Advertisement

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

12:57 PM Dec 04, 2021 | Team Udayavani |

ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆದ ಮೇಲೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಿಕೆಯನ್ನು ಕಾನೂನುಬದ್ಧಗೊಳಿಸುವಂತೆ ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ಈ ವಿಚಾರದಲ್ಲಿ ಸೂಕ್ತ ಕಾನೂನು ಜಾರಿಯಾಗುವ ತನಕ ತಮ್ಮ ಪ್ರತಿಭಟನೆಯನ್ನು ಹಿಂಪಡೆಯದಿರಲು ಅವು ನಿರ್ಧರಿಸಿವೆ. ಬೆಂಬಲ ಬೆಲೆಯ ಪರಿಕಲ್ಪನೆಯೇನು, ಸದ್ಯಕ್ಕೆ ಎಷ್ಟು ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿದೆ, ಸದ್ಯಕ್ಕೆ ಕಡ್ಡಾಯ ಬೆಂಬಲ ಬೆಲೆ ಎಂಬ ಕಾನೂನು ಯಾವ ಬೆಳೆಗೆ ಇದೆ, ಮಿಕ್ಕ ಎಲ್ಲಕ್ಕೂ ಇದೇ ಕಾನೂನು ಜಾರಿಯಾದರೆ ಸರಕಾರ ಹಾಗೂ ರೈತರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಸಂಕ್ಷಿಪ್ತ ವಿಶ್ಲೇಷಣೆ ಇಲ್ಲಿದೆ.

Advertisement

ಬೆಂಬಲ ಬೆಲೆಗೆ ರೈತರ ಪಟ್ಟು ಏಕೆ?
ಕೇಂದ್ರ ಸರಕಾರವೀಗ ಕನಿಷ್ಠ ಬೆಂಬಲ ಬೆಲೆಯನ್ನು ಕೇವಲ 23 ಕೃಷಿ ಉತ್ಪನ್ನಗಳಿಗೆ ಮಾತ್ರ ನೀಡುತ್ತಿದೆ. ಇವುಗಳಲ್ಲಿ 7 ಧಾನ್ಯಗಳು (ಗೋಧಿ, ಭತ್ತ, ಮೆಕ್ಕೆಜೋಳ, ಬಜ್ರಾ, ಜೋಳ, ರಾಗಿ ಹಾಗೂ ಬಾರ್ಲಿ), 5 ಬೇಳೆಕಾಳುಗಳು (ಕಾಬೂಲ್‌ ಕಡ್ಲೆ, ತೊಗರಿಬೇಳೆ, ಉದ್ದಿನ ಬೇಳೆ, ಕಡ್ಲೆ ಬೇಳೆ, ಮಸೂರ್‌ ದಾಲ್‌), 7 ಎಣ್ಣೆ ಕಾಳುಗಳು (ಸಾಸಿವೆ, ಶೇಂಗಾ, ಸೋಯಾಬೀನ್‌, ಸೂರ್ಯಕಾಂತಿ, ಎಳ್ಳು, ಕುಸುಮೆ, ನೈಗರ್‌ಸೀಡ್‌) ಹಾಗೂ 4 ವಾಣಿಜ್ಯ ಬೆಳೆಗಳು (ಕಬ್ಬು, ಹತ್ತಿ, ಕೊಬ್ಬರಿ, ಹಸಿ ಸೆಣಬು).

ಅಸಲಿಗೆ, ಬೆಂಬಲ ಬೆಲೆಯನ್ನು ಈ ಮೇಲಿನ ಉತ್ಪನ್ನಗಳನ್ನು ಬೆಳೆಯಲು ರೈತನು ಹಾಕುವ ಬಂಡವಾಳದಲ್ಲಿ ಶೇ. 50ರಷ್ಟಾದರೂ ಆತನಿಗೆ ಮರಳಿ ಬರಬೇಕೆಂಬ ಆಶಯದ ಮೇಲೆ ನಿಗದಿಪಡಿಸಲಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಆಶಯ ಕೇವಲ ಹೆಸರಿಗಷ್ಟೇ ಎನ್ನುವಂತಾಗಿದೆ. ಸುಗ್ಗಿಕಾಲದಲ್ಲಿ ಬರುವ ಬೆಳೆಗಳ ವಿಚಾರದಲ್ಲೂ ಸರಕಾರ ಘೋಷಿಸುವ ಬೆಂಬಲ ಬೆಲೆಯಡಿ, ನಿಜವಾಗಿಯೂ ರೈತರು ಹಾಕಿದ ಬಂಡವಾಳದಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಯೇ ಬರುತ್ತಿದೆ.

