Advertisement

ಮೀನುಗಾರರ ಬೇಡಿಕೆ ಈಡೇರಿಕೆಗೆ ಕ್ರಮ

06:00 AM Jul 19, 2018 | Team Udayavani |

ಉಡುಪಿ: ಮೀನುಗಾರರ ವಿವಿಧ ಬೇಡಿಕೆಗಳ ಈಡೇರಿಕೆಯ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಹಲವು ಬೇಡಿಕೆಗಳನ್ನು ಪೂರೈಸಿದೆ ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟ ರಾವ್‌ ನಾಡಗೌಡ ಹೇಳಿದ್ದಾರೆ.

Advertisement

ಜು. 18ರಂದು ಉಡುಪಿಯ ಮಹಿಳಾ ಹೈಟೆಕ್‌ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮಹಿಳಾ ಮೀನು ಮಾರಾಟ ಗಾರಿಂದ ಅಹವಾಲು ಸ್ವೀಕರಿಸಿದ ಅನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶೀತಲೀಕರಣ ಘಟಕ
60 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ನೀಡುವ ಪಿಂಚಣಿಯನ್ನು ಕುಮಾರಸ್ವಾಮಿಯವರು ಈಗಾಗಲೇ 1,000 ರೂ.ಗಳಿಗೆ ಹೆಚ್ಚಿಸಿದ್ದಾರೆ. ಮತ್ಸಾéಶ್ರಯ ಯೋಜನೆಯಡಿ ನೀಡಿದ ಮನೆಗಳು ನಾಲ್ಕು ವರ್ಷಗಳ ಹಿಂದೆ ನೀಡಿದ ಮನೆಗಳು ಪೂರ್ಣಗೊಂಡಿಲ್ಲ ಎಂಬ ದೂರುಗಳಿವೆ. ಅದನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ನೀಡುವ ಬಗ್ಗೆ ಚಿಂತಿಸಲಾಗಿದೆ. ನಿಗಮಕ್ಕೆ ಕೊಟ್ಟರೆ ಮತ್ತೆ ವಿಳಂಬವಾಗಬಹುದೆಂಬ ಅಭಿ ಪ್ರಾಯಗಳು ಕೂಡ ಇವೆ. ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಡವರಿಗೆ ಈಗಾಗಲೇ 2 ಲ.ರೂ.ವರೆಗೆ ಉಚಿತವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಶೀತಲೀಕರಣ ಘಟಕ ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು. 
 
ಮಾರುಕಟ್ಟೆ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಗರಸಭೆಯ ವತಿಯಿಂದ ಅಗತ್ಯ ಸೌಲಭ್ಯ ಮಾಡಿಸಿ ಕೊಡಲು ಸೂಚಿಸುತ್ತೇನೆ ಎಂದರು. 

ಸೀಮೆಎಣ್ಣೆಗೆ ಪರ್ಯಾಯ
ಕೇಂದ್ರದಿಂದ ಪಡಿತರ ವಿತರಣೆಗೆ ಸೀಮೆಎಣ್ಣೆ ನೀಡುತ್ತಿಲ್ಲ. ಮುಕ್ತ ಮಾರುಕಟ್ಟೆಯಲ್ಲಿಯೂ ಸಿಗುತ್ತಿಲ್ಲ. ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡಲಾಗುತ್ತಿದೆ. ಮುಂದೆ ಸೀಮೆಎಣ್ಣೆ ಸಿಗದು. ಎಲೆಕ್ಟ್ರಾನಿಕ್‌ ಮೋಟರ್‌ಗಳ ಮೂಲಕ ಮೀನುಗಾರಿಕೆ ಮಾಡುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಅದು ಯಶಸ್ಸಾದರೆ ಅದನ್ನು ಅನುಷ್ಠಾನಗೊಳಿಸಬಹುದು ಎಂದು ಸಚಿವ ನಾಡಗೌಡ ಹೇಳಿದರು. 

ಶಾಸಕ ಕೆ.ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್‌, ಮುಖಂಡರಾದ ಜಯಕುಮಾರ್‌ ಪರ್ಕಳ, ಪ್ರದೀಪ್‌ ಜಿ., ಪೌರಾಯುಕ್ತ ಜನಾರ್ದನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಂಘದ ಅಧ್ಯಕ್ಷೆ ಬೇಬಿ ಎಚ್‌.ಸಾಲ್ಯಾನ್‌, ಉಪಾಧ್ಯಕ್ಷೆ ಸರೋಜಾ ಮತ್ತಿತರ ಮಹಿಳಾ ಮೀನು ಮಾರಾಟಗಾರರು ಉಪಸ್ಥಿತರಿದ್ದರು.

ಬೇಡಿಕೆಗಳು  
ಶೂನ್ಯ ಬಡ್ಡಿದರದಲ್ಲಿ ಮಹಿಳೆಯರ ಮೀನು ವ್ಯಾಪಾರಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 50 ಸಾವಿರದಿಂದ 1 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಬೇಕು, 60 ವರ್ಷ ಮೇಲ್ಪಟ್ಟ ಎಲ್ಲಾ ಮೀನುಗಾರ ಮಹಿಳೆಯರಿಗೆ ತಿಂಗಲಿಗೆ ಕನಿಷ್ಠ 1,000 ಪಿಂಚಣಿ ವ್ಯವಸ್ಥೆ ಒದಗಿಸಬೇಕು, ಮತ್ಸಾéಶ್ರಯ ಯೋಜನೆಯಡಿ ವಸತಿ ನಿರ್ಮಿಸಲು ತಲಾ 2 ಲ.ರೂ. ಸಹಾಯಧನ ಒದಗಿಸಬೇಕು, ಮಳೆಗಾಲದ ಜೀವನ ನಿರ್ವಹಣೆಗಾಗಿ ಮೂರು ತಿಂಗಳ ಅವಧಿಗೆ ಮೀನುಗಾರರಿಗೆ ತಮಿಳುನಾಡು, ಪುದುಚೇರಿ ಮಾದರಿಯಲ್ಲಿ 5,500 ರೂ.ಗಳಂತೆ ಪರಿಹಾರ ಒದಗಿಸಬೇಕು, ಮೀನುಗಾರರಿಗೆ ಪ್ರತ್ಯೇಕವಾಗಿ ಉಚಿತ ಆರೋಗ್ಯ ವಿಮೆ ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ವತಿಯಿಂದ ಸಲ್ಲಿಸಲಾಯಿತು. 

ಮೊನ್ನೆ ಪ್ರತಿಭಟನೆ, ಇಂದು ಸ್ವಾಗತ !
ಬಜೆಟ್‌ನಲ್ಲಿ ರಾಜ್ಯ ಸರಕಾರ ಮೀನುಗಾರರಿಗೆ ಯಾವುದೇ ಸವಲತ್ತು ನೀಡಿಲ್ಲ ಎಂದು ಜು.13ರಂದು ಮಹಿಳಾ ಮೀನು ಮಾರಟಗಾರರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಫ‌ಲಕಗಳನ್ನು ಅಳವಡಿಸಿಕೊಂಡು ಮೀನುಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ್ದರು. 

ಜು.18ರಂದು  ಮೀನುಗಾರಿಕಾ ಸಚಿವರು ಮಾರುಕಟ್ಟೆಗೆ ಭೇಟಿ ನೀಡಿದಾಗ ಹೂಗುತ್ಛ ಹಿಡಿದು ಸ್ವಾಗತಿಸಿದರು. ತಮ್ಮ ನೋವು, ಅಹವಾಲುಗಳನ್ನು ಸಚಿವರಲ್ಲಿ ತೋಡಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next