಟಿಗಳನ್ನು ಈಡೇರಿಸಲು ಬದ್ಧವಾಗಿದ್ದು, ಈಗಾಗಲೇ ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರ ಮೆಚ್ಚುಗೆ ಪಡೆಯುವಲ್ಲಿ ಸರ್ಕಾರ ಯಶಸ್ವಿಗೊಂಡಿದೆ. ಮೂರನೆಯ ಗ್ಯಾರಂಟಿ ಗೃಹ ಲಕ್ಷ್ಮಿಗೆ ಮಂಗಳವಾರ ದಿಂದ ಅರ್ಜಿ ಸಲ್ಲಿಸುವ ಮೂಲಕ ಮನೆಯೊಡತಿ ಇದರ ಲಾಭ ಪಡೆಯಬೇಕು ಎಂದು ಮನವಿ ಮಾಡಿದ ಶಾಸಕರು ಜುಲೈ ತಿಂಗಳಿನಿಂದ ಪಡಿತರದಾರರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ ಎಂದು ವಿವರಿದರು.

ಕೇಂದ್ರದ ಬಿಜೆಪಿ ಸರ್ಕಾರ ಅನಗತ್ಯ ತೊಂದರೆ ನೀಡಿದರೂ ಸಹ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವುದರ ಜತೆಗೆ ಉತ್ತಮ ಆಡಳಿತ ನೀಡಲಿದೆ. ಇದರಲ್ಲಿ ಜನತೆ ವಿಶ್ವಾಸ ಇಡಬೇಕು ಎಂದು ಕೋರಿದ ಶಾಸಕ ಡಿ.ರವಿಶಂಕರ್‌ ಸಾಲಿಗ್ರಾಮ ಮತ್ತು ಕೆ.ಆರ್‌.ನಗರ ತಾಲೂಕುಗಳ ಸಮಗ್ರವಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಜಾತಿ ಕೇಳಿ ಕೆಲಸ ಮಾಡಬಾರದು: ವಿಧಾನ ಪರಿಷತ್‌ ಸದಸ್ಯ ಅಡಗೂರುಎಚ್‌.ವಿಶ್ವನಾಥ್‌ ಮಾತನಾಡಿ, ಐದು ವರ್ಷಗಳ ಕಾಲ ಶಾಸಕರಾಗಿ ದ್ದವರು ತಾರತಮ್ಯ ರಾಜಕಾರಣ ಮಾಡಿದ್ದಕ್ಕಾಗಿ 27,242 ಮತಗಳ ಅಂತರದಿಂದ ಸೋಲು ಕಾಣ ಬೇಕಾಯಿತು. ತಾವು ಈ ರೀತಿಯ ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದರಲ್ಲದೆ ಸದಾ ಜನರೊಟ್ಟಿಗ್ಗಿದ್ದು ಎರಡೂ ತಾಲೂಕು ಗಳಲ್ಲಿರುವ ಜನತೆಯ ಸಮಸ್ಯೆಯನ್ನು ಆಲಿಸು ವಂತಾಗಬೇಕು. ಯಾವುದೇ ಕಾರಣಕ್ಕೂ ಜಾತಿ ಕೇಳಿ ಕೆಲಸ ಮಾಡಬಾರದು ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಜಿ.ಆರ್‌.ರಾಮೇಗೌಡ, ಹುಣಸೂರು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕುನ್ನೇಗೌಡ, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ.ನಾಗರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next