Advertisement

ಯೋಗಿಗೆ ಸಚಿವ ಸ್ಥಾನ? ಬಿಜೆಪಿಯೊಳಗೆ ಹೆಚ್ಚಿದ ಮುಸುಕಿನ ಗುದ್ದಾಟ

12:54 AM Dec 02, 2020 | mahesh |

ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೆ ವರಿಷ್ಠರಿಂದ ಒಪ್ಪಿಗೆ ಸಿಗುವ ಮೊದಲೇ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅವರನ್ನು ಸಚಿವರನ್ನಾಗಿ ಮಾಡುವುದು ನೂರಕ್ಕೆ ನೂರು ಖಚಿತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರ ಹೇಳಿಕೆ ಸಚಿವಾಕಾಂಕ್ಷಿಗಳೊಳಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ಸಿಎಂ ಯಡಿಯೂರಪ್ಪ ಅವರು ಖುದ್ದಾಗಿ ಎರಡು ಬಾರಿ ದಿಲ್ಲಿ ಪ್ರವಾಸ ಮಾಡಿ, ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದರೂ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಹಸುರು ನಿಶಾನೆ ಸಿಕ್ಕಿಲ್ಲ. ಇದರ ನಡುವೆಯೇ ಸಚಿವಾಕಾಂಕ್ಷಿಗಳ ಲಾಬಿ, ಒತ್ತಡ ದಿನೇ ದಿನೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಯಡಿಯೂರಪ್ಪ ಅವರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿ.ಪಿ. ಯೋಗೇಶ್ವರ್‌ ಅವರು ನೂರಕ್ಕೆ ನೂರರಷ್ಟು ಸಂಪುಟ ಸೇರಲಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸೋತವರು ಸಚಿವರಾಗುವಂತಿಲ್ಲ ಎಂದು ಮುಖ್ಯ ಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ರಾಜುಗೌಡ ಮತ್ತಿತರರು ಒತ್ತಡ ತಂತ್ರ ಹೇರುತ್ತಿದ್ದರೆ, ಇನ್ನೊಂದೆಡೆ ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸಚಿವ ರಮೇಶ್‌ ಜಾರಕಿಹೊಳಿ ಅವರು ಸಿಎಂ ಮೇಲೆ ಒತ್ತಡ ಹೇರುತ್ತಿದ್ದರು. ಈ ಇಬ್ಬಂದಿತನದ ನಡುವೆ ಯೋಗೇಶ್ವರ್‌ ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿ ನೇರವಾಗಿ ಹೇಳಿರುವುದು ಶಾಸಕರ ನಡುವಿನ ತಿಕ್ಕಾಟ ಹೆಚ್ಚುವುದಕ್ಕೆ ಕಾರಣವಾಗಿದೆ.

“ಯೋಗಿ’ ವಿರುದ್ಧ ವಿಶ್ವ ನಾಥ್‌ ಕಿಡಿ
ಸಚಿವಾಕಾಂಕ್ಷಿಯಾಗಿದ್ದ ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಯೋಗೇಶ್ವರ್‌ ವಿರುದ್ಧ ಟೀಕಾಪ್ರಹಾರ ನಡೆಸಿರುವುದು ಬಿಜೆಪಿಯಲ್ಲಿ ಮತ್ತಷ್ಟು ಮುಜುಗರ ಸೃಷ್ಟಿಸಿದೆ. “ಹುಣಸೂರಿನಲ್ಲಿ ನನ್ನ ಸೋಲಿಗೆ ನೇರ ಕಾರಣ ಸಿ.ಪಿ. ಯೋಗೇಶ್ವರ್‌. ನನಗೆ ಟಿಕೆಟ್‌ ಕೊಡುವ ಮುನ್ನವೇ ಅವರು ತಾನೇ ಕ್ಯಾಂಡಿಡೇಟ್‌ ಎಂದು ಸೀರೆ ಹಂಚಿದ್ದ. ಅದಾದ ಬಳಿಕ ನಾನು ಅಭ್ಯರ್ಥಿ ಆದ ಮೇಲೆ ಪಾರ್ಟಿಯಿಂದ ಚುನಾವಣೆ ವೆಚ್ಚಕ್ಕಾಗಿ ನನಗೆ ಬರ ಬೇ ಕಿದ್ದ ದೊಡ್ಡ ಮೊತ್ತದ ಹಣ ನನಗೆ ತಲುಪಲಿಲ್ಲ, ಈ ಹಣವನ್ನು ಯೋಗೇಶ್ವರ್‌ ಮತ್ತು ಸಂತೋಷ್‌ ಲಪಟಾಯಿಸಿದ್ದಾರೆ. ನನ್ನ ಸೋಲಿಗೆ ಇದೂ ಕಾರಣ. ಇದೇ ವಿಚಾರದ ಬಗ್ಗೆ ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೆ’ ಎಂದು ವಿಶ್ವನಾಥ್‌ ಎಂದು ನೇರವಾಗಿ ಆಪಾದಿಸಿದ್ದಾರೆ.