ಇನ್ನು, ಬೆಂಬಲ ಬೆಲೆ ಎಂಬ ಪರಿಕಲ್ಪನೆಗೆ ಯಾವುದೇ ಸಾಂವಿಧಾನಿಕ ಸ್ಥಾನಮಾನ ಇಲ್ಲದೇ ಇರುವುದರಿಂದ ರೈತರು ಸರಕಾರ ಘೋಷಿಸುವ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಕೇಳಲು ಅವಕಾಶವೇ ಇಲ್ಲ ಹಾಗೂ ಬೆಂಬಲ ಬೆಲೆ ಕೇಳುವುದು ನಮ್ಮ ಹಕ್ಕು ಎಂದು ತಿಳಿಯುವಂತೆಯೂ ಇಲ್ಲ.

ಹಾಗಾಗಿ ಕೇವಲ ಸರಕಾರದ ವಿವೇಚನೆಗಳ ಮೇಲೆ ಬೆಂಬಲ ಬೆಲೆ ನಿಗದಿಯಾಗುವುದರ ಬದಲು, ಬೆಂಬಲ ಬೆಲೆ ಎನ್ನುವುದು ಒಂದು ಕಾನೂನಾಗಿ ಜಾರಿಯಾಗಬೇಕು. ಪ್ರತೀ ಆರ್ಥಿಕ ವರ್ಷದಲ್ಲಿ ಕಡ್ಡಾಯವಾಗಿ ಇದು ರೈತರ ಕೈಗೆ ನಿರೀಕ್ಷಿತಮಟ್ಟದಲ್ಲಿ ಸಿಗಬೇಕು ಎಂಬುದು ರೈತರ ಆಗ್ರಹವಾಗಿದೆ.

Advertisement

ಇದನ್ನೂ ಓದಿ:ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ಬೆಂಬಲ ಬೆಲೆ ಕಾನೂನು ಜಾರಿ ಬಗೆ
ಇದನ್ನು ಮೂರು ರೀತಿಯಲ್ಲಿ ಜಾರಿಗೊಳಿಸಬಹುದು. ಮೊದಲನೆಯದಾಗಿ, ಕೃಷಿ ಉತ್ಪನ್ನಗಳನ್ನು ಖರೀದಿಸುವ ವರ್ತಕರು ಅಥವಾ ನಿರ್ವಹಣಾಕಾರರಿಗೆ ಆಯಾ ಬೆಳೆಗಳಿಗೆ ನಿಗದಿಪಡಿಸಲಾಗಿರುವ ಬೆಂಬಲ ಬೆಲೆಯನ್ನು ಕಡ್ಡಾಯವಾಗಿ ಇಂತಿಷ್ಟು ದಿನಗಳೊಳಗಾಗಿ ರೈತರಿಗೆ ಪಾವತಿಸಬೇಕು ಎಂಬ ಕಾನೂನನ್ನು ಜಾರಿಗೆ ತರುವುದು.
ಕಬ್ಬಿನ ಬೆಳೆಯ ವಿಚಾರದಲ್ಲಿ ಈ ಕಾನೂನು ಈಗಾಗಲೇ ಜಾರಿಯಲ್ಲಿದೆ. ಇದಕ್ಕಾಗಿ ಅಗತ್ಯ ಸಾಮಗ್ರಿಗಳ ಕಾಯ್ದೆಯಡಿ 1966ರಲ್ಲಿ ಕಬ್ಬು ನಿಯಂತ್ರಣ ಆದೇಶವನ್ನು ಜಾರಿಗೆ ತರಲಾಗಿದೆ. ಕಾನೂನಿನ ಪ್ರಕಾರ ಕಬ್ಬಿನ ಬಗ್ಗೆ ಕೇಂದ್ರ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯ ಅನುಸಾರ ರೈತರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ಖರೀದಿಸಬೇಕು. ಜತೆಗೆ ಖರೀದಿಯ ಅನಂತರದ 14 ದಿನಗಳೊಳಗೆ ಪಾವತಿಸಬೇಕಿರುತ್ತದೆ. 2020-21ನೇ ಆರ್ಥಿಕ ವರ್ಷದಲ್ಲಿ ದೇಶದ ನಾನಾ ಸಕ್ಕರೆ ಕಾರ್ಖಾನೆಗಳಲ್ಲಿ ಒಟ್ಟಾರೆ 298 ಮೆಟ್ರಿಕ್‌ ಟನ್‌ನಷ್ಟು ಕಬ್ಬನ್ನು ಅರೆಯಲಾಗಿದೆ. ಅದರಿಂದಾಗಿ ದೇಶದ ಸಕ್ಕರೆ ಉತ್ಪಾದನೆ ಮೂರು ಪಟ್ಟು (399 ಮೆಟ್ರಿಕ್‌ ಟನ್‌) ಹೆಚ್ಚಾಗಿದೆ.

