ಬೆಂಗಳೂರು: ಇಲಾಖೆ ಹಾಗೂ ಇತರೆ ಜವಾಬ್ದಾರಿಯ ಒತ್ತಡದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯಿಂದ ವಿಮುಕ್ತಿಗೊಳಿಸಲು ಕೋರಿ ಕಂದಾಯ ಸಚಿವ ಆರ್.ಅಶೋಕ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ.
ದಾವಣಗೆರೆಯಲ್ಲಿ ಲಂಬಾಣಿ ಸಮುದಾಯದ 50 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮುಂದಿನ 20 ದಿನಗಳಲ್ಲಿ ಮಾಡಬೇಕಾಗಿದೆ. ಪ್ರತಿ ತಿಂಗಳ ಮೂರನೇ ವಾರ ಗ್ರಾಮವಾಸ್ತವ್ಯ ನಡೆಸಬೇಕಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಬಡವರು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳ ಸಕ್ರಮ ಮಾಡಿ ಹಕ್ಕುಪತ್ರ ವಿತರಿಸಬೇಕಾಗಿದೆ.
ಜತೆಗೆ, ವಿಧಾನಸೌಧ ಮುಂಭಾಗ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡ ಪುತ್ಥಳಿ ಅನಾವರಣಕ್ಕಾಗಿ ರಚಿಸಿರುವ ಸಮಿತಿಗೆ ಅಧ್ಯಕ್ಷನಾಗಿದ್ದು ಕಾಲಮಿತಿಯಲ್ಲಿ ಅದನ್ನು ಲೋಕಾರ್ಪಣೆ ಮಾಡಬೇಕಾಗಿದೆ. 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿಗೂ ಅಧ್ಯಕ್ಷರನ್ನಾಗಿ ಮಾಡಿದ್ದು ಮಾರ್ಚ್ 23 ರಿಂದ 30 ರವರೆಗೆ ಅದರಲ್ಲಿ ತೊಡಗಬೇಕಾಗಿದೆ.
ಇವೆಲ್ಲ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾಗಿರುವುದರಿಂದ ಕೆಲಸದ ಒತ್ತಡ ಕಾರಣ ಮಂಡ್ಯ ಜಿಲ್ಲೆಯ ಉಸ್ತುವಾರಿಯಿಂದ ವಿಮುಕ್ತಿಗೊಳಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಂಡ್ಯದಲ್ಲಿ ಜ.26 ರಂದು ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ನಿಯೋಜನೆಗೊಂಡು ಹೋದಾಗ ಅಲ್ಲಿನ ಜನತೆ ನೀಡಿದ ಸ್ವಾಗತಕ್ಕೆ ನಾನು ಋಣಿ ಎಂದೂ ಹೇಳಿದ್ದಾರೆ.
ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೇರೆ ಬೇರೆ ಕೆಲಸದ ಒತ್ತಡದ ಕಾರಣ ಅಶೋಕ್ ಅವರು ಮಂಡ್ಯ ಉಸ್ತುವಾರಿ ಹೊಣೆಗಾರಿಕೆಯಿಂದ ವಿಮುಕ್ತಿ ಕೋರಿದ್ದು, ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.