ಕೋಲಾರ: ಡಾ.ಬಿ.ಆರ್.ಅಂಬೇಡ್ಕರರ ಸಂವಿಧಾನದ ಆಶಯಗಳನ್ನು ಸಮಾಜಕ್ಕೆ ನೀಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿಫಲವಾಗಿವೆ ಎಂದು ಶಾಸಕ ಬೋಜೇಗೌಡ ಅಸಮಧಾನ ವ್ಯಕ್ತಪಡಿಸಿದರು.
ನಗರದ ಬೈರೇಗೌಡ ನಗರದ ಮೈದಾನದಲ್ಲಿ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದಿಂದ ಶನಿವಾರ ನಡೆದ ಜೆಡಿಎಸ್ ಎಸ್ಸಿ ,ಎಸ್ಟಿ ವಿಭಾಗದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಆಸೆಗಾಗಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಎಚ್ಡಿಕೆ ಸಿಎಂ ಆಗಬೇಕೆಂದು ನೀವೆಲ್ಲರೂ ಮಾತಿನಲ್ಲಿ ಹೇಳಿದರೆ ಸಾಲದು. ಕೋಲಾರ ಕ್ಷೇತ್ರದಲ್ಲಿ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅಲ್ಲ, ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಭಾವಿಸಿ ಮತ ನೀಡಬೇಕೆಂದು ಕೋರಿದರು.
ಪ್ರಾದೇಶಿಕ ಪಕ್ಷಗಳಿಂದ ಸಾಕಷ್ಟು ಅಭಿವೃದ್ಧಿ : ಕೊಟ್ಟ ಮಾತಿನಂತೆ ನಡೆಯುವ ಏಕೈಕ ನಾಯಕ ಎಚ್ಡಿಕೆ ಆಗಿದ್ದು, ಪಂಚರತ್ನ ಯೋಜನೆ ಕಾರ್ಯಗತ ಮಾಡಲು ಮತ ನೀಡಿ ಗೆಲ್ಲಿಸಬೇಕೆಂದು ಕೋರಿದ ಅವರು, ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಂದ ಸಾಕಷ್ಟು ಅಭಿವೃದ್ಧಿ ಆಗಿದೆ. ಹಾಗಾಗಿ ಈ ಬಾರಿ ಜೆಡಿಎಸ್ಗೆ ಅಧಿಕಾರ ನೀಡಿ ಎಂದರು.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ದಲಿತ ಸಮುದಾಯಗಳನ್ನು ಬಹಳಷ್ಟು ಬಳಸಿಕೊಂಡು ಅನ್ಯಾಯ ಮಾಡಿರುವ ನಿದರ್ಶನಗಳಿವೆ. ಆದರೆ ದಲಿತ, ಸಾಮಾನ್ಯ ಕೂಲಿ ಕಾರ್ಮಿಕನ ಮಗನಾದ ನನಗೆ ಟಿಕೆಟ್ ನೀಡಿ ಶಾಸಕ ಸ್ಥಾನ ನೀಡಿದ್ದು ದೇವೇಗೌಡ ಹಾಗೂ ಕುಮಾರಸ್ವಾಮಿ ಎಂದು ಹೇಳಿದರು.
Related Articles
ಅಲ್ವಾವಧಿಯಲ್ಲಿ ಏನು ಮಾಡಲು ಸಾಧ್ಯವಿಲ್ಲ: ಎತ್ತಿನಹೊಳೆ ಮೂಲಕ ಶುದ್ಧ ನೀರು ಈ ಭಾಗಕ್ಕೆ ಹರಿಸಲು ಸಿಎಂ ಆಗಿದ್ದ ವೇಳೆ ಮುಂದಾದರೂ ಅಲ್ವಾವಧಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಅವರಿಗೆ ಅಧಿಕಾರ ನೀಡಿದರೆ 1 ವರ್ಷದಲ್ಲಿ ಪೂರ್ಣಗೊಳಿಸಲಿದ್ದಾರೆ. ಸಿಎಂಆರ್ ಶ್ರೀನಾಥ್ ಉತ್ತಮ ವ್ಯಕ್ತಿಯಾಗಿದ್ದು, 5 ವರ್ಷಕ್ಕೆ ಸಿಗುವ ವ್ಯಕ್ತಿಯಲ್ಲ, ಪ್ರತಿದಿನ ಸಿಗುವ ವ್ಯಕ್ತಿ ಹಾಗಾಗಿ ಗೆಲ್ಲಿಸಿಕೊಳ್ಳಿ ಎಂದರು.
ಶಾಸಕ ಇಂಚರ ಗೋವಿಂದರಾಜು ಮಾತನಾಡಿ, ಎರಡೂ ಜಿಲ್ಲೆಗಳ ಜವಾಬ್ದಾರಿ ನನಗೆ ನೀಡಿ ಪಕ್ಷ ಸಂಘಟಿಸಲು ಎಚ್ಡಿಕೆ ಸೂಚಿಸಿದ್ದರು. ಅಂತೆಯೇ ಜೆಡಿಎಸ್ ಬಲಗೊಂಡಿದೆ. ಚುನಾವಣೆಯಲ್ಲಿ ಜಿಲ್ಲೆಯ 6 ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಡಬೇಕೆಂದು ಮನವಿ ಮಾಡಿದರು.
ಕೋಲಾರ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ಕಳೆದ 15 ವರ್ಷಗಳಿಂದ ಆಸೆ ಆಮಿಷ ತೋರಿಸಿ ಆಡಳಿತ ನಡೆಸಿದ ಪಕ್ಷಗಳು ನಗರವನ್ನು ಅಭಿವೃದ್ಧಿ ವಿಚಾರದಲ್ಲಿ ಹಾಳು ಮಾಡಿರುವುದು ದುರಂತದ ಸಂಗತಿ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ಕೋಲಾರವನ್ನು ಅಭಿವೃದ್ಧಿಯಲ್ಲಿ ಮಿನಿ ಬೆಂಗಳೂರನ್ನಾಗಿ ಅಭಿವೃದ್ಧಿಪಡಿಸಲು ಸಿದ್ಧನಿದ್ದು, ಮತ ನೀಡಿ ಒಂದು ಬಾರಿ ಅವಕಾಶ ನೀಡಿ ಎಂದರು. ಮುಳಬಾಗಿಲು ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಮಾತನಾಡಿದರು.
ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ತಿರುಮಲೇಶ್, ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್, ಡಾ.ರಮೇಶ್, ವಕ್ಕಲೇರಿ ರಾಮು, ಮುಖಂಡರಾದ ಜಮೀರ್ ಪಾಷಾ ಬಾಲಾಜಿ ಚನ್ನಯ್ಯ, ಹೂಹಳ್ಳಿ ಪ್ರಕಾಶ್, ಬಾಲಗೋವಿಂದ್, ಬಾಬು ಮೌನಿ, ರಾಜು ಶ್ರೀನಿವಾಸಪ್ಪ ಮುಂತಾದವರಿದ್ದರು.