Advertisement

ಸಚಿವ ಸ್ಥಾನ ಕೈ ತಪ್ಪುವ ಆತಂಕ: ದೇವೇಗೌಡರ ನಿವಾಸಕ್ಕೆ ಪರೇಡ್‌

03:11 AM May 30, 2019 | Sriram |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಸಂಪುಟ ಪುನಾರಚನೆ ಯಾದರೆ ಕೆಲವು ಸಚಿವರು ತ್ಯಾಗ ಮಾಡಬೇಕಾಗಬಹುದು ಎಂಬ ಮಾತುಗಳು ಜೆಡಿಎಸ್‌ ಸಚಿವರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಪರೇಡ್‌ ಮಾಡುತ್ತಿದ್ದಾರೆ.

Advertisement

ಮೇಲ್ನೋಟಕ್ಕೆ ಸರ್ಕಾರ ಉಳಿಸಲು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳುತ್ತಿದ್ದಾರಾದರೂ ಆಂತರಿಕ ವಾಗಿ ಸಚಿವ ಸ್ಥಾನ ಬಿಟ್ಟು ಕೊಡಲು ಯಾರಿಗೂ ಇಷ್ಟವಿಲ್ಲ. ಬುಧವಾರ ಸಚಿವ ಎಂ.ಸಿ.ಮನಗೊಳಿಯವರು ಪದ್ಮನಾಭನಗರ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಎಂ.ಸಿ.ಮನಗೊಳಿ ಅವರನ್ನು ಸಂಪುಟದಿಂದ ಕೈ ಬಿಡಲಾಗುವುದು ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ದಿಢೀರ್‌ ಆಗಿ ದೇವೇಗೌಡರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿತ್ತು.

ದೇವೇಗೌಡರ ಜತೆಗಿನ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಂ.ಸಿ.ಮನಗೊಳಿ, ‘ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸರ್ಕಾರ ಉಳಿಸಲು ರಾಜೀನಾಮೆ ಕೊಡಬೇಕಾದರೆ ನಾನು ಸಿದ್ಧ. ಪಕ್ಷದ ನಾಯಕರು ಏನೇ ತೀರ್ಮಾನ ಕೈಗೊಂಡರೂ ತಲೆಬಾಗುತ್ತೇನೆ’ ಎಂದು ಹೇಳಿದರು.

ಈ ಮಧ್ಯೆ, ಸಚಿವರಾದ ಸಾ.ರಾ.ಮಹೇಶ್‌, ಪುಟ್ಟರಾಜು, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಗುಬ್ಬಿ ಶ್ರೀನಿವಾಸ್‌ ಅವರ ಜತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಸಂಪರ್ಕದಲ್ಲಿದ್ದಾರೆ. ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ ಅವರಿಗೂ ಬೆಂಗಳೂರಿನಲ್ಲೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next