ಎರಡನೆಯ ರೀತಿ
ಕೇಂದ್ರ ಸರಕಾರವು ತನ್ನ ಅಧೀನದಲ್ಲಿರುವ ಭಾರತೀಯ ಆಹಾರ ನಿಗಮ , ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್ಇಡಿ) ಹಾಗೂ ಭಾರತೀಯ ಹತ್ತಿ ನಿಗಮ (ಸಿಸಿಐ) ಸಂಸ್ಥೆಗಳ ಮೂಲಕ ರೈತರ ಉತ್ಪನ್ನಗಳನ್ನು ಸೂಕ್ತ ಬೆಂಬಲ ಬೆಲೆಯನ್ನು ನೀಡಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬಹುದು. ಸದ್ಯಕ್ಕೆ ಈ ಸಂಸ್ಥೆಗಳ ಮೂಲಕ ನಿಯಮಿತವಾಗಿ ಖರೀದಿ ನಡೆಸಲಾಗುತ್ತಿದೆ. ಕಳೆದ ವರ್ಷ ಈ ಸಂಸ್ಥೆಗಳು ದೇಶದಲ್ಲಿ ಒಟ್ಟಾರೆ ಬೆಳೆಯಲಾಗಿರುವ ಭತ್ತದಲ್ಲಿ ಶೇ. 50ರಷ್ಟನ್ನು, ಶೇ. 40 ಗೋಧಿ ಹಾಗೂ ಶೇ. 25 ಹತ್ತಿಯನ್ನು ಖರೀದಿಸಿವೆ.

