Advertisement

ಮಿಶ್ರ ಬೆಳೆಗೆ ಸಂದ ಜಯ

10:25 AM Aug 13, 2019 | Sriram |

ಕೆಲಸಗಾರರ ಅಲಭ್ಯತೆ ಹಾಗೂ ನೀರಿನ ಸಮಸ್ಯೆ ಇದ್ದಿದ್ದರಿಂದ ಕಬ್ಬು ಮತ್ತು ಅರಿಶಿನ ಬೆಳೆಯುವುದನ್ನು ಬಿಡಬೇಕಾಗಿ ಬಂತು. ಆದರೆ, ನಂತರ ಮಿಶ್ರ ಬೆಳೆ ಬೆಳೆಯುವ ನಿರ್ಧಾರ ಕೈ ಹಿಡಿಯಿತು.

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ರವಿ ಭೂತಿ ಎಂ.ಎ. ಎಲ್ಎಲ್ಬಿ ಪದವೀಧರರು. ವೃತ್ತಿಯಿಂದ ಬನಹಟ್ಟಿ, ಜಮಖಂಡಿ ಹಾಗೂ ತೇರದಾಳದಲ್ಲಿ ಬಾಂಡ್‌ ಬರಹಗಾರರಾಗಿ ಕಾರ್ಯ ಮಾಡುತ್ತಿದ್ದಾರೆ. ಮೊದಲಿನಿಂದಲೂ ಅವರಿಗೆ ಕೃಷಿಯಲ್ಲಿ ಅಪಾರವಾದ ಆಸಕ್ತಿ. ಈಗ ವೃತ್ತಿಯ ಜೊತೆಗೆ, ಅವರು ರೈತರಾಗಿಯೂ ಸಾಕಷ್ಟು ಗಮನ ಸೆಳೆದಿದ್ದಾರೆ. ಮಿಶ್ರ ಬೆಳೆಗಳನ್ನು ಬೆಳೆಯುವುದರ ಜೊತೆಗೆ, ಉತ್ತಮ ಲಾಭ ತಂದು ಕೊಡುವ ಬೆಳೆಗಳನ್ನು ಮತ್ತು ಭವಿಷ್ಯದಲ್ಲಿಯ ತಮ್ಮ ಜೀವನ ನಿರ್ವಹಣೆಗೂ ಯಾವುದೇ ತೊಂದರೆಯಾಗದಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಇವರು, ಇತರರಿಗೆ ಮಾದರಿಯಾಗಿದ್ದಾರೆ.

ಭೂತಿಯವರು ಕೃಷಿಯಲ್ಲಿ ಹೊಸ ಪ್ರಯೋಗಗಳತ್ತ ಗಮನ ನೀಡಿದ್ದಾರೆ. ಮೊದಲು ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ಅರಿಶಿನ ಬೆಳೆಯುತ್ತಿದ್ದರು. ಆದರೆ, ಕಾರ್ಮಿಕರು ಸಿಕ್ಕುವುದು ಕಷ್ಟವಾಗಿದ್ದರಿಂದ ಮತ್ತು ನೀರಿನ ಸಮಸ್ಯೆ ಇದ್ದಿದ್ದರಿಂದ ಇವೆರಡು ಬೆಳೆಗಳನ್ನು ಬಿಡಬೇಕಾಗಿ ಬಂತು. ಅಲ್ಲಿಂದ ಮಿಶ್ರ ಬೆಳೆ ಬೆಳೆಯುವ ನಿರ್ಧಾರಕ್ಕೆ ಅವರು ಬಂದಿದ್ದರು.

