Advertisement

ಐಟಿ ವಿಚಾರಣೆಗೆ ಸಚಿವ ಡಿಕೆಶಿ ಗೈರು

07:12 AM Nov 08, 2017 | |

ಬೆಂಗಳೂರು: ಸೋಮವಾರವಷ್ಟೇ ಐಟಿ ಅಧಿಕಾರಿಗಳ ಎದುರು ಕುಟುಂಬ ಸಮೇತ ವಿಚಾರಣೆಗೆ ಹಾಜರಾಗಿದ್ದ ಪವರ್‌ ಮಿನಿಸ್ಟರ್‌ ಡಿ.ಕೆ.ಶಿವಕುಮಾರ್‌ ಮಂಗಳವಾರ ವಿಚಾರಣೆಗೆ ಗೈರಾಗಿದ್ದಾರೆ.

Advertisement

ಮಂಗಳವಾರವೂ ಶಿವಕುಮಾರ್‌ ಒಬ್ಬರಿಗೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಅಲ್ಲದೇ ಶಿವಕುಮಾರ್‌ ಕೂಡ ಮಾಧ್ಯಮಗಳ ಎದುರು “ಮಂಗಳವಾರ ತಾವೊಬ್ಬರೇ ವಿಚಾರಣೆಗೆ ಹಾಜರಾಗುತ್ತೇನೆ, ಬೆಳಗ್ಗೆ ಮುಖ್ಯಮಂತ್ರಿಗಳ ಜತೆ ನಿರಂತರ ಸಭೆ ಇರುವುದರಿಂದ ಮಧ್ಯಾಹ್ನದ ಬಳಿಕ ಬರುತ್ತೇನೆಂದು ಕೇಳಿಕೊಂಡಿದ್ದೇನೆ. ಇದಕ್ಕೆ ತನಿಖಾಧಿಕಾರಿಗಳು ಸಮ್ಮತಿಸಿದ್ದಾರೆ’ ಎಂದಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಹಾಗೂ ವಿದ್ಯುತ್‌ ಖರೀದಿ ಹಗರಣ ಸದನ ಸಮಿತಿ ಸಭೆ ಇರುವುದರಿಂದ ಐಟಿ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ, ಬಿಹಾರದಲ್ಲಿ ವಿದ್ಯುತ್‌ ಇಲಾಖೆಗೆ ಸಂಬಂಧಿಸಿದ ಸಭೆ ಇರುವುದರಿಂದ ಬುಧವಾರವೂ ವಿಚಾರಣೆಗೆ ಹೋಗುವುದು ಬಹುತೇಕ ಅನುಮಾನ ಎಂದು ಹೇಳಲಾಗಿದೆ. 

ಮೂಲಗಳ ಪ್ರಕಾರ, ಸೋಮವಾರ ಮಾತ್ರವಷ್ಟೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಮಂಗಳವಾರ ಹೋಗುವ ಅಗತ್ಯವೂ ಇಲ್ಲ ಎನ್ನಲಾಗಿದೆ. ಆದರೆ, ಮೂಲಗಳ ಪ್ರಕಾರ ಎರಡು ದಿನವೂ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಮಂಗಳವಾರ ವಿಚಾರಣೆಗೆ ಹಾಜರಾಗಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ನಾನು ಕನಕಪುರದ ಬಂಡೆ ಇದ್ದಂತೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಡಿಕೆಶಿ, “ನನ್ನ ಫೋನ್‌ ಕದ್ದಾಲಿಕೆ ಆಗುತ್ತಿದೆ. ಫಾಲೋ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಬಂದಾಗಿನಿಂದ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಕೆಲವು ಸಂಸ್ಥೆಗಳಿಗೆ ಅಧಿಕಾರ ಇದೆ, ಮಾಡುತ್ತಾರೆ. ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಹೋಗುವುದಿಲ್ಲ, ಬೇಡ ಎಂದಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವಂತೆ ಇಡಿ ತನಿಖೆ, ಸಿಬಿಐ ಆಸ್ತಿ ಮುಟ್ಟುಗೋಲು ಯಾವುದೂ ಇಲ್ಲ. ನಾನು ಕನಕಪುರದ ಬಂಡೆ ಇದ್ದಂತೆ ತಲೆ ಚಚ್ಚಿಕೊಂಡ್ರೆ ತಲೆಗೆ ಪೆಟ್ಟಾಗೋದು ಹೊರತು ಬಂಡೆಗಲ್ಲ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next