2019-20ರ ವರ್ಷದಲ್ಲಿ ಈ ಸಂಸ್ಥೆಗಳು ಕಡ ಲೆಕಾಳು, ಸಾಸಿವೆ, ಶೇಂಗಾ, ತೊಗರಿ, ಉದ್ದಿನ ಬೇಳೆಯನ್ನೂ 0.1 ಮೆಟ್ರಿಕ್‌ ಟನ್‌ನಷ್ಟು ಖರೀದಿಸಿವೆ. ಇಷ್ಟು ಮೊತ್ತದ ಖರೀದಿಯಾಗಿರುವುದು 2020ರ ಕೊರೊನಾ ಲಾಕ್‌ಡೌನ್‌ ಅನಂತರದ ಕಾಲಘಟ್ಟದಲ್ಲಿ (2020ರ ಎಪ್ರಿಲ್‌-ಜೂನ್‌) ಎಂಬುದು ಗಮನಾರ್ಹ. ಆದರೆ ಇಲ್ಲೊಂದು ಸಮಸ್ಯೆಯಿದೆ. ಉದಾಹರಣೆಗೆ 2020ರಲ್ಲಿ ಖರೀದಿಸಲಾಗಿವೆ ಎಂದು ಹೇಳಲಾಗಿರುವ ಧಾನ್ಯಗಳಲ್ಲಿ,
ಸಾಸಿವೆ, ತೊಗರಿ, ಉದ್ದು, ಕಡ್ಲೆ ಬೇಳೆ ಹಾಗೂ ಸೋಯಾ ಬೀನ್‌ನಂಥ ಧಾನ್ಯಗಳನ್ನು ಸರಕಾರ ಖರೀದಿಸಿದ್ದರಿಂದ ರೈತರಿಗೆ ಅಂಥಾ ಲಾಭವಾಗಿಲ್ಲ. ಅದಕ್ಕೆ ಕಾರಣ ಈ ಸಂಸ್ಥೆಗಳು ನಿಗದಿಪಡಿಸಿದ್ದ ಬೆಂಬಲ ಬೆಲೆಯು ಮಾರುಕಟ್ಟೆಯಲ್ಲಿ ಈ ಧಾನ್ಯಗಳಿಗೆ ಇದ್ದ ಬೆಲೆಗಿಂತ ಕಡಿಮೆ ಇದ್ದದ್ದು. ಈ ಕಾರಣಕ್ಕಾಗಿಯೇ ರೈತರು ಕಾನೂನುಬದ್ಧ ಎಂಎಸ್‌ಪಿಗಾಗಿ ಪಟ್ಟು ಹಿಡಿದಿದ್ದಾರೆ.

ಇನ್ನು ಮೂರನೇಯ ದಾರಿಯಲ್ಲಿ ಸರಕಾರ ನೇರವಾಗಿ ಖರೀದಿಸುವುದೂ ಇಲ್ಲ ಅಥವಾ ಖಾಸಗಿ ವರ್ತಕರಿಗೆ ರೈತರಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸಿ ಎಂದು ಮಾಡುವುದೂ ಬೇಡ. ಆಯಾ ಪ್ರಾಂತ್ಯಗಳಲ್ಲಿನ ಸಂತೆ ಅಥವಾ ಮಾರುಕಟ್ಟೆಗಳಲ್ಲಿ ರೈತರು ಆಯಾ ದಿನದ ಮಾರುಕಟ್ಟೆ ಬೆಲೆಗಳಿಗೆ ಅನುಸಾರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಆ ವ್ಯವಹಾರಗಳಲ್ಲಿ, ಪ್ರತಿಯೊಂದು ಧಾನ್ಯಕ್ಕೆ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಕಡಿಮೆ ಮಾರಾಟವಾದರೆ, ಆ ನಷ್ಟವನ್ನು ಸರಕಾರ ತುಂಬಿಸಿಕೊಡಬೇಕು.