ನನ್ನ ಹೆಸರನ್ನು ದಿಲ್ಲಿಗೆ ಹೋಗಿ ಸಚಿವ ಸ್ಥಾನದ ಪಟ್ಟಿಯಿಂದ ತೆಗೆಸಿದರು. ಈ ನೋವು ಕಾಡುತ್ತಿದೆ ಎಂದು ಎಚ್‌. ವಿಶ್ವನಾಥ್‌ ಪರೋಕ್ಷ ವಾಗಿ “ಮಿತ್ರಮಂಡಳಿ’ ವಿರುದ್ಧ ಟಾಂಗ್‌ ನೀಡಿದ್ದಾರೆ.

Advertisement

ಸಂಪುಟ ವಿಸ್ತರಣೆ ಸನ್ನಿಹಿತ?
ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಿಗಮ-ಮಂಡಳಿ ನೇಮಕಾತಿ, ನಾಯಕತ್ವ ಗೊಂದಲ, ಪಕ್ಷದೊಳಗಿನ ಭಿನ್ನಮತ ಸಹಿತ ಹಲವು ರೀತಿಯಲ್ಲಿ ಗೊಂದಲದ ಪರಿಸ್ಥಿತಿಯಲ್ಲಿ ಸಿಲುಕಿದ್ದ ಸಿಎಂ ಯಡಿಯೂರಪ್ಪ ಸದ್ಯಕ್ಕೆ ನಿರಾಳವಾಗಿದ್ದಾರೆ. ಸಚಿವ ಸ್ಥಾನಕ್ಕಾಗಿ ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರ ನಡುವೆ ನಡೆಯುತ್ತಿದೆ ಎನ್ನಲಾದ ಶೀತಲ ಸಮರಕ್ಕೆ ಮುಖ್ಯಮಂತ್ರಿಯವರೇ, “ಸಿ.ಪಿ. ಯೋಗೇಶ್ವರ್‌ ಅವರು ಸಚಿವ ಸಂಪುಟ ಸೇರಲಿದ್ದಾರೆ’ ಎನ್ನುವ ಮೂಲಕ ಒಂದರ್ಥದಲ್ಲಿ ಬಾಯಿ ಮುಚ್ಚಿಸಿದ್ದಾರೆ. ಈವರೆಗೂ ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಲಿದೆ ಎನ್ನುತ್ತಿದ್ದ ಸಿಎಂ, ಈಗ ಯಾರು ಸಂಪುಟ ಸೇರಲಿದ್ದಾರೆ ಎನ್ನುವ ಮೂಲಕ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಯೋಗೇ ಶ್ವರ್‌ಗೆ ವರಿ ಷ್ಠರ ಬಲ
ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ವರಿಷ್ಠರಿಂದಲೇ ಒತ್ತಡ ಹೆಚ್ಚಿದೆ ಎನ್ನಲಾಗುತ್ತಿದೆ. ವಿಧಾನಸಭೆ ಚುನಾವಣೆಯ ಫ‌ಲಿತಾಂಶದ ಅನಂತರ ಬಿಜೆಪಿ ಅಧಿಕಾರಕ್ಕೆ ಬರಲು ನಡೆದ ರಾಜಕೀಯ ಪಲ್ಲಟಗಳಲ್ಲಿ ಸಿ.ಪಿ. ಯೋಗೇಶ್ವರ್‌ ಅವರ ಪಾತ್ರ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿಧಾನ ಪರಿಷತ್‌ ಸ್ಥಾನ ನೀಡಿ, ಸಚಿವ ಪಟ್ಟವನ್ನು ಒದಗಿಸಬೇಕು ಎಂದು ಮೂಲ ಬಿಜೆಪಿಗರಲ್ಲೇ ಕೆಲವರು ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ರಾಮನಗರ ಭಾಗದಲ್ಲಿ ಪರ್ಯಾಯ ನಾಯಕತ್ವವನ್ನು ಬೆಳೆಸುವುದಕ್ಕೂ ಇದು ಸಹಕಾರಿಯಾಗಲಿದೆ ಎಂಬುದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ರಮೇಶ್‌ ಜಾರಕಿಹೊಳಿ ನನ್ನ ಆತ್ಮೀಯ ಸ್ನೇಹಿತರು. ರೇಣುಕಾಚಾರ್ಯ ವಿರೋಧ ಲೆಕ್ಕಿಸದೆ ಸರಕಾರ ರಚನೆ  ಯಾದಾಗಿನಿಂದ ನನಗೆ ಸಚಿವ ಸ್ಥಾನ ಸಿಗ  ಬೇಕು ಎಂದು ಬಯಸುತ್ತಿದ್ದರು. ಮುಖ್ಯಮಂತ್ರಿಯವರೇ ಎಲ್ಲ ಗೊಂದಲಕ್ಕೆ
ತೆರೆ ಎಳೆದಿದ್ದಾರೆ.
– ಸಿ.ಪಿ. ಯೋಗೇಶ್ವರ್‌, ಪರಿಷತ್‌ ಸದಸ್ಯ

ನಮ್ಮ ಭಾವನೆಗಳನ್ನು ಈಗಾಗಲೇ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗೆ ತಿಳಿಸಿದ್ದೇವೆ. ಈಗ ನಾನು ಏನನ್ನೂ ಹೇಳುವುದಿಲ್ಲ. ಮುಖ್ಯಮಂತ್ರಿಗೆ ನಿರ್ಧಾರ ಕೈಗೊಳ್ಳುವ ಪರಮಾಧಿಕಾರ ಇದೆ. ನಾವು ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡುತ್ತೇವೆ.
– ಎಂ.ಪಿ. ರೇಣುಕಾಚಾರ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next