Advertisement

ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ‘ಸಂವಿಧಾನದ ನೆರಳಲ್ಲಿ’ ಪುಸ್ತಕ ಲೋಕಾರ್ಪಣೆ

06:13 PM Jul 22, 2023 | Team Udayavani |

ಮೈಸೂರು: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ರಚಿಸಿರುವ ಸಾಮಾಜಿಕ ಮತ್ತು ರಾಜಕೀಯ ಕುರಿತ ಬರಹಗಳನ್ನು ಒಳಗೊಂಡ ‘ಸಂವಿಧಾನದ ನೆರಳಲ್ಲಿ’ ಪುಸ್ತಕವು ಶನಿವಾರ ನಗರದ ಕಲಾಮಂದಿರದಲ್ಲಿ ಲೋಕಾರ್ಪಣೆಗೊಂಡಿತು.

Advertisement

ಪುಸ್ತಕ ಬಿಡುಗಡೆಗೊಳಿಸಿದ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಮಾತನಾಡಿ, ನಾವು ಸಂವಿಧಾನದ ನೆರಳಲ್ಲಿದ್ದೀವಾ ಅಥವಾ ಸಂವಿಧಾನದ ಬಲದಲ್ಲಿದ್ದೀವಾ ಎಂಬುದನ್ನು ಅರಿಯಬೇಕು. ಸಂವಿಧಾನ ಎಂಬುದು ದೊಡ್ಡ ವೃಕ್ಷ. ಅದರಡಿ ಮಲಗಿ ನಿದ್ದೆ ಮಾಡಬಾರದು. ಆ ನೆರಳಿನಲ್ಲಿ ಮಲಗಿ ಕಣ್ಣುಬಿಟ್ಟು ಕನಸು ಕಾಣಬೇಕು. ಬಿಟ್ಟಕಣ್ಣಿನ ಕನಸನ್ನು ಸಾಕಾರಗೊಳಿಸಬೇಕು. ಹೆಚ್ಚಿನ ಶ್ರಮವಹಿಸಿ ಜಗತ್ತಿನೊಂದಿಗೆ ಜೀವಂತವಾಗಿ ವ್ಯವಹರಿಸಬೇಕು ಎಂದು ಹೇಳಿದರು.

ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ, ಕೆಳಗಿಳಿದಾಗ ಹಾಗೂ ಮತ್ತೆ ಅಧಿಕಾರಕ್ಕೇರಿದಾಗ ತಮಗಾದ ಅನುಭವಗಳನ್ನು ಬರೆದಿಡುವುದು ಬಹುಮುಖ್ಯವಾದ ವಿಚಾರ. ಈ ರೀತಿಯಲ್ಲಿ ಕೆಂಗಲ್ ಹನುಮಂತಯ್ಯ ಮತ್ತು ಡಿ.ದೇವರಾಜ ಅರಸು ಅವರು ತಮ್ಮ ಜೀವಿತ ಕಾಲದ  ಅನುಭವಗಳನ್ನು ಹಾಗೂ ಮೌಲ್ಯಗಳನ್ನು ಬರೆಯದೇ ನಾವು ಏನನ್ನೊ ಕಳೆದುಕೊಂಡಿದ್ದೇವೆ. ಡಾ.ಎಚ್.ಸಿ.ಮಹದೇವಪ್ಪ ಅವರು ತಾವು ಕಂಡದ್ದನ್ನು ಬರೆದಿರುವುದು ಸಂತೋಷದ ವಿಚಾರ ಎಂದರು.