ಮೂರು ಮಾರ್ಗಗಳಲ್ಲಿನ ಸಮಸ್ಯೆಗಳೇನು?
ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ನಾಲ್ಕು ಪ್ರಮುಖ ವಾಣಿಜ್ಯ ಬೆಳೆಗಳಾದ ಕಬ್ಬು, ಭತ್ತ, ಗೋಧಿ ಮತ್ತು ಹತ್ತಿಗೆ ಬೆಂಬಲ ಬೆಲೆ ಘೋಷಣೆ ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಲಾಗಿದೆ. ಹಾಗೆಯೇ ಕಾಬೂಲ್‌ ಕಡ್ಲೆ, ಸಾಸಿವೆ, ಶೇಂಗಾ, ತೊಗರಿ ಹಾಗೂ ಉದ್ದಿನ ಬೇಳೆಗಳಿಗೂ ಸರಕಾರ ಬೆಂಬಲ ಬೆಲೆ ಘೋಷಿಸುತ್ತಿದೆ. ಇದರ ಜತೆಯಲ್ಲೇ ಅಷ್ಟಾಗಿ ವಿಪುಲವಾಗಿ ಬೆಳೆಯದಂಥ, ಆದರೂ ಆಹಾರದ ವಿಚಾರದಲ್ಲಿ ಪ್ರಮುಖ ಎನಿಸಿರುವ 14 ರೀತಿಯ ಧಾನ್ಯಗಳನ್ನೂ ಸರಕಾರ ತನ್ನ ವಿವೇಚನೆಯ ಮೇರೆಗೆ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಆದರೆ ಹೈನುಗಾರಿಕೆ, ತೋಟಗಾರಿಕೆ ವಿಭಾಗದ ಪ್ರಮುಖ ಉತ್ಪನ್ನಗಳಾದ ಹಾಲು, ಮೊಟ್ಟೆ, ಈರುಳ್ಳಿ, ಆಲೂಗಡ್ಡೆ ಅಥವಾ ಸೇಬು ಹಣ್ಣು – ಇಂಥ ಜನಸಾಮಾನ್ಯರ ದೈನಂದಿನ ಅಗತ್ಯತೆಗಳಲ್ಲಿ ಪ್ರಮುಖವಾಗಿರುವ ಉತ್ಪನ್ನಗಳಿಗೆ ಯಾವುದೇ ಬೆಂಬಲ ಬೆಲೆ ಇಲ್ಲ. ಹೀಗೆ ಬೆಂಬಲ ಬೆಲೆ ಕೊಡುವ ಅಥವಾ ಬೆಂಬಲ ಬೆಲೆ ಅಗತ್ಯವಿರುವ 23 ಕೃಷಿ ಉತ್ಪನ್ನಗಳು ದೇಶದ ಒಟ್ಟಾರೆ ಕೃಷಿ ಉತ್ಪನ್ನಗಳ ಮೂರನೇ ಒಂದರಷ್ಟು ಭಾಗವನ್ನು ತುಂಬುತ್ತವೆ. ಆದರೆ ಅದಕ್ಕೆ ಪೂರಕವಾಗಿ ರೈತರಿಗೆ ಲಾಭದಾಯವಾಗುವಂಥ ವಾತಾವರಣ ದೇಶದಲ್ಲಿ ಸದ್ಯಕ್ಕಂತೂ ಇಲ್ಲ.

ಬಜೆಟ್‌ ಮೇಲೆ ಎಷ್ಟು ಹೊರೆ?
ಸದ್ಯಕ್ಕೆ ದೇಶದಲ್ಲಿ ಬೆಂಬಲ ಬೆಲೆ ನಿಗದಿಪಡಿಸಿರುವ 23 ಕೃಷಿ ಉತ್ಪನ್ನಗಳ ವಾರ್ಷಿಕ ಇಳುವರಿಗೆ ಒಟ್ಟಾರೆಯಾಗಿ 11.9 ಲಕ್ಷ ಕೋಟಿ ರೂ.ಗಳನ್ನು ಬೆಂಬಲ ಬೆಲೆಯನ್ನಾಗಿ ನೀಡಬೇಕಾಗುತ್ತದೆ. ಆದರೆ ಬೆಳೆದದ್ದೆಲ್ಲವನ್ನೂ ರೈತರು ಮಾರುಕಟ್ಟೆಗೆ ತರುವುದಿಲ್ಲ. ಬೆಳೆದದ್ದರಲ್ಲಿ ಒಂದಿಷ್ಟು ಭಾಗವನ್ನು ತಮ್ಮ ಸ್ವಂತ ಬಳಕೆಗೆ, ತಮ್ಮ ಜಾನುವಾರುಗಳ ಆಹಾರಕ್ಕೆ ಹಾಗೂ ಬಿತ್ತನೆಗಾಗಿ ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಹಾಗಾಗಿ ಮಾರುಕಟ್ಟೆಗೆ ಬರುವ ಧಾನ್ಯಗಳ ಪ್ರಮಾಣದಲ್ಲಿ ಕೊಂಚ ಇಳಿಮುಖವಾಗಿರುತ್ತದೆ. ರಾಗಿಯಲ್ಲಿ ಶೇ. 50, ಸಜ್ಜೆ, ಜೋಳದಲ್ಲಿ ಶೇ. 65-70, ಗೋಧಿ, ಭತ್ತ, ಕಬ್ಬಿನಲ್ಲಿ ಶೇ. 75-85, ದ್ವಿದಳ ಧಾನ್ಯಗಳು ಹಾಗೂ ಹತ್ತಿಯಲ್ಲಿ ಶೇ. 95-100ರಷ್ಟು ಮಾರುಕಟ್ಟೆಗೆ ಬರುತ್ತದೆ. ಇದರ ಒಟ್ಟಾರೆ ಮೊತ್ತ 9 ಲಕ್ಷ ಕೋಟಿ ರೂ.ಗಳಷ್ಟಿದೆ.

