Advertisement

ಸಚಿವ ವೆಂಕಯ್ಯನಾಯ್ಡು ಹೇಳಿಕೆಗೆ ಆಕ್ಷೇಪ

11:53 AM Jun 25, 2017 | Team Udayavani |

ದಾವಣಗೆರೆ: ರೈತರ ಸಾಲಮನ್ನಾ ಒಂದು ಫ್ಯಾಷನ್‌ ಆಗಿದೆ ಎಂಬುದಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿರುದ್ಧ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಬಿಜೆಪಿಯವರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಮೂದಲಿಸಿದರು. 

Advertisement

ರೈತರ ಸಾಲ ಮನ್ನಾ ಮಾಡಿದ ಸಿಎಂ ಸಿದ್ದರಾಮಯ್ಯನವರ ಕ್ರಮ ಸ್ವಾಗತಾರ್ಹ ಎಂದು ಬಣ್ಣಿಸಿದರು. ಪ್ರತಿಭಟನಾನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ, ರಾಜ್ಯದಲ್ಲಿ ಈ ಹಿಂದೆ ಇದ್ದ ಭ್ರಷ್ಟ ಸರ್ಕಾರ ತೊಲಗಿಸಿ ಅ ಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಎಲ್ಲಾ ವರ್ಗದ ಬಡವರಿಗೆ ಅನುಕೂಲವಾಗುವಂತೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆ ಜಾರಿಮಾಡಿದ್ದಾರೆ. ಇದೀಗ ರೈತರ ಸಂಕಷ್ಟ ತಿಳಿದು ಅವರ ಸಾಲಮನ್ನಾ ಮಾಡುವ ಮೂಲಕ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು. 

ಸಾಲ ಮನ್ನಾ ಕ್ರಮವನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಆದರೆ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತ್ರ ರೈತರನ್ನು ಅಪಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ರೈತರ ಸಾಲ ಮನ್ನಾ ಒಂದು ಫ್ಯಾಷನ್‌ ಅಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲ ಮನ್ನಾ ಮಾಡಲು ಮುಂದಾಗಬೇಕು.

ಪ್ರಧಾನ ಮಂತ್ರಿಯವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದಾಜೆ, ಕೇಂದ್ರ ಹಣಕಾಸು ಸಚಿವ ಅರುಣ್‌ ಜೈಟಿ ಒತ್ತಡ ಹೇರಬೇಕು. ಇನ್ನು 1 ತಿಂಗಳಲ್ಲಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ದಾವಣಗೆರೆ ಸಂಸದರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಕಚೇರಿ ಮತ್ತು ಮನೆ ಮುಂದೆ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು. 

Advertisement

ಮೇಯರ್‌ ಅನಿತಾಬಾಯಿ, ರಾಜ್ಯ ಮಹಿಳಾ ಕಾಂಗ್ರೆಸ್‌ನ ಕಾರ್ಯದರ್ಶಿ ಪುಷ್ಪಾ ಲಕ್ಷ್ಮಣಸ್ವಾಮಿ, ಜಿಲ್ಲಾಧ್ಯಕ್ಷೆ ಅಶ್ವಿ‌ನಿ ಪ್ರಶಾಂತ್‌, ಉಪ ಮೇಯರ್‌ ಮಂಜಮ್ಮ, ಪಾಲಿಕೆ ಸದಸ್ಯರಾದ ಬಸಪ್ಪ, ಎಂ. ಹಾಲೇಶ್‌, ರಾಜಶೇಖರ್‌ ಗೌಡ್ರು, ಶ್ರೀನಿವಾಸ್‌, ಗುರುರಾಜ, ಪಿ.ಎನ್‌. ಚಂದ್ರಶೇಖರ್‌, ಜಿ.ಬಿ. ಲಿಂಗರಾಜ್‌, ಡೂಡಾ ಮಾಜಿ ಅಧ್ಯಕ್ಷ ಆಯೂಬ್‌ ಪೈಲ್ವಾನ್‌, ಮುಖಂಡರಾದ ಅಜ್ಜಂಪುರ ಮೃತ್ಯುಂಜಯ, ಮುಜಾಹಿದ್‌, ಎ. ನಾಗರಾಜ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next