Advertisement

ಪ್ರಾದೇಶಿಕ ಪಕ್ಷ ಉಳಿಸುವುದೇ ಧ್ಯೇಯ

04:08 PM May 10, 2022 | Team Udayavani |

ಚಿಕ್ಕಮಗಳೂರು: ನನ್ನ ಜೀವನದ ಕೊನೆಯಲ್ಲಿ ಪ್ರಾದೇಶಿಕ ಪಕ್ಷವನ್ನು (ಜೆಡಿಎಸ್‌) ಉಳಿಸಿ, ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡಬೇಕು ಎನ್ನುವುದೇ ನನ್ನ ಹಠ ಎಂದು ಜೆಡಿ ಎಸ್‌ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ಪ್ರತಿಜ್ಞೆ ಮಾಡಿದರು.

Advertisement

ಸೋಮವಾರ ನಗರದ ಎಐಟಿ ವೃತ್ತದಲ್ಲಿರುವ ಒಕ್ಕಲಿಗರ ಭವನದಲ್ಲಿ ಜಿಲ್ಲಾ ಜೆಡಿಎಸ್‌ ವತಿಯಿಂದ ಆಯೋಜಿಸಿದ್ದ ಜನತಾ ಜಲಧಾರೆ ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರು ಜಿಲ್ಲೆಯಿಂದ 4 ಜನರು ಗೆದ್ದು ಶಾಸಕರಾಗಿದ್ದರು. ಚಿಕ್ಕಮಗಳೂರು ಜಿಲ್ಲೆ ಜೆಡಿಎಸ್‌ ಭದ್ರಕೋಟೆಯಾಗಿತ್ತು. ಇಂದು ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ನನ್ನ ಮನಸ್ಸಿಗೆ ನೋವು ತಂದಿದೆ ಎಂದರು.

ಎಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು. ಎಲ್ಲಿ ನಾವು ತಪ್ಪುತ್ತಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಪಕ್ಷವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಕರೆ ನೀಡಿದರು.

Advertisement

ರಾಜಕೀಯ ಪಕ್ಷದಲ್ಲಿ ಒಂದು ಜಾತಿಯ ಹಿಡಿತ ಇರಬಾರದು. ನಾವೆಲ್ಲರೂ ಒಟ್ಟಾಗಿ ಬಾಳಬೇಕು. ನಮ್ಮ ನಡುವಳಿಕೆ ಹಾಗಿರಬೇಕು ಎಂದ ಅವರು, ನನ್ನ ಅಧಿಕಾರ ಅವಯಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾತಿ ನೀಡಿದ್ದೇನೆ. ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ. ಈ ಶಕ್ತಿಯನ್ನು ನೀಡಿದವರು ನೀವೇ (ಕಾರ್ಯಕರ್ತರು) ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮರ್ಲೆ ಗ್ರಾಪಂನಲ್ಲಿ ಓರ್ವ ಹೆಣ್ಣುಮಗಳು ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ನಾವೆಲ್ಲಿ ದಾರಿ ತಪ್ಪಿದ್ದೇವೆ ಎಂದು ಪ್ರಶ್ನಿಸಿದ ಅವರು, ಕಾರ್ಯಕರ್ತರು ಮತ್ತು ಪಕ್ಷ ಮುಖ್ಯ. ಪ್ರತೀ ಜಿಲ್ಲೆಯಲ್ಲಿ 2 ಸ್ಥಾನವನ್ನು ಗೆಲ್ಲಬೇಕು. ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ತಿಳಿಸಿದರು.

ಇಂದು ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಏನಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಸ್ಲಿಂ ಸಮುದಾಯದವರ ಆಜಾನ್‌ ವಿರುದ್ಧವಾಗಿ ದೇವಸ್ಥಾನಗಳಲ್ಲಿ ಸುಪ್ರಭಾತ ಹಾಡಲಾಗುತ್ತಿದೆ. ಮುಸ್ಲಿಂ ಸಮುದಾಯದ ಆಜಾನ್‌ ಕೂಗುವ ಪದ್ಧತಿ ನಿನ್ನೆಯದಲ್ಲ ಎಂದರು.

ನನ್ನ ಜೀವನದುದ್ದಕ್ಕೂ ನೀರಾವರಿಗಾಗಿ ಹೋರಾಟ ಮಾಡಿದ್ದೇನೆ. ನೀರಾವರಿ ವಿಚಾರಕ್ಕಾಗಿ ಮನಮೋಹನ್‌ ಸಿಂಗ್‌ ಅಧಿಕಾರಾವಧಿಯಲ್ಲಿ ಕಣ್ಣೀರು ಹಾಕಿದ್ದೇನೆ ಎಂದು ತಮ್ಮ ಅಂದಿನ ಹೋರಾಟವನ್ನು ನೆನೆದ ಅವರು, ನೀರಾವರಿವಾಗಿ ಮೇ13ರಂದು ಬೆಂಗಳೂರಿನಲ್ಲಿ ನಡೆಯುವ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು.

ಜೆಡಿಎಸ್‌ ಮುಖಂಡ ಹಾಗೂ ಮಾಜಿ ಮಂತ್ರಿ ಬಿ.ಬಿ. ನಿಂಗಯ್ಯ ಮಾತನಾಡಿ, ರಾಜ್ಯದಲ್ಲಿ 50ಕ್ಕೂ ಹೆಚ್ಚು ಜೀವನದಿಗಳು ಹರಿಯುತ್ತಿದ್ದು ಈ ನದಿಗಳ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದು ಜನತಾ ಜಲಧಾರೆಯ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಆಡಳಿತ ನಡೆಸಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಅರಿಸಿ ಕಳಿಸುವ ಮೂಲಕ ರಾಜ್ಯದಲ್ಲಿ ಮತ್ತೂಮ್ಮೆ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗುತ್ತಿದೆ. ಸಾಮರಸ್ಯ ಕದಡುತ್ತಿದೆ. ಸಂವಿಧಾನದ ಆಶಯ ಮತ್ತು ಕೋಮು ಸೌಹಾರ್ದವನ್ನು ಕೆಡಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಮಸಗಲಿ ಅರಣ್ಯಭೂಮಿ ಒತ್ತುವರಿ 211 ಕುಟುಂಬಗಳನ್ನು ಎತ್ತಂಗಡಿ ಮಾಡಲು ಸರ್ಕಾರ ಮುಂದಾಗಿದೆ. ಅವರ ಜೀವನ ಅಪಾಯದಲ್ಲಿದ್ದು, ಅವರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ನೀರಾವರಿ ಕೃಷಿಗೆ ಪೂರಕವಾಗಿದ್ದು, ರೈತರ ಜೀವನ ಹಸನಾಗಬೇಕಾದರೆ ರೈತರ ಮನೆ ಬಾಗಿಲಿಗೆ ಕುಡಿಯುವ ನೀರು ಮತ್ತು ಹೊಲಗದ್ದೆಗಳಿಗೆ ನೀರು ನೀಡುವಂತಾಗಬೇಕು. ಜಾತ್ಯಾತೀತವಾಗಿ ನೀರಾವರಿಗಾಗಿ ರಾಜ್ಯದಲ್ಲಿ ಹೋರಾಟ ಮಾಡಿದ ಏಕೈಕ ವ್ಯಕ್ತಿ ಎಂದರೆ ಅದು ದೇವೇಗೌಡರು ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜನತೆಗೆ ಮಾತು ಕೊಟ್ಟಂತೆ ರೈತರ ಸಾಲಮನ್ನಾ ಮಾಡಿದರು. ದೇವೇಗೌಡರು ನೀರಾವರಿ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ತಂದರು. ಆದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಜನತೆಗೆ ದ್ರೋಹ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ನಗರಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌, ಮುಖಂಡರಾದ ಬಿ.ಎಂ. ತಿಮ್ಮಶೆಟ್ಟಿ, ಸುಧಾಕರ್‌ ಶೆಟ್ಟಿ, ಎಚ್‌.ಜಿ. ವೆಂಕಟೇಶ್‌, ಚಂದ್ರಪ್ಪ, ಮಂಜಪ್ಪ, ದೇವಿಪ್ರಸಾದ್‌, ನಗರಸಭೆ ಸದಸ್ಯ ಎ.ಸಿ. ಕುಮಾರ್‌, ಹೊಲದಗದ್ದೆ ಗಿರೀಶ್‌ ಇತರರು ಇದ್ದರು.

ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ಯಾಂಪೇನ್‌ ಮಾಡುತ್ತೇನೆ. ಮನೆ- ಮನೆಗೆ ಹೋಗಿ ಮತ ನೀಡುವಂತೆ ಬೇಡಿಕೊಳ್ಳುತ್ತೇನೆ. ಇದು ನನ್ನ ಕೊನೆಯ ಹೋರಾಟ ವೆಂದು ಜನರಲ್ಲಿ ಮನವರಿಕೆ ಮಾಡುತ್ತೇನೆ. ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next