ಕೆಲವೊಮ್ಮೆ ಇಬ್ಬರಿಗೂ ನಷ್ಟ!
ಬೆಂಬಲ ಬೆಲೆ ಸೌಲಭ್ಯ ಹೊಂದಿರುವ 23 ಧಾನ್ಯಗಳು ಅಥವಾ ಕೃಷಿ ಉತ್ಪನ್ನಗಳ ವ್ಯವಸಾಯದ ಖರ್ಚಿಗೆ ಅನುಗುಣವಾಗಿ ನಿಗದಿಪಡಿಸಲಾಗಿರುವ ಬೆಂಬಲ ಬೆಲೆಯ ಮೌಲ್ಯ 3.8 ಲಕ್ಷ ಕೋಟಿ ರೂ. ಆಗಿದೆ. ಮುಂದೆ ಬೆಂಬಲ ಬೆಲೆಯ ಬಗ್ಗೆ ಹೊಸ ಕಾನೂನು ಜಾರಿಯಾದರೆ ಇದಕ್ಕಾಗಿ ಖರ್ಚು ಮಾಡುವ ಮೊತ್ತ 5 ಲಕ್ಷ ಕೋಟಿ ರೂ. ಆಗಬಹುದು. ಆದರೆ ಇಷ್ಟು ಹಣ ಖರ್ಚು ಮಾಡಿದರೂ ಸರಕಾರಕ್ಕಾಗಲಿ, ರೈತರಿಗಾಗಲಿ ಕೆಲವೊಮ್ಮೆ ಲಾಭದಲ್ಲಿ ಖೋತಾ ಆಗುವ ಸಾಧ್ಯತೆಗಳಿರುತ್ತವೆ.

ಹೇಗೆಂದರೆ ರೈತರಿಂದ ನಿರ್ದಿಷ್ಟ ಬೆಂಬಲ ಬೆಲೆಗೆ ಒಂದು ಧಾನ್ಯವನ್ನು ಖರೀದಿಸುವ ಸರಕಾರ, ಅದನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಮಾರಾಟ ಮಾಡುತ್ತದೆ. ಅದರಿಂದ ಬರುವ ಆದಾಯಕ್ಕೂ, ಬೆಂಬಲ ಬೆಲೆಯಡಿ ಕೊಳ್ಳಲು ಮಾಡಿದ್ದ ಖರ್ಚಿಗೂ ತುಂಬಾ ವ್ಯತ್ಯಾಸವಿರುತ್ತದೆ.

ಇದನ್ನೂ ಓದಿ:ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ

ಮಂಡಿಗೆ ಬಂದು ಬೀಳುವ ಕೃಷಿ ಉತ್ಪನ್ನದ ಎಲ್ಲ ಮಾಲನ್ನೂ ಸರಕಾರ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸರಕಾರ ಮಂಡಿಯಲ್ಲಿರುವ ಯಾವುದೇ ನಿರ್ದಿಷ್ಟ ಧಾನ್ಯದ ಒಂದು ಭಾಗವನ್ನಷ್ಟೇ ಕೊಳ್ಳುತ್ತದೆ. ಈ ಪ್ರಕ್ರಿಯೆ ಮುಗಿದ ಅನಂತರ ಮಾರುಕಟ್ಟೆಯಲ್ಲಿ ಆ ಧಾನ್ಯದ ಕೊರತೆ ಎದುರಾದಾಗ ಸಹಜವಾಗಿ ಬೆಲೆ ಏರುತ್ತದೆ ಹಾಗೂ ಆ ಬೆಲೆ ಸರಕಾರ ಖರೀದಿಸಿದ ಬೆಂಬಲ ಬೆಲೆಗಿಂತ ಹೆಚ್ಚಾಗಿದ್ದರೆ ಆಗ ಏರ್ಪಡುವ ಮೌಲ್ಯದ ವ್ಯತ್ಯಾಸವನ್ನು ಸರಕಾರ, ರೈತರಿಗೆ ಕಟ್ಟಿಕೊಡುವುದಿಲ್ಲ. ಇದರಿಂದ ರೈತರಿಗೆ ಕೊಂಚ ನಷ್ಟವಾಗುವ ಸಾಧ್ಯತೆಯಿರುತ್ತದೆ.