ಬನಹಟ್ಟಿಯಿಂದ ಕೂಗಳೆತೆಯ ದೂರದಲ್ಲಿರುವ ಆರು ಎಕರೆ ಪ್ರದೇಶದಲ್ಲ್ಲಿ ಪೇರಲೆ, ಲಿಂಬೆ, ಮಾವು, ಹೆಬ್ಬೇವು ಮತ್ತು ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಸದ್ಯ ಮೆಣಸಿಕಾಯಿಯ ಕಟಾವಿಗೆ ಬಂದಿದ್ದು ಈಗಾಗಲೇ ಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ. ಸದ್ಯ ಮೆಣಸಿನಕಾಯಿಗೆ ಉತ್ತಮವಾದ ಬೆಲೆ ಕೂಡಾ ಇರುವುದರಿಂದ ಅವರು ಸಂತಸಗಂಡಿದ್ದಾರೆ. ಮೂರು ನಾಲ್ಕು ತಿಂಗಳುಗಳವರೆಗೆ ಮೆಣಸಿನಕಾಯಿ ಮಾರಾಟದಲ್ಲಿ ತೊಡಗುವುದರಿಂದ ಅಲ್ಲಿಯವರೆಗೆ ಬಿಝಿ. ಅಲ್ಲದೆ ಇನ್ನೆರಡು ತಿಂಗಳಲ್ಲಿ ಕಲ್ಲಂಗಡಿ ಕೂಡಾ ಕಟಾವಿಗೆ ಬರಲಿದೆ.

ಇವೆಲ್ಲವುಗಳ ಜೊತೆಗೆ ರವಿ ಭೂತಿಯವರು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು, ಅದಕ್ಕೆ ತಕ್ಕನಾಗಿ ಯೋಚಿಸಿ, ಸಮಯೋಚಿತವಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರ ಪ್ರಕಾರ, ಅವರು ತಮ್ಮ ತೋಟದಲ್ಲಿ 400 ಹೆಬ್ಬೇವಿನ ಗಿಡಗಳು, 200 ಲಿಂಬೆಯ, 600 ಮಾವಿನ ಗಿಡಗಳು ಮತ್ತು ಕಮ್ಮಿಯೆಂದರೂ 700 ಪೇರು ಗಿಡಗಳನ್ನು ಹಚ್ಚಿದ್ದಾರೆ. ಶುರುವಿನಲ್ಲಿ ಹೆಚ್ಚಿನ ಬಂಡವಾಳವನ್ನು ಬೇಡಿದರೂ ಭವಿಷ್ಯತ್ತಿನಲ್ಲಿ ಈ ಗಿಡಗಳ ನಿರ್ವಹಣೆ ಅತ್ಯಂತ ಕಡಿಮೆಯಾಗುತ್ತದೆ. ಈ ಗಿಡಗಳು ಅಂದಾಜು ಹದಿನೈದರಿಂದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರಲಿದೆ.

Advertisement

ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ವಾಣಿಜ್ಯ ಬೆಳೆಗಳನ್ನು ಬೆಳೆದು ಅವುಗಳ ರಕ್ಷಣೆ ಮಾಡಬೇಕಾದರೆ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದರೆ ಬೇಸಿಗೆಯ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಂಟಾದರೆ ಟ್ಯಾಂಕರ್‌ ಮೂಲಕ ನೀರನ್ನು ಹಾಯಿಸಿಯಾದರೂ ಗಿಡಗಳ ರಕ್ಷಣೆ ಮಾಡಬಹುದಾಗಿದೆ ಎಂಬುದು ರವಿ ಅವರ ಉಪಾಯ.

ಹೀಗೆ, ಮುಂಬರುವ ಐದಾರು ತಿಂಗಳುಗಳಲ್ಲಿ ಲಿಂಬೆ, ಪೇರು, ಮಾವು ತನ್ನ ಕೈ ಹಿಡಿಯಲಿದೆ ಎನ್ನುವ ವಿಶ್ವಾಸವನ್ನು ಭೂತಿಯವರು ವ್ಯಕ್ತಪಡಿಸುತ್ತಾರೆ. ಮಿಶ್ರ ಬೆಳೆ ಜೊತೆ ಆರ್ಥಿಕತೆಗೆ ಬಲ ನೀಡುವ ಬೆಳೆಗಳನ್ನೂ ಬೆಳೆದಿರುವುದು ರವಿ ಭೂತಿಯವರ ಜಾಣ್ಮೆಗೆ ಹಿಡಿದ ಕೈಗನ್ನಡಿ.

-ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next