ಈ ಪುಸ್ತಕದಲ್ಲಿ ಎಲ್ಲೂ ತೊಡಕುಗಳಿಲ್ಲ, ಅವರು ಕಂಡದ್ದು, ಅನುಭವಿಸಿದ್ದನ್ನು ದಾಖಲಿಸಿದ್ದಾರೆ. ಒಬ್ಬ ರಾಜಕಾರಣಿ ನೇರಮಾತಿನ ಬಡಿಗೆ ಕೈಗೆತ್ತಿಗೊಂಡು ಸಮಾಜಕ್ಕೆ ಹೇಳುವುದು ಬಹಳ ಪ್ರಮುಖವಾಗಿದೆ. ಅವರ ಬಡಿಗೆಯಂಥ ಮಾತುಗಳ ಮೂಲಕ ಈ ದೇಶದಲ್ಲಿ ಚರ್ಚೆಯಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕೆಲವು ದಿನಗಳ ಹಿಂದೆ ನಾನು ಊಟದ ವಿಚಾರದಲ್ಲಿ ಒಂದು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಕೆಲವರು ವಿರೋಧಿಸಿದ್ದರು. ಆ ಸಂದರ್ಭ ಕುರಿತು ನನ್ನನ್ನು ಸಮರ್ಥಿಸಿಕೊಂಡಿದ್ದು ನನ್ನ ಸಹೋದ್ಯೋಗಿಗಳಲ್ಲ, ಸಂವಿಧಾನ ಎಂದು ಸಚಿವರು ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ ನಿಜವಾಗಿ ನನ್ನ ಬೆನ್ನಿಗೆ ನಿಂತು ಮಹದೇಶ್ವರ ಬೆಟ್ಟದಿಂದ ಬೀದರ್‌ವರೆಗೂ ಒಂದು ಅಲೆ ಎಬ್ಬಿಸಿದ್ದು ಭೀಮ ಪರಿವಾರದವರು. ಸಂವಿಧಾನದ ನೆರಳು ಹಾಗೂ ಭೀಮ ಪರಿವಾರ ಎರಡೂ ನನ್ನನ್ನು ಕಾಪಾಡಿದೆ ಎಂದು ಸ್ಮರಿಸಿದರು.

Advertisement

ಪ್ರಗತಿಪರ ಚಿಂತಕರು ಸಂವಿಧಾನದ ಪರ ಇದ್ದಾರೆ. ಅವರ ಅನುಭವ ಅತ್ಯಂತ ಮೌಲ್ಯವಾದದ್ದು. ಅವುಗಳು ಬರಹ ರೂಪದಲ್ಲಿ ಬರಬೇಕು. ಆ ಸಂಪತ್ತನ್ನು ಯುವ ಪೀಳಿಗೆಗೆ ತಲುಪಿಸುವುದು ಎಲ್ಲಾ ಲೇಖಕರ ಕರ್ತವ್ಯ. ನಾವು ಇನ್ನು ಮುಂದೆ ಪ್ರಗತಿಪರರನ್ನು ದೂರವಿಡುವುದು, ಅನುಮಾನಿಸುವುದು ಬೇಡ ಎಂದು ಅಭಿಪ್ರಾಯಪಟ್ಟರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ನನ್ನ ಭಾವನೆ, ನಿಲುವು ಮತ್ತು ಅಭಿಪ್ರಾಯಗಳನ್ನು ಅಕ್ಷರ ರೂಪಕ್ಕಿಳಿಸಿದ ಪುಸ್ತಕ ಇದಾಗಿದೆ. ಸಾಹಿತಿಗಳು, ಪ್ರಗತಿಪರ ಚಿಂತಕರು, ರಾಜಕೀಯ ಮುಖಂಡರು, ಯುವ ಸಮುದಾಯ ಹಾಗೂ ಮಹಿಳೆಯರು, ಸಾರ್ವಜನಿಕರು ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ. ಅದರಂತೆ ಈ ಪುಸ್ತಕವನ್ನು ಎಲ್ಲರೂ ಓದಿ ವಿಮರ್ಶೆ ಮಾಡಬೇಕು ಎಂದು ತಿಳಿಸಿದರು.

ಪುಸ್ತಕ ಕುರಿತು ಮಾತನಾಡಿದ ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಅವರು, ಸಚಿವರು ತಾವು ಕಂಡಂತ ರಾಜಕೀಯ ಹಾಗೂ ಸಾಮಾಜಿಕ ಸಂಗತಿಗಳನ್ನು ತುಂಬಾ ಪರಿಣಾಮಕಾರಿಯಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದರು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, ರಾಜಕಾರಣಿಗೆ ಬದ್ಧತೆ ಹಾಗೂ ಪ್ರಬುದ್ಧತೆ ಮುಖ್ಯ. ಆ ಸಾಲಿನಲ್ಲಿನ ಅಪರೂಪದ ರಾಜಕಾರಣಿ ಎಚ್.ಸಿ.ಮಹದೇವಪ್ಪ ಅವರು ಕೃತಿಯಲ್ಲಿ ವ್ಯಕ್ತಿಗತವಾಗಿ ಯಾವುದೇ ನಿಂದನಾತ್ಮಕ ಪದ ಬಳಸದೆ, ತತ್ವಕ್ಕೆ ಕೊಡಬೇಕಾದ ಸೂಕ್ತ ಬೆಲೆ ಕೊಟ್ಟಿದ್ದಾರೆ. ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ‌ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next