ಪರಿಹಾರೋಪಾಯವೇನು?
ಇಲ್ಲಿ ಸರಕಾರ ಒಂದಿಷ್ಟು ಹೊಸ ಆಲೋಚನೆಗಳನ್ನು ಮಾಡಬೇಕಾಗಿದೆ. ರೈತರಿಂದ ಎಷ್ಟು ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಬೇಕು. ದೇಶಾದ್ಯಂತ ಕೃಷಿ ಉತ್ಪನ್ನಗಳ ಕೊಳ್ಳುವಿಕೆಗೆ, ಸಂಗ್ರಹಕ್ಕೆ ಹಾಗೂ ಸರಬರಾಜಿಗೆ ಸುವ್ಯವಸ್ಥಿತ ಜಾಲವನ್ನು ನಿರ್ಮಿಸಬೇಕು. ಅದಕ್ಕೆ ಬೇಕಾದ ಮೂಲಸೌಕರ್ಯಗಳಾದ ಸುಭದ್ರ, ಸರ್ವ ಸುಸಜ್ಜಿತ, ಬೆಳೆಗಳನ್ನು ದೀರ್ಘಾವಧಿವರೆಗೆ ಕಾಪಾಡಬಲ್ಲ ದೈತ್ಯ ಉಗ್ರಾಣಗಳನ್ನು ನಿರ್ಮಿಸಬೇಕು. ಬೆಂಬಲ ಬೆಲೆ ಖರೀದಿ, ಆನಂತರ ಧಾನ್ಯಗಳ ನಿರ್ವಹಣೆ ಹಾಗೂ ಅವುಗಳ ವಿಲೇವಾರಿ – ಈ ಮೂರೂ ಹಂತಗಳಲ್ಲಿ ರೈತರಿಗೆ ಅನ್ಯಾಯವಾಗದಂತೆ, ಭ್ರಷ್ಟಾಚಾರ ಕಾಲಿಡದಂತೆ ಪ್ರತಿಯೊಂದು ಪ್ರಕ್ರಿಯೆಯನ್ನೂ ಪಾರದರ್ಶಕವಾಗಿರುವಂತೆ ನಿಯಮಾವಳಿಗಳನ್ನು ರೂಪಿಸಬೇಕು. ಬೆಂಬಲ ಬೆಲೆಯ ಹಣ ನೇರವಾಗಿ ರೈತರ ಖಾತೆಗಳಿಗೆ ಬಂದು ಜಮೆಯಾಗುವಂತಾಗಬೇಕು. ಒಟ್ಟಾರೆಯಾಗಿ, ಬೆಂಬಲ ಬೆಲೆ ತನ್ನ ಪರಿಕಲ್ಪನೆಯನ್ನೂ ಮೀರಿ, ರೈತರಿಗೆ ತಮ್ಮ ಖರ್ಚು ಹಿಂದಕ್ಕೆ ಮನೆ-ಮಕ್ಕಳನ್ನು ನಿಭಾಯಿಸುವಷ್ಟು ವರಮಾನ ಸಿಗುವಂತಾಗಬೇಕು. ಹಾಗಾದರೆ ಮಾತ್ರ ಬೆಂಬಲ ಬೆಲೆ ಕಾನೂಬದ್ಧವಾದದ್ದಕ್ಕೆ ಸಾರ್ಥಕವಾಗುತ್ತದೆ. ಇಲ್ಲವಾದರೆ..

Advertisement

Udayavani is now on Telegram. Click here to join our channel and stay updated with the latest news.

Next