Advertisement

ಕಾಲೇಜು-ಕೈಗಾರಿಕೆ ಸ್ಥಾಪನೆಯೇ ಮರೀಚಿಕೆ

04:29 PM Apr 20, 2019 | Team Udayavani |

ಹುಕ್ಕೇರಿ: ಲೋಕಸಭಾ ಚುನಾವಣೆ ಮತದಾನಕ್ಕೆ ಇನ್ನು ಕೆಲವು ದಿನಗಳು ಬಾಕಿ ಇದ್ದರೂ ಹುಕ್ಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಮಾತ್ರ ಏರಿಲ್ಲ. ಚುನಾವಣೆಯ ಇದೇಯೋ ಇಲ್ಲವೋ ಎಂಬ ವಾತಾವರಣ ಕ್ಷೇತ್ರದಲ್ಲಿದೆ.

Advertisement

ಲೋಕಸಭಾ ಚುನಾವಣೆಗೆ ಒಂದು ತಿಂಗಳಿನಿಂದಲೂ ನಡೆದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ ಹಾಗೂ ನಂತರದ ಬೆಳವಣಿಗೆ ಮತದಾರರ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿದೆ. ಮೇಲಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಬ್ಬರೂ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದವ ರಾಗಿರುವುದರಿಂದ ಹುಕ್ಕೇರಿ ಕ್ಷೇತ್ರದ ಜನರಲ್ಲಿ ಅಂತಹ ಉತ್ಸಾಹ ಕಾಣುತ್ತಿಲ್ಲ. ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಟಿಕೆಟ್ ಸಿಗದೇ ಇರುವ ಕಾರಣ ನಿರಾಶರಾಗಿರುವ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪ್ರಚಾರದಲ್ಲಿ ಕಾಣುತ್ತಿಲ್ಲ. ಅವರ ಅಭಿಮಾನಿಗಳನ್ನು ಪಕ್ಷದ ಚಟುವಟಿಕೆಗೆ ಕರೆತರಲು ಹರಸಾಹಸ ಪಡಬೇಕಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಸಹ ಇದೇ ಸ್ಥಿತಿ ಇರುವುದರಿಂದ ಎಲ್ಲಿಯೂ ಪ್ರಚಾರದ ಅಬ್ಬರ ಹಾಗೂ ಉನ್ನತ ನಾಯಕರ ಸಮಾವೇಶಗಳು ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಕ್ಷೇತ್ರದಲ್ಲಿ ಸಹಕಾರಿ ಸಂಘ. ಸಂಸ್ಥೆಗಳ ಮೇಲೆ ಮತದಾನ ಅವಲಂಬಿತವಾಗಿದೆ.

ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಮಾಡಿ ಪ್ರಚಾರದ ಮೂಲಕ ಮತದಾರರ ಮನಗೆಲ್ಲಲು ಪ್ರಯತ್ನ ಮಾಡಿದ್ದಾರೆ. ದೇಶದಲ್ಲಿ ಇತ್ತೀಚೆಗೆ ನಡೆದ ಬಾಲಾಕೋಟ ಘಟನೆ, ಮೇಲಿಂದ ಮೇಲೆ ಕೇಳಿಸುತ್ತಿರುವ ರಫೇಲ್ ಡೀಲ್ ಮೊದಲಾದ ಪ್ರಕರಣಗಳ ಕುರಿತು ಇಲ್ಲಿಯ ಜನರಿಗೆ ಆಸಕ್ತಿ ಇಲ್ಲ. ಅವರಿಗೆ ಇದೂ ಬೇಕಾಗಿಯೂ ಇಲ್ಲ. ಸ್ಥಳೀಯ ರಾಜಕಾರಣ ಹಾಗೂಈ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆ ನಡೆದಿದೆ.

ಆರಂಭದಲ್ಲಿ ಅಭ್ಯರ್ಥಿಗಳು ಎಲ್ಲ ಕಡೆ ಪ್ರಚಾರ ಮಾಡಿದರೂ ಕೊನೆಯ ಮೂರು ದಿನಗಳಲ್ಲಿ ನಡೆಯುವ ಪ್ರಚಾರ, ಮತದಾರರ ಮನವೊಲಿಕೆ ಹಾಗೂ ಕರಾಮತ್ತು ಎಲ್ಲ ಲೆಕ್ಕಾಚಾರವನ್ನೂ ಬದಲಾಯಿಸುತ್ತದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂದು ಹೋದ ಮೇಲೆ ಕತ್ತಿ ಸಹೋದರರ ಮುನಿಸು ಅಂತ್ಯವಾಗಿದೆಯೇ. ಅವರು ಮುಕ್ತ ಮನಸ್ಸಿನಿಂದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರೆಯೇ ಎಂಬ ಕುತೂಹಲದ ಚರ್ಚೆ ಎಲ್ಲ ಕಡೆ ಕಾಣುತ್ತದೆ. ಇದರ ಜತೆಗೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಸಹ ಸ್ವಾರಸ್ಯಕರ ಚರ್ಚೆಗಳು ಇಲ್ಲಿ ನಡೆಯುವುದನ್ನು ಕಾಣಬಹುದು.

ಕ್ಷೇತ್ರದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿವರೆಗೆ ಸೌಲಭ್ಯಗಳಿದ್ದರೂ ಹೆಚ್ಚಿನ ವ್ಯಾಸಂಗಕ್ಕಾಗಿ ಜಿಲ್ಲಾ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ರೈತರಿಗೆ ಅನುಕೂಲವಾಗಬೇಕಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಸಂಪೂರ್ಣವಾಗಬೇಕಾಗಿದೆ. ಕ್ಷೇತ್ರದಲ್ಲಿ ದೊಡ್ಡ ಕೈಗಾರಿಕೆಗಳು, ತಾಂತ್ರಿಕ ವೃತ್ತಿಪರ ಮಹಾವಿದ್ಯಾಲಯಗಳು ಸ್ಥಾಪನೆ ಮಾಡಲು ಒತ್ತು ನೀಡಬೇಕು ಎಂಬ ಬೇಡಿಕೆ ಇದೆ.

Advertisement

ಪಕ್ಕದಲ್ಲೇ ಹಿಡಕಲ್ ಜಲಾಶಯ, ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿ ಇರುವುದರಿಂದ ನೀರಾವರಿಯ ಸಮಸ್ಯೆ ಅಷ್ಟು ಗಂಭೀರವಾಗಿಲ್ಲ. ಕ್ಷೇತ್ರದಲ್ಲಿ ರೈತಾಪಿ ಕುಟುಂಬಗಳೇ ಹೆಚ್ಚು. ತಾಲೂಕಿನಲ್ಲಿ ಏಕಸ್‌ ಹಾಗೂ ಕ್ವೆಸ್ಟ್‌ ಎಂಬ ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ಒಂದು ಕಂಪನಿ ಇರುವುದರಿಂದ ಸ್ಥಳೀಯ ಜನರಿಗೆ ಒಂದಿಷ್ಟು ಉದ್ಯೋಗ ಸಿಕ್ಕಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸಣ್ಣ ಕೈಗಾರಿಕೆಗಳು ಬಂದಿಲ್ಲ ಎಂಬ ಕೊರಗಿದೆ.

Advertisement

Udayavani is now on Telegram. Click here to join our channel and stay updated with the latest